ಒಕ್ಕಲಿಗ ಅಧಿಕಾರಿಯಿಂದ ಎಸ್‌ ಸಿ ಮೀಸಲಾತಿ ದುರುಪಯೋಗ; ವಿಚಾರಣೆಯಲ್ಲಿ ಸಾಬೀತು

ಬೆಂಗಳೂರು; ವಿಧಾನಪರಿಷತ್‌ನ ಉಪ ಕಾರ್ಯದರ್ಶಿ ಬಿ ಎ ಬಸವರಾಜು ಎಂಬುವರು ಒಕ್ಕಲಿಗ ಜಾತಿಗೆ ಸೇರಿದ್ದರೂ ಸಹ ಪರಿಶಿಷ್ಟ ಜಾತಿ  ಮೀಸಲಾತಿಯಡಿಯಲ್ಲಿ ನೇಮಕವಾಗಿದ್ದನ್ನು ಪತ್ತೆ ಹಚ್ಚಿರುವ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು, ಅವರು ನಂತರದ ವರ್ಷಗಳಲ್ಲಿ ಪ.ಜಾತಿ  ಮೀಸಲಾತಿ ಅಡಿಯಲ್ಲಿಯೇ  ಮುಂಬಡ್ತಿ ಪಡೆದುಕೊಂಡಿರುವುದನ್ನೂ  ವಿಚಾರಣೆಯಿಂದ ಸಾಬೀತುಪಡಿಸಿದೆ.

 

ಬಿ ಎ ಬಸವರಾಜು ಅವರು ಮೀಸಲಾತಿ ದುರುಪಯೋಗಪಡಿಸಿಕೊಂಡಿರುವುದು,  ಮೋಸ, ವಂಚನೆ ಮಾಡಿರುವುದು ಮಾತ್ರವಲ್ಲದೇ  ಸರ್ಕಾರಿ ದಾಖಲೆಗಳನ್ನೂ  ತಿರುಚಿದ್ದಾರೆ ಎಂಬುದನ್ನು ಜಾರಿ ನಿರ್ದೇಶನಾಲಯವು ವಿಚಾರಣೆಯಲ್ಲಿ ದೃಢಪಡಿಸಿದೆ.

 

ಬಿ ಎ ಬಸವರಾಜು  ಅವರು  ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಬೆರಳಚ್ಚುಗಾರರ ಹುದ್ದೆಗೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ನೇಮಕವಾಗಿದ್ದಾರೆ ಎಂದು ವಿಧಾನಪರಿಷತ್ ಸಚಿವಾಲಯದ ಅಧೀನ ಕಾರ್ಯದರ್ಶಿ ಕೆ. ಎನ್. ಶಾಂತ ಎಂಬುವರು ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ   2021ರ ನವೆಂಬರ್ 15ರಂದೇ  ದೂರು ಸಲ್ಲಿಸಿದ್ದರೂ  ಸಹ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಯಾವುದೇ ಕ್ರಮ ವಹಿಸಿರಲಿಲ್ಲ.

 

ಇದೀಗ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವೇ ಈ ಪ್ರಕರಣವನ್ನು ವಿಚಾರಣೆ ನಡೆಸಿ ವರದಿ ಸಲ್ಲಿಸಿದೆ. ಆರೋಪಿತ ಅಧಿಕಾರಿ ಬಿ ಎ ಬಸವರಾಜು ಅವರ ವಿರುದ್ಧ ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಜರುಗಿಸಬೇಕು ಎಂದು ಶಿಫಾರಸ್ಸನ್ನೂ ಮಾಡಿದೆ. 2024ರ ಡಿಸೆಂಬರ್‍‌ನಲ್ಲೇ ಈ ವರದಿ ಸಲ್ಲಿಕೆಯಾಗಿದ್ದರೂ ಸಚಿವಾಲಯವು ಯಾವುದೇ ಕ್ರಮ ವಹಿಸಿರಲಿಲ್ಲ.

 

ವರದಿ ಸಲ್ಲಿಕೆಯಾಗಿ 3 ತಿಂಗಳ ನಂತರ  ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿ ಎಸ್‌ ನಿರ್ಮಲ ಅವರು ಆರೋಪಿತ ಅಧಿಕಾರಿಗೆ ಕಾರಣ ಕೇಳುವ ನೋಟೀಸ್‌ ಕೂಡ ಜಾರಿಗೊಳಿಸಿದ್ದಾರೆ. ಈ ಎಲ್ಲಾ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. ಈ ಪ್ರಕರಣದ ಕುರಿತಾಗಿ ‘ದಿ ಫೈಲ್‌’, 3 ವ‍ರ್ಷದ ಹಿಂದೆಯೇ ವರದಿ ಪ್ರಕಟಿಸಿತ್ತು.

 

ನಕಲಿ ಜಾತಿ ಪ್ರಮಾಣ ಪತ್ರ ಆರೋಪ; ಉಪ ಕಾರ್ಯದರ್ಶಿ ವಿರುದ್ಧ ಕ್ರಮಕೈಗೊಳ್ಳದ ಹೊರಟ್ಟಿ

 

ಜಾರಿ ನಿರ್ದೇಶನಾಲಯದ ವರದಿಯಲ್ಲೇನಿದೆ?

 

ಬಿ ಎ ಬಸವರಾಜು ಅವರ ವೈಯಕ್ತಿಕ ಕಡತದಲ್ಲಿರುವ ಅರ್ಜಿ ನಮೂನೆಯನ್ನು  ತದನಂತರದಲ್ಲಿ ಅಡಕಗೊಳಿಸಿರುವಂತೆ ಮತ್ತು ಪುಟ ಸಂಖ್ಯೆಗಳಲ್ಲಿ ತಿದ್ದುಪಡಿಯಾಗಿರುವಂತೆ ಕಂಡು ಬಂದಿರುತ್ತದೆ ಎಂದು ವಿಚಾರಣೆಯ ವೇಳೆಯಲ್ಲಿ ನಿರ್ದೇಶನಾಲಯವು ಪತ್ತೆ ಹಚ್ಚಿದೆ. ಈ ಕುರಿತು 2024ರ ಡಿಸೆಂಬರ್‍‌ 13ರಂದೇ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ವರದಿಯನ್ನೂ ಸಲ್ಲಿಸಿದ್ದರು.

 

 

ಕೆ ಜಯಣ್ಣ ಮತ್ತು ಶೋಭಾ ಎಂಬುವರು 1999ರ ನವೆಂಬರ್‍‌ 29ರಂದು ಬೆರಳಚ್ಚುಗಾರರಾಗಿ ನೇರ ನೇಮಕಾತಿ ಹೊಂದಿರುವ ಮೂಲ ಆದೇಶ ಪ್ರತಿಗಳಲ್ಲಿ ವ್ಯತ್ಯಾಸವಿದೆ. ಬಿ ಎ ಬಸವರಾಜು ಅವರ ವೈಯಕ್ತಿಕ ಕಡತದಲ್ಲಿರುವ ನೇಮಕಾತಿ ಆದೇಶದ ಪ್ರತಿಗಳಲ್ಲಿ ವ್ಯತ್ಯಾಸವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಬಿ ಎ ಬಸವರಾಜು ಅವರ ನೇಮಕಾತಿ ಆದೇಶವು ನೈಜತೆಯಿಂದ ಕೂಡಿರದೇ ಸೃಷ್ಟಿಸಿದ ದಾಖಲೆಯಾಗಿದೆ. ಹಾಗೂ ಪರಿಶಿಷ್ಟ ಜಾತಿಯ  21ನೇ ಬಿಂದುವಿನ ಎದುರಿಗೆ ಸಾಮಾನ್ಯ ಅಭ್ಯರ್ಥಿಯಾಗಿದ್ದರೂ ಸಹ ಮೀಸಲಾತಿ ಅಡಿಯಲ್ಲಿ ಮುಂಬಡ್ತಿ ಪಡೆದುಕೊಂಡಿರುವುದು ವಿಚಾರಣೆಯಿಂದ ಕಂಡು ಬಂದಿದೆ ಎಂದು ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

1991ರ ಆಗಸ್ಟ್‌ ಆಗಸ್ಟ್‌ 13ರಂದು ನಡೆದಿದ್ದ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಅಧಿಸೂಚನೆ (ಸಂಖ್ಯೆ ADM/237/FPD/91)ರಲ್ಲಿ ಒಟ್ಟು 4 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿತ್ತು. ಇದರಲ್ಲಿ ಒಂದು ಹುದ್ದೆಯನ್ನು ಎಸ್‌ ಸಿ ಜನಾಂಗಕ್ಕೆ ಮೀಸಲಿರಿಸಿತ್ತು. ಈ ಹುದ್ದೆಗೆ ಬಿ ಎ ಬಸವರಾಜು ಅವರು ಆಯ್ಕೆಯಾಗಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ಬಿ ಎ ಬಸವರಾಜು ಅವರು ವೈಯಕ್ತಿಕ ಕಡತವನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಾದ ಕೆ ಜಯರಾಮ್‌, ಶೋಭಾವತಿ, ಕೆ ಎನ್ ಶಾಂತ ಅವರ ಬಳಿ ಇರುವ ನೇಮಕಾತಿ ಆದೇಶದಲ್ಲಿ ಮಾತ್ರ ಕಂಡು ಬಂದಿದೆ ಎಂದು ವರದಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

 

ಹಾಗೆಯೇ ಬಿ ಎ ಬಸವರಾಜು ಅವರ ನೇಮಕಾತಿ ಆದೇಶದ ಪ್ರತಿಯ ಷರತ್ತು, ಕಲಂ ಬಿ ಅನ್ನು ತೆಗೆದುಹಾಕಿ ಸೃಷ್ಟಿತ ದಾಖಲೆಯನ್ನು ವೈಯಕ್ತಿಕ ಕಡತದಲ್ಲಿ ತದ ನಂತರದಲ್ಲಿ ಸೇರ್ಪಡೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿದೆ.

 

‘ಬಿ ಎ ಬಸವರಾಜು ಅವರು ಒಕ್ಕಲಿಗ ಜಾರಿಗೆ ಸೇರಿದವರಾಗಿದ್ದು, ಬೆರಳಚ್ಚುಗಾರರ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸದೇ ಇರುವುದು ಕಂಡು ಬಂದಿದೆ. ಇವರು ಬೆರಳಚ್ಚುಗಾರರ ಹುದ್ದೆಯಿಂದ ಶೀಘ್ರಲಿಪಿಗಾರರಾಗಿ ಪರಿಶಿಷ್ಟ ಜಾತಿ ಮೀಸಲಾತಿ ಅಡಿಯಲ್ಲಿ ನೇಮಕಾತಿ ಮತ್ತು ಮುಂಬಡ್ತಿ ಪಡೆದಿರುವುದು ಸಚಿವಾಲಯವು 2022ರ ಫೆ.19ರಂದು ನೀಡಿದ್ದ ಮಾಹಿತಿ ಮತ್ತು ದಾಖಲೆಯಿಂದ ಕಂಡುಬಂದಿದೆ. ಇವರ ಅರ್ಜಿನಮೂನೆ ಮತ್ತು ಅಧಿಕೃತ ಜ್ಞಾಪನ ಪತ್ರದ ತಿದ್ದುಪಡಿ ಪತ್ರಗಳನ್ನು ನೇಮಕಾತಿ ಹೊಂದಿದ ನಂತರ ದಿನಗಳಲ್ಲಿ ವೈಯಕ್ತಿಕ ಕಡತಕ್ಕೆ ಸೇರ್ಪಡೆಗೊಳಿಸಿರುವುದು ಪುಟ ಸಂಖ್ಯೆಗಳ ತಿದ್ದುವಿಕೆಯಿಂದ ಕಂಡುಬಂದಿರುತ್ತದೆ,’ ಎಂದು  ವರದಿಯಲ್ಲಿ  ವಿವರಿಸಿರುವುದು ಗೊತ್ತಾಗಿದೆ.

 

 

ಅದೇ ರೀತಿ ಬಸವರಾಜು ಅವರು ಸಾಮಾನ್ಯ ವರ್ಗದಡಿಯಲ್ಲಿ ನೇಮಕಾತಿ ಹೊಂದಿದ್ದ ಪಕ್ಷದಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯವು ನೀಡಿರುವ ಆದೇಶ ಪತ್ರದಲ್ಲಿ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸುವಂತೆ ಸೂಚಿಸುವ ಸಂದರ್ಭವೇ ಉಂಟಾಗುತ್ತಿಲಿಲ್ಲ. ಮೀಸಲಾತಿ ಅಡಿಯಲ್ಲಿ ನೇಮಕಾತಿ ಹೊಂದಿದ್ದರಿಂದಾಗಿ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸುವಂತೆ ಸೂಚಿಸಿರುವುದು ನೈಜ ಸಂಗತಿಯಾಗಿದೆ ಎಂದು ವಿಚಾರಣೆ ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

‘ಮೀಸಲಾತಿ ದುರುಪಯೋಗ, ಮೋಸ, ವಂಚನೆ, ಸರ್ಕಾರಿ ದಾಖಲೆಗಳ ತಿರುಚುವಿಕೆ ಹಾಗೂ ಸರ್ಕಾರಿ ನೌಕರನಾಗಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣಗಳಿಂದ ಇವರ ವಿರುದ್ಧ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು,’ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಅರುಣ್‌ ಚಕ್ರವರ್ತಿ ಅವರು ಸಭಾಪತಿ ಹೊರಟ್ಟಿ ಅವರಿಗೆ ಶಿಫಾರಸ್ಸು ಮಾಡಿದ್ದಾರೆ.

 

 

ಇದನ್ನಾಧರಿಸಿ ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿ (2) ಎಸ್‌ ನಿರ್ಮಲ ಅವರು ಬಿ ಎ ಬಸವರಾಜು ಅವರಿಗೆ 2025ರ ಏಪ್ರಿಲ್ 9ರಂದು  ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಿದ್ದಾರೆ.

 

 

‘ ಈ ನೋಟೀಸ್‌ ತಲುಪಿದ 07 ದಿನಗೊಳಗಾಗಿ ನಿಮ್ಮ ಸಮಜಾಯಿಷಿ ನೀಡಬೇಕು. ತಪ್ಪಿದಲ್ಲಿ ನಿಯಮಾವಳಿಗಳ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು,’ ಎಂದು ಎಸ್‌ ನಿರ್ಮಲ ಅವರು ತಿಳಿಸಿರುವುದು ಗೊತ್ತಾಗಿದೆ.

 

 

ಬಸವರಾಜು ಅವರಿಗೆ ಪದನ್ನೋತಿ ನೀಡುವ ಸಂದರ್ಭದಲ್ಲಿಯೂ ಅನ್ಯ ಸಿಬ್ಬಂದಿಗಳ ಸೇವಾ ಹಿರಿತನವನ್ನು ಬದಿಗೊತ್ತಿ ಪರಿಶಿಷ್ಟ ಜಾತಿ ರೋಸ್ಟರ್ ಬಿಂದುವಿನಲ್ಲಿ ಶೀಘ್ರಲಿಪಿಗಾರರಾಗಿ ಪದೋನ್ನತಿ ನೀಡಲಾಗಿದೆ ಎಂಬ ಆಪಾದನೆ ಕೇಳಿ ಬಂದಿತ್ತು.   ಸೇವಾ ಪುಸ್ತಕ ಮತ್ತು ಜೇಷ್ಠತಾ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಾಗಬೇಕಿತ್ತಾದರೂ, ನಂತರದ ದಿನಗಳಲ್ಲಿ ಸಾಮಾನ್ಯ ವರ್ಗದವರೆಂದು ಗುರುತಿಸಿ ಕೊಂಡಿರುವುದು ಹಲವು ಸಂದೇಹಗಳಿಗೆ ಕಾರಣವಾಗಿತ್ತು.

 

‘ಬಿ ಎ ಬಸವರಾಜು ಎಂಬುವರು ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗೆ ನೇಮಕಗೊಂಡಿರುತ್ತಾರೆ. ಅಲ್ಲದೆ ಶೀಘ್ರಲಿಪಿಗಾರರ ಹುದ್ದೆಗೆ ರೋಸ್ಟರ್ ಮುಖಾಂತರ ಪದನ್ನೋತಿಯನ್ನು ಪಡೆದಿರುತ್ತಾರೆ. ಆದರೆ ಪರಿಶಿಷ್ಟ ಜಾತಿಗೆ ಸೇರಿರುವುದಕ್ಕೆ ಸಂಬಂಧಿಸಿದ ದಾಖಲಾತಿಯನ್ನು ಸೇವಾ ಪುಸ್ತಕದಿಂದ ತೆಗೆದುಹಾಕಿರುವುದು ಕಂಡು ಬಂದಿರುತ್ತದೆ. ಈ ವಿಷಯವಾಗಿ ಹಲವು ಬಾರಿ ಮನವಿ ಜೊತೆಗೆ ದಾಖಲೆಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ,’ ಎಂದು ಹೊರಟ್ಟಿ ಅವರಿಗೆ ಶಾಂತ ಅವರು ಪತ್ರ ಬರೆದಿದ್ದರು.

 

 

ಕೆ ಎನ್‌ ಶಾಂತ ಅವರು ಹೊರಟ್ಟಿ ಅವರಿಗೆ ಬರೆದಿರುವ ಪತ್ರ

 

ಬಿ. ಎ. ಬಸವರಾಜು ಅವರ ನೇಮಕಾತಿ ಹಾಗೂ ಪದೋನ್ನತಿಯ ಬಗ್ಗೆ ವಿಧಾನಸಭೆ ಸಚಿವಾಲಯದಿಂದಲೂ ಮಾಹಿತಿ, ದಾಖಲೆಗಳನ್ನು ಪಡೆದಿದ್ದರೂ ಸಭಾಪತಿ ಹೊರಟ್ಟಿ ಅವರ ಗಮನಕ್ಕೆ ತರದೇ ಮುಚ್ಚಿಟ್ಟಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.

 

ಕರ್ನಾಟಕ ವಿಧಾನಮಂಡಲದ ಸಚಿವಾಲಯದ ಅಧಿಸೂಚನೆ ( ಎಡಿಎಂ-1/237/ಎಫ್ಪಿ/91-13.08-1991) ಅನ್ವಯ ಬಿ. ಎ. ಬಸವರಾಜು ಅವರು ಪರಿಶಿಷ್ಟ ಜಾತಿ ಮೀಸಲಾತಿ ಬಿಂದುವಿನಡಿಯಲ್ಲಿ ನೇಮಕಗೊಂಡಿರುತ್ತಾರೆ. ಅಧಿಕೃತ ಜ್ಞಾಪನ ಸಂಖ್ಯೆ (ಎಡಿಎಂ-1/237/ಎಫ್ಪಿಪಿ/91 ದಿನಾಂಕ 29-11-1991) ನೇಮಕಾತಿ ಷರತ್ತಿಗೆ ಸಂಬಂಧಿಸಿದಂತೆ ಪುಟ ಸಂಖ್ಯೆ 2 (ಬಿ) ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು ಎಂದು ತಿಳಿಸಲಾಗಿತ್ತು ಎಂಬುದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರು ಪರಿಷತ್ ಸಚಿವಾಲಯಕ್ಕೆ ಮಾಹಿತಿ ನೀಡಿದ್ದರು.

 

 

ನೇಮಕಾತಿ ಹೊಂದುವ ಸಂದರ್ಭದಲ್ಲಿ ಮೂಲ ಜಾತಿ ಪ್ರಮಾಣ ಕೊಡದಿದ್ದರೂ ಪರಿಶಿಷ್ಟ ಜಾತಿ ಬಿಂದುವಿನಡಿ ನೇಮಕಾತಿ ಮಾಡಿಕೊಂಡಿರುವುದು ಹಾಗೂ ಯಾವುದೇ ಪರಿಶೀಲನೆ ಮಾಡದೆ ಶೀಘ್ರಲಿಪಿಗಾರರಾಗಿ ಪದೋನ್ನತಿಯನ್ನೂ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

 

 

ಈ ಮಧ್ಯೆ ಬಿ ಎ ಬಸವರಾಜು ಅವರು ಈ ಎಲ್ಲಾ ಆರೋಪವನ್ನು ನಿರಾಕರಿಸಿದ್ದರು. ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದ ಅವರು ‘ಪರಿಶಿಷ್ಟ ಜಾತಿ ಬಿಂದುವಿಗೆ ಎದುರಾಗಿ ಮುಂಬಡ್ತಿ ನೀಡಲಾಗಿರುತ್ತದೆ. ಕಾರಣವೆಂದರೆ ಆ ವರ್ಗದ ಅರ್ಹ ಅಭ್ಯರ್ಥಿಯು ಲಭ್ಯವಿಲ್ಲದ ಕಾರಣ ಈ ಗೊಂದಲ ಉಂಟಾಗಿದೆ. ಶಾಂತ ಅವರು ದೂರಿನಲ್ಲಿ ಪ್ರಸ್ತಾಪಿಸಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ,’ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದರು. ಆದರೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ನೇಮಕಾತಿ ಪಡೆದಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂಬುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts