ಹೆಚ್‌ಎಂಟಿ ವಿವಾದ; ಅರಣ್ಯ, ಪರಿಸರಕ್ಕೆ ಘೋರ ಅನ್ಯಾಯ, ಸೇವಾ ಲೋಪ, ಬೇಲಿಯೇ ಎದ್ದು ಹೊಲ ಮೇಯ್ದಿತ್ತೇ?

ಬೆಂಗಳೂರು; ಎಚ್‌ಎಂಟಿ ವಶದಲ್ಲಿರುವ ಭೂಮಿಯು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ವ್ಯಾಜ್ಯ ನಿರ್ವಹಣಾಧಿಕಾರಿ ಐಎಫ್‌ಎಸ್‌ ಗೋಕುಲ್‌ ಅವರು ಅರಣ್ಯ ಮತ್ತು ಪರಿಸರಕ್ಕೆ ಘೋರ ಅನ್ಯಾಯವೆಸಗಿದ್ದಾರೆ. ಅಲ್ಲದೇ ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆ ಮಾತಿಗೂ ಅನ್ವರ್ಥವಾಗಿದ್ದರು ಎಂದು ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯು ತಿರುಗೇಟು ನೀಡಿದೆ.

 

ಎಚ್‌ಎಂಟಿ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧವೇ ಗೋಕುಲ್‌ ಅವರು ಗಂಭೀರ ಆರೋಪವೆಸಗಿ ಸಿಬಿಐನಿಂದ ರಕ್ಷಣೆ ಕೋರಿರುವ ಬೆನ್ನಲ್ಲೇ ಗೋಕುಲ್‌ ಅವರ ಸೇವಾಲೋಪವನ್ನು ಎತ್ತಿ ತೋರಿಸಿರುವುದು ಮುನ್ನೆಲೆಗೆ ಬಂದಿದೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕಡತದ (FEE/107/FLL/2025 COMPUTER NUMBER 1772747) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

 

ಎಚ್‌ಎಂಟಿ ವಶದಲ್ಲಿರುವ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಗೋಕುಲ್‌ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿಯಲ್ಲಿ ತಿಳಿಸಿದ್ದಾರೆ. ಮಧ್ಯಂತರ ಅರ್ಜಿ ಹಾಕುವ ಮೊದಲು ವಾಸ್ತವಾಂಶದಿಂದ ಕೂಡಿದ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸುವ ಜವಾಬ್ದಾರಿ ಹೊತ್ತಿದ್ದರು. ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯ ಅಧಿಕಾರಿಯಾಗಿಯೂ ಅರಣ್ಯ ಸಂರಕ್ಷಣೆಯ ಮೂಲಭೂತ ಕರ್ತವ್ಯ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದರು.

 

ಹೆಚ್‌ಎಂಟಿ ಪ್ರಕರಣ; ಸರ್ಕಾರದ ವಿರುದ್ಧವೇ ಆರೋಪ, ರಕ್ಷಣೆ ಕೋರಿ ಸಿಬಿಐಗೆ ಐಎಫ್‌ಎಸ್‌ ಗೋಕುಲ್‌ ಪತ್ರ

 

ಆದರೆ ಈ ಪ್ರಕರಣದಲ್ಲಿ ಸ್ಥಳ ಪರಿಶೀಲನೆ ಮಾಡಿ ಅಲ್ಲಿ ಮರ ಗಿಡ ಇದೆಯೇ ಎಂಬುದನ್ನು ಗೋಕುಲ್‌ ಅವರು ಖಚಿತಪಡಿಸಿಕೊಂಡಿಲ್ಲ. ಸುಮಾರು 280 ಎಕರೆ ಪ್ರದೇಶದಲ್ಲಿ 30-40 ವರ್ಷದಿಂದ ಬೆಳೆದ ಬೃಹದಾಕಾರದ ಮರಗಳು ಇವೆ. ಇದು ಎಂದಿಗೂ ಅರಣ್ಯದಂತೆಯೇ ಗೋಚರಿಸುತ್ತಿದೆ. ಆದರೂ ಎಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಮಧ್ಯಂತರ ಅರ್ಜಿ ಹಾಕಿರುವುದು ತಪ್ಪು ಮಾಹಿತಿಯಾಗಿದೆ ಎಂದು ಅರಣ್ಯ ಇಲಾಖೆಯ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

‘ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಐ ಎ ಹಾಕಿರುವುದು ಗಂಭೀರ ಸ್ವರೂಪದ ಕರ್ತವ್ಯಲೋಪವಾಗಿದೆ. ಸರ್ವೋನ್ನತ ನ್ಯಾಯಾಲಯಕ್ಕೆ ನೀಡಿದ ತಪ್ಪು ಮಾಹಿತಿಯೂ ಆಗಿರುತ್ತದೆ. ಮತ್ತು ಪರಿಸರಕ್ಕೆ ಮಾಡಿದ ಘೋರ ಅನ್ಯಾಯವಾಗಿರುತ್ತದೆ. ಮಿಗಿಲಾಗಿ ಇದು ಬೇಲಿಯೇ ಎದ್ದು ಹೊಲ ಮೇದಂತೆ ಎಂಬ ಗಾದೆಗೆ ಅನ್ವರ್ಥವಾಗಿದೆ,’ ಎಂದು ತಿರುಗೇಟು ನೀಡಿರುವುದು ತಿಳಿದು ಬಂದಿದೆ.

 

ಅಲ್ಲದೇ ಸಂವಿಧಾನದ ವಿಧಿ 48 ಎ ಯನ್ನೂ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದಾರೆ.

 

‘ದೇಶದ ಪರಿಸರವನ್ನು ಸಂರಕ್ಷಿಸಲು ಮತ್ತು ಸುಧಾರಿಸಲು ಹಾಗೂ ಅರಣ್ಯಗಳನ್ನು ಮತ್ತು ವನ್ಯಜೀವಿಗಳನ್ನು ರಕ್ಷಿಸಲು ರಾಜ್ಯವು ಪ್ರಯತ್ನಿಸಬೇಕು,’ ಎಂದು ಸಂವಿಧಾನದ 48 ಎ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಸಹ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅರಣ್ಯ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋಕುಲ್‌ ಅವರು ಯಾವುದೇ ಪ್ರಯತ್ನ ಮಾಡಿಲ್ಲ. ಇದು ಪ್ರಕೃತಿ ಮತ್ತು ಪರಿಸರಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

 

ಆರ್‍‌ ಗೋಕುಲ್‌ ಅವರು ಮುಖ್ಯವಾಗಿ ವ್ಯಾಜ್ಯ ನಿರ್ವಹಣಾಧಿಕಾರಿಯಾಗಿದ್ದರು. ನ್ಯಾಯಾಲಯಕ್ಕೆ ಪ್ರಮಾಣ ಸಲ್ಲಿಸುವ ಕಾರಣ ಅವರ ಜವಾಬ್ದಾರಿ ಮಹತ್ವದ್ದಾಗಿತ್ತು. ಅಫಿಡವಿಟ್‌ ಸಲ್ಲಿಸಲು ಪ್ರಮಾಣ ಮಾಡುವವರು ವಾಸ್ತವಾಂಶಗಳನ್ನು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಇಲ್ಲವಾದಲ್ಲಿ ಸರ್ವೋನ್ನತ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ಸಲ್ಲಿಸಿದ ಆರೋಪಿಯಾಗುತ್ತಾರೆ. ಮತ್ತು ಸರ್ಕಾರವನ್ನು ಪ್ರತಿನಿಧಿಸುವ ಅವರು ಸರ್ಕಾರವನ್ನೂ ಮುಜುಗರಕ್ಕೆ ಸಿಲುಕಿಸುತ್ತಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿರುವುದು ಸಹ ತಿಳಿದು ಬಂದಿದೆ.

 

ಮಧ್ಯಂತರ ಅರ್ಜಿ ಸಲ್ಲಿಕೆಗೂ ಮುನ್ನ ಬೆಂಗಳೂರು ನಗರದಲ್ಲಿ ಒತ್ತುವರಿಯಾಗಿರುವ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಾಮರ್ಶನೆ ನಡೆದಿತ್ತು. 2015ರಲ್ಲಿ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿತ್ತು. ಈ ಸಮಿತಿಯು ನಡೆಸಿದ್ದ ಅನೇಕ ಸಭೆಗಳಲ್ಲಿ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಬಗ್ಗೆ ಚರ್ಚೆಯಾಗಿತ್ತು.

 

‘2018ರ ಜುಲೈ 17ರಂದು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಎಚ್‌ಎಂಟಿ ಅನಧಿಕೃತವಾಗಿ ತನ್ನ ಬಳಿ ಇರುವ ಅರಣ್ಯ ಭೂಮಿಯನ್ನು ಹರಾಜು ಮಾಡುತ್ತಿದೆ, ಮಾರಾಟ ಮಾಡುತ್ತಿದೆ ಮತ್ತು ಇಲ್ಲಿ ಇನ್ನೂ ಹಸಿರು ಹೊದಿಕೆ ಉಳಿದಿದ್ದು ಇದು ಬೆಂಗಳೂರಿಗೆ ಜೀವರಕ್ಷಕ ಮತ್ತು ಅತ್ಯಗತ್ಯವಾದ ಶ್ವಾಸತಾಣವಾಗಿರುತ್ತದೆ,’ ಎಂದು ಸಭೆ ನಡವಳಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಗೋಕುಲ್‌ ಅವರು ಮಧ್ಯಂತರ ಅರ್ಜಿ ಸಲ್ಲಿಕೆ ಮಾಡಿದ 25 ದಿನಗಳ ನಂತರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮತ್ತೊಂದು ಸಭೆ ನಡೆದಿತ್ತು. ಈ ಸಭೆಯಲ್ಲಿಯೂ ‘1980ರ ಪೂರ್ವದಲ್ಲಿ ವಿವಿಧ/ಸರ್ಕಾರಿ ಸಂಸ್ಥೆಗಳಿಗೆ ಆದ ಪ್ರದೇಶಗಳ ಮಂಜೂರಾತಿಗಳ ಬಗ್ಗೆ ಅಡ್ವೋಕೇಟ್‌ ಜನಲರ್‍‌ ಅವರ ಅಭಿಪ್ರಾಯಪಡೆದು ಅಂತಹ ಅರಣ್ಯ ಪ್ರದೇಶಗಳ ಡಿನೋಟಿಫಿಕೇಷನನ್‌ನ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ ನಿರ್ಧಾರಕ್ಕಾಗಿ ಸಲ್ಲಿಸಬೇಕು,’ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಭೆಯು ಸ್ಪಷ್ಟವಾಗಿ ಮತ್ತು ಸ್ಪುಟವಾಗಿ ಸೂಚಿಸಿತ್ತು.

 

ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ಎಚ್‌ಎಂಟಿ ಭೂಮಿ ವಿಷಯ ಹಲವು ಬಾರಿ ಚರ್ಚೆಯಾಗಿರುವಾಗ ಅದೇ ಉದ್ದೇಶಕ್ಕೆ ನೇಮಕವಾಗಿದ್ದ ಉನ್ನತ ಮಟ್ಟದ ಸಮಿತಿಯ ಅನುಮತಿ ಪಡೆಯದೇ ಐ ಎ ಸಲ್ಲಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ವ್ಯಾಜ್ಯ ನಿರ್ವಹಣಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಆರ್‍‌ ಗೋಕುಲ್‌ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗೆ ಸಚಿವ ಸಂಪುಟದ ಪೂರ್ವಾನುಮತಿ ಇರಲಿಲ್ಲ. ಈ ಅಂಶವು ಸಹ ಗೋಕುಲ್‌ ಅವರಿಗೆ ತಿಳಿದಿತ್ತು.

 

ಮಧ್ಯಂತರ ಅರ್ಜಿ ಸಲ್ಲಿಸಿದ 25 ದಿನಗಳ ನಂತರ ಉನ್ನತ ಮಟ್ಟದ ಸಮಿತಿಯು ಡಿ ನೋಟಿಫಿಕೇಷನ್‌ ಮಾಡುವ ಸಂಬಂಧ ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಪಡೆಯಬೇಕಿತ್ತು. ಮತ್ತು ಈ ವಿಚಾರವನ್ನು ಸಚಿವ ಸಂಪುಟ ನಿರ್ಧಾರಕ್ಕೆ ಬಿಡಬೇಕಿತ್ತು ಎಂಬ ಮಹತ್ವ ನಿರ್ಣಯವನ್ನು ಉನ್ನತ ಮಟ್ಟದ ಸಮಿತಿಯು ಕೈಗೊಂಡ ನಂತರವೂ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಅಥವಾ ಸ್ಥಿರೀಕರನವನ್ನು ಮಾಡಿಸುವ ಪ್ರಯತ್ನವನ್ನೂ ಮಾಡಿಲ್ಲ.

 

 

ಇದು ನಿಯಮಬಾಹಿರವಾಗಿದೆ. ಮತ್ತು ವ್ಯಾಜ್ಯ ನಿರ್ವಹಣಾಧಿಕಾರಿಯ ಬೇಜವಾಬ್ದಾರಿತನಕ್ಕೆ ಹಾಗೂ ಸರ್ಕಾರದ ಆಸ್ತಿಯನ್ನು ರಕ್ಷಿಸುವಲ್ಲಿ ಅವರ ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ ಎಂದು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts