ಬಿ. ಕಲ್ಲೇಶ್‌ ಅಮಾನತು ತೆರವು!: ಇ.ಡಿ ವಿರುದ್ಧವೇ ದೂರು ದಾಖಲಿಸಿದ್ದ ಅಧಿಕಾರಿಗೆ ಆಯಕಟ್ಟಿನ ಹುದ್ದೆ

ಬೆಂಗಳೂರು;  ವಾಲ್ಮೀಕಿ ಅಭಿವೃದ್ಧಿ ನಿಗಮದ  ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಸರ್ಕಾರದ ಬೆನ್ನಿಗೆ ನಿಂತಿದ್ದ ಬಿ ಕಲ್ಲೇಶ್‌ ಅವರ ಅಮಾನತನ್ನು  ಅತ್ಯಂತ  ಕ್ಷಿಪ್ರಗತಿಯಲ್ಲಿ ತೆರವುಗೊಳಿಸಿ ಮತ್ತೊಂದು ಮಹತ್ವದ ಹುದ್ದೆ ದಯಪಾಲಿಸಿದೆ!

 

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿದ್ದ ಬಿ ಕಲ್ಲೇಶ್‌ ಅವರನ್ನು  42.97 ಕೋಟಿ ರು. ಅನುದಾನದ ಬಳಕೆ ಪ್ರಮಾಣ ಪತ್ರ ಸಲ್ಲಿಸದೇ ಕರ್ತವ್ಯಲೋಪ  ಆರೋಪದಡಿಯಲ್ಲಿ 2024ರ ಜೂನ್‌ 22ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಆದರೀಗ ಕೇವಲ ಮೂರೇ ಮೂರು ತಿಂಗಳಲ್ಲಿ ಅವರ ಅಮಾನತು ತೆರವುಗೊಳಿಸಿ ಮತ್ತೊಂದು ಆಯಕಟ್ಟಿನ ಹುದ್ದೆಯನ್ನು ಕರುಣಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

 

ವಿಶೇಷವೆಂದರೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸಚಿವರಾಗಿದ್ದ ಬಿ ನಾಗೇಂದ್ರ ಅವರನ್ನು ಮೊದಲ ಆರೋಪಿಯನ್ನಾಗಿಸಿ ಚಾರ್ಜ್‌ಶೀಟ್‌ ಸಲ್ಲಿಸಿರುವ ಬೆನ್ನಲ್ಲೇ ಇದೀಗ ಇದೇ ನಿಗಮದಲ್ಲಿ ಪದನಿಮಿತ್ತ ನಿರ್ದೇಶಕರಾಗಿದ್ದ ಬಿ ಕಲ್ಲೇಶ್‌ ಅವರ ಅಮಾನತನ್ನು ತೆರವುಗೊಳಿಸಿರುವುದು  ಮುನ್ನೆಲೆಗೆ ಬಂದಿದೆ.

 

2024ರ ಜೂನ್‌ 22ರಂದು ಅಮಾನತಾಗಿದ್ದ ಬಿ ಕಲ್ಲೇಶ್‌ ಅವರು 2024ರ ಸೆ.9ರಂದು ಇಲಾಖೆಗೆ ಮನವಿ ಸಲ್ಲಿಸಿದ್ದರು. ಅಮಾನತು ತೆರವುಗೊಳಿಸಿ ಕರ್ನಾಟಕ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕೊಪ್ಪಳದ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಲು ಕೋರಿದ್ದರು. ಈ ಕೋರಿಕೆಯನ್ನೂ ಸಹ ಕಾಂಗ್ರೆಸ್‌ ಸರ್ಕಾರವು ಪುರಸ್ಕರಿಸಿರುವುದು ಗೊತ್ತಾಗಿದೆ.

 

ಅಮಾನತು ತೆರವುಗೊಳಿಸುವ ಪ್ರಸ್ತಾವನೆಯಲ್ಲೇನಿದೆ?

 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹಿಂದೆ ನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ ಕಲ್ಲೇಶ್‌ ಅವರ ಕಾರ್ಯವೈಖರಿಯಿಂದಾಗಿ ಸಾರ್ವಜನಿಕರ ಹಣ ಸಮರ್ಪಕವಾಗಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆಯಾಗಿರಲಿಲ್ಲ. ಮತ್ತು ವಸತಿ, ಆಶ್ರಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ. 75ಕ್ಕಿಂತ ಕಡಿಮೆ ಇತ್ತು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯ ಕ್ರಮ ವಹಿಸಿರಲಿಲ್ಲ. ಹಾಗೂ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಲಾಗಿತ್ತು.

 

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)ರ (ಡಿ) ಮತ್ತು 10(3) ಅನ್ವಯ ಅಮಾನತುಗೊಳಿಸಿತ್ತು. ಅವರ ಸೇವೆಯನ್ನು ಮಾತೃ ಇಲಾಖೆಗೆ ಹಿಂದಿರುಗಿಸಿ 2024ರ ಜೂನ್‌ 22ರಂದು ಆದೇಶ ಹೊರಡಿಸಿತ್ತು.

 

ಬಿ ಕಲ್ಲೇಶ್‌ ಅವರು 2024ರ ಸೆ.9ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರಲ್ಲಿ ಅಮಾನತು ತೆರವುಗೊಳಿಸಿ ಕೊಪ್ಪಳದ ಕರ್ನಾಟಕ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ನಿಯೋಜಿಸಲು ಕೋರಿದ್ದಾರೆ.

 

‘ಈ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ಅಮಾನತಿನಲ್ಲಿರುವ ಬಿ ಕಲ್ಲೇಶ್‌ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(5)(ಸಿ) ಅನ್ವಯ ಇವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಇವರ ಅಮಾನತನ್ನು ತೆರವುಗೊಳಿಸಿ ಆದೇಶಿಸಿದೆ,’ ಎಂದು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್‌ ನರಸಿಂಹಮೂರ್ತಿ ಅವರು ಆದೇಶ ( ಸರ್ಕಾರದ ಆದೇಶ ಸಂಖ್ಯೆ; ಸಕಇ 242 ಪಕಸೇ 2024 (ಭಾಗ) ಬೆಂಗಳೂರು) ಹೊರಡಿಸಿರುವುದು ಗೊತ್ತಾಗಿದೆ.

 

 

 

ಅಮಾನತು ತೆರವುಗೊಳಿಸುವ ಕುರಿತು ಸಮಾಜ ಕಲ್ಯಾಣ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಮತ್ತೊಂದು ವಿಶೇಷವೆಂದರೇ   ಬಿ ಕಲ್ಲೇಶ್‌ ಅವರ ಅಮಾನತು ಆದೇಶದ ಕಡತವನ್ನೇ ಒದಗಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು  ನಿರಾಕರಿಸಿತ್ತು.  ಈ ಆದೇಶಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ 2024ರ ಜುಲೈ 1ರಂದು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಅರ್ಜಿ ಸಲ್ಲಿಸಿತ್ತು.

 

ಈ ಅರ್ಜಿಯನ್ನು ಒಂದು ತಿಂಗಳವರೆಗೂ ನಿರ್ದೇಶನಾಲಯ ಮತ್ತು ಇಲಾಖೆಯು  ತನ್ನ ಬಳಿಯೇ ಇಟ್ಟುಕೊಂಡಿತ್ತು. ಇದೀಗ 2024ರ ಆಗಸ್ಟ್‌ 3ರಂದು ಕಡತ ಒದಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದಕ್ಕೆ ಮಾಹಿತಿ ಹಕ್ಕು ಅಧಿನಿಯಮ ಕಲಂ 8(ಹೆಚ್‌) ನ್ನು ಮುಂದಿರಿಸಿತ್ತು.

 

‘ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ತಗಿರಿಗೆ ಅಥವಾ ಪ್ರಾಸಿಕ್ಯೂಷನ್‌ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂತಹ ಮಾಹಿತಿ’ಯನ್ನು ಒದಗಿಸಲು ಮಾಹಿತಿ ಹಕ್ಕು ಅಧಿನಿಯಮದ ಸೆಕ್ಷನ್‌ 8(ಹೆಚ್‌)ರಡಿ ನಿರ್ಬಂಧವಿದೆ. ಆದರೆ ಕಲ್ಲೇಶ್‌ ಬಿ ಅವರನ್ನು ಅಮಾನತು ಮಾಡಿರುವ ಆದೇಶಕ್ಕೂ ಈ ಕಲಂಗೂ ಸಂಬಂಧವೇ ಇಲ್ಲ.

 

ಆದರೂ ಸರ್ಕಾರವು ಸೆಕ್ಷನ್‌ 8(ಹೆಚ್‌)ನ್ನು ಮುಂದಿರಿಸಿ  42.97 ಕೋಟಿ ರು. ಮೊತ್ತ ಅನುದಾನ ಬಳಕೆ ಪ್ರಮಾಣ ಪತ್ರದ ಸಂಬಂಧದ ಕಡತವನ್ನು ಒದಗಿಸಲು ನಿರಾಕರಿಸಿದ್ದ  ಸರ್ಕಾರದ  ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

42.97 ಕೋಟಿ ರು ಬಳಕೆ ಪ್ರಮಾಣಪತ್ರ; ಕಲ್ಲೇಶ್‌ ಅಮಾನತು ಆದೇಶ ಕಡತ ಬಹಿರಂಗಪಡಿಸದ ಸರ್ಕಾರ

 

ಕೇಂದ್ರ ಸರ್ಕಾರವು ರಾಜ್ಯಕ್ಕೆ ಕಳೆದೆರಡು ವರ್ಷಗಳಲ್ಲಿ ಬಿಡುಗಡೆ ಮಾಡಿದ್ದ ಒಟ್ಟು ಅನುದಾನದ ಪೈಕಿ 42.97 ಕೋಟಿ ರು. ಮೊತ್ತ ಅನುದಾನ ಬಳಕೆ ಮಾಡಿರುವ ಪ್ರಮಾಣ ಪತ್ರಗಳನ್ನೇ ಸಲ್ಲಿಸಿರಲಿಲ್ಲ.   ಇದರಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 21.59 ಕೋಟಿ ರು. ಪೈಕಿ 5.23 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ.  ಹೀಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಬಿ ಕಲ್ಲೇಶ್‌ ಅವರನ್ನು ಸೇವೆಯಿಂದಲೇ ಅಮಾನತುಗೊಳಿಸಿತ್ತು.

 

ಪಿವಿಟಿಜಿ ಯೋಜನೆಯಡಿ ಕೇಂದ್ರ ಸರ್ಕಾರವು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 2021-22 ಹಾಗೂ 2022-23ನೇ ಸಾಲಿನಲ್ಲಿ ರಾಜ್ಯಕ್ಕೆ 21.59 ಕೋಟಿ ರು ಅನುದಾನ ಬಿಡುಗಡೆಗೊಳಿಸಿತ್ತು. ಈ ಪೈಕಿ 5.23 ಕೋಟಿ ರು.ಗ ಅನುದಾನಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಕೆಯಾಗಿರಲಿಲ್ಲ ಎಂಬುದು ಆದೇಶದಲ್ಲಿ ವಿವರಿಸಿತ್ತು.

 

ಹಾಗೆಯೇ ಎಸ್‌ಎನ್‌ಎ ಖಾತೆಯಲ್ಲಿ ಬಾಕಿ ಇರುವ 2.47 ಕೋಟಿ ರು ಮತ್ತು ಎಸ್‌ಎನ್‌ಎ ಮತ್ತೊಂದು ಖಾತೆಯಲ್ಲಿನ ಬಾಕಿ ಇರುವ 60.83 ಲಕ್ಷ ರು.ಗಳ ವರ್ಗಾವಣೆಗೆ ಬಾಕಿ ಇತ್ತು. ಈ ಬಗ್ಗೆ ಕೇಂದ್ರ ಸರ್ಕಾರದಿಂದ 08 ನೆನಪೋಲೆಗಳು ಸ್ವೀಕೃತಗೊಂಡಿದ್ದರೂ ನಿಗದಿತ ಅವಧಿಯಲ್ಲಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸದ ಬಿ ಕಲ್ಲೇಶ್‌ ಅವರು ಕರ್ತವ್ಯಲೋಪ ಎಸಗಿದ್ದರು ಎಂಬುದು ಇಲಾಖೆಯ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿತ್ತು.

 

ಈ ಸಂಬಂಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ ಕಲ್ಲೇಶ್‌ ಅವರಿಗೆ ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಿತ್ತು. ಅವರು ಲಿಖಿತ ಸಮಜಾಯಿಷಿಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸಮರ್ಥನೀಯ ಹೇಳಿಕೆ ಸಲ್ಲಿಸಿರಲಿಲ್ಲ.

 

2022-23ನೇ ಸಾಲಿನಲ್ಲಿ ರಾಜ್ಯಕ್ಕೆ ಬಿಡುಗಡೆಗೊಳಿಸಿದ್ದ ಒಟ್ಟು 42.97 ಕೋಟಿ ರು ಅನುದಾನಕ್ಕೆ ಬಳಕೆ ಪ್ರಮಾಣ ಪತ್ರವನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಹಣಕಾಸು ಪ್ರಗತಿ ವರದಿಯನ್ನೂ ಸಲ್ಲಿಸಿರಲಿಲ್ಲ. ಇದಕ್ಕೆ ರಾಜ್ಯ ಸರ್ಕಾರವೇ ಜವಾಬ್ದಾರಿ ಎಂದು 2024ರ ಮೇ 6ರಂದು ಪತ್ರ ಬರೆದಿತ್ತು .

 

ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಹಲವಾರು ಸಭೆಗಳು ನಡೆದಿದ್ದವು. ಆದರೂ ಬಿ ಕಲ್ಲೇಶ್‌ ಅವರು ಈ ಸಂಬಂಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬಳಕೆ ಪ್ರಮಾಣ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ಕರ್ತವ್ಯ ಲೋಪ ಎಸಗಿದ್ದರು ಎಂಬುದು ತಿಳಿದು ಬಂದಿದೆ.

 

ಅಲ್ಲದೇ ವಸತಿ ನಿಲಯಗಳ ಪರಿವೀಕ್ಷಣೆ ಮಾಡಿರಲಿಲ್ಲ. ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳಲ್ಲಿ ಬೇಡಿಕೆ ಪಡೆಯದೇ ಸಾಮಗ್ರಿಗಳನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಕೇಂದ್ರೀಕೃತ ಟೆಂಡರ್ ಮುಖಾಂತರ ಖರೀದಿಸಿ ವಸತಿ ನಿಲಯಗಳಿಗೆ ಸರಬರಾಜು ಮಾಡಿದ್ದರು.

 

ಸಾರ್ವಜನಿಕರ ಹಣ ಸಮರ್ಪಕವಾಗಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆಯಾಗಿರಲಿಲ್ಲ. ಮತ್ತು ವಸತಿ, ಆಶ್ರಮ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ.75ಕ್ಕಿಂತ ಕಡಿಮೆ ಇದ್ದು ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಅಗತ್ಯ ಕ್ರಮವಹಿಸದೇ ಇರುವುದು ಕಂಡು ಬಂದಿತ್ತು.

 

 

ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತ ಖಾತೆಗಳಿಗೆ 94.73 ಕೋಟಿ ವರ್ಗಾವಣೆ; ನಿಗಮವನ್ನೇ ಕತ್ತಲಲ್ಲಿಟ್ಟಿದ್ದ ಬ್ಯಾಂಕ್‌!

ನಿಗಮದ ಲೆಕ್ಕ ಅಧೀಕ್ಷಕ ಚಂದ್ರಶೇಖರ್‍‌ ಆತ್ಮಹತ್ಯೆ ಪ್ರಕರಣವು ರಾಜಕೀಯಕರಣಗೊಳ್ಳುತ್ತಿದ್ದಂತೆ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್‍‌ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ಬ್ಯಾಂಕ್‌ನ ಮೋಸದ ಚಟುವಟಿಕೆಗಳನ್ನು ವಿವರಿಸಿದ್ದರು.

the fil favicon

SUPPORT THE FILE

Latest News

Related Posts