960.33 ಎಕರೆ ಒತ್ತುವರಿ ತೆರವಿಗೆ ಬಾಕಿ; 5,507 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರಿಸಿದ ನ್ಯಾಯಾಲಯ

ಬೆಂಗಳೂರು; ರಾಜ್ಯದ ವಿವಿಧೆಡೆ ಒತ್ತುವರಿಯಾಗಿರುವ  ಸರ್ಕಾರಿ ಜಮೀನುಗಳನ್ನು ಒತ್ತುವರಿದಾರರಿಂದ ತೆರವುಗೊಳಿಸಲು ಇನ್ನೂ 960.33 ಎಕರೆ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

 

ಬೆಂಗಳೂರು ನಗರ ಜಿಲ್ಲೆ, ರಾಮನಗರ, ಹೊಸಕೋಟೆ ಮತ್ತು ಹೊರಭಾಗಗಳಲ್ಲಿ ಸಾವಿರಾರು ಕೋಟಿ ರು. ಬೆಲೆ ಬಾಳುವ ಕಂದಾಯ ಭೂಮಿ ಕಬಳಿಕೆ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯು ಇನ್ನೂ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. ಈ ನಡುವೆಯೇ ಇನ್ನೂ 960.33 ಎಕರೆ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇರುವ ಅಂಕಿ ಅಂಶಗಳು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳು ಮತ್ತು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇರುವ ಪ್ರಕರಣಗಳ ಕುರಿತು ಕಂದಾಯ ಇಲಾಖೆಗೆ ನ್ಯಾಯಾಲಯದ ರಿಜಿಸ್ಟ್ರಾರ್‌ ಅವರು ಮಾಹಿತಿ ಒದಗಿಸಿದ್ದಾರೆ. 2023ರ ನವೆಂಬರ್‌ 4ರಂದು ಒದಗಿಸಿರುವ ಮಾಹಿತಿ ಮತ್ತು ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು ಆರಂಭವಾದ ದಿನದಿಂದ ಇದುವರೆಗೂ 21,712 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16,205 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನೂ 5,507 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ.

 

ಒತ್ತುವರಿಯಾಗಿರುವ ಜಮೀನುಗಳ ಪೈಕಿ 3,056.14 ಎಕರೆ ಜಮೀನನ್ನು ತೆರವುಗೊಳಿಸಲು ಆದೇಶಿಸಿದೆ. ಈ ಪೈಕಿ 2,095.21 ಎಕರೆ ಜಮೀನನ್ನು ತೆರವುಗೊಳಿಸಿದೆ. ಇನ್ನೂ 960.33 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇದೆ. ಇದುವರೆಗೂ ಕೇವಲ 75 ಜನರಿಗೆ ಒಂದು ವರ್ಷದಂತೆ ಶಿಕ್ಷೆ ಮತ್ತು ದಂಡ ವಿಧಿಸಿರುವುದು ರಿಜಿಸ್ಟ್ರಾರ್‌ ಅವರ ಪತ್ರದಿಂದ ತಿಳಿದು ಬಂದಿದೆ.

 

ನ್ಯಾಯಾಲಯದಲ್ಲಿ  2016ರಲ್ಲಿ 396, 2017ರಲ್ಲಿ 2,745, 2018ರಲ್ಲಿ 1998, 2019ರಲ್ಲಿ 2,000, 2020ರಲ್ಲಿ 1,065, 2021ರಲ್ಲಿ 12,654, 2022ರಲ್ಲಿ 466, 2023ರಲ್ಲಿ 388 ಪ್ರಕರಣಗಳು ಸೇರಿ  2023 ಅಕ್ಟೋಬರ್‌ರವರೆಗೆ 21,712 ಪ್ರಕರಣಗಳು ದಾಖಲಾಗಿದ್ದವು.

 

ನ್ಯಾಯಾಂಗಣ 1ರಲ್ಲಿ ಒಟ್ಟಾರೆ 7,868, ನ್ಯಾಯಾಂಗಣ 2ರಲ್ಲಿ  3,335 ಸೇರಿ ಒಟ್ಟಾರೆ 16,205 ಪ್ರಕರಣಗಳು ಇತ್ಯರ್ಥಗೊಂಡಿವೆ. 2016ರಿಂದ 2023ರವರೆಗೆ ಇನ್ನೂ 5,507 ಪ್ರಕರಣಗಳು ನ್ಯಾಯಾಲಯದಲ್ಲಿ ಉಳಿದಿರುವುದು ಅಂಕಿ ಅಂಶದಿಂದ ಗೊತ್ತಾಗಿದೆ.

 

ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಾಂಗಣ 1ರಲ್ಲಿ ಸ್ವ ಪ್ರೇರಣೆಯಿಂದ 183, ನ್ಯಾಯಾಂಗಣ 2ರಲ್ಲಿ 63 ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

 

ಭೂ ಕಬಳಿಕೆ ಪ್ರಕರಣಗಳನ್ನು  ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು 21 ವರ್ಷಗಳ ಹಿಂದೆ ಸರ್ಕಾರವು ನೀಡಿದ್ದ ಭರವಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಆದರೂ ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನು ಮುಕ್ತಾಯಗೊಳಿಸಿತ್ತು.

 

ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಸಂಬಂಧ ವಿ ಸೋಮಣ್ಣ, ಆರಗ ಜ್ಞಾನೇಂದ್ರ, ಎಂ ಟಿ ಬಿ ನಾಗರಾಜ್‌ ಮತ್ತು ಆರ್‌ ರೋಶನ್‌ ಬೇಗ್‌ ಅವರು 21 ವರ್ಷಗಳ ಹಿಂದೆ (1998, 2002, 2003 ಮತ್ತು 2005ರಲ್ಲಿ ) ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು.

 

ಈ ಕುರಿತು ಸರ್ಕಾರಿ ಭರವಸೆಗಳ ಸಮಿತಿಯು ಅಂದಿನಿಂದಲೂ ಕಾಯ್ದಿರಿಸುತ್ತಿತ್ತು. ಆದರೀಗ ಈ ಎಲ್ಲಾ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ನೀಡಿರುವ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ಆಧರಿಸಿ ಉಡುಪಿ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿರುವ ಸರ್ಕಾರಿ ಭರವಸೆಗಳ ಸಮಿತಿಯು ಈ ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿದೆ. ಈ ಕುರಿತು 2022ರ ಮಾರ್ಚ್‌ 21ರಂದು ನಡೆದ ಅಧಿವೇಶನದಲ್ಲಿ ಸರ್ಕಾರಿ ಭರವಸೆಗಳ ಸಮಿತಿಯ ಹನ್ನೆರಡನೇ ವರದಿಯನ್ನು ಮಂಡಿಸಿತ್ತು.

 

ಆದರೆ ವಾಸ್ತವದಲ್ಲಿ ಕಂದಾಯ ಭೂಮಿ ಕಬಳಿಕೆ ಪ್ರಕರಣಗಳ ಕುರಿತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನೇನೂ ಕೈಗೊಂಡಿಲ್ಲ. ಅಲ್ಲದೆ ಕಬಳಿಕೆ ಅಗಿರುವ ಭೂಮಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರದ ವಶಕ್ಕೆ ಪಡೆದಿಲ್ಲ. ಆದರೂ ಅಧಿಕಾರಿಗಳು ನೀಡಿದ್ದ ಲಿಖಿತ ವಿವರಣೆಯನ್ನೇ ಆಧಾರವಾಗಿಟ್ಟುಕೊಂಡು ಎಲ್ಲಾ ಭರವಸೆಗಳನ್ನೂ ಮುಕ್ತಾಯಗೊಳಿಸಿರುವುದು ಅಚ್ಚರಿ ಮೂಡಿಸಿತ್ತು.

 

ಬೆಂಗಳೂರು ನಗರದ ಸುತ್ತಮುತ್ತ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಜಮೀನನ್ನು ಅನಧಿಕೃತವಾಗಿ ಕಬಳಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಇದ್ದ 1,22,918 ಎಕರೆ ಸರ್ಕಾರಿ ಜಮೀನಿನ ಪೈಕಿ 33, 877 ಎಕರೆ ಜಮೀನು ಒತ್ತುವರಿಯಾಗಿತ್ತು. ಈ ಕುರಿತು ಎ ಟಿ ರಾಮಸ್ವಾಮಿ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ವರದಿ ನೀಡಿತ್ತು.

 

 

ವರದಿ ನೀಡಿದ ನಂತರ ಒತ್ತುವರಿ ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದ ಸರ್ಕಾರವು 2021ರ ಜೂನ್‌ ಅಂತ್ಯಕ್ಕೆ 16, 193.25 ಎಕರೆ ಜಮೀನನಷ್ಟೇ ಒತ್ತುವರಿಯಿಂದ ತೆರವುಗೊಳಿಸಿದೆ. ಇನ್ನೂ 17, 684 ಎಕರೆಯನ್ನು ಒತ್ತುವರಿಯಿಂದ ತೆರವುಗೊಳಿಸಲು ಬಾಕಿ ಇದೆ ಎಂಬುದು ಭರವಸೆ ಸಮಿತಿಯು ನೀಡಿರುವ 12ನೇ ವರದಿಯಿಂದ ತಿಳಿದು ಬಂದಿದೆ.

 

ಸರ್ಕಾರಿ ಜಮೀನುಗಳ ತೆರವಿಗಾಗಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ರಚಿಸಿದೆ. ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಲನ್ನು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಯೇ ವಿನಃ ಭೂ ಕಬಳಿಕೆ ಅವಧಿಯಲ್ಲಿ ಕರ್ತವ್ಯಲೋಪವೆಸಗಿದ್ದ ಐಎಎಸ್‌, ಕೆಎಎಸ್‌ ಸೇರಿದಂತೆ ಇನ್ನಿತರೆ ವೃಂದದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ ಭರವಸೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಶಾಸಕ ಕೆ ರಘುಪತಿ ಭಟ್‌ ಅಧ್ಯಕ್ಷತೆಯ ಸರ್ಕಾರಿ ಭರವಸೆಗಳ ಸಮಿತಿಯು ಹಿಂದಿನ ಭರವಸೆಗಳನ್ನು ಮುಕ್ತಾಯಗೊಳಿಸಿದೆ.

 

 

‘ಖಾಸಗಿ ಬಡಾವಣೆ ಮಾಡಲು ಭೂ ಒತ್ತುವರಿಯಾಗಿರುವುದು ಅಥವಾ ಅನಧಿಕೃತ ಮಳಿಗೆ ತೆರೆಯಲಾಗಿದ್ದರೆ ಅಂತಹವುಗಳನ್ನು ನಿರ್ದಾಕ್ಷ್ಯಿಣ್ಯವಾಗಿ ತೆರವು ಮಾಡಲಾಗುವುದು. ಶೇ. 50ರಷ್ಟು ಅಕ್ರಮ ಭೂ ಒತ್ತುವರಿ ತೆರವು ಮಾಡಲಾಗಿದೆಯೆಂದು ಇಲಾಖಾಧಿಕಾರಿಗಳು ಸಮಿತಿಗೆ ಲಿಖಿತ ಮತ್ತು ಮೌಖಿಕವಾಗಿ ತಿಳಿಸಿದ್ದನ್ನು ಸಮಿತಿಯು ಚರ್ಚಿಸಿದೆ. ಬಾಕಿ ಇರುವ ಅಕ್ರಮ ಭೂ ಒತ್ತುವರಿಯನ್ನು ಕಾಲಮಿತಿಯೊಳಗೆ ತೆರವುಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿ ಈ ಎಲ್ಲಾ ಭರವಸೆಗಳನ್ನು 2021ರ ಸೆ.9ರ 2ರಂದು ಮುಕ್ತಾಯಗೊಳಿಸಿತು,’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭೂ ಕಬಳಿಕೆ ಪ್ರಕರಣಗಳಿಗೆ ಸಿಗದ ತಾರ್ಕಿಕ ಅಂತ್ಯ; ಸರ್ಕಾರ ನೀಡಿದ್ದ ಭರವಸೆಗಳನ್ನೇ ಮುಕ್ತಾಯಗೊಳಿಸಿದ ಸಮಿತಿ

ಮೂಲ ದಾಖಲೆಗಳಿಲ್ಲದೆಯೇ ಜೆರಾಕ್ಸ್‌ ಪ್ರತಿ ಆಧಾರದ ಮೇಲೆ ಹಕ್ಕು ದಾಖಲೆ ಮಾಡಿದ್ದ ಪ್ರಕರಣಗಳನ್ನು ಹೊರಗೆಳೆದಿದ್ದ ಆರ್‌ ಅಶೋಕ್‌, ನಕಲಿ ದಾಖಲೆಗಳ ಆಧರಿಸಿಯೇ  ಜಾಲ ಹೋಬಳಿಯ 15 ಎಕರೆ ಜಮೀನು ಪರಭಾರೆ ಆಗಿದ್ದನ್ನು ಬಯಲು ಮಾಡಿದ್ದರು.

the fil favicon

SUPPORT THE FILE

Latest News

Related Posts