ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್‌

ಬೆಂಗಳೂರು; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ಸದಸ್ಯರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ  5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಂಚಿಕೆಯಾಗಿರುವುದನ್ನು ಸಮರ್ಥಿಸಿಕೊಂಡಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ ಆದಿಯಾಗಿ ಕಾಂಗ್ರೆಸ್‌ನ ಯಾವೊಬ್ಬ  ಮುಖಂಡರೂ ಹಿತಾಸಕ್ತಿ ಸಂಘರ್ಷದ ಬಗ್ಗೆ ಈವರೆವಿಗೂ  ಉಸಿರೆತ್ತಿಲ್ಲ.

 

ನಿಯಮ ಪ್ರಕಾರವೇ  ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ ಸಿ ಎ ನಿವೇಶನ ಮಂಜೂರು ಮಾಡಿದೆ,  ನಿಯಮ ಉಲ್ಲಂಘನೆಯೇ ಆಗಿಲ್ಲ,  ರಾಷ್ಟ್ರೋತ್ಥಾನ ಪರಿಷತ್‌, ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿ ಜಮೀನು ನೀಡಿಲ್ಲವೇ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ ಬಿ ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಅವರು ಹೇಳಿಕೆ ನೀಡಿ ತೇಪೆ ಹಾಕಲು ಯತ್ನಿಸಿರುವುದು ಸಹ ರಾಜಕೀಯ ವಲಯದಲ್ಲಿ ಚರ್ಚೆ ಬಿರುಸು ಪಡೆದುಕೊಂಡಿದೆ.

 

ಇನ್ನು ಈ ಪ್ರಕರಣದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತಿತರರು ಈ ಬಗ್ಗೆ ತುಟಿ ಬಿಚ್ಚಿಲ್ಲ. ವಿಧಾನ ಪರಿಷತ್‌ ಸದಸ್ಯ ರಮೇಶ್‌ ಬಾಬು ಅವರು ಈ ಪ್ರಕರಣದಲ್ಲಿ ಖರ್ಗೆ ಕುಟುಂಬವನ್ನು ಸಮರ್ಥಿಸಿಕೊಂಡಿದ್ದಾರೆಯೇ ವಿನಃ ಎಲ್ಲಿಯೂ  ಹಿತಾಸಕ್ತಿ ಸಂಘರ್ಷದ ಬಗ್ಗೆ ಚಕಾರವೆತ್ತಿಲ್ಲ.

 

ಈ ಪ್ರಕರಣದ ಬಗ್ಗೆ ರಾಜ್ಯಸಭಾ ಸದಸ್ಯ ಲೆಹರ್‍‌ ಸಿಂಗ್‌ ಅವರು ಪ್ರತಿಕ್ರಿಯಿಸಿದ್ದಷ್ಟೇ ಅಲ್ಲದೇ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಇದು ರಾಷ್ಟ್ರೀಯ ಮಟ್ಟದಲ್ಲಿ ಬಹು ದೊಡ್ಡ ಚರ್ಚೆಗೆ ನಾಂದಿ ಹಾಡಿತು. ಅದರಲ್ಲೂ ಬಿಜೆಪಿಯ ರಾಷ್ಟ್ರೀಯ ಘಟಕವು ಮಲ್ಲಿಕಾರ್ಜುನ ಖರ್ಗೆ ಮತ್ತು  ಪ್ರಿಯಾಂಕ್‌ ಖರ್ಗೆ ಅವರ ರಾಜೀನಾಮೆಗೂ ಒತ್ತಾಯಿಸಿತು. ಇದರ ಮಧ್ಯೆ  ಲೆಹರ್‍‌ ಸಿಂಗ್‌ ಅವರ ಆದಾಯ, ಸಂಪತ್ತಿನ ವಿಚಾರವನ್ನೂ  ಕಾಂಗ್ರೆಸ್‌ ಮುಖಂಡರು ಮಧ್ಯೆ ಎಳೆದು ತಂದರು.  ಇದು ದಲಿತ ವಿರೋಧಿ ನೀತಿ, ಜಾತಿ ನಿಂದನೆ ಮೊಕದ್ದಮೆ ಹಾಕಲಾಗುವುದು ಎಂದೂ ಬೆದರಿಸಲು ಯತ್ನಿಸಿದರು.

 

ಈ ಮಧ್ಯೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರೂ ಸಹ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರಲ್ಲದೇ ಇದೇ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರನ್ನು ವಜಾಗೊಳಿಸಬೇಕು ಎಂದೂ ಆಗ್ರಹಿಸಿದ್ದರು. ಇದಕ್ಕೂ ಆಕ್ಷೇಪಿಸಿದ್ದ ಕಾಂಗ್ರೆಸ್‌, ಛಲವಾದಿ ನಾರಾಯಣ ಸ್ವಾಮಿ ಅವರೂ ಸೇರಿದಂತೆ ಬಿಜೆಪಿಯ ಹಲವರಿಗೂ ಈ ಹಿಂದೆಯೂ  ಸಿ ಎ ನಿವೇಶನ ನೀಡಲಾಗಿದೆ ಎಂದು ಆರೋಪಿಸಿದರು.

 

ಇದಕ್ಕೆ ತಿರುಗೇಟು ನೀಡುತ್ತಲೇ ಇದ್ದ ಪ್ರತಿಪಕ್ಷ ಬಿಜೆಪಿಯು ಈ ಪ್ರಕರಣವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತು.

 

ಇದರಿಂದ ವಿಚಲಿತರಾದ ಕಾಂಗ್ರೆಸ್‌ನ ಕೆಲ ಮುಖಂಡರು ಖರ್ಗೆ ಕುಟುಂಬದ ಬೆನ್ನಿಗೆ ನಿಂತಿದ್ದು ಮಾತ್ರವಲ್ಲದೇ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ನೀಡಿಲ್ಲವೇ ಎಂದೂ ಪ್ರಶ್ನಿಸಿದರು.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಮತ್ತು ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಮಂಜೂರಾಗಿರುವ ಜಮೀನಿನ ಕುರಿತು ಪ್ರಸ್ತಾಪಿಸಿ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದರು. ವಿಶೇಷವೆಂದರೇ ಅಧಿಕಾರ ಹಿಡಿದು ಒಂದೂವರೇ ವರ್ಷ ಕಳೆದರೂ ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಚಾಣಕ್ಯ ವಿವಿಗೆ ನೀಡಿದ್ದ ಜಾಗವನ್ನು ಹಿಂಪಡೆಯಲು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ, ಕನಿಷ್ಠ ಪತ್ರ ವ್ಯವಹಾರವೂ ನಡೆಸಿಲ್ಲ.

ಚಾಣಕ್ಯ ವಿವಿ ಅಧಿನಿಯಮಕ್ಕೆ ತಿದ್ದುಪಡಿ ಪ್ರಸ್ತಾವ; ಅಂದು ವಿರೋಧ, ಇಂದು ಸಮ್ಮತಿಯೇ?

 

ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಚಾಣಕ್ಯ ವಿವಿಗೆ ನೀಡಿರುವ ಜಾಗದ ಕುರಿತೇ ಅತೀ ಹೆಚ್ಚು ಪ್ರಸ್ತಾಪ ಮಾಡುತ್ತಲೇ ಬಂದ ಕಾಂಗ್ರೆಸ್‌,   ಈ ಪ್ರಕರಣದಲ್ಲಿ  ಪ್ರಜ್ಞಾಪೂರ್ವಕವಾಗಿ ಹಿತಾಸಕ್ತಿ ಸಂಘರ್ಷ ಕುರಿತಾದ ಒಂದೇ ಒಂದು ಮಾತನ್ನೂ ಆಡಲಿಲ್ಲ, ಪ್ರಕರಣದ ಸುತ್ತಲೂ ಸುಳಿಯಲೂ ಬಿಡಲಿಲ್ಲ.

 

ಅನುಮೋದನೆ ನೀಡಿರುವ ಪ್ರಕರಣ ಸೇರಿದಂತೆ ಇನ್ನಿತರೆ ಕಂಪನಿ, ಸಂಘ ಸಂಸ್ಥೆಗಳಿಗೆ ಹಂಚಿಕೆಯಲ್ಲಿಯೂ  ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಎರಡು ತಿಂಗಳ ಮೊದಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು

ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ  ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಹಂಚಿಕೆ ಮಾಡಿರುವ ಪ್ರಕರಣವು ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಮುಜುಗರ ಒಡ್ಡಿದೆ.  ಇದರ ಬೆನ್ನಲ್ಲೇ  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ದೂರು,  ಎರಡು ತಿಂಗಳ ಮೊದಲೇ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿತ್ತು ಎಂಬ ಅಂಶವು ಇಡೀ  ಪ್ರಕರಣವನ್ನು ಮತ್ತೊಂದು ಮಗ್ಗುಲು ಬದಲಿಸಿದಂತಾಗಿತ್ತು.

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ನಾಗರಿಕ ಸೌಲಭ್ಯಕ್ಕೆ ಮೀಸಲಿರಿಸಿದ್ದ ನಿವೇಶನಗಳನ್ನು ಮಂಜೂರು ಮಾಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಮತ್ತು ಈ ತೀರ್ಮಾನದಿಂದ ಮಂಡಳಿಗೆ ನೂರಾರು ಕೋಟಿ ರು ಮೊತ್ತದಲ್ಲಿ ನಷ್ಟವುಂಟಾಗಿದೆ ಎಂದು ರಾಹುಲ್‌ಗಾಂಧಿ ಅವರ ಕಚೇರಿಗೆ ದೂರು ಸಲ್ಲಿಸಿದ್ದರು. ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಅವರ ಹೆಸರನ್ನೂ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರಲ್ಲದೇ ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲಾತಿಗಳನ್ನೂ ಲಗತ್ತಿಸಿದ್ದರು.

 

 

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಹೈಟೆಕ್  ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಹಂಚಿಕೆ ಮಾಡಿದ್ದ 45.94 ಎಕರೆ ವಿಸ್ತೀರ್ಣದ ಪೈಕಿ 5 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರೇ ಟ್ರಸ್ಟಿಗಳಾಗಿರುವ ಕಾರಣ ಈ ಪ್ರಕರಣವು ರಾಜಕೀಯ ವಲಯದಲ್ಲಿ  ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಹಂಚಿಕೆಯಾಗಿರುವ 45.94 ಎಕರೆ ವಿಸ್ತೀರ್ಣದ ಪೈಕಿ ರಾಹುಲ್‌ ಎಂ ಖರ್ಗೆ ಅವರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ  5 ಎಕರೆ ವಿಸ್ತಿರ್ಣ ಜಾಗವನ್ನು ಮಂಜೂರು ಮಾಡಿತ್ತು. ಈ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ರಾಹುಲ್‌ ಎಂ ಖರ್ಗೆ ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪ.ಜಾತಿ ಕೋಟಾದಲ್ಲಿ 5 ಎಕರೆ ಮಂಜೂರು

 

ಈ ವರದಿ ಪ್ರಕಟವಾದ ಬೆನ್ನಲ್ಲೇ  ಸಿದ್ದಾರ್ಥ ವಿಹಾರ ಟ್ರಸ್ಟ್‌ ನ ಡೀಡ್‌ ಕೂಡ ಮುನ್ನೆಲೆಗೆ ಬಂದಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?

 

 

ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿ.ಎ) ಮೀಸಲಿಟ್ಟ ನಿವೇಶನಗಳ ಹಂಚಿಕೆಯಲ್ಲಿ ಒಳಸಂಚು ಮತ್ತು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.  ಇದರ ಬೆನ್ನಲ್ಲೇ ಬಹಿರಂಗವಾಗಿರುವ  ಮಲ್ಲಿಕಾರ್ಜುನ ಖರ್ಗೆ ಅವರೂ ಸೇರಿದಂತೆ ಅವರ ಕುಟುಂಬದ ಸದಸ್ಯರು  ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಡೀಡ್‌ ದಾಖಲೆಗಳು ಪ್ರತಿಪಕ್ಷಗಳ ಕೈಗೆ ಮತ್ತೊಂದು ಬಲವಾದ ಅಸ್ತ್ರವೊಂದನ್ನು ನೀಡಿದಂತಾಗಿತ್ತು.

 

 

ಸಿಎ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ; ಸಿದ್ದರಾಮಯ್ಯ ಬೆನ್ನಲ್ಲೇ ಎಂ ಬಿ ಪಾಟೀಲ್‌ಗೂ ಸಂಕಷ್ಟ

ಇಂತಹ ನಿವೇಶನವನ್ನು ಹರಾಜು ಮೂಲಕ ಹಂಚಿಕೆ ದರದ ದುಪ್ಪಟ್ಟು ದರದಲ್ಲಿ ಅಥವಾ ಹಂಚಿಕೆ ದರದ ಶೇಕಡಾ 1 ½ ಹಂಚಿಕೆಯ ದರದಲ್ಲಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೆಐಡಿಬಿಯು ನಿಯಮಗಳನ್ನು ಪಾಲಿಸದೇ ಹಂಚಿಕೆ ದರದಲ್ಲಿಯೇ ಸಿಎ ನಿವೇಶನವನ್ನು ಹಂಚಿಕೆ ದರದಲ್ಲಿ ಹಂಚಿಕೆ ಮಾಡುತ್ತಿದ್ದು, ಇದರಿಂದ ಕೆಐಡಿಬಿಗೆ ಕೋಟ್ಯಾಂತರ ರುಪಾಯಿಗಳು ನಷ್ಟವುಂಟಾಗಿದೆ ಎಂದು ದಿನೇಶ್‌ ಆರೋಪಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts