ಬೆಂಗಳೂರು; ಲೋಕೋಪಯೋಗಿ ಇಲಾಖೆ ಸೇರಿದಂತೆ ಒಟ್ಟು 5 ಇಲಾಖೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೆದಿದ್ದ ಒಟ್ಟಾರೆ 3 ಲಕ್ಷ 48 ಸಾವಿರ ಕೋಟಿ ರು ಮೌಲ್ಯದ ಟೆಂಡರ್ಗಳನ್ನು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿರಲಿಲ್ಲ ಎಂಬುದನ್ನು ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರ ನೇತೃತ್ವದ ವಿಚಾರಣೆ ಆಯೋಗವು ತನಿಖೆಯಲ್ಲಿ ಪತ್ತೆ ಹಚ್ಚಿದೆ.
ಅದೇ ರೀತಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅಧಿಕಾರವಾಧಿಯ ಕೊನೆಯ ವರ್ಷವಾದ 2022-23ರಲ್ಲಿ 1,54,544 ಕೋಟಿ ರು ಮೊತ್ತದ ಟೆಂಡರ್ ಕರೆದಿತ್ತು. ಇದು 2021-22ಕ್ಕೆ ಹೋಲಿಸಿದರೆ ಶೇ. 300ರಷ್ಟು ಅಧಿಕವಾಗಿತ್ತು ಎಂಬ ಅಂಕಿ ಅಂಶಗಳನ್ನೂ ವಿಚಾರಣೆ ಆಯೋಗವು ತೆರೆದಿಟ್ಟಿದೆ.
ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಸಣ್ಣ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು 17 ದೂರುಗಳಿಗೆ ಸಂಬಂಧಿಸಿದಂತೆ ವಿಚಾರಣೆ ಆಯೋಗಕ್ಕೆ ಮಾಹಿತಿಯನ್ನೇ ನೀಡದ ಇಲಾಖೆಗಳ ಪಟ್ಟಿ ಬಿಡುಗಡೆಗೊಂಡ ಬೆನ್ನಲ್ಲೇ ಟೆಂಡರ್ನಲ್ಲಿನ ಹಲವು ಲೋಪಗಳು ಮುನ್ನೆಲೆಗೆ ಬಂದಿವೆ.
ಈ ಐದು ಇಲಾಖೆಗಳ ಕಾಮಗಾರಿಗಳ ನಿರ್ವಹಣೆ ಕುರಿತಾದ ತನಿಖೆಯಲ್ಲದೇ 2019ರಿಂದ 2023ರ ಅವಧಿಯಲ್ಲಿನ ಟೆಂಡರ್ ಪ್ರಕ್ರಿಯೆಗಳಲ್ಲಿನ ವಿಳಂಬ ಮತ್ತು ಟೆಂಡರ್ನಲ್ಲಿ ಭಾಗವಹಿಸಿದ ಅನರ್ಹ ಗುತ್ತಿಗೆದಾರರಿಗೆ ನಿಗದಿತ ವೇಳೆಯಲ್ಲಿ ಇಎಂಡಿಯನ್ನು ಬಿಡುಗಡೆ ಮಾಡುವಲ್ಲಿಯೂ ಸಹ ವಿಳಂಬ ಮಾಡಿತ್ತು. ಈ ಕುರಿತು ಇ-ಸಂಗ್ರಹಣಾ ಕೋಶದಿಂದ ಮಾಹಿತಿಗಳನ್ನು ಕ್ರೋಢೀಕರಿಸಿರುವ ವಿಚಾರಣೆ ಆಯೋಗವು ಹಲವು ಪ್ರಕರಣಗಳನ್ನು ಬಹಿರಂಗಗೊಳಿಸಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪಿಡಬ್ಲ್ಯೂಡಿಯಲ್ಲಿ 58,575 ಕೋಟಿ ರು ಮೌಲ್ಯದ ಟೆಂಡರ್
2019-20ರಿಂದ 2022-23ರವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಒಟ್ಟಾರೆ 61,836 ಟೆಂಡರ್ಗಳನ್ನು ಪ್ರಕಟಿಸಿತ್ತು. 2019-20ರಲ್ಲಿ 17,000, 2020-21ರಲ್ಲಿ 13,753, 2021-22ರಲ್ಲಿ 12,515, 2022-23ರಲ್ಲಿ 18,568 ಟೆಂಡರ್ಗಳನ್ನು ಆಹ್ವಾನಿಸಿತ್ತು. ಈ ಎಲ್ಲಾ ಟಂಡರ್ಗಳ ಒಟ್ಟು ಮೌಲ್ಯವು 58,574 ಕೋಟಿ ರು ಆಗಿತ್ತು. ಈ ಪೈಕಿ 4,445 ಕೋಟಿ ರು ಮೌಲ್ಯದ ಟೆಂಡರ್ ಅವಾರ್ಡ್ ಆಗಿದ್ದವು.
ಈ ಎಲ್ಲಾ ಟೆಂಡರ್ಗಳಲ್ಲಿ 1,75,149 ಮಂದಿ ಬಿಡ್ದಾರರು ಭಾಗವಹಿಸಿದ್ದರು. ಅವಾರ್ಡ್ ಆದ ಟೆಂಡರ್ಗಳಿಗೆ 177 ಬಿಡ್ದಾರರಿಗೆ ಮುಂಗಡ ಠೇವಣಿ ಮರು ಪಾವತಿಸಲು ಬಾಕಿ ಇರಿಸಿಕೊಂಡಿತ್ತು. ಅದೇ ರೀತಿ ಮೌಲ್ಯಮಾಪನ ಪೂರ್ಣಗೊಂಡ ಟೆಂಡರ್ಗಳ ಪೈಕಿ 2,778 ಮಂದಿ ಬಿಡ್ದಾರರಿಗೆ ಮುಂಗಡ ಠೇವಣಿ ಮರು ಪಾವತಿಸಲು ಬಾಕಿ ಇತ್ತು ಎಂದು ವರದಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಜಲಸಂಪನ್ಮೂಲದಲ್ಲಿ 80,837 ಕೋಟಿ ಮೌಲ್ಯದ ಟೆಂಡರ್
ಜಲಸಂಪನ್ಮೂಲ ಇಲಾಖೆಯಲ್ಲಿ 2019-20ರಿಂದ 2022-23ರ ಅವಧಿಯಲ್ಲಿ 38,365 ಟೆಂಡರ್ಗಳನ್ನು ಪ್ರಕಟಿಸಿತ್ತು. 1,01,868 ಮಂದಿ ಬಿಡ್ದಾರರು ಇದರಲ್ಲಿ ಭಾಗವಹಿಸಿದ್ದರು. ಇದರಲ್ಲಿ 314 ಟೆಂಡರ್ಗಳು ಅವಾರ್ಡ್ ಆಗಿದ್ದವು. ಇದರ ಒಟ್ಟಾರೆ ಮೌಲ್ಯವು 80,237 ಕೋಟಿ ರು ನಷ್ಟಿತ್ತು. ಈ ಪೈಕಿ 847 ಕೋಟಿ ರು ಮೌಲ್ಯದ ಟೆಂಡರ್ ಅವಾರ್ಡ್ ಆಗಿದ್ದವು ಎಂದು ಆಯೋಗದ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸಣ್ಣ ನೀರಾವರಿಯಲ್ಲಿ 17,278 ಕೋಟಿ ರು ಮೌಲ್ಯ
ಸಣ್ಣ ನೀರಾವರಿ ಇಲಾಖೆಯಲ್ಲಿ 2019-20ರಿಂದ 2022-23ರವರೆಗೆ 15,738 ಟೆಂಡರ್ಗಳನ್ನು ಪ್ರಕಟಿಸಿತ್ತು. ಇದರ ಒಟ್ಟು ಮೌಲ್ಯ 17,278 ಕೋಟಿ ರುನಷ್ಟಿತ್ತು. 32,504 ಮಂದಿ ಬಿಡ್ದಾರರು ಭಾಗವಹಿಸಿದ್ದರು. ಅವಾರ್ಡ್ ಆಗಿದ್ದ 943 ಟೆಂಡರ್ ಗಳ ಪೈಕಿ 1,860 ಕೋಟಿ ರು ಮೌಲ್ಯ ಹೊಂದಿತ್ತು.
ನಗರಾಭಿವೃದ್ಧಿಯಲ್ಲಿ 99,532 ಕೋಟಿ ಮೌಲ್ಯ
ನಗರಾಭಿವೃದ್ಧಿ ಇಲಾಖೆಯಲ್ಲಿ 2019-20ರಿಂದ 2022-23ರವರೆಗೆ 1,25,151 ಟೆಂಡರ್ ಪ್ರಕಟವಾಗಿದ್ದವು. ಇದರ ಮೌಲ್ಯ 99,532 ಕೋಟಿಯಷ್ಟಿತ್ತು. ಈ ಪೈಕಿ 6,711 ಟೆಂಡರ್ ಅವಾರ್ಡ್ ಆಗಿದ್ದವು. ಇದರ ಒಟ್ಟು ಮೌಲ್ಯ 4,104 ಕೋಟಿಯಷ್ಟಿತ್ತು. ಈ ಟೆಂಡರ್ಗಳಲ್ಲಿ 1,94,676 ಮಂದಿ ಬಿಡ್ದಾರರು ಭಾಗವಹಿಸಿದ್ದರು.
ಆರ್ಡಿಪಿಆರ್ನಲ್ಲಿ 92,936 ಕೋಟಿ ಮೌಲ್ಯ
ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆಯಲ್ಲಿ ಈ ಐದು ವರ್ಷಗಳಲ್ಲಿ 1,02,643 ಟೆಂಡರ್ಗಳು ಪ್ರಕಟವಾಗಿದ್ದವು. ಇದರ ಒಟ್ಟಾರ ಮೌಲ್ಯ 92,936 ಕೋಟಿಯಷ್ಟಿತ್ತು. 1,62,480 ಮಂದಿ ಬಿಡ್ದಾರರು ಭಾಗವಹಿಸಿದ್ದರು. ಈ ಪೈಕಿ 2,526 ಟೆಂಡರ್ಗಳು ಅವಾರ್ಡ್ ಆಗಿದ್ದವು. ಇದರ ಮೌಲ್ಯ 11,285 ಕೋಟಿಯಷ್ಟಿತ್ತು ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಎಲ್ಲಾ ಅಂಕಿ ಅಂಶ ಮತ್ತು ಮಾಹಿತಿಗಳನ್ನು ಕ್ರೋಡಿಕರಿಸಿದ್ದ ವಿಚಾರಣೆ ಆಯೋಗವು ಪರಾಮರ್ಶನೆ ಮತ್ತು ತನಿಖೆ ಮಾಡಿದ ನಂತರ ಹಲವು ಅಂಶಗಳನ್ನು ಬೆಳಕಿಗೆ ತಂದಿದೆ.
ತನಿಖೆಯಲ್ಲಿ ಗಮನಿಸಿರುವ ಅಂಶಗಳೇನು?
ಒಟ್ಟು ಪ್ರಕಟಿಸಿದ್ದ ಟೆಂಡರ್ಗಳಿಗೆ ಹೋಲಿಸಿದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ (ಶೇ.1ರಿಂದ 6ರಷ್ಟು) ಟೆಂಡರ್ಗಳಿಗೆ ಮಾತ್ರ ಅವಾರ್ಡ್ನ್ನು ಇ-ಪ್ರೊಕ್ಯೂರ್ಮೆಂಟ್ನಲ್ಲಿ ಅಪ್ಲೋಡ್ ಆಗಿವೆ. ಹೀಗಾಗಿಕಾಲಕಾಲಕ್ಕೆ ಅವಾರ್ಡ್ ಆದ ಟೆಂಡರ್ಗಳನ್ನು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ಟೆಂಡರ್ ಕರೆದ ಅಧಿಕಾರಿಗಳು ಅಪ್ಲೋಡ್ ಮಾಡಿಲ್ಲ ಎಂಬುದನ್ನು ವಿಚಾರಣೆ ಆಯೋಗವು ಪತ್ತೆ ಹಚ್ಚಿರುವುದು ತಿಳಿದು ಬಂದಿದೆ.
ಅವಾರ್ಡ್ ಆದ ಮತ್ತು ಮೌಲ್ಯಮಾಪನ ಪೂರ್ಣಗೊಂಡ ಟೆಂಡರ್ಗಳಲ್ಲಿ ಭಾಗಿಯಾಗಿದ್ದ ಬಿಡ್ದಾರರ ಇಎಂಡಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಟೆಂಡರ್ನಲ್ಲಿ ಭಾಗಿಯಾಗಿ ಅನರ್ಹಗೊಂಡಿದ್ದ ಗುತ್ತಿಗೆದಾರರಿಗೆ ಸಕಾಲದಲ್ಲಿ ಇಎಂಡಿ ಹಣವನ್ನು ನಿಗದಿತ ಅವಧಿಯಲ್ಲಿ ವಾಪಸ್ ಮಾಡಿರಲಿಲ್ಲ.
ಹಾಗೆಯೆ ಪ್ರಮುಖ ಐದು ಇಲಾಖೆಗಳಲ್ಲಿ 2020-21ನೇ ಸಾಲಿನಲ್ಲಿ 49,474 ಕೋಟಿ ರು ಮೊತ್ತಕ್ಕೆ ಟೆಂಡರ್ ಕರೆದಿತ್ತು. ಇದರ ಪ್ರಮಾಣವು 2022-23ನೇ ಸಾಲಿಲ್ಲಿ ಟೆಂಡರ್ ಕರೆದ ಮೊತ್ತಕ್ಕೆ ಹೋಲಿಸಿದಲ್ಲಿ ಸುಮಾರು ಶೇ. 300ರಷ್ಟು ಅಧಿಕವಾಗಿದೆ. ಅಂದರೆ 2022-23ನೇ ಸಾಲಿನಲ್ಲಿ 1,54,554 ರು ಕೋಟಿಗಳ ಮೊತ್ತಕ್ಕೆ ಟೆಂಡರ್ ಕರೆದಿತ್ತು ಎಂದು ಆಯೋಗದ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆಡಳಿತಾತ್ಮಕ ಅನುಮೋದನೆ ಪಡೆಯದ, ಸರ್ಕಾರದ ಅನುಮೋದನೆಗೂ ಮೊದಲೇ ತಯಾರಿಸಿದ್ದ ಅಂದಾಜು ಪಟ್ಟಿ, ಕೃತಕವಾಗಿ ಪರಿಮಾಣವನ್ನು ಹೆಚ್ಚಿಸಿರುವುದು, ಟೆಂಡರ್ ಪ್ರಕ್ರಿಯೆಯನ್ನು ಪಾಲಿಸದೇ ನಡೆಸಿರುವ ಕಾಮಗಾರಿಗಳು, ಗುಣಮಟ್ಟ ಕಾಯ್ದುಕೊಳ್ಳದೇ ಇರುವ ಕಾಮಗಾರಿ ಅನುಷ್ಠಾನಗೊಳಿಸಿರುವುದು, ಕಾಮಗಾರಿ ನಿರ್ವಹಿಸದೇ ಇದ್ದರೂ ಬಿಲ್ ಪಾವತಿಸಿರುವುದು ಸೇರಿದಂತೆ ಹಲವು ಅಕ್ರಮಗಳು, ನಿಯಮಬಾಹಿರ ಚಟುವಟಿಕೆಗಳು, ಅಧಿಕಾರ ದುರುಪಯೋಗದ ಹಲವು ಮುಖಗಳನ್ನು ವಿಚಾರಣೆ ಆಯೋಗವು ವರದಿಯಲ್ಲಿ ತೆರೆದಿಟ್ಟಿತ್ತು.
‘ಅನುಮೋದನೆಯಿಲ್ಲ, ಟೆಂಡರ್ ಪ್ರಕ್ರಿಯೆಯಿಲ್ಲ, ದಂಡವಿಲ್ಲ, ಗುಣಮಟ್ಟವೂ ಇಲ್ಲ’; ನ್ಯೂನತೆಗಳ ಸ್ವರ್ಗಸೀಮೆ ಅನಾವರಣ
2019ರ ಜುಲೈನಿಂದ 2023ರ ಮಾರ್ಚ್ ಅವಧಿಯಲ್ಲಿ ಈ ಐದು ಇಲಾಖೆಗಳಲ್ಲಿ 4.70 ಲಕ್ಷ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ 3.32 ಲಕ್ಷ ಕಾಮಗಾರಿಗಳು ಶೇ. 70ರಷ್ಟು ಪೂರ್ಣಗೊಂಡಿವೆ. ಆಯೋಗಕ್ಕೆ ನೀಡಿದ್ದ ಸೀಮಿತ ಗಡುವು ಮತ್ತು ಒದಗಿಸಿದ್ದ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ 3.32 ಲಕ್ಷ ಅಗಾಧ ಸಂಖ್ಯೆಯ ಕಾಮಗಾರಿಗಳನ್ನು ತಪಾಸಣೆ ಕೈಗೊಳ್ಳುವುದು ಕಾರ್ಯಸಾಧುವಾಗಿಲ್ಲ ಎಂದು ವಿಚಾರಣೆ ಆಯೋಗವು ವರದಿಯಲ್ಲಿ ಹೇಳಿತ್ತು.
ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಲಂಚದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲಿಯೂ ಸಹ ಶೇ.40ರಷ್ಟು ಕಮಿಷನ್ ಬಗ್ಗೆ ಪ್ರಸ್ತಾಪವೇ ಇಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣೆ ಆಯೋಗವು ಅಭಿಪ್ರಾಯಪಟ್ಟಿತ್ತು.
40 ಪರ್ಸೆಂಟ್ ಕಮಿಷನ್; ದೂರಿನಲ್ಲಿ ಪ್ರಸ್ತಾವವೇ ಇಲ್ಲ, ಖಚಿತ ಅಭಿಪ್ರಾಯ ತಳೆಯಲು ಕಷ್ಟಸಾಧ್ಯವೆಂದ ಆಯೋಗ
ತನಿಖೆಯ ಸಾರಾಂಶದಲ್ಲೇನಿದೆ?
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ನೀಡಿರುವ ದಾಖಲೆಗಳಲ್ಲಿ ಎಲ್ಲಿಯೂ ಸಹ ಶೇ. 40ರಷ್ಟು ಕಮಿಷನ್ ಬಗ್ಗೆ ಪ್ರಸ್ತಾಪವಿಲ್ಲ. ಹಾಗೂ ಈ ದಾಖಲೆಗಳು ಯಾವ ಸಂದರ್ಭದಲ್ಲೂ ಕಮಿಷನ್ ಆರೋಪವನ್ನು ಸಾಬೀತುಪಡಿಸಲು ಪೂರಕವಾಗಿರುವುದಿಲ್ಲ.
ಅವಶ್ಯ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಅಲ್ಲದೇ ಗುತ್ತಿಗೆದಾರರು ನೀಡುವ ದೂರುಗಳು, ಹೇಳಿಕೆಗಳ ಗೌಪ್ಯತೆ ಕಾಪಾಡಲು ಮತ್ತು ಅವಶ್ಯಕತೆ ಇರುವವರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವ ಬಗ್ಗೆ ಆಶ್ವಾಸನೆ ನೀಡಿದರೂ ಸಹ ಯಾವುದೇ ಸ್ಪಷ್ಟೀಕರಣ ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ಈ ಆರೋಪದ ಬಗ್ಗೆ ಖಚಿತ ಅಭಿಪ್ರಾಯ ತಳೆಯುವುದು ಆಯೋಗಕ್ಕೆ ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯಿಸಿರುವುದನ್ನು ಸ್ಮರಿಸಬಹುದು.