ಬೆಂಗಳೂರು; ಎಚ್ಎಂಟಿ ವಶದಲ್ಲಿರುವ ಅರಣ್ಯ ಜಮೀನು, ಅರಣ್ಯ ಇಲಾಖೆಯಿಂದ ಬಿಡುಗಡೆಯಾದ ಬಗ್ಗೆ ಸೂಕ್ತ ದಾಖಲೆಗಳೇ ಇಲ್ಲ. ಅಲ್ಲದೇ ಈ ಸಂಬಂಧ ಸಚಿವ ಸಂಪುಟದ ನಿರ್ಣಯವೂ ಆಗಿಲ್ಲ, ಗೆಜೆಟ್ ಅಧಿಸೂಚನೆಯೂ ಆಗಿರಲಿಲ್ಲ.
ಹಂಚಿಕೆಯ ಪತ್ರದಲ್ಲಿ ಸರ್ವೇ ನಂಬರ್ ಕೂಡ ಇಲ್ಲ. ಗಿಫ್ಟ್ ಡೀಡ್ ಪ್ರತಿಯಲ್ಲಿ ಸರ್ಕಾರದ ಆದೇಶದ ಪ್ರತಿಗಳೂ ಇಲ್ಲ. ಮತ್ತು ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವೂ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ.
ಹೀಗಿದ್ದರೂ ಸಹ ಈ ಯಾವ ಅಂಶಗಳ ಬಗ್ಗೆ ಐಎಫ್ಎಸ್ ಅಧಿಕಾರಿ ಗೋಕುಲ್ ಸೇರಿದಂತೆ ಇನ್ನಿತರೆ ಸಕ್ಷಮ ಅಧಿಕಾರಿಗಳು ಗಮನಹರಿಸಿರಲಿಲ್ಲ ಎಂಬ ಸಂಗತಿಯು ಇದೀಗ ಬಯಲಾಗಿದೆ.
ಎಚ್ಎಂಟಿ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧವೇ ಗೋಕುಲ್ ಅವರು ಗಂಭೀರ ಆರೋಪವೆಸಗಿ ಸಿಬಿಐನಿಂದ ರಕ್ಷಣೆ ಕೋರಿದ್ದರು. ಅರಣ್ಯ ಇಲಾಖೆಯೂ ಸಹ ಗೋಕುಲ್ ಅವರ ಸೇವಾಲೋಪವನ್ನು ಎತ್ತಿ ತೋರಿಸಿತ್ತು. ಇದರ ಬೆನ್ನಲ್ಲೇ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲೂ ಗೋಕುಲ್ ಅವರು ಎಸಗಿದ್ದ ತಪ್ಪುಗಳ ಸರಮಾಲೆ ಕಂಡುಬಂದಿತ್ತು. ಇದರ ಬೆನ್ನಲ್ಲೇ ಇಡೀ ಜಮೀನಿನ ಕುರಿತಾದ ಮತ್ತಷ್ಟು ಸತ್ಯ ಸಂಗತಿಗಳು ಇದೀಗ ಮುನ್ನೆಲೆಗೆ ಬಂದಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕಡತದ (FEE/107/FLL/2025 COMPUTER NUMBER 1772747) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಮುನ್ನ ಸಂಬಂಧಿತ ಪ್ರಾಧಿಕಾರಗಳಿಗೆ ಪತ್ರ ಬರೆದು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿಲ್ಲ. ಮತ್ತು ಎಚ್ಎಂಟಿ ಪ್ರದೇಶದಲ್ಲಿರುವ ಭೂಮಿ ನಿಜಕ್ಕೂ ಅರಣ್ಯ ಸ್ವರೂಪ ಕಳೆದುಕೊಂಡಿದೆಯೇ, ಇಲ್ಲಿ ಮರ ಗಿಡ ಇದೆಯೇ ಎಂಬ ಬಗ್ಗೆ ಖುದ್ದು ಪರಿಶೀಲನೆ ನಡೆಸಿಲ್ಲ. ಹಾಗೂ ಈ ಸಂಬಂಧಿತ ಯಾವುದೇ ಅಧ್ಯಯನ ವರದಿ ಇಲ್ಲ.
280 ಎಕರೆಯಷ್ಟು ಅರಣ್ಯದಂತೆಯೇ ದಟ್ಟವಾಗಿ ಮರಗಳು ಬೆಳೆದ ಹಸಿರು ವಲಯವಿದೆ. ಆದರೂ ಸಹ ಎಚ್ಎಂಟಿ ವಶದಲ್ಲಿರುವ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ಗೆ ಸರ್ವೋಚ್ಛ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಹಾಕಿರುವುದೇ ಕಾನೂನುಬಾಹಿರವಾಗಿದೆ ಎಂದು ಅರಣ್ಯ ಇಲಾಖೆಯು ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ಕುರಿತು ಅಂದಿನ ಅರಣ್ಯ ಸಚಿವರ ಗಮನಕ್ಕೂ ತಂದಿಲ್ಲ. ಸಚಿವ ಸಂಪುಟದ ಪೂರ್ವಾನುಮತಿಯನ್ನಾಗಲೀ, ಘಟನೋತ್ತರ ಅನುಮೋದನೆಯನ್ನಾಗಲೀ ಪಡೆದಿಲ್ಲ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಲಾಗಿದೆ.
ಎಚ್ಎಂಟಿ ಅರಣ್ಯ ಜಮೀನು ಪ್ರಕರಣ; ಮಧ್ಯಂತರ ಅರ್ಜಿಗೆ ಘಟನೋತ್ತರ ಅನುಮೋದನೆ ಪಡೆಯದ ಗೋಕುಲ್
ಅದೇ ರೀತಿ ಅರಣ್ಯ ಪ್ರದೇಶವನ್ನು ವರ್ಗಾವಣೆ ಮಾಡಲು ಕೇಂದ್ರ ಸಚಿವ ಸಂಪುಟವೂ ಸಹ ಸಕ್ಷಮ ಪ್ರಾಧಿಕಾರವಾಗಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಅಭಿಪ್ರಾಯಪಟ್ಟಿದ್ದರು.
ಎಚ್ಎಂಟಿಗೆ ದಾನ ಮಾಡಲಾದ ಭೂಮಿಗಳು ಇನ್ನೂ ಅರಣ್ಯ ಭೂಮಿಯಾಗಿಯೇ ಮುಂದುವರಿಯುತ್ತವೆ. ಮತ್ತು ಅವುಗಳನ್ನು ಡಿ-ನೋಟಿಫೈ ಮಾಡಲಾಗಿಲ್ಲ ಎಂದು 2018ರ ಮಾರ್ಚ್ 8ರಂದು ನಡೆದಿದ್ದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದ್ದರಿಂದ, ಈ ವಿಷಯದ ಸಂಪೂರ್ಣ ಸಂಗತಿಗಳನ್ನು ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯದ ಮುಂದೆ ಮಂಡಿಸಬೇಕು. ಎಚ್ಎಂಟಿಗೆ ಎನ್ಒಸಿ ನೀಡುವ ಮೊದಲು ಭಾರತ ಸರ್ಕಾರದಿಂದ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆಯಬೇಕು ಎಂದು ನಿರ್ಧರಿತವಾಗಿತ್ತು ಎಂಬ ಅಂಶವು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಹೆಚ್ಎಂಟಿ ವಿವಾದ; ಅರಣ್ಯ, ಪರಿಸರಕ್ಕೆ ಘೋರ ಅನ್ಯಾಯ, ಸೇವಾ ಲೋಪ, ಬೇಲಿಯೇ ಎದ್ದು ಹೊಲ ಮೇಯ್ದಿತ್ತೇ?
ಬೆಂಗಳೂರು ನಗರದ ಪೀಣ್ಯ ಪ್ಲಾಂಟೇಷನ್ ಸರ್ವೇ ನಂಬರ್ 1 ಮತ್ತು 2ರಲ್ಲಿ ಒಟ್ಟು 599 ಎಕರೆ ಪ್ರದೇಶವನನ್ನು ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಅಂದಿನ ಮೈಸೂರು ಮಹಾರಾಜರು 1896ರ ಜೂನ್ 11ರಂದೇ ಗೆಜೆಟ್ ಅಧಿಸೂಚನೆ ಹೊರಡಿಸಿದ್ದರು. ನಂತರ ಈ ಪ್ರದೇಶವನ್ನು 1901ರ ಜನವರಿ 31ರಂದು ರಾಜ್ಯ ಅರಣ್ಯ ಎಂದು ಘೋಷಣೆ ಮಾಡಲಾಗಿತ್ತು.
ಈ ಪೈಕಿ ಪೀಣ್ಯ ಪ್ಲಾಂಟೇಷನ್ ಸರ್ವೆ ನಂಬರ್ 2ರಲ್ಲಿ 180 ಎಕರೆ 26 ಗುಂಟೆ , ಇದೇ ಸರ್ವೇ ನಂಬರ್ 2ರಲ್ಲಿ 77 ಎಕರೆ 20 ಗುಂಟೆಯನ್ನು 1963ರ ಜೂನ್ 21ರಂದು ಗ್ರಾಂಟ್ ಸರ್ಟಿಫಿಕೇಟ್ ನೀಡಲಾಗಿತ್ತು. ಹಾಗೂ ಸರ್ವೆ ನಂಬರ್ 1ರಲ್ಲಿನ 185 ಎಕರೆ, ಜೆ ಬಿ ಕಾವಲ್ ನಲ್ಲಿ 26 ಎಕರೆ 32 ಗುಂಟೆ ಸೇರಿ ಒಟ್ಟು 211.32 ಎಕರೆ ಗಿಫ್ಟ್ ಡೀಡ್ ಆಗಿದೆ ಎಂದು ತೋರಿಸಿತ್ತು.
ಹೆಚ್ಎಂಟಿ ಪ್ರಕರಣ; ಸರ್ಕಾರದ ವಿರುದ್ಧವೇ ಆರೋಪ, ರಕ್ಷಣೆ ಕೋರಿ ಸಿಬಿಐಗೆ ಐಎಫ್ಎಸ್ ಗೋಕುಲ್ ಪತ್ರ
ಪೀಣ್ಯ ಪ್ಲಾಂಟೇಷನ್ ಸರ್ವೆ ನಂಬರ್ 1 ಮತ್ತು 2ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್ಎಂಟಿ ಲಿಮಿಟೆಡ್ಗೆ 1961ರಿಂದ 19654 ನಡುವೆ ಒಟ್ಟು 443.06 ಎಕರೆ ಜಮೀನನ್ನು ನೀಡಲಾಗಿತ್ತು.