ಗೃಹಲಕ್ಷ್ಮಿ; ಶೇ.50.91ರಷ್ಟು ಉಳಿತಾಯವಾಗದ ಹಣ, ಶೇ.5.92ರಷ್ಟು ಚೀಟಿ ವ್ಯವಹಾರದಲ್ಲಿ ಹೂಡಿಕೆ

ಬೆಂಗಳೂರು;  ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಶೇ.50.91ರಷ್ಟು ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿಲ್ಲ. ಶೇ. 5.92ರಷ್ಟು ಫಲಾನುಭವಿಗಳು ಗೃಹ ಲಕ್ಷ್ಮಿ ಹಣವನ್ನು ಚೀಟಿ ವ್ಯವಹಾರದಲ್ಲಿ ಹೂಡಿದ್ದಾರೆ ಎಂದು ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಡೆಸಿರುವ ಸಮೀಕ್ಷೆಯು ಹೊರಗೆಡವಿದೆ.

 

ಐದು ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿರುವ ಹಾಗೂ ಗ್ಯಾರಂಟಿಗಳನ್ನು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ ಸಮೀಕ್ಷೆಯ ವಿವರಗಳನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

 

ಪ್ರಾಧಿಕಾರದ ಅಧ್ಯಕ್ಷ ಹೆಚ್‌ ಎಂ ರೇವಣ್ಣ ಅಧ್ಯಕ್ಷತೆಯಲ್ಲಿ 2024ರ ಮಾರ್ಚ್‌ 14ರಂದು ಸಭೆ ನಡೆದಿತ್ತು. ರಾಜ್ಯಾದ್ಯಂತ ನಡೆಯುತ್ತಿರುವ ಗ್ಯಾರಂಟಿ ಸಮೀಕ್ಷೆ ಪ್ರಗತಿ ಕುರಿತು ಈ ಸಭೆಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ನಡೆಸಿದ್ದ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ಯೋಜನೆಯಿಂದ ಶೇ.95.33ರಷ್ಟು ಮಹಿಳೆಯರು ಹಣ ಸ್ವೀಕರಿಸಿದ್ದಾರೆ ಎಂದು ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ. ಅದೇ ರೀತಿ ಶೇ.50.91ರಷ್ಟು ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿಲ್ಲ ಎಂಬ ಸಂಗತಿಯನ್ನು ವಿವರಿಸಲಾಗಿದೆ.

 

ಶೇ.22.55ರಷ್ಟು ಮಹಿಳೆಯರು ಯೋಜನೆಯಿಂದ ಬಂದ ಹಣವನ್ನು ದಿನಬಳಕೆಗಾಗಿ ಬಳಸಿದ್ದಾರೆ. ಶೇ.28.68ರಷ್ಟು ದಿನಸಿ ಖರೀದಿಗಾಗಿ, ಶೇ.15.9ರಷ್ಟು ಹಣ್ಣು ತರಕಾರಿಗಳಿಗಾಗಿ ಬಳಸಿದ್ದರೇ ಶೇ.14.8ರಷ್ಟು ಔ‍ಷಧೋಪಚಾರಕ್ಕೆ, ಶೇ.12.68ರಷ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಸಮೀಕ್ಷೆ ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಶೇ.4.9ರಷ್ಟು ತುರ್ತು ಅವಶ್ಯಕತೆಗಳಿಗಾಗಿ, ಶೇ.2.16ರಷ್ಟು ಮಕ್ಕಳ ಮದುವೆಗಾಗಿ ಉಳಿತಾಯ ಮಾಡುತ್ತಿರುವುದಾಗಿ ಅಭಿಪ್ರಾಯಿಸಿದ್ದಾರೆ.

 

ಮಹಿಳಾ ಸಬಲೀಕರಣದ ಬಗ್ಗೆಯೂ ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೇ.89.08ರಷ್ಟು ಮಹಿಳೆಯರು ಹಣವನ್ನು ಸ್ವಂತ ಖರ್ಚಿಗಾಗಿ ಉಪಯೋಗಿಸುತ್ತಿದ್ದಾರೆ. ಶೇ.50.91ರಷ್ಟು ಮಹಿಳೆಯರಿಗೆ ಹಣ ಉಳಿತಾಯವಾಗುತ್ತಿಲ್ಲ. ಶೇ.26.91ರಷ್ಟು ಸ್ವಸಹಾಯ ಗುಂಪಿನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಶೇ.6.22ರಷ್ಟು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಶೇ.6.13ರಷ್ಟು ಬ್ಯಾಂಕ್‌, ಇತರೆ ಸಂಸ್ಥೆಗಳಲ್ಲಿ ಇಟ್ಟಿರುತ್ತಾರೆ. ಶೇ.5.92ರಷ್ಟು ಚೀಟಿಯಲ್ಲಿ ಹೂಡಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಗೃಹ ಲಕ್ಷ್ಮಿಗೆ ಶೇ.97.51ರಷ್ಟು ಮಹಿಳೆಯರು ನೋಂದಾಯಿಸಿದ್ದಾರೆ. ಶೇ.76.92ರಷ್ಟು ಮಹಿಳೆಯರ ಪ್ರಕಾರ ನೋಂದಣಿ ಪ್ರಕ್ರಿಯೆ ಸರಳವಾಗಿದೆ. ಶೇ.19.85ರಷ್ಟು ಮಹಿಳೆಯರ ನೋಂದಣಿಯನ್ನು ಇನ್ನೊಬ್ಬರ ಸಹಾಯದಿಂದ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

‘ಗೃಹ ಲಕ್ಷ್ಮಿ ಯೋಜನೆಯಡಿ ಕೆಲವರಿಗೆ ಹಣ ಬಂದಿಲ್ಲವೆಂದು ನಮೂದಿಸಿದ್ದಾರೆ. ಬಹುಶಃ ಹಣ ಪಾವತಿ ಪ್ರಕ್ರಿಯೆಯಲ್ಲಿರಬಹುದು. ಒಂದು ವೇಳೆ ಇಲ್ಲವಾದಲ್ಲಿ ವಿವರಗಳನ್ನು ಪಡೆದು ಶೀಘ್ರ ಪಾವತಿಗೆ ಕ್ರಮ ವಹಿಸಬೇಕು,’ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್‌ ಎಂ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.

 

ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಆರ್ಥಿಕ ಇಲಾಖೆ ಎಚ್ಚರಿಸಿದ್ದರೂ ಈ ವರ್ಷವೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು  ಗೃಹ ಲಕ್ಷ್ಮಿ ಯೋಜನೆಗೆ 31,920 ಕೋಟಿ ರು. ಕೋರಿದ್ದರು.

 

2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡಿರುವ ಬೇಡಿಕೆ ಪಟ್ಟಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಹೆಚ್ಚುವರಿಯಾಗಿ 31,920 ಕೋಟಿ ರು ಒದಗಿಸಲು ಬೇಡಿಕೆ ಸಲ್ಲಿಸಿತ್ತು.

ಗೃಹಲಕ್ಷ್ಮಿ ಯೋಜನೆಗೆ 31,920 ಕೋಟಿ ರು ಬೇಡಿಕೆ, 18 ಯೋಜನೆಗಳಿಗೆ ಕೇವಲ 332.72 ಕೋಟಿ ಉಳಿಕೆ

 

ವಿಶೇಷವೆಂದರೇ ಇದೇ ಇಲಾಖೆಯ ಇನ್ನಿತರೆ ಯೋಜನೆಗಳ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯು ಮೊತ್ತವನ್ನೂ ನಿಗದಿಪಡಿಸಿ ಸೂಚಿಸಿದೆ. ಆದರೆ ಗೃಹ ಲಕ್ಷ್ಮಿ ಯೋಜನೆಗೆ ಇಂತಿಷ್ಟೇ ಮೊತ್ತ ಎಂದು ಸೂಚಿಸಿರಲಿಲ್ಲ.

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಇನ್ನು, ಈ ಯೋಜನೆಯ ಪ್ರಚಾರ, ಜಾಹೀರಾತು, ಅರ್ಜಿ ಶುಲ್ಕ, ಸಮಾಲೋಚಕರ ವೇತನ ಹಾಗೂ ಇತರೆ ವೆಚ್ಚಗಳಿಗೆಂದು 20 ಕೋಟಿ ರು. ಅವಶ್ಯಕತೆ ಇದೆ ಎಂದೂ ಬೇಡಿಕೆ ಪಟ್ಟಿಯಲ್ಲಿ ವಿವರಿಸಿದೆ.

ಗೃಹ ಲಕ್ಷ್ಮಿ; ಸಿಎಂ, ಡಿಸಿಎಂ, ಸಚಿವರ ಫೋಟೋ ಶೂಟ್‌ ಸೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಕ್ಕೆ 50 ಲಕ್ಷ ರು ವೆಚ್ಚ

ಜಿಲ್ಲಾ ವಲಯದ ಯೋಜನೆ ಮತ್ತು ಇತರೆ ಯೋಜನೆಗಳಿಗೆ 2024-25ನೇ ಸಾಲಿಗೆ 39,369.82 ಕೋಟಿ ರು. ಕೋರಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ 186.43 ಕೋಟಿ ರು., ಮಕ್ಕಳ ಹಕ್ಕುಗಳ ನಿರ್ದೇಶನಾಲಯಕ್ಕೆ 273.69 ಕೋಟಿ ರು., ವಿಕಲ ಚೇತನರ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯಕ್ಕೆ 292.47 ಕೋಟಿ ರು., ಕರ್ನಾಟಕ ಬಾಲ ವಿಕಾಸ ಅಕಾಡೆಮಿಗೆ 11.89 ಕೋಟಿ ರು., ಕರ್ನಾಟಕ ರಾಜ್ಯಮಹಿಳಾ ಆಯೋಗಕ್ಕೆ 6.35 ಕೋಟಿ ರು., ಕರ್ನಾಟಕ ರಾಜ್ಯ ಮಕ್ಕಳ ಆಯೋಗಕ್ಕೆ 3.23 ಕೋಟಿ ರು., ಬಾಲಭವನಗಳಿಗೆ 54.02 ಕೋಟಿ ರು., ಕೋರಿದೆ.

‘ಗೃಹ ಲಕ್ಷ್ಮಿ’ಯೋಜನೆಗೆ ಚಾಲನೆ; ಪ್ರಚಾರ ಫಲಕಗಳಲ್ಲಿನ ಜಾಹೀರಾತೂ ಸೇರಿ 19.4 ಕೋಟಿ ರು. ವೆಚ್ಚ

2024-25ನೇ ಸಾಲಿನಲ್ಲಿ ಘೋಷಿಸಲಿರುವ ಹೊಸ ಯೋಜನೆಗಳಾದ ಸ್ಮಾರ್ಟ್‌ ಅಂಗನವಾಡಿ ಯೋಜನೆಗೆ 408 ಕೋಟಿ ರು., ಅಂಗವನಾಡಿ ಮಕ್ಕಳಿಗೆ ಎರಡು ಜೊಗೆ ಸಮವಸ್ತ್ರ, ಶೂ ಸಾಕ್ಸ್‌ಗಳನ್ನು ಒದಗಿಸಲು 212.30 ಕೋಟಿ ರು., ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಎರಡು ಜೊತೆ ಹೆಚ್ಚುವರಿ ಸಮವಸ್ತ್ರಗಳೀಗೆ 13.75 ಕೋಟಿ ರು., ಅಂಗನವಾಡಿ ಕಟ್ಟಡಗಳ ನಿರ್ಮಾಣ ಯೋಜನೆಗಳಿಗೆ 200.00 ಕೋಟಿ ರು., ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಘಟಕಗಳನ್ನು ಆರಂಭಿಸುವ ಸಂಬಂಧ 0.95 ಕೋಟಿ ರು., ಬೇಕಿದೆ.

ಗೃಹಲಕ್ಷ್ಮಿ ಕಾರ್ಯಕ್ರಮ ಚಾಲನೆ, ಹೋರ್ಡಿಂಗ್ಸ್‌ ಸೇರಿ ಪ್ರಚಾರಕ್ಕೆ ಈವರೆಗೆ 36.35  ಕೋಟಿ ರು. ಮಂಜೂರು

ಶ್ರೇಷ್ಠ ಆವಾಸ ಯೋಜನೆಗೆ 83.32 ಕೋಟಿ ರು., ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮಾಸಾಶನಕ್ಕೆ 57.42 ಕೋಟಿ ರು., ಸಮುದಾಯ ಆಧರಿತ ಪುನಶ್ಚೇತನ ಯೋಜನೆಗೆ 1.30 ಕೋಟಿ ರು., ಹಿರಿಯ ದೃಷ್ಟಿ ಯೋಜನೆಗೆ 1.35 ಕೋಟಿ ರು., ರಾಜ್ಯ ವಿಕಲಚೇತನರ ನಿಧಿ ಸ್ಥಾಪನೆಗೆ 10.00 ಕೋಟಿ ರು., ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನರ್ವಸತಿ ಕೇಂದ್ರ ಸ್ಥಾಪನೆಗೆ 1.52 ಕೋಟಿ ರು., ಸರ್ಕಾರಿ ಅನುಪಾಲನ ಗೃಹಗಳಿಗೆ 4.00 ಕೋಟಿ ರು., ಬ್ಯಾಟರಿ ಚಾಲಿತ ವ್ಹೀಲ್‌ ಚೇರ್‍‌ಗಳಿಗೆ 50 ಕೋಟಿ ರು., ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಗೆ 3.83 ಕೋಟಿ ರು. ಅಂದಾಜಿಸಿದೆ.

 

ಅದೇ ರೀತಿ ವಿಕಲಚೇತರಿಗೆ ಮಾಸಾಶನ ಹೆಚ್ಚಿಸಲು 754.20 ಕೋಟಿ ರು., ಸ್ವಯಂ ಉದ್ಯೋಗಕ್ಕಾಗಿ 6.00 ಕೋಟಿ ರು., ಶಿಶುಪಾಲನಾ ಭತ್ಯೆ ನೀಡಲು 0.70 ಕೋಇಟ ರು., ಸಾಧನೆ ಯೋಜನೆಯಡಿ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ಧನಕ್ಕೆ 5.60 ಕೋಟಿ ರು., ವಿವಾಹ ಪ್ರೋತ್ಸಾಹ ಧನಕ್ಕೆ 5.50 ಕೋಟಿ ರು., ಹಿರಿಯ ನಾಗರೀಕರಿಗೆ ಮಾಸಶಾನ ಹೆಚ್ಚಿಸಲು 2,891.53 ಕೋಟಿ ರು. ಬೇಡಿಕೆ ಇರಿಸಿದೆ.

Your generous support will help us remain independent and work without fear.

Latest News

Related Posts