Monday | May 25, 2026 |

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ ಸುತ್ತಲು ಕೈಗೊಂಡಿದ್ದ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಿದ್ದರೂ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಎಸಗಿರುವ ಅಧಿಕಾರಿಗಳ ವಿರುದ್ದವೂ ಯಾವುದೇ ಕ್ರಮವನ್ನೂ ಜರುಗಿಸಿಲ್ಲ.

ಕಸ್ತೂರಿ ರಂಗಪ್ಪ ನಾಯಕ ಕೋಟೆ ಅಭಿವೃದ್ದಿ ಮತ್ತು ಪ್ರವಾಸಿತಾಣವನ್ನಾಗಿ ಅಭಿವೃದ್ದಿಪಡಿಸಲು ನೀಡಿದ್ದ ಅನುದಾನವನ್ನು ಬಳಸಿಕೊಳ್ಳದೇ ಇರುವ ಬಗ್ಗೆ ಸಿಎಜಿಯು ಸಹ ವರದಿ ನೀಡಿತ್ತು. ಅಲ್ಲದೇ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರೂ ಸಹ ಈ ಸಂಬಂಧ ಸ್ಥಳ ತನಿಖೆ ವರದಿ ಸಲ್ಲಿಸಿದ್ದರು. ಆದರೂ ಪ್ರವಾಸೋದ್ಯಮ ಸಚಿವ ಎಚ್‌ ಕೆ ಪಾಟೀಲ್‌ ಅವರು ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ತನಿಖಾ ವರದಿಯು ಧೂಳಿಡಿದು ಕೂತಿದೆ.

ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ತುಮಕೂರು ಜಿಲ್ಲೆಯ ಸಹಾಯಕ ನಿರ್ದೇಶಕರು 2025 ಮತ್ತು 2026ರ ಮಾರ್ಚ್‌ 16ರಂದು ಇಲಾಖೆಯ ಆಯುಕ್ತರಿಗೆ ವಿಸ್ತೃತ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೋಟೆಯ ಹೊರಭಾಗದಲ್ಲಿ ಹಲವು ಸಿವಿಲ್ ಕಾಮಗಾರಿಗಳ ನಿರ್ವಹಣೆಗೆ ಲಕ್ಷಾಂತರ ರುಪಾಯಿ ಅನುದಾನ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದ ಅನುದಾನವನ್ನು ಬಳಸಿಕೊಳ್ಳದ ಇಲಾಖೆ ಮತ್ತು ಗುತ್ತಿಗೆದಾರರು ಕಾಮಗಾರಿಗಳನ್ನು ಪೂರ್ಣಗೊಳಿಸಿಲ್ಲ. ಇದರಿಂದ ಸರ್ಕಾರಕ್ಕೆ ಹೊರೆ ಅಥವಾ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ಬಳಕೆಯಾಗದ 5 ಕೋಟಿ ಅನುದಾನ

ಶಿರಾ ತಾಲೂಕಿನ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ ಸುತ್ತ ಚೈನ್‌ ಲಿಂಕ್‌, ಫೆನ್ಸಿಂಗ್‌, ನೂತನ ಸೇತುವೆ ನಿರ್ಮಾಣ, ಹೊರಭಾಗದಲ್ಲಿ ಗೇಟ್‌ ನಿರ್ಮಾಣ, ಕೋಟೆಯ ಪ್ರವೇಶ ದ್ವಾರದಲ್ಲಿ ನೂತನ ಬಾಗಿಲು ನಿರ್ಮಾಣಕ್ಕೆ 5 ಕೋಟಿ ಅನುದಾನವು 2018ರಲ್ಲೇ ಮಂಜೂರಾಗಿತ್ತು.

ಈ ಕಾಮಗಾರಿಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮದ ಮೂಲಕ (ಕೆಟಿಐಎಲ್) ಕೈಗೊಳ್ಳಲು ಆದೇಶದಲ್ಲಿ ಸೂಚಿಸಿತ್ತು. ಈ ನಿಗಮಕ್ಕೆ ನೇರವಾಗಿ ಒಟ್ಟು ಅನುದಾನದ ಪೈಕಿ 2.50 ಕೋಟಿ ರು ಬಿಡುಗಡೆ ಮಾಡಿತ್ತು. ಈ ಹಣದಲ್ಲಿ ಕೆಟಿಐಎಲ್‌ ಸಂಸ್ಥೆಯು ಶೇ. 0.5ರಷ್ಟು ಅಂದರೇ 1,25,000 ರು ಶುಲ್ಕ ಕಡಿತಗೊಳಿಸಿ ರಾಜ್ಯ ಪುರಾತತ್ವ ಇಲಾಖೆಗೆ 2,48,75,000 ರು ಗಳನ್ನು 2019ರ ಜುಲೈ 1ರಂದು ಬಿಡುಗಡೆ ಮಾಡಿತ್ತು.

 

 

ಇದಲ್ಲದೇ 2019ರಲ್ಲಿಯೂ ಈ ಕಾಮಗಾರಿ ನಿರ್ವಹಿಸಲು ಇದೇ ಸಂಸ್ಥೆಗೆ 4.00 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಮಂಜೂರಾತಿ ನೀಡಿತ್ತು. ಹಾಗೆಯೇ 2018-19ನೇ ಸಾಲಿನಲ್ಲಿ ಮುಂದುವರೆದ ಮತ್ತು ನೂತನ ಕಾಮಗಾರಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ಬಿಡುಗಡೆ ಮಾಡಿದ್ದ ಅನುದಾನದ ಪೈಕಿ ಖಜಾನೆ 2ರಲ್ಲಿ ಉಳಿಕೆಯಾಗಿದ್ದ 5,39,07,3839 ರು. ಬಳಕೆಗೆ ಅನುಮೋದನೆಯಾಗಿತ್ತು. ಈ ಅನುದಾನವನ್ನು ಬಳಸಿಕೊಳ್ಳಲು 2020ರ ಮಾರ್ಚ್‌ 18ರಂದೇ ಪುರಾತತ್ವ ಇಲಾಖೆಗೆ ತಿಳಿಸಿತ್ತು.

 

ಕಸ್ತೂರಿ ರಂಗಪ್ಪ ನಾಯಕ ಕೋಟೆ

 

2020-21ರಲ್ಲಿ ಮುಂದುವರೆದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದರ ಪೈಕಿ ಮೂರನೇ ಕಂತಿನ ರೂಪದಲ್ಲಿ 70,00,000 ರು.ಗಳನ್ನು ಕೆಟಿಐಎಲ್ ಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆ ಮಾಡಿರುವ 70 ಲಕ್ಷ ರು.ಗಳ ಮೇಲೆ ಅನುಷ್ಠಾನ ಸಂಸ್ಥೆಯ ಶುಲ್ಕ ಶೇ.0.5ರಷ್ಟು ಸೇರಿ ಒಟ್ಟಾರೆ 1,10,000 ರು.ಗಳನ್ನು ಶುಲ್ಕವನ್ನು ಕಡಿತಗೊಳಿಸಿತ್ತು.

 

 

ನಾಲ್ಕನೇ ಕಂತಿನ ರೂಪದಲ್ಲಿ 14,06,857 ರು.ಗಳನ್ನು ಕೆಟಿಐಎಲ್‌ಗೆ 2022ರ ಫೆ.9ರಂದು ಬಿಡುಗಡೆ ಮಾಡಿತ್ತು. ಒಟ್ಟಾರೆ ಈ ಕಾಮಗಾರಿಗೆ 5,00,00,000 ರು ಗೆ ಟೆಂಡರ್ ಕರೆದಿದ್ದ ಇಲಾಖೆಯು 4,65,05,343 ರು ಮತ್ತು ಜಿಎಸ್‌ಟಿ ಸೇರಿ ಒಟ್ಟಾರೆ 5,20,85,984 ರು.ಗಳ ವೆಚ್ಚಕ್ಕೆ ತಲುಪಿತ್ತು. ಈ ಅನುದಾನ ಬಳಕೆಯಾಗಿದೆಯೇ ಇಲ್ಲವೇ ಎಂಬ ಬಗ್ಗೆ ಪ್ರಧಾನ ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು ಸ್ಥಳ ತನಿಖೆ ಮಾಡಿದ್ದರು.

ವಿಶೇಷವೆಂದರೇ ಜಂಟಿ ಭೌತಿಕ ತಪಾಸಣೆ ವರದಿಯಲ್ಲಿನ ಅಂಶಗಳನ್ನು  ಒಪ್ಪಿಕೊಂಡಿರುವ ಇಲಾಖೆಯು   ಸಿಎಜಿಯು ವ್ಯಕ್ತಪಡಿಸಿದ್ದ ಆಕ್ಷೇಪಣೆಗಳನ್ನೇ ಮುಕ್ತಾಯಗೊಳಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯು ಕೋರಿತ್ತು. ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಸಂಬಂಧ ಕೇಂದ್ರ ಕಚೇರಿಯು ಉತ್ತರಿಸಬೇಕು. ಅಲ್ಲದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಕ್ಷಮ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಹೀಗಾಗಿ ಸಿಎಜಿಯು ಮಾಡಿರುವ ಆಕ್ಷೇಪಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಕೋರಿತ್ತು.

ಈ ಬೆಳವಣಿಗೆ ನಂತರ ಪ್ರವಾಸೋದ್ಯಮ ಇಲಾಖೆಯು 2026ರ ಮಾರ್ಚ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿಯೂ ಕಾಮಗಾರಿಯು ಆಮೆಗತಿಯಲ್ಲಿದೆ ಎಂದು ವಿವರಿಸಿತ್ತು.

ಆಮೆಗತಿಯ ಕಾಮಗಾರಿ

‘ಇನ್ನೂ ಹೊರಭಾಗದಲ್ಲಿ ಗೇಟ್‌ ನಿರ್ಮಿಸುವುದು, ಕೋಟೆಯ ಪ್ರವೇಶ ದ್ವಾರದಲ್ಲಿ ನೂತನ ಬಾಗಿಲು ನಿರ್ಮಿಸುವ ಕಾಮಗಾರಿಯನ್ನು ಮಾಡಿಲ್ಲದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿತ್ತು. ಅಲ್ಲದೆ ರಾಜ್ಯ ಪುರಾತತ್ವ ಇಲಾಖೆಯೂ ಸಹ ಇದನ್ನು ನಿರ್ಮಿಸಿರಲಿಲ್ಲ. ಅನುಷ್ಠಾನ ಸಂಸ್ಥೆಗೆ ಪೂರ್ಣ ಅನುದಾನ ಬಿಡುಗಡೆ ಮಾಡಿದ್ದರೂ ಸಹ 730 ದಿನದೊಳಗೆ ಸಮಯ ನೀಡಿದ್ದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

ಶಿಸ್ತು ಕ್ರಮ ಕೈಗೊಳ್ಳದ ಇಲಾಖೆ

ಈ ಕಾಮಗಾರಿಗೆ ಸಂಬಂಧಿಸಿದಂತೆ ಸಿಎಜಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ‘ಅನುಷ್ಠಾನ ಸಂಸ್ಥೆಗೆ ಪೂರ್ಣ ಅನುದಾನ ಬಿಡುಗಡೆ ಮಾಡಿದರೂ ಸಹ ಯಾಕೆ ಇದುವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ಸರ್ಕಾರಕ್ಕೆ ಹೊರೆ ಅಥವಾ ನಷ್ಟ ಉಂಟಾಗಿದೆ,’ ಎಂದು ಸಹಾಯಕ ನಿರ್ದೇಶಕರು ತಮ್ಮ ವರದಿಯಲ್ಲಿ ಸರ್ಕಾರದ ಗಮನಸೆಳೆದಿದ್ದರು.
ಕಾಮಗಾರಿಯಲ್ಲಿನ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ವರದಿಯಲ್ಲಿ ವಿವರಿಸಿದ್ದರು. ಆದರೆ ಈ ವರದಿ ಆಧರಿಸಿ ಯಾವುದೇ ಕ್ರಮವಹಿಸಿಲ್ಲ.

 

 

ಕಸ್ತೂರಿ ರಂಗಪ್ಪ ನಾಯಕ ಕೋಟೆಯ ಇತಿಹಾಸ

ಸಿರಾ ಕೋಟೆ (ಕಸ್ತೂರಿ ರಂಗಪ್ಪ ನಾಯಕ ಕೋಟೆ)ವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ಪಟ್ಟಣದಲ್ಲಿ ಇರುವ ಐತಿಹಾಸಿಕ ಕೋಟೆಯಾಗಿದೆ. ಶಿರಾ ನಗರ ಮತ್ತು ಈ ಕೋಟೆಯನ್ನು ರತ್ನಗಿರಿ ಪಾಳೆಯಗಾರ ಕಸ್ತೂರಿ ರಂಗಪ್ಪ ನಾಯಕರು 17ನೇ ಶತಮಾನದಲ್ಲಿ ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ.

ನಂತರ ಆಡಳಿತಾಧಿಕಾರಿ ಮಲ್ಲಿಕ್ ಹುಸೇನ್ ಈ ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿದರು. ಅದರ ನಂತರ ಶಿರಾ ನವಾಬರು ಕೋಟೆಯನ್ನು ಅಭಿವೃದ್ಧಿಪಡಿಸಿದರು. ಕಸ್ತೂರಿ ರಂಗಪ್ಪ ನಾಯಕರ ಆಳ್ವಿಕೆಯ ನಂತರ, ಕೋಟೆ ಮತ್ತು ಸಿರಾ ಪ್ರಾಂತ್ಯವು ವಿವಿಧ ಆಡಳಿತಗಾರರ ನಿಯಂತ್ರಣಕ್ಕೆ ಒಳಪಟ್ಟಿತು.

ಈ ಕೋಟೆಯ ಗೋಡೆಯು ಸುಮಾರು 7 ಮೀಟರ್ ಎತ್ತರವಾಗಿದ್ದು, 2.13 ಮೀಟರ್ ದಪ್ಪವಿದೆ. ಕೋಟೆಯ ಉತ್ತರ ದಿಕ್ಕಿನಲ್ಲಿ ಪ್ರವೇಶದ್ವಾರವಿದೆ. ಒಳಗಿನ ಆವರಣವನ್ನು ತಲುಪಲು ಮೂರು ದ್ವಾರಗಳಿದ್ದು, ಅವುಗಳೆಂದರೆ ದಿಡ್ಡಿ ಬಾಗಿಲು, ದ್ರಾವಿಡ ಶೈಲಿಯ ಕಂಬಗಳ ಬಾಗಿಲು ಹಾಗೂ ದಕ್ಷಿಣ ದಿಕ್ಕಿನ ಕೋಟೆಗೋಡಿಯಲ್ಲಿರುವ ಬಾಗಿಲು ಹೊಂದಿದೆ.

 

 

ಕೋಟೆಯ ಒಳಭಾಗದಲ್ಲಿ ಬಾವಿ, ವಸತಿಗೃಹಗಳು, ಮದ್ದಿನ ಮನೆ, ಕಣಜಗಳು ಹಾಗೂ ದೇವಾಲಯದಂತಹ ಕಟ್ಟಡಗಳಿವೆ. ಈ ಕೋಟೆಯು ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದ್ದು, ಸುಮಾರು 197.5 ಎಕರೆ (79.9 ಹೆಕ್ಟೇರ್) ಪ್ರದೇಶದಲ್ಲಿ ವ್ಯಾಪಿಸಿದೆ. ಕೋಟೆಯನ್ನು ಸುತ್ತುವರಿದಂತೆ ಕಂದಕವೂ ಇದೆ.

ಸಿರಾ ಪ್ರದೇಶದ ಇತಿಹಾಸಕ್ಕೂ ಈ ಕೋಟೆ ಸಂಬಂಧಿಸಿದೆ ಎಂಬ ಉಲ್ಲೇಖಗಳಿವೆ. ಕೋಟೆಯು ಪೂರ್ಣಗೊಳ್ಳುವ ಮೊದಲು, ಸಿರಾ ಮತ್ತು ಅದರ ಪ್ರದೇಶಗಳನ್ನು ಬಿಜಾಪುರದ ಸೇನಾನಿ ರಂದೂಲ್ಲಾ ಖಾನ್ ಕಳುಹಿಸಿದ ಸೈನ್ಯ ವಶಪಡಿಸಿಕೊಂಡಿತು. ಅವನ ಅಧೀನದಲ್ಲಿದ್ದ ಅಫ್ಜಲ್ ಖಾನ್ ನೇತೃತ್ವದ ಸೇನೆ, ಸಿರಾ ಮುಖ್ಯಸ್ಥ ಕಸ್ತೂರಿ ರಂಗಪ್ಪ ನಾಯಕನನ್ನು ಸೋಲಿಸಿ ಕೊಂದಿತು.

ನಂತರ ರಾಜ್ಯಪಾಲರಾಗಿದ್ದ ಮಲಿಕ್ ಹುಸೇನ್ ಅವರು ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿ, ಪಟ್ಟಣವನ್ನು ಸುತ್ತುವರಿದ ಮಣ್ಣಿನ ಗೋಡೆಯನ್ನೂ ನಿರ್ಮಿಸಿದರು. ಈ ಕೋಟೆ ಬ್ರಿಟಿಷರ ವಶವಾದ ಸಂದರ್ಭದಲ್ಲಿ ನಿಯೋಜಿತ ಅಧಿಕಾರಿಗಳ ಸಮಾಧಿಗಳ ಮೇಲೆ 14-03-1800 ಎಂಬ ಮರಣ ದಿನಾಂಕವೂ ಉಲ್ಲೇಖಿಸಲಾಗಿದೆ.

Hot this week

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...
Please Scan to make Your Contribution

Topics

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

‘ನಾನು ಹೇಳೋವರೆಗೂ ಕೂಡಂಗಿಲ್ಲ, ಗೆಟ್‌ ಔಟ್‌, ಗೆಟ್‌ ಔಟ್’; ಮಂಡಳಿ ಕಾರ್ಯದರ್ಶಿಯಿಂದಲೇ ಪ್ರಾಜೆಕ್ಟ್ ಇಂಜಿನಿಯರ್ ಸಮೀರ್ ಗೆ ಅವಮಾನ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ  ಕರ್ನಾಟಕ ರಾಜ್ಯ ವಿಜ್ಞಾನ ಮತ್ತು...

52 ಕ್ರಿಮಿನಲ್ ಪ್ರಕರಣಗಳ ಹಿಂತೆಗೆತಕ್ಕೆ ಮತ್ತೆ ಚಾಲನೆ; ಡಿಜಿಐಜಿಪಿ, ಕಾನೂನು ಇಲಾಖೆ ಅಸಮ್ಮತಿ ನಡುವೆಯೂ ಪ್ರಸ್ತಾವ

ಬೆಂಗಳೂರು; ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ಜನಪ್ರತಿನಿಧಿಗಳ ವಿರುದ್ಧ  ದಾಖಲಾಗಿರುವ ಮತ್ತು...

ಸ್ವಚ್ಛ ನಗರಿಯ ಕಸದ ಕರಾಳತೆ; ಪರೀಕ್ಷೆಯಿಲ್ಲದೇ ವಿಷಕಾರಿ ತ್ಯಾಜ್ಯ ನಿರ್ವಹಣೆ, ಸಿಎಂ ತವರಿನಲ್ಲೇ ಅವೈಜ್ಞಾನಿಕ ವಿಲೇವಾರಿ?

ಬೆಂಗಳೂರು;  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ  ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ...

Related Articles

Popular Categories

error: Content is protected !!