Thursday | May 21, 2026 |

ಕಾವೇರಿ ವಸತಿಗೃಹ ಆವರಣದಲ್ಲಿ ಕಾಮಗಾರಿ, ಡಿಸಿಎಂ ವಸತಿಗೃಹಕ್ಕೆ ಪೀಠೋಪಕರಣ; 3.10 ಕೋಟಿ ವೆಚ್ಚ

ಬೆಂಗಳೂರು; ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯ ರಿಪೇರಿ, ದುರಸ್ತಿ ಮತ್ತು ನವೀಕರಿಸಲು ಅಂದಾಜು  2.50 ಕೋಟಿ ರು. ಮೊತ್ತದಲ್ಲಿ ನವೀಕರಿಸಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ವಸತಿ ಗೃಹದ ಆವರಣವನ್ನೂ 2.65  ಕೋಟಿ ರು. ವೆಚ್ಚದಲ್ಲಿ ನವೀಕರಿಸಲು ಮುಂದಾಗಿದೆ.

 

ಅದೇ ರೀತಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರಿಗೆ ಕುಮಾರಕೃಪ ರಸ್ತೆಯಲ್ಲಿ ಹಂಚಿಕೆ ಮಾಡಿರುವ ವಸತಿ ಗೃಹಕ್ಕೆ ಅಗತ್ಯ ಪೀಠೋಪಕರಣ, ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 45.10 ಲಕ್ಷ ರು. ವೆಚ್ಚ ಮಾಡಲು ಅನುಮತಿ ನೀಡಿದೆ.

 

ಈ ಎರಡೂ ಕಾಮಗಾರಿಗಳನ್ನೂ ನಿರ್ವಹಿಸಲು ಲೋಕೋಪಯೋಗಿ ಇಲಾಖೆಗೆ 4(ಜಿ) ವಿನಾಯಿತಿಯನ್ನು ನೀಡಿ 2025ರ ಫೆ.10 ಮತ್ತು  ಜನವರಿ 29ರಂದು ಆರ್ಥಿಕ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

 

ಅನಗತ್ಯ ಖರ್ಚು ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಕಾವೇರಿ ವಸತಿಗೃಹದ ಆವರಣದಲ್ಲಿ 2.65 ಕೋಟಿ ರು ವೆಚ್ಚ ಮಾಡಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

 

ಈ ಎರಡೂ ಅಧಿಸೂಚನೆಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಸೌಧದಲ್ಲಿನ  ಮುಖ್ಯಮಂತ್ರಿ ಕೊಠಡಿ ನವೀಕರಣಕ್ಕೆ ಅಂದಾಜು 2.50 ಕೋಟಿ ಮತ್ತು ಉಪ ಮುಖ್ಯಮಂತ್ರಿ ವಸತಿಗೃಹದ ಗಾರ್ಡನ್‌ ಲೈಟ್ಸ್‌ ಮತ್ತಿತರ ದುರಸ್ತಿಗೆ 1.38 ಕೋಟಿ ರು.ಗಳನ್ನು ಈಚೆಗಷ್ಟೇ ವೆಚ್ಚವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾವೇರಿ ಮತ್ತು ಡಿಸಿಎಂ ವಸತಿ ಗೃಹಕ್ಕೆ ಪೀಠೋಪಕರಣ ಮತ್ತು ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 3.10 ಕೋಟಿ ರು ವೆಚ್ಚ ಮಾಡಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಸಿಎಂ ಕಾವೇರಿಯಲ್ಲಿ ನವೀಕರಣ

 

ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯ ಆವರಣದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು 265.20 ಲಕ್ಷ ರು ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆಯಡಿ 4(ಜಿ) ವಿನಾಯಿತಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿದೆ.

 

 

ಕಾವೇರಿ ವಸತಿ ಗೃಹದ ಆವರಣದಲ್ಲಿ ಶೌಚಾಲಯ, ಸ್ಟೋರ್‍‌ ರೂಂ, ಸ್ಟೋರೇಜ್‌ ರ್‍ಯಾಕ್ಸ್‌, ಅಡುಗೆ ಉಪಕರಣಗಳು, ಎಲೆಕ್ಟ್ರಿಕಲ್‌ ಕಾಮಗಾರಿ, ಏರ್ ಕಂಡೀಷನ್‌ ಅಳವಡಿಕೆ ಕಾಮಗಾರಿಗಳಿಗೆ ಒಟ್ಟಾರೆ 2.65 ಕೋಟಿ ರು ವೆಚ್ಚ ಮಾಡಲಿದೆ.

 

 

ಅದೇ ರೀತಿ ಕುಮಾರಕೃಪ ರಸ್ತೆಯಲ್ಲಿ ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆ ಮಾಡಿರುವ ವಸತಿಗೃಹಕ್ಕೆ ಅಗತ್ಯ ಪೀಠೋಪಕರಣ ಮತ್ತು ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ 45.10 ಲಕ್ಷ ರು. ವೆಚ್ಚ ಮಾಡಲು ಲೋಕೋಪಯೋಗಿ ಇಲಾಖೆಗೆ 4(ಜಿ) ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿದೆ.

 

 

ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಠಡಿ ನವೀಕರಿಸಲಾಗಿತ್ತು. ಆ ನಂತರ ಬಂದ ಮುಖ್ಯಮಂತ್ರಿಗಳ ಅವಧಿಯಲ್ಲಿ  ವಿಧಾನಸೌಧದಲ್ಲಿನ 323ನೇ ಸಂಖ್ಯೆಯ ಕೊಠಡಿಯನ್ನು ನವೀಕರಿಸಿರಲಿಲ್ಲ. ಬದಲಿಗೆ ಕೊಠಡಿಗೆ ಸುಣ್ಣ, ಬಣ್ಣ ಮತ್ತು ಪೀಠೋಪಕರಣಗಳಿಗೆ ಪಾಲಿಷ್‌ ಮಾಡಲಾಗುತ್ತಿತ್ತೇ ವಿನಃ ಇಡೀ ಕೊಠಡಿಯನ್ನು ಸಂಪೂರ್ಣವಾಗಿ ನವೀಕರಿಸಿರಲಿಲ್ಲ.

 

ಅಲ್ಲದೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೂ ಈ ಕೊಠಡಿಯು ನವೀಕೃತಗೊಂಡಿರಲಿಲ್ಲ. ಆದರೀಗ ಈ ಕೊಠಡಿ ನವೀಕರಿಸಲು ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರಿಗಳನ್ನು ಕರೆದು ಇಡೀ ಕೊಠಡಿಯನ್ನು ನವೀಕರಿಸಲು ಮೌಖಿಕವಾಗಿ ಸೂಚಿಸಿದ್ದರು.

 

ವಿಧಾನಸೌಧದಲ್ಲಿನ ಸಿಎಂ ಕೊಠಡಿ ನವೀಕರಣಕ್ಕೆ ಮೌಖಿಕ ಸೂಚನೆ; ಅಂದಾಜು 2.50 ಕೋಟಿ ವೆಚ್ಚ?

ಮುಖ್ಯಮಂತ್ರಿಗಳ ಕೊಠಡಿಯಲ್ಲಿನ ಒಳಾಂಗಣವನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗುತ್ತಿದೆ. ಕೆಫೆಟೇರಿಯಾ, ಶೌಚಾಲಯ, ಕೊಠಡಿಯ ನೆಲ, ಗೋಡೆಗಳ ವಿನ್ಯಾಸ, ವಾಲ್‌ ಪೇಟಿಂಗ್‌, ವಿರಾಮ ಕೊಠಡಿ, ಅವರ ಕೊಠಡಿ, ಸಂದರ್ಶಕರ ಕೊಠಡಿಯನ್ನೂ ನವೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

 

ಮುಖ್ಯಮಂತ್ರಿ ಕೊಠಡಿ ನವೀಕರಣ ಸಂಬಂಧ ಮುಖ್ಯಮಂತ್ರಿ ಸಚಿವಾಲಯದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ. ಇದಕ್ಕೂ ಮುನ್ನವೇ   ಕಾಮಗಾರಿಗಳು ಆರಂಭವಾಗಿದ್ದವು. ಇದೀಗ ಈ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ಗೊತ್ತಾಗಿದೆ.

 

ಡಿಸಿಎಂ ವಸತಿಗೃಹದ ಗಾರ್ಡ್‌ನ್‌ ಲೈಟ್ಸ್‌ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಸರ್ಕಾರಿ ನಿವಾಸವನ್ನು ದುರಸ್ತಿ ಹೆಸರಿನಲ್ಲಿ ಈಗಾಗಲೇ  1.38 ಕೋಟಿ ರು. ವೆಚ್ಚದಲ್ಲಿ ಅಲಂಕರಿಸಲಾಗಿದೆ.

 

ಡಿಸಿಎಂ ವಸತಿಗೃಹದ ಗಾರ್ಡ್‌ನ್‌ ಲೈಟ್ಸ್‌ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ

 

ಉಪ ಮುಖ್ಯಮಂತ್ರಿಯವರಿಗೆ ಹಂಚಿಕೆ ಮಾಡಲಾಗಿರುವ ವಸತಿಗೃಹ ಕೆ ಕೆ ದಕ್ಷಿಣ -1ರ ದುರಸ್ತಿ ಕಾಮಗಾರಿಗಳನ್ನು ಒಟ್ಟಾರೆ 1.38 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ದೊರೆತಿತ್ತು.

 

 

ಏನೆಲ್ಲಾ ದುರಸ್ತಿ ಆಗಿತ್ತು?

 

ಕಿಚನ್‌ ಕ್ಯಾಬಿನೆಟ್‌, ವಾಲ್‌ ಪೆನಲಿಂಗ್‌, ಪೈಟಿಂಗ್‌, ಬಾಗಿಲು, ಕಿಟಕಿ, ಗ್ರಿಲ್‌, ಕರ್ಟನ್‌ ರಾಡ್‌, ಕಾರ್ಟ್‌ ಕ್ಲಾತ್‌, ಪೀಠೋಪಕರಣಗಳಿಗೆ 98 ಲಕ್ಷ ರು., ಎಲ್‌ಇಡಿ ಫಿಟ್ಟಿಂಗ್ಸ್‌, ಸ್ಟ್ರೀಟ್‌ ಲೈಟ್ಸ್‌, ಲಾನ್‌ ಲೈಟ್ಸ್‌, ಗಾರ್ಡ್‌ನ್‌ ಲೈಟ್ಸ್‌, ವಾಟರ್‌ ಹೀಟರ್ಸ್‌, ಸೀಲಿಂಗ್‌ ಫ್ಯಾನ್‌, ಇನ್ನಿತರೆ ಎಲೆಕ್ಟ್ರಿಕ್‌  ಉಪಕರಣಗಳು ಮತ್ತು ದುರಸ್ತಿಗಳಿಗೆ 40 ಲಕ್ಷ ರು ಸೇರಿ ಒಟ್ಟಾರೆ 1.38 ಕೋಟಿ ರು. ವೆಚ್ಚವಾಗಲಿದೆ.

 

 

ಕುಮಾರಕೃಪ ನಿವಾಸದಿಂದ ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೂ ಪೀಠೋಪಕರಣಗಳ ಪೂರೈಸಲು 3 ಕೋಟಿ ರು. ಖರ್ಚಾಗಿತ್ತು.

 

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯುವ ಹೆಸರಿನಲ್ಲಿ 3.80 ಕೋಟಿ ರು ಬಿಡುಗಡೆ ಮಾಡಲಾಗಿತ್ತು. ಸಚಿವರ ವಸತಿ ಗೃಹಗಳಿಗೆ ಗೃಹಪಯೋಗಿ ವಸ್ತು ಮತ್ತು ಪೀಠೋಪಕರಣಗಳ ಪೂರೈಕೆಗಾಗಿ 3.40 ಕೋಟಿ ರು. ಬಿಡುಗಡೆಯಾಗಿತ್ತು.

Hot this week

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...
Please Scan to make Your Contribution

Topics

ಬೀಜೋತ್ಪನ್ನ ಕಿಟ್‌ಗಳ ವಿತರಣೆಯಲ್ಲಿ ಅಕ್ರಮ; ಎಸ್‌ಸಿ, ಎಸ್‌ಟಿ ರೈತರಲ್ಲದ ಸಾಮಾನ್ಯ ರೈತರಿಗೆ ಹಂಚಿಕೆ, ಅಧಿಕಾರ ದುರುಪಯೋಗ, ಕಾಯ್ದೆ ಉಲ್ಲಂಘನೆ

ಬೆಂಗಳೂರು;  ಬೀಜೋತ್ಪನ್ನ ಕಿಟ್‌ಗಳ ವಿತರಣೆಗೆ ಸಂಬಂಧಿಸಿದಂತೆ  ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ...

ಸರ್ಕಾರದ 3ನೇ ವರ್ಷದ ಸಾಧನೆ ಸಮಾವೇಶ; 12 ಕೋಟಿ ಕೋರಿದ ಇಲಾಖೆ, ಭೂ ಸ್ವಾಧೀನ ಠೇವಣಿ ಬಡ್ಡಿ ಹಣಕ್ಕೆ ಕೈ ಹಾಕಿದ ಸರ್ಕಾರ?

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 3ನೇ ವರ್ಷವನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ...

120 ಎಕರೆ ಗೋಮಾಳ ಒತ್ತುವರಿ; ದಿ ಫೈಲ್ ವರದಿ ಬೆನ್ನಲ್ಲೇ ತನಿಖಾ ಸಮಿತಿ ರಚನೆ, ಆದೇಶ ಹೊರಬಿದ್ದ ಐದೇ ದಿನದಲ್ಲಿ ಸಮಿತಿ ಅಧ್ಯಕ್ಷರ ವರ್ಗಾಯಿಸಿದ ಸರ್ಕಾರ

ಬೆಂಗಳೂರು;  ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿರುವ...

Related Articles

Popular Categories

error: Content is protected !!