ಬೆಂಗಳೂರು; ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ ಪಡೆದಿರುವ ಒಟ್ಟು ಸ್ವ ಸಹಾಯ ಗುಂಪುಗಳ ಪೈಕಿ ಒಟ್ಟಾರೆ 80,950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಹೊರ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.
ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು, ಡಿಸಿಸಿ ಬ್ಯಾಂಕ್ಗಳು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಡಿಯಲ್ಲಿ ಪುರುಷ ಸ್ವ ಸಹಾಯ ಗುಂಪುಗಳಿಗೆ ಶೇ. 4 ರ ಬಡ್ಡಿ ದರದಲ್ಲಿ ಸಾಲ ನೀಡಲಾಗಿತ್ತು. ಸಾಲ ಪಡೆದುಕೊಂಡಿದ್ದ ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರುಪಾಯಿ ಸಾಲ ವಸೂಲು ಮಾಡುವಲ್ಲಿ ಸಹಕಾರ ಇಲಾಖೆಯು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
2026-27ನೇ ಸಾಲಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು, ಡಿಸಿಸಿ ಬ್ಯಾಂಕ್ಗಳು, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಡಿಯಲ್ಲಿ ಪುರುಷರ ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡಲು ಮುಂದಾಗಿದೆ. ಈ ಕುರಿತು ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಸ್ವ ಸಹಾಯ ಗುಂಪುಗಳು 1,758.53 ಕೋಟಿ ರು ಬಾಕಿ ಉಳಿಸಿಕೊಂಡಿರುವುದನ್ನು ಸರ್ಕಾರದ ಗಮನ ಸೆಳೆದಿದ್ದಾರೆ. ಸಹಕಾರ ಇಲಾಖೆಗೆ ಇನ್ನೂ ಸಚಿವರ ನೇಮಕವಾಗಿಲ್ಲ. ಹೀಗಾಗಿ ಈ ಖಾತೆಯೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಳಿಯೇ ಇದೆ.
ಸಹಕಾರ ಇಲಾಖೆಯ ನಿಬಂಧಕರು, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2026ರ ಜುಲೈ 4ರಂದು ಬರೆದಿರುವ ಪತ್ರದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ರೂರಲ್ ಲೈವ್ಲಿ ಹುಡ್ ಮಿಷನ್ ಯೋಜನೆ ಅನುಷ್ಠಾನಗೊಳಿಸಿರುವ ರಾಜ್ಯ ಸರ್ಕಾರವು 2025-26ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳಿಗೆ ನಿವ್ವಳವಾಗಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ವಿತರಿಸಿತ್ತು. ಇದೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ಗಳೂ ಸಹ 17,023 ಸ್ವ ಸಹಾಯ ಗುಂಪುಗಳಿಗೆ 886.39 ಕೋಟಿ ರು ಸಾಲ ವಿತರಿಸಿದ್ದವು. 80, 950 ಸ್ವ ಸಹಾಯ ಗುಂಪುಗಳಿಂದ 1,758.53 ಕೋಟಿ ರು ಸಾಲದ ಹೊರಬಾಕಿ ಇದೆ ಎಂದು ನಿಬಂಧಕರು ಬರೆದಿರುವ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

2026-27ನೇ ಸಾಲಿನಲ್ಲಿ ಇದೇ ಯೋಜನೆಗಾಗಿ ಆಯವ್ಯಯದಲ್ಲಿ 50 ಕೋಟಿ ರು ಅನುದಾನ ನಿಗದಿಪಡಿಸಿದೆ. ಎನ್ಆರ್ಎಲ್ಎಂ ಯೋಜನೆ ಜಾರಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತೀ ವರ್ಷದ ಏಪ್ರಿಲ್ ಮೊದಲ ವಾರದಲ್ಲಿಯೇ ಎಲ್ಲಾ ಬ್ಯಾಂಕ್ಗಳೀಗೆ ಮಾರ್ಘಸೂಚಿಗಳೊಂದಿಗೆ ನಿರ್ದೇಶನ ನೀಡುತ್ತಿತ್ತು. ಆದರೆ ಈ ವರ್ಷ ಇದುವರೆಗೂ ಯಾವುದೇ ನಿರ್ದೇಶನವನ್ನು ಹೊರಡಿಸಿಲ್ಲ ಎಂದು ಪತ್ರದಲ್ಲಿ ಸರ್ಕಾರದ ಗಮನ ಸೆಳೆದಿರುವುದು ಗೊತ್ತಾಗಿದೆ.
ಅದೇ ರೀತಿ ಸಹಕಾರ ಬ್ಯಾಂಕ್ಗಳೀಗೆ ಸಂಬಂಧಿಸಿದಂತೆ ಈ ಯೋಜನೆಯನ್ನು ನಬಾರ್ಡ್ ಮೂಲಕ ಜಾರಿಗೊಳಿಸಬೇಕಿದೆ. ಆದರೆ ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಬಾರ್ಡ್ ಕೂಡ ಇದುವರೆಗೂ ಆದೇಶ ಹೊರಡಿಸಿಲ್ಲ. ಒಂದೊಮ್ಮೆ ಆರ್ಬಿಐ ತನ್ನ ಷರತ್ತುಗಳನ್ನು ಬದಲಿಸಿದಲ್ಲಿ ಸರ್ಕಾರಕ್ಕೆ ಪುನಃ ಪ್ರಸ್ತಾವ ಸಲ್ಲಿಸಲಾಗುವುದು ಎಂದು ನಿಬಂಧಕರು ತಮ್ಮ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

2026-27ನೇ ಸಾಲಿಗೆ ಕೇಂದ್ರ ಸರ್ಕಾರದ ಯೋಜನೆಯನ್ನು ಅಳವಡಿಸಿಕೊಂಡು ರಾಜ್ಯವು ಜಾರಿಗೊಳಿಸಬೇಕಿದೆ. 2025-26ನೇ ಸಾಲಿನಲ್ಲಿ ವಿಧಿಸಿರುವ ಷರತ್ತುಗಳ ಪೈಕಿ 11ನೇ ಷರತ್ತಿನ ಪ್ರಕಾರ ಸ್ವ ಸಹಾಯ ಗುಂಪುಗಳ ಆಯ್ಕೆ, ಗ್ರೇಡಿಂಗ್, ಸಾಲದ ಉದ್ದೇಶ, ಪ್ರಮಾಣ, ಭದ್ರತೆ, ವಸೂಲಾತಿ ಹಾಗೂ ಇತರೆ ಅಂಶಗಳಿಗೆ ಸಂಬಂಧಿಸಿದಂತೆ ಡಿಸಿಸಿ ಬ್ಯಾಂಕ್ಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂಬ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ಎನ್ಆರ್ಎಲ್ಎಂ ಯೋಜನೆ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿನ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಡಿಸಿಸಿ ಬ್ಯಾಂಕ್ಗಳು 3 ಲಕ್ಷ ವರೆಗೆ ಸಾಲದ ಹೊರಬಾಕಿಗೆ ಶೇ. 7ರ ಬಡ್ಡಿ ದರ ಮತ್ತು 3 ಲಕ್ಷದಿಂದ 5 ಲಕ್ಷವರೆಗಿನ ಸಾಲದ ಹೊರಬಾಕಿಗೆ ಶೇ. 7 ಅಥವಾ ಕಾಸ್ಟ್ ಅಪ್ ಫಂಡ್ ಆಧಾರವಾಗಿ ನಬಾರ್ಡ್ನಿಂದ ಅನುಮೋದನೆ ಪಡೆಯಲಿದೆ. ಅನುಮೋದನೆ ಪಡೆದ ನಂತರ ಗರಿಷ್ಟ ಬಡ್ಡಿ ದರ ಮತ್ತು ಇದರಲ್ಲಿ ಯಾವುದು ಕಡಿಮೆಯೋ ಆ ಬಡ್ಡಿ ದರ ಮತ್ತು ಕಾಯಕ ಯೋಜನೆಯಂತೆ ಸ್ವಂತ ಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗುತ್ತದೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಶೇ. 100ರಷ್ಟು ಬಿಪಿಎಲ್ ಸದಸ್ಯರನ್ನು ಹೊಂದಿರುವ ಮಹಿಳಾ ಸ್ವ ಸಹಾಯ ಗುಂಪುಗಳು 10 ಲಕ್ಷ ವರೆಗಿನ ಸಾಲದ ಹೊರ ಬಾಕಿಗೆ ಡಿಸಿಸಿ ಬ್ಯಾಂಕ್ಗಳು ಶೇ. 12ರ ಬಡ್ಡಿ ವಿಧಿಸಬೇಕು. ಎನ್ಪಿಎ ಆಗದ ಇರುವ ಸಾಲದ ಹೊರಬಾಕಿಗೆ ಮಾತ್ರ ಸ್ವ ಸಹಾಯ ಗುಂಪುಗಳ ಪರವಾಗಿ ಡಿಸಿಸಿ ಬ್ಯಾಂಕ್ಗಳಿಗೆ 5 ಲಕ್ಷ ವರೆಗಿನ ಸಾಲಗಳಿಗೂ ಶೇ. 12ರ ಬಡ್ಡಿ ದರ ವಿಧಿಸಲಿದೆ. ಕಾಯಕ ಯೋಜನೆಯಂತೆ ಸ್ವಂತ ಉದ್ಯೋಗ ಕೈಗೊಂಡು ನಿರಂತರ ಆದಾಯ ಗಳಿಸುವ ಉದ್ದೇಶಕ್ಕಾಗಿ 5 ಲಕ್ಷ ದಿಂದ 10 ಲಕ್ಷ ವರೆಗಿನ ಸಾಲದ ಹೊರಬಾಕಿಗೆ ಶೇ. 8ರ ಬಡ್ಡಿ ಸಹಾಯ ಧನವನ್ನು ಡಿಸಿಸಿ ಬ್ಯಾಂಕ್ಗಳು ಕ್ಲೈಮ್ ಮಾಡಲಿವೆ.

ಎನ್ಆರ್ಎಲ್ಎಂ ಯೋಜನೆಯಡಿಯಲ್ಲಿ ಸ್ವ ಸಹಾಯ ಗುಂಪುಗಳ ಸದಸ್ಯರ ಜೀವನೋಪಾಯವನ್ನು ವೃದ್ಧಿಸಲು ಸಾಲ ಬಳಕೆಯನ್ನೂ ಸುಗಮಗೊಳಿಸಿದೆ. ಇದಕ್ಕಾಗಿ 1 ಲಕ್ಷ ದಿಂದ 4 ಲಕ್ಷ ವರೆಗಿನ ಸಾಲಗಳಲ್ಲಿ ಕನಿಷ್ಟ ಶೇ. 50, 4 ಲಕ್ಷದಿಂದ 5 ಲಕ್ಷವರೆಗಿನ ಸಾಲದಲ್ಲಿ ಶೇ. 75 ಮತ್ತು 5 ಲಕ್ಷಕ್ಕಿಂತ ಹೆಚ್ಚಿನ ಸಾಲಗಳಲ್ಲಿ ಶೇ. 100ರಷ್ಟು ಪ್ರಾಥಮಿಕ ಆದಾಯ ಗಳಿಸುವ ಉತ್ಪಾದಕ ಉದ್ದೇಶಗಳಿಗೆ ಬಳಸಬೇಕು. ಉಳೀದ ಸಾಲವನ್ನು ಸಾಮಾಜಿಕ ಅವಶ್ಯಕತೆ ಅಂದರೇ ಆಸ್ಪತ್ರೆ, ವಿದ್ಯಾಭ್ಯಾಸ ಇನ್ನಿತರೆ ಉದ್ದೇಶಗಳಿಗೆ ಬಳಸಬೇಕಿದೆ.
ಸ್ವಸಹಾಯ ಗುಂಪುಗಳು ಆದಾಯ ಗಳಿಸುವ ಉದ್ದೇಶಗಳಿಗೆ ತಯಾರಿಸಿದ ಮೈಕ್ರೋ ಕ್ರೆಡಿಟ್ ಪ್ಲಾನ್ ಅನ್ವಯ ಸಾಲದ ಪ್ರಮಾಣ ನಿರ್ಧರಿಸಲಿದೆ. ಅಲ್ಲದೇ ಸ್ವ ಸಹಾಯ ಗುಂಪುಗಳು ತಮ್ಮ ಸದಸ್ಯರಿಗೆ ಗರಿಷ್ಟ ಶೇ. 12ಕ್ಕಿಂತ ಹೆಚ್ಚಿನ ದರದಲ್ಲಿ ಸಾಲ ವಿತರಣೆ ಮಾಡಲು ಅವಕಾಶವಿಲ್ಲ.

ಈ ಮಧ್ಯೆ 2026-27ನೇ ಸಾಲಿನಲ್ಲಿ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಮೂಲಕ ಕೃಷಿ, ಕೃಷಿ ಸಂಬಂಧಿತ ಸಾಲ ವಿತರಿಸಲು ಮುಂದಾಗಿದೆ.

2026-27ನೇ ಸಾಲಿನಲ್ಲಿ ಮಂಡನೆಯಾಗಿರುವ ಆಯವ್ಯಯದ ಕಂಡಿಕೆ 80ರಲ್ಲಿ ಘೋಷಣೆ ಆಗಿರುವಂತೆ 2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ಸಾಲವನ್ನು ವಿತರಿಸುವ ಗುಗಿ ಹೊಂದಿದೆ. 2026ರ ಫೆಬ್ರುವರಿ ಅಂತ್ಯಕ್ಕೆ 25 ಲಕ್ಷ ರೈತರಿಗೆ 22,000 ಕೋಟಿ ರುಪಾಯಿ ಕೃಷಿ ಸಾಲ ವಿತರಿಸಿದೆ. ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 30,000 ಕೋಟಿ ರು ಕೃಷಿ ಸಾಲ ವಿತರಿಸುವ ಗುರಿ ಹೊಂದಿದೆ.

2025-26ನೇ ಸಾಲಿನಲ್ಲಿ ರಾಜ್ಯದ ರೈತರಿಗೆ ಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಶೇ. 3ರ ಬಡ್ಡಿ ದರದಲ್ಲಿ 15 ಲಕ್ಷವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ನೀಡುವ ಯೋಜನೆಗೆ ಮಂಜೂರಾತಿ ನೀಡಿದೆ. 2026ರ ಏಪ್ರಿಲ್ 1ರಿಂದ 2027ರ ಮಾರ್ಚ್ 31ರವರೆಗೆ ಡಿಸಿಸಿ ಬ್ಯಾಂಕ್ಗಳೀಗೆ 41,524 ರೈತರಿಗೆ 1,496.44 ಕೋಟಿ ರು ಮತ್ತು ಕಸ್ಕಾರ್ಡ್ ಬ್ಯಾಂಕ್ಗೆ 30,000 ರೈತರಿಗೆ 700 ಕೋಟಿ ಹೀಗೆ 71, 524 ರೈತರಿಗೆ 2,196. 44 ಕೋಟಿ ರು ಸಾಲ ವಿತರಿಸುವ ಗುರಿ ನಿಗದಿಪಡಿಸಿದೆ.




