ಬೆಂಗಳೂರು; ಸರ್ಕಾರಿ, ಅನುದಾನಿತ ಶಾಲೆಗಳಲ್ಲ ವ್ಯಾಸಂಗ ಮಾಡುತ್ತಿರುವ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಒದಗಿಸುವ ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿಲ್ಲ!
ಇದೇ ಶೈಕ್ಷಣಿಕ ವರ್ಷದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ಒದಗಿಸಲಾಗುವುದು ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು 2025ರ ಸೆಪ್ಟಂಬರ್ ಮತ್ತು ಡಿಸೆಂಬರ್ನಲ್ಲಿ ಹೇಳಿಕೆ ನೀಡಿ ಭರ್ಜರಿ ಪ್ರಚಾರ ಪಡೆದುಕೊಂಡಿದ್ದರು.
ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರ ಹೇಳಿಕೆ ನಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಆದರೀಗ ಆರ್ಥಿಕ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಒದಗಿಸುವ ಪ್ರಸ್ತಾವವನ್ನು ಹೊರತುಪಡಿಸಿ, ಉಳಿದ 5 ಪ್ರಸ್ತಾವಗಳಿಗಷ್ಟೇ ಸಹಮತಿ ವ್ಯಕ್ತಪಡಿಸಿದೆ.
ವಿಶೇಷವೆಂದರೇ ಈ ಸಂಬಂಧ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಅಭಿಪ್ರಾಯವನ್ನು ಆರ್ಥಿಕ ಇಲಾಖೆಯು 2026ರ ಜನವರಿ 27ರಂದು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಗೆ ಕಳಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಠ್ಯಪುಸ್ತಕಗಳ ಜೊತೆ ಉಚಿತ ನೋಟ್ ಬುಕ್ ಕೂಡಾ ಸಿಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು. ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಶೇ 90ರಷ್ಟು ಬಡ ಮಕ್ಕಳು ಓದುತ್ತಿದ್ದಾರೆ.
ಇದರಲ್ಲಿ ಪದವಿ ಪೂರ್ವ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು ಸಿಗದ ಕಾರಣ ಇಷ್ಟು ವರ್ಷ ನೋಟ್ ಬುಕ್ ಜೊತೆಗೆ ಪಠ್ಯಪುಸ್ತಕಕಗಳನ್ನೂ ಖರೀದಿಸಿ ಬಳಸಬೇಕಿತ್ತು. ಆದರೆ ಇನ್ನು ಮುಂದೆ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 6 ನೋಟ್ ಬುಕ್ಗಳನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಿಕೆ ನೀಡಿದ್ದರು.
ಅಲ್ಲದೇ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಉಚಿತ ಪಠ್ಯಪುಸ್ತಕಗಳನ್ನ ನೀಡುತ್ತಿದೆ. ರಾಜ್ಯದ ಶಿಕ್ಷಣ ಇಲಾಖೆ ಉಚಿತ ಸಮವಸ್ತ್ರವನ್ನೂ ನೀಡುತ್ತಿದೆ. ಆದರೆ ನೋಟ್ಸ್ ಬುಕ್ ಇಲ್ಲದೆ ತರಗತಿಯಲ್ಲಿ ಶಿಕ್ಷಕರು ಕಲಿಸುವುದನ್ನು ಬರೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಪೋಷಕರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ಸ್ ಬುಕ್ ಸಹ ಸಿಗುತ್ತಿಲ್ಲ. ಇದರಿಂದ ತರಗತಿಯಲ್ಲಿ ಶಿಕ್ಷಕರು ನೀಡುವ ಹೊಮ್ ವರ್ಕ್ ಬರೆಯಲು ಮತ್ತು ತರಗತಿಯ ನೋಟ್ಸ್ ಬರೆದು ಓದಲು ಕಷ್ಟವಾಗಿತ್ತು. ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ 6 ವಿಷಯಗಳಿಗೆ 6 ನೋಟ್ಸ್ ಬುಕ್ ನೀಡಲು ಮುಂದಾಗಿದೆ ಎಂದು ಹೇಳಿದ್ದರು.
ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿದೆ?
ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಒದಗಿಸುವ ಪ್ರಸ್ತಾವನೆಯನ್ನು ಹೊರತುಪಡಿಸಿ ಉಳಿದ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದೆ ಎಂದು ತಿಳಿಸಿದೆ.

ಈಗಾಗಲೇ ಜಾರಿಯಲ್ಲಿರುವಂತೆ 2026-27ನೇ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ, ಸರ್ಕಾರಿ ಶಾಲಾ ಕಾಲೇಜುಗಳ 1ರಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ದಿನಚರಿಗಳನ್ನು ಮುದ್ರಿಸಿ ವಿತರಿಸಲು ಸಹಮತಿ ನೀಡಿದೆ.
2026-27ನೇ ಸಾಲಿಗೆ ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ (ಎಲ್ಕೆಜಿ ಯುಕೆಜಿ) ಉಚಿತ ಪಠ್ಯ ಪುಸ್ತಕ ವಿತರಿಸಲು ಅನುಮತಿ ನೀಡಿದೆ. ಅದೇ ರೀತಿ ಸಮಗ್ರ ಶಿಕ್ಷಣದಡಿಯಲ್ಲಿ ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಬಾಲಚೇತನ ದ್ವಿಭಾಷಾ ಚಟುವಟಿಕೆ ಪುಸ್ತಕ, ದಿನಚರಿಗಳನ್ನು ಹಾಗೂ 1ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀತಿ ಶಿಕ್ಷಣ ಪಠ್ಯ ಪುಸ್ತಕ ಮತ್ತು 2025-26ನೇ ಸಾಲಿಗೆ ಅನುಮೋದನೆಗೊಂಡಂತೆ ಮರು ಸಿಂಚನ ಚಟುವಟಿಕೆ ಪುಸ್ತಕಗಳನ್ನು ವಿತರಿಸಲು ಅನುಮೋದನೆ ನೀಡಿದೆ.
2025-26ನೇ ಸಾಲಿನಲ್ಲಿ ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರ ಅಡಿ ಬಳಕೆಯಾಗದೇ ಇರುವ ಮೊತ್ತವನ್ನು ಅನುಮೋದಿತ ಕ್ರಿಯಾಯೋಜನೆ ಅನುಸಾರ ಬಳಸಬೇಕು ಎಂದು ಆರ್ಥಿಕ ಇಲಾಖೆಯು ತಿಳಿಸಿರುವುದು ಗೊತ್ತಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಎಸ್ಸಿಎಸ್ಪಿ ಅಡಿಯಲ್ಲಿ ಒಟ್ಟಾರೆ 1,008 ಕೋಟಿ ರು ಇತ್ತು. ಈ ಪೈಕಿ ಜನವರಿ 27ರ ಅಂತ್ಯಕ್ಕೆ 451.48 ಕೋಟಿ ಬಿಡುಗಡೆಯಾಗಿತ್ತು. ಇದರಲ್ಲಿ 376.15 ಕೋಟಿ ರು ವೆಚ್ಚವಾಗಿದೆ. ಟಿಎಸ್ಪಿ ಅಡಿಯಲ್ಲಿ 404.09 ಕೋಟಿ ರು ಅನುದಾನವಿತ್ತು. ಜನವರಿ 27ರ ಅಂತ್ಯಕ್ಕೆ 183.82 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 154.15 ಕೋಟಿ ರು ವೆಚ್ಚವಾಗಿದೆ. ಒಟ್ಟಾರೆ 530.30 ಕೋಟಿ ರು ವೆಚ್ಚವಾಗಿದೆ. ಇದು ಒಟ್ಟು ಅನುದಾನಕ್ಕೆ ಶೇ. 37.55ರಷ್ಟು ಮಾತ್ರ ವೆಚ್ಚವಾದಂತಿದೆ.
ರಾಜ್ಯದಲ್ಲಿ 46,000ಕ್ಕೂ ಅಧಿಕ ಸರ್ಕಾರಿ ಮತ್ತು 7,500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅನುದಾನಿತ ಶಾಲೆಗಳಿವೆ. ಈ ಶಾಲೆಗಳಲ್ಲಿ 50ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೋಟ್ ಪುಸ್ತಕಕ್ಕೆ ತಲಾ 25 ರು ಎಂದು ಲೆಕ್ಕ ಹಾಕಿದರೂ 50 ಲಕ್ಷ ವಿದ್ಯಾರ್ಥಿಗಳಿಗೆ 125 ಕೋಟಿ ರು ವೆಚ್ಚವಾಗಲಿದೆ ಎಂದು ಅಧಿಕಾರಿಯೊಬ್ಬರು ದಿ ಫೈಲ್ಗೆ ತಿಳಿಸಿದರು.









