ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?

ಬೆಂಗಳೂರು;  ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪೂರ್ಣವಾಗಿ 850 ಕೋಟಿ ವಸೂಲು ಮಾಡಬೇಕು ಎಂದು ಖುದ್ದು ಕಾನೂನು ಸಚಿವ ಎಚ್‌ ಕೆ ಪಾಟೀಲ್ ಅವರು ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನೇ ಕಾನೂನು ಇಲಾಖೆ (ಅಭಿಪ್ರಾಯ) ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ.

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಭೌತಿಕ ಕಡತವನ್ನು ಕಾನೂನು ಇಲಾಖೆಗೆ ರವಾನಿಸಿ ಅಭಿಪ್ರಾಯವನ್ನು ಕೋರಿತ್ತು.  ಈ ಕಡತವನ್ನು ಪರಿಶೀಲಿಸಿ  ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಸ್ವತಃ ಸಚಿವ ಎಚ್‌ ಕೆ ಪಾಟೀಲ್‌ ಅವರು  ಅನುಮೋದಿಸಿದ್ದರು.

 

ಕಾನೂನು ಸಚಿವರ ಸಹಿಯೊಂದಿಗೆ ಈ ಅಭಿಪ್ರಾಯದ ಕಡತವು 2026ರ ಜನವರಿ 8ರಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಸರ್ಕಾರದ ಕಾರ್ಯದರ್ಶಿಗೆ (ಕಡತ ಸಂಖ್ಯೆ; CI/14/CMC/2024) ಹಿಂದಿರುಗಿಸಿತ್ತು.

 

ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯ ಮತ್ತು ಇದಕ್ಕೆ ಸಂಬಂಧಿಸಿದ ಕಡತವನ್ನು ದಿ ಫೈಲ್‌,  ಆರ್‍‌ಟಿಐ ಅಡಿಯಲ್ಲಿ 2025ರ ಜನವರಿ 15ರಂದು ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಗೆ ಕಾನೂನು ಇಲಾಖೆಯು (ಅಭಿಪ್ರಾಯ) 2026 ಜನವರಿ 23ರಂದು ಉತ್ತರಿಸಿದೆ. ಅಚ್ಚರಿ ಎಂದರೇ ಈ ಕಡತಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಅಭಿಪ್ರಾಯ ಶಾಖೆಯಿಂದ ಯಾವುದೇ ಅಭಿಪ್ರಾಯ ನೀಡಲಾಗಿರುವುದಿಲ್ಲ ಎಂದು ಉತ್ತರಿಸಿದೆ.

 

ಖುದ್ದು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರೇ ಅಭಿಪ್ರಾಯದ ಪ್ರತಿಗೆ ಸಹಿ ಮಾಡಿದ್ದರೂ ಸಹ ಕಾನೂನು ಇಲಾಖೆಯ ಅಭಿಪ್ರಾಯ ಶಾಖೆಯು, ಯಾವುದೇ ಅಭಿಪ್ರಾಯ ನೀಡಲಾಗಿರುವುದಿಲ್ಲ ಎಂದು ಮಾಹಿತಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

 

 

ಆರ್‍‌ಟಿಐ ಅರ್ಜಿಗೆ ನೀಡಿದ್ದ ಉತ್ತರವನ್ನು ದಿ ಫೈಲ್‌,  ಇ-ಆಫೀಸ್‌ ತಂತ್ರಾಂಶದಲ್ಲಿ ಪುನರ್ ಪರಿಶೀಲಿಸಿತು. ಇದರ ಪ್ರಕಾರ ಈ  ಕಡತವನ್ನು  ಇ-ಆಫೀಸ್‌ನಲ್ಲಿ  2024ರ ಫೆ.3ರಂದು ತೆರೆದಿದೆ. 2024ರಿಂದ 2026ರ ಜನವರಿ 28ರವರೆಗೂ ಈ ಕಡತವು ಚಲನೆಯಲ್ಲಿದೆ.

 

 

 

 

ವಿಶೇಷವೆಂದರೇ ಈ ಕಡತವು  (ಕಡತ ಸಂಖ್ಯೆ; CI/14/CMC/2024) 2025ರ ಡಿಸೆಂಬರ್‍‌ 29ರಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಲಾಗಿನ್‌ನಿಂದ (2;17 pm)  ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇರಳೆ ವೀರಭದ್ರಯ್ಯ ಭವಾನಿ ಅವರ ಲಾಗಿನ್‌ ತೋರಿಸಿದೆ.

 

ಅದೇ ದಿನದಂದು ಇದೇ ಕಡತವು, ನೇರಳೆ ವೀರಭದ್ರಯ್ಯ ಭವಾನಿ ಅವರ ಲಾಗಿನ್‌ನಿಂದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರ ಲಾಗಿನ್‌ (2;56 pm) ನಲ್ಲಿತ್ತು.

 

 

ಆದರೂ ಸಹ  ಕಾನೂನು ಇಲಾಖೆಯ ಅಭಿಪ್ರಾಯ ಶಾಖೆಯು ಈ ಕಡತದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ನೀಡಲಾಗಿರುವುದಿಲ್ಲ ಎಂದು ಮಾಹಿತಿ ಒದಗಿಸಿದೆ. ಈ ಪ್ರಕರಣದಲ್ಲಿ ಕಾನೂನು ಇಲಾಖೆಯ (ಅಭಿಪ್ರಾಯ ಶಾಖೆ) ಅಧಿಕಾರಿಗಳು ಕಳ್ಳಾಟ ಆಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸದ್ಯ ಈ ಕಡತವು 2026ರ ಜನವರಿ 28ರಂದು  ಇಲಾಖೆಯ ಅಧೀನ ಕಾರ್ಯದರ್ಶಿ ಸತೀಶ್ ಕಬಾಡೆ ಅವರ ಲಾಗಿನ್‌ನಿಂದ ರಘು ಎಂಬುವರ ಲಾಗಿನ್‌ನಲ್ಲಿರುವುದು ತಿಳಿದು ಬಂದಿದೆ.

 

 

ಕಾನೂನು ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ಗೆ ಸಂಬಂಧಿಸಿದಂತೆ ಎಸಿಸಿ  ಲಿಮಿಟೆಡ್ ಪರವಾಗಿ ಗಣಿ ಅಭಿವೃದ್ಧಿ ಮತ್ತು ಉತ್ಪಾದನಾ ಒಪ್ಪಂದ (MDPA) ಅನ್ನು ಕಾರ್ಯಗತಗೊಳಿಸಲು ಅನುಮತಿ ಇದೆಯೇ, ಮತ್ತು  ವಿಶೇಷವಾಗಿ  ಉಚ್ಚ ನ್ಯಾಯಾಲಯದ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳ ಕುರಿತಾಗಿ  ಕಾನೂನು ಅಭಿಪ್ರಾಯವನ್ನು ಕೋರಲಾಗಿದೆ. ಇಲಾಖೆಯು ಸಲ್ಲಿಸಿದ ಕಡತ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದೆ.

 

2020ರ ಅಕ್ಟೋಬರ್‍‌ 5ರಂದು  2020ರ ಅಕ್ಟೋಬರ್ 05 ರಂದು ರಾಜ್ಯ ಸರ್ಕಾರವು ಕಲಬುರಗಿ ಜಿಲ್ಲೆಯ 533.65 ಹೆಕ್ಟೇರ್ ಭೂಪ್ರದೇಶದಲ್ಲಿ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್‌ನ ಹರಾಜಿಗಾಗಿ ಟೆಂಡರ್ ಅಧಿಸೂಚನೆಯನ್ನು ಹೊರಡಿಸಿತ್ತು.  ಮತ್ತು ಎಸಿಸಿ  ಲಿಮಿಟೆಡ್ ಮಾತ್ರ   ಅರ್ಜಿ ಸಲ್ಲಿಸಿತ್ತು.  ಮತ್ತು ಈಗ ಎಸಿಸಿ  ಲಿಮಿಟೆಡ್ ಪರವಾಗಿ ಆದೇಶ ಹೊರಡಿಸಲು ಬಯಸಿದೆ.  ಈ  ಹರಾಜು ಪ್ರಕ್ರಿಯೆಯಲ್ಲಿ ಐಬಿಎಂ  ಬೆಲೆಯ ಶೇ.  35.15 ರಷ್ಟು ಉಲ್ಲೇಖಿಸಿತ್ತು.

 

 

ಕಾನೂನು ಇಲಾಖೆಯಿಂದ ಟೆಂಡರ್ ಷರತ್ತಿನ ಷರತ್ತು 10(ಎಫ್) ಉಲ್ಲೇಖ

 

ಈ ಪ್ರಕರಣದಲ್ಲಿ ಅಭಿಪ್ರಾಯ ನೀಡಿರುವ ಕಾನೂನು ಇಲಾಖೆಯು ಟೆಂಡರ್ ಷರತ್ತಿನ ಷರತ್ತು 10(ಎಫ್) ನ್ನು ಉಲ್ಲೇಖಿಸಿದೆ. ಎಂಎಂಡಿಆರ್ 1957ರಡಿಯಲ್ಲಿ ಜಾರಿಯಲ್ಲಿರುವ ಎಲ್ಲಾ ನಿಬಂಧನೆಗಳ ಪ್ರಕಾರ ಬಿಡ್ಡರ್‍‌ ರಾಜ್ಯದಲ್ಲಿ  ಹಿಂದಿನ ಗಣಿಗಾರಿಕೆ ಚಟುವಟಿಕೆ ನಡೆಸಿದ್ದಕ್ಕೆ ಮೊತ್ತ ಪಾವತಿಸಬೇಕು. ಮತ್ತು ಭವಿಷ್ಯದಲ್ಲಿ ಕರ್ನಾಟಕ ಸರ್ಕಾರವು ನಿರ್ಧರಿಸುವ ಎಲ್ಲಾ ಬಾಕಿಗಳನ್ನೂ ಸಹ ತೀರುವಳಿ ಮಾಡುವುದಾಗಿ ಮುಚ್ಚಳಿಕೆ ನೀಡಬೇಕು.

 

 

 

ಒಂದೊಮ್ಮೆ ಬಾಕಿಗಳನ್ನು ನಿರ್ಧರಿಸದೇ ಇದ್ದರೇ ಎಂಎಂಡಿಅರ್‍‌ ಕಾಯ್ದೆ 1957ರ ನಿಯಮದ ನಿಬಂಧನೆಗಳ ಪ್ರಕಾರ ಹಿಂದಿನ ಗಣಿಗಾರಿಕೆ ಚಟುವಟಿಕೆಯಿಂದ ಉಂಟಾದ ನಷ್ಟವನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು 10 ಎಫ್‌ನ ಸಾರಾಂಶವನ್ನು ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಎಸಿಸಿ ಲಿಮಿಟೆಡ್‌ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿಗಳನ್ನೂ ಕಾನೂನು ಇಲಾಖೆಯು ಅವಲೋಕಿಸಿದೆ. ಈ ಅರ್ಜಿಗಳೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂಬ ಅಂಶವನ್ನು ಉಲ್ಲೇಖಿಸಿರುವ ಕಾನೂನು ಇಲಾಖೆಯು,  ಕಂಪನಿಯು  ಅಧಿಸೂಚನೆಯ   10(ಎಫ್) ನಲ್ಲಿನ ಷರತ್ತುಗಳನ್ನು  ಪಾಲಿಸಿಲ್ಲ.  ಅಲ್ಲದೇ  ಎಸಿಸಿ ಲಿಮಿಟೆಡ್‌ ಗೆ  ಮತ್ತೊಂದು 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರಿಯುವುದು ರಾಜ್ಯ ಹಿತಾಸಕ್ತಿಯಾಗುವುದಿಲ್ಲ ಅಥವಾ 50 ವರ್ಷಗಳ ಗುತ್ತಿಗೆಯೊಂದಿಗೆ ಮುಂದುವರೆಯುವುದು  ವಿವೇಕಯುತವೂ ಅಲ್ಲ ಎಂದು ಕಾನೂನು ಇಲಾಖೆಯು ಸ್ಪಷ್ಟವಾಗಿ ಹೇಳಿದೆ.

 

2 ವರ್ಷ ಕಾನೂನುಬಾಹಿರ ಗಣಿಗಾರಿಕೆ

 

2020ರ ಅಕ್ಟೋಬರ್‍‌ 5ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಎಸಿಸಿ ಲಿಮಿಟೆಡ್‌ ಸುಮಾರು 2 ವರ್ಷಗಳ ಕಾಲ ಕಾನೂನುಬಾಹಿರವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸಿದೆ. ದಂಡ ವಸೂಲಿ ಮಾಡುವ ಆದೇಶ ಹೊರಡಿಸಿರುವುದನ್ನು ಹೊರತುಪಡಿಸಿದರೇ ಬೇರೆ ಯಾವುದೇ ಕ್ರಮವಹಿಸಿಲ್ಲ. ಕಾಮನ್ ಕಾಸ್‌/ ಯೂನಿಯನ್ ಆಫ್‌ ಇಂಡಿಯಾದ 2017ರ ಪ್ರಕರಣದಲ್ಲಿ ಸುಪ್ರೀಕೋರ್ಟ್‌ ನೀಡಿರುವ ತೀರ್ಪನ್ನು ಕಾನೂನು ಅಭಿಪ್ರಾಯದಲ್ಲಿ ಉಲ್ಲೇಖವಾಗಿದೆ.

ರಾಜ್ಯದ ಹಿತಾಸಕ್ತಿ ಬಲಿ ಕೊಟ್ಟು ಅದಾನಿಗೆ ರತ್ನಗಂಬಳಿ; ಕಾನೂನು ಅಭಿಪ್ರಾಯ ಕೈ ಸೇರದೆಯೇ ಕೇಂದ್ರಕ್ಕೆ ಪ್ರಸ್ತಾವ

 

ಕಾನೂನುಬದ್ಧ ಪ್ರಾಧಿಕಾರವಿಲ್ಲದೆ ಗಣಿಗಾರಿಕೆಯನ್ನು ನಡೆಸಿದರೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್‌ 21(5) ಅನ್ವಯವಾಗುತ್ತದೆ. ಹೀಗಾಗಿ ರಾಯಧನ, ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆಯ ಶೇ.100ರಷ್ಟನ್ನೂ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲದೇ  ಅಂತಹ ವಸೂಲಾತಿಯು ಕ್ರಿಮಿನಲ್ ಮೊಕದ್ದಮೆಯಿಂದ ಸ್ವತಂತ್ರವಾಗಿದೆ ಎಂದು ಕಾನೂನು ಅಭಿಪ್ರಾಯದಲ್ಲಿ ವಿವರಿಸಿದೆ.

 

‘ಆದ್ದರಿಂದ, ವಸೂಲಾತಿಯನ್ನು ಕೇವಲ ದಂಡದ ಮೊತ್ತಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಸಂಪೂರ್ಣ ₹850.21 ಕೋಟಿ ರು.ಗಳನ್ನು  ವಸೂಲಿ ಮಾಡಬೇಕು. ಕಂಪನಿಯು ರಾಜ್ಯದ ಅನುಮತಿಯಿಲ್ಲದೆ ಸುಮಾರು ಎರಡು ವರ್ಷಗಳ ಕಾಲ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದು ಎಂಎಂಡಿಆರ್ ಕಾಯಿದೆಯಡಿಯಲ್ಲಿ “ಕಾನೂನುಬಾಹಿರ ಗಣಿಗಾರಿಕೆ” ಯ ವ್ಯಾಖ್ಯಾನದೊಳಗೆ ಸ್ಪಷ್ಟವಾಗಿ ಬರುತ್ತದೆ,’ ಎಂದು ‍ಹೇಳಿರುವುದು ಗೊತ್ತಾಗಿದೆ.

 

ಜಯಂತ್‌/ ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ (2020) 18 SCC 401)  ಅಪರಾಧಗಳ ಸಂಯೋಜನೆ ಅಥವಾ ದಂಡದ ಪಾವತಿಯು ಕ್ರಿಮಿನಲ್ ಮೊಕದ್ದಮೆಗೆ ಅಡ್ಡಿಯಾಗುವುದಿಲ್ಲ. ಆಡಳಿತಾತ್ಮಕ ದಂಡಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನೂ ಉಲ್ಲೇಖಿಸಿದೆ.

 

ಹೀಗಾಗಿ, ವಿತ್ತೀಯ ದಂಡಕ್ಕೆ ಸೀಮಿತವಾದ ಪ್ರಸ್ತುತ ಇಲಾಖಾ ಕ್ರಮವು ಕಾನೂನುಬದ್ಧವಾಗಿ ಸಾಕಷ್ಟಿಲ್ಲ.  ಮತ್ತು ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್  ಕಾಯಿದೆಯ ಸೆಕ್ಷನ್ 21(1) ಮತ್ತು (2) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಅನುಗುಣವಾಗಿ, ಆಡಳಿತ ಇಲಾಖೆಯು ತಕ್ಷಣವೇ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆ, ರಾಯಧನ, ಬಡ್ಡಿ ಮತ್ತು ದಂಡದ ಶೇ. 100ರಷ್ಟು  ವಸೂಲಿಗಾಗಿ ಬೇಡಿಕೆಗಳನ್ನು ಹೆಚ್ಚಿಸಿಬೇಕಲ್ಲದೇ ಅದನ್ನು  ಜಾರಿಗೊಳಿಸಬೇಕು ಎಂದು ಹೇಳಿದೆ.

 

 

ಹಾಗೆಯೇ ಕಾನೂನುಬಾಹಿರ  ಗಣಿಗಾರಿಕೆ ಮತ್ತು ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್‌ಗಳು 21(1) ಮತ್ತು 21(2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

ಎಸಿಸಿಯನ್ನು ನಿರ್ಬಂಧಿಸಿ

 

ಈ ಪ್ರಕರಣದಲ್ಲಿ ಗಮನಾರ್ಹವಾದ ಆರ್ಥಿಕ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಲದೇ  ಬಿಡ್ಡಿಂಗ್/ಹರಾಜು ಕಾರ್ಯವಿಧಾನಗಳು ಒಳಗೊಂಡಿರುವುದರಿಂದ   ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು.  ಮತ್ತು ಕಾನೂನುಗಳ ಪರಿಪಾಲನೆಯನ್ನು  ಖಚಿತಪಡಿಸಿಕೊಳ್ಳುವವರೆಗೆ  ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ  ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಕಾನೂನು ಇಲಾಖೆಯು ಶಿಫಾರಸ್ಸು ಮಾಡಿದೆ. ಇದನ್ನು ಸಚಿವ ಎಚ್‌ ಕೆ ಪಾಟೀಲ್‌ ಅವರೂ ಸಹ ಅನುಮೋದಿಸಿದ್ದಾರೆ.

 

 

 

ಕಾನೂನು ಇಲಾಖೆಯ ಅಭಿಪ್ರಾಯಕ್ಕೂ ಎದುರು ನೋಡದೆಯೇ  ಲೆಟರ್ ಅಫ್‌ ಇಂಟೆಂಟ್‌ನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ನೇರವಾಗಿ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿದೆ.

 

ಲೋಕಸಭೆ ಪ್ರತಿಪಕ್ಷ  ನಾಯಕ ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್‌ನ ಧುರೀಣರು ಅದಾನಿ ವಿರುದ್ಧ ಪ್ರತಿನಿತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಇತ್ತ ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕಾನೂನು ಅಭಿಪ್ರಾಯಕ್ಕೆ ಎದುರು ನೋಡದೆಯೇ ಅದಾನಿ ಸಮೂಹಕ್ಕೆ ಅನುಕೂಲವಾಗುವಂತೆ  ಕೇಂದ್ರ ಸರ್ಕಾರದ ನಿರ್ದೇಶನ ಕೋರಿ ಪ್ರಸ್ತಾವ ಸಲ್ಲಿಸಿದೆ.   2026ರ ಆರಂಭದಲ್ಲೇ  ಬಹುದೊಡ್ಡ ಹಗರಣಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಮುನ್ನುಡಿ ಬರೆದಂತಾಗಿದೆ.

 

 

ಕಾನೂನು ಅಭಿಪ್ರಾಯ ಕೈ ಸೇರುವ ಮುನ್ನವೇ ಪ್ರಸ್ತಾವ ಸಲ್ಲಿಸಿದ್ದ ಇಲಾಖೆ

 

ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಲೆಟರ್ ಆಫ್‌ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)  ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.  ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ)   ಈ ಅಭಿಪ್ರಾಯಕ್ಕೂ ಕಾದಿರಲಿಲ್ಲ. ಬದಲಿಗೆ ಕಾನೂನು ಅಭಿಪ್ರಾಯ ತನ್ನ ಕೈ ಸೇರುವ ಮುನ್ನವೇ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

 

ಅದಾನಿ ಅಧಿಪತ್ಯದ ಎಸಿಸಿ ಸಿಮೆಂಟ್ಸ್‌ಗೆ ಗಣಿ ಗುತ್ತಿಗೆ ಕರಾರು; ವಸೂಲಿಗೆ 850 ಕೋಟಿ ಬಾಕಿ ಇದ್ದರೂ ಕೇಂದ್ರಕ್ಕೆ ಪ್ರಸ್ತಾವ?

 

ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ದಿ ಫೈಲ್‌ 2026ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts