ಕಡತ ಹೊತ್ತೊಯ್ದ ಪ್ರಕರಣ; ರಾಗ ಬದಲಾಯಿಸಿದ ಪೌರಾಯುಕ್ತರು, ಮೌನಕ್ಕೆ ಜಾರಿದ ಜಿಲ್ಲಾಧಿಕಾರಿ

ಬೆಂಗಳೂರು;  ಹೊಸಪೇಟೆ ನಗರಸಭೆಯ ಕೊಠಡಿಗಳಲ್ಲಿದ್ದ  ಡಿಮ್ಯಾಂಡ್‌ ರಿಜಿಸ್ಟರ್‍‌ಗಳು, ಕೆಎಂಎಫ್‌ 24 ರಿಜಿಸ್ಟರ್‍‌ಗಳು, ಎಂ ಆರ್‍‌ 19 ರಿಜಿಸ್ಟರ್‍‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್‌ ರಿಜಿಸ್ಟರ್‍‌ಗಳ ಕಡತಗಳನ್ನು ಹಿಂದಿನ  ಪೌರಾಯುಕ್ತ ಮನೋಹರ್‍‌ ಅವರ ಸಮ್ಮುಖದಲ್ಲಿಯೇ ಮಾಜಿ ಸಚಿವ ಆನಂದ್‌ಸಿಂಗ್‌ ಅಳಿಯ ಸಂದೀಪ್‌ ಸಿಂಗ್‌ ಮತ್ತಿತರರು ಹೊತ್ತೊಯ್ದಿದ್ದಾರೆ ಎಂದು ಮುಖ್ಯಮಂತ್ರಿಗೆ ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ 10 ಮಂದಿಗೆ ನೋಟೀಸ್‌ ಜಾರಿಗೊಳಿಸಿದ್ದ ಹಾಲಿ  ಪೌರಾಯುಕ್ತರು ಇದೀಗ ರಾಗ ಬದಲಾಯಿಸಿದ್ದಾರೆ.

 

ಕಡತಗಳು ಕಣ್ಮರೆಯಾಗಿದೆ ಎಂದು ಮೂರು ದಿನದ ಹಿಂದೆಯೇ ಹೇಳಿದ್ದ  ಹಾಲಿ  ಆಯುಕ್ತ ಬಿ ಟಿ ಬಂಡಿವಡ್ಡರ್‍‌ ಅವರು ಇದೀಗ ಯಾವುದೇ ದಾಖಲೆಗಳು ನಾಪತ್ತೆಯಾಗಿಲ್ಲ. ಎಲ್ಲಾ ಕಡತಗಳೂ ಇವೆ ಎಂದು ಸಿಬ್ಬಂದಿ ಲಿಖಿತ ಮಾಹಿತಿ ನೀಡಿದ್ದಾರೆ ಎಂದು ಯೂ ಟರ್ನ್‌ ಹೊಡೆದಿದ್ದಾರೆ. ಆದರೆ ಆಯುಕ್ತರು ಕಡತಗಳು ಕೊಠಡಿಗಳಲ್ಲಿ ಇವೆಯೇ ಇಲ್ಲವೇ ಎಂಬ ಬಗ್ಗೆ ಖುದ್ದು ಪರಿಶೀಲಿಸಿಲ್ಲ. ಆದರೂ ಸಿಬ್ಬಂದಿ ನೀಡಿರುವ ಲಿಖಿತ ಮಾಹಿತಿಯನ್ನಾಧರಿಸಿಯೇ ಕಡತಗಳು ಕಣ್ಮರೆಯಾಗಿಲ್ಲ ಎಂದು ಹೇಳಿಕೆ ನೀಡಿರುವುದು ಮತ್ತು ಆನಂದ್ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ನೋಟೀಸ್‌ ಕೊಟ್ಟೇ ಇಲ್ಲ ಎಂದು ಹೇಳಿಕೆ ನೀಡಿರುವುದು  ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಪೌರಾಯುಕ್ತರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

 

‘ಸಿಬ್ಬಂದಿ ನೀಡಿದ ಲಿಖಿತ ಹೇಳಿಕೆಯನ್ನು ನಂಬಿ ನಾನು ಈ ಹೇಳಿಕೆ ನೀಡುತ್ತಿದ್ದೇನೆ. ಜಿಲ್ಲಾಧಿಕಾರಿ ಅವರಿಗೂ ಇದೇ ಆಧಾರದಲ್ಲಿ ಇನ್ನೊಂದು ವರದಿ ಸಲ್ಲಿಸಿದ್ದೇನೆ. ನಾಪತ್ತೆಯಾಗಿದೆ ಎಂದು ಆರೋಪಿಸಲಾದ ಕಡತಗಳು ನಗರಸಭೆಯ ಕಡತ ಕೊಠಡಿಯಲ್ಲೇ ಇರುವುದನ್ನು ನಾನು ಖುದ್ದಾಗಿ ಪರಿಶೀಲಿಸಿಲ್ಲ. ಪರಿಶೀಲಿಸಿ ಸೋಮವಾರ ಸಂಜೆ ಮಾಧ್ಯಮದ ಮುಂದೆ ಬರಲಿದ್ದೇನೆ‘  ‘ಕಡತಗಳು ನಾಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಅವರಿಗೆ ಬರೆಯಲಾದ ಪತ್ರ ನಕಲಿಯಾಗಿದೆ ಎಂದು ಸ್ವತಃ ಸಿಬ್ಬಂದಿ ಹೇಳಿದ್ದಾರೆ. ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದಾರೆ. ಅವರು  ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಕಡತಗಳು ಎಲ್ಲಿಗೂ ಹೋಗಿಲ್ಲ, ಕಚೇರಿಯೊಳಗೆಯೇ  ಇವೆ,’ ಎಂದು ಸಮಜಾಯಿಷಿ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯವರು ಸಾರ್ವಜನಿಕರ ಸಮಕ್ಪಮದಲ್ಲಿ ಕಡತಗಳ ಪರಿಶೀಲನೆಗೆ ಕೋರಿಕೆ ಸಲ್ಲಿಸಿದ್ದರು. ಈ ಸಂಬಂಧ  ಕಡತಗಳ ಪರಿಶೀಲನೆ ನಡೆಸಲಾಗಿತ್ತು. ಆಗ ಕೆಲವು ಕಡತಗಳ ಸಿಕ್ಕಿಲ್ಲ ಎಂದು ಹೇಳಿದ್ದು ನಿಜ. ಜಿಲ್ಲಾಧಿಕಾರಿ ಅವರಿಗೆ ಈ ನಿಟ್ಟಿನಲ್ಲಿ ಅದೇ ದಿನ ಕರವೇ ಅವರಿಗೆ ತೋರಿಸಿದ ಕಡತಗಳು ಮತ್ತು ತೋರಿಸದೆ ಇರುವ ಕಡತಗಳ ಬಗ್ಗೆ ಮಾಹಿತಿ ನೀಡಲಾಗಿತ್ತು.  ಇದೀಗ ಎಲ್ಲಾ ಕಡತಗಳು ಇರುವುದು ಸಾಬೀತಾಗಿದೆ. ಅದರಂತೆ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದೇನೆ’ ಎಂದು ಆಯುಕ್ತರು ಸಮರ್ಥಿಸಿಕೊಂಡಿದ್ದಾರೆ.
ಕಡತಗಳು ನಾಪತ್ತೆಯಾದ ವಿಚಾರ ಪ್ರಚಾರಗೊಂಡ ಬಳಿಕ ರಾತ್ರೋರಾತ್ರಿ ಅವುಗಳನ್ನು ತಂದು ಇಡಲಾಗಿದೆಯೇ ಎಂದು ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಪೌರಾಯುಕ್ತರು ‘ಇಲ್ಲ’ ಎಂದಷ್ಟೇ ಉತ್ತರಿಸಿದರು.  ಕಡತಗಳು ಕಚೇರಿಯೊಳಗೆಯೇ ಇದ್ದವು ಎಂಬುದನ್ನು ಪುನರುಚ್ಚರಿಸಿದರು. ಕಡತಗಳನ್ನು  ಕೊಠಡಿಯಿಂದ ತಂದು ತೋರಿಸುವಂತಿಲ್ಲ ಎಂದು ಪೌರಾಯುಕ್ತರು ಜಾರಿಕೊಂಡರು.  ಕರವೇ ಸಂಘಟನೆಯ ಲಿಖಿತ ಮನವಿ ಪುರಸ್ಕರಿಸಿ ಕಡತಗಳ ಪರಿಶೀಲನೆಗೆ ಏಕೆ ಒಪ್ಪಿದಿರಿ ಎಂದು ಕೇಳಿದ ಪ್ರಶ್ನೆಗೆ ಪೌರಾಯುಕ್ತರು ಸಮರ್ಪಕವಾಗಿ ಉತ್ತರ ನೀಡಲಿಲ್ಲ. ‘ಕಡತಗಳನ್ನು ಅವರಿಗೆ ಒಪ್ಪಿಸಿಲ್ಲ, ತೋರಿಸಲಾಗಿದೆ ಅಷ್ಟೇ,’ ಎಂದು ಹೇಳಿ ಜಾರಿಕೊಂಡರು.
ಕಡತಗಳು ನಾಪತ್ತೆಯಾಗಿರುವ ಬಗ್ಗೆ ಬರೆಯಲಾದ ಪತ್ರ ನಕಲಿ ಆಗಿದ್ದರೂ, ಪತ್ರದಲ್ಲಿ ಉಲ್ಲೇಖಿಸಲಾದ ನಗರಸಭೆಯ 10 ಮಂದಿ ಮಾಜಿ/ಹಾಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಅವರಿಂದ ಬರುವ ಉತ್ತರ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಬಂಡಿವಡ್ಡರ್‌ ಹೇಳಿದರು. ಈ ಮೂಲಕ ಪತ್ರದಲ್ಲಿ ಉಲ್ಲೇಖಿಸಲಾದ ಮಾಜಿ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ನೋಟಿಸ್‌ ನೀಡಿಲ್ಲ ಎಂದು ಹೇಳಿಕೆ ನೀಡಿದರು.
ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟ್ರರ್‍‌ಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು  ಹೊತ್ತೊಯ್ದಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ ಆನಂದ್‌ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಮತ್ತಿತರರ ವಿರುದ್ಧ ದೂರು ಸಲ್ಲಿಕೆಯಾಗಿ 78 ಗಂಟೆಗಳಾದರೂ ಸಹ ಇದುವರೆಗೂ ಯಾರೊಬ್ಬರ ಮೇಲೂ ಎಫ್‌ಐಆರ್ ದಾಖಲಾಗಿಲ್ಲ. ಈಗಾಗಲೇ  ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಹಾಲಿ ಪೌರಾಯುಕ್ತ ವಿ ರಮೇಶ್‌ ಸೇರಿದಂತೆ ಒಟ್ಟು 13 ಮಂದಿಗೆ  ಹೊಸಪೇಟೆ ನಗರಸಭೆಯ ಹಾಲಿ ಪೌರಾಯುಕ್ತರು ನೋಟೀಸ್‌ ಜಾರಿಗೊಳಿಸಿದ್ದರೂ ಸಹ ಈ ಸಂಬಂಧ ವಿಜಯನಗರ ಜಿಲ್ಲಾಧಿಕಾರಿ ದಿವಾಕರ್‍‌ ಅವರು ಯಾವುದೇ ಕ್ರಮವಹಿಸದಿರುವುದು ಹಲವು ಅನುಮಾನಳಿಗೆ ದಾರಿ ಮಾಡಿಕೊಟ್ಟಿದೆ.

 

 

 

ಕಡತ, ರಿಜಿಸ್ಟರ್‍‌ ಹೊತ್ತೊಯ್ದಿದ್ದ ಆರೋಪ; ಮಾಜಿ ಸಚಿವ ಆನಂದ್‌ಸಿಂಗ್‌ ಅಳಿಯ ಸೇರಿ 13 ಮಂದಿಗೆ ನೋಟೀಸ್‌

 

ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು  ನಾಗರಿಕ ಸಂಘಟನೆಗಳು ಖುದ್ದು ಜಿಲ್ಲಾಧಿಕಾರಿ ದಿವಾಕರ್‍‌ ಅವರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ.  ಮತ್ತು ಕಡತಗಳನ್ನು ವಾಪಸ್‌ ತರಿಸುವ ಸಂಬಂಧ ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ದಿವಾಕರ್‍‌ ಅವರಿಗೆ ‘ದಿ ಫೈಲ್‌’ ಪ್ರತಿಕ್ರಿಯೆಗಾಗಿ ವಾಟ್ಸಾಪ್‌ ಮೂಲಕ ಕೋರಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

 

 

 

ಈ ಪ್ರಕರಣದಲ್ಲಿ ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ಹೊಸಪೇಟೆಯ ಹಿಂದಿನ ಪೌರಾಯುಕ್ತ ಮನೋಹರ್‍‌, ಮನ್ಸೂರ್‍‌ ಅಹ್ಮದ್‌, ಕಂದಾಯ ಅಧಿಕಾರಿ ಅಜೀತ್‌ ಸಿಂಗ್‌, ಕಚೇರಿ ವ್ಯವಸ್ಥಾಪಕ ಸುಬ್ರಮಣ್ಯ ಶೆಟ್ಟಿ, ಯೋಜನಾ ನಿರ್ದೇಶಕರ ಕಾರ್ಯಾಲಯದ ಎಫ್‌ಡಿಎ ನೂರ್‍‌ ಅಹಮ್ಮದ್‌, ಸುರೇಶ್‌, ರಾಮಪ್ಪ, ಹೆಚ್‌ ಯಲ್ಲಪ್ಪ, ಹೆಚ್‌ ಶಂಕರ್‍‌  ಮತ್ತು ದೂರುದಾರ ಸುರೇಶ್‌ ಬಾಬು ಡಿ ಹೆಚ್‌ ಅವರಿಗೂ ನೋಟೀಸ್‌ ಜಾರಿಯಾಗಿದೆ.

 

 

ನೋಟೀಸ್‌ ತಲುಪಿದ 24 ಗಂಟೆಯೊಳಗೆ ಸೂಕ್ತ ಲಿಖಿತ ಸಮಜಾಯಿಷಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದೂ ನೋಟೀಸ್‌ನಲ್ಲಿ ಎಚ್ಚರಿಕೆ ನೀಡಿದ್ದರು.

 

 

ಪ್ರಕರಣದ ವಿವರ

 

 

‘ಮಾಜಿ ಸಚಿವ ಆನಂದ್‌ ಸಿಂಗ್‌ ಹಾಗೂ ಅವರ ಕುಟುಂಬ ಸದಸ್ಯರು ರಾಜಕೀಯ ದರ್ಪದಿಂದ ಅಕ್ರಮವಾಗಿ ನಗರಸಭೆ ದಾಖಲೆ ಕೊಠಡಿಯಲ್ಲಿದ್ದ ಡಿಮ್ಯಾಂಡ್‌ ರಿಜಿಸ್ಟರ್‍‌ಗಳು, ಕೆಎಂಎಫ್‌ 24 ರಿಜಿಸ್ಟರ್‍‌ಗಳು, ಎಂ ಆರ್‍‌ 19 ರಿಜಿಸ್ಟರ್‍‌ಗಳು ಹಾಗೂ ಇನ್ನಿತರೆ ಡಿಮ್ಯಾಂಡ್‌ ರಿಜಿಸ್ಟರ್‍‌ಗಳ ಕಡತಗಳನ್ನು ಪೌರಾಯುಕ್ತ ಮನೋಹರ್‍‌ ಅವರ ಸಮ್ಮುಖದಲ್ಲಿಯೇ ಹೊತ್ತೊಯ್ದಿದ್ದಾರೆ. ಸಿಸಿಟಿವಿ ಕ್ಯಾಮರಾಗಳನ್ನು ಬಂದ್‌ ಮಾಡಿಸಿ ತೆಗೆದುಕೊಂಡು ಹೋಗಿದ್ದಾರೆ,’ ಎಂದು ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಸುರೇಶ್‌ಬಾಬು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು.

 

 

ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌, ನಗರಸಭೆಯ ಹಾಲಿ ಸದಸ್ಯರು ಮತ್ತು ಮಾಜಿ ಸದಸ್ಯ ವೇಣುಗೋಪಾಲ್‌ ಮತ್ತಿತರರು , ನಗರಸಭೆಯ ಈ ಹಿಂದಿನ ಪೌರಾಯುಕ್ತರಾದ ವಿ ರಮೇಶ್‌, ಮನ್ಸೂರ್‍‌ ಅಹ್ಮದ್‌, ಕಂದಾಯ ಅಧಿಕಾರಿಗಳಾದ ಸುಬ್ರಮಣ್ಯ ಶೆಟ್ಟಿ, ಅಜಿತ್‌ ಸಿಂಗ್‌, ದ್ವಿತೀಯ ದರ್ಜೆ ಸಹಾಯಕರಾದ ನೂರ್‍‌ ಅಹಮ್ಮದ್‌, ಸುರೇಶ್‌, ವ್ಯವಸ್ಥಾಪಕ ಕೃಷ್ಣಮೂರ್ತಿ, ಬಿಲ್ ಕಲೆಕ್ಟರ್‍‌ ಯಲ್ಲಪ್ಪ, ರಾಮಪ್ಪ, ಶಂಕರ್‍‌ ಮತ್ತಿತರರು ಆನಂದ್‌ ಸಿಂಗ್‌ ಅವರ ಅಳಿಯ ಸಂದೀಪ್‌ ಸಿಂಗ್‌ ಅವರಿಗೆ ಈ ಅಕ್ರಮಕ್ಕೆ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು. ಈ ಕುರಿತು ‘ದಿ ಫೈಲ್‌’ 2023ರ ಆಗಸ್ಟ್‌ 23ರಂದು ವರದಿ ಪ್ರಕಟಿಸಿತ್ತು.

 

 

ದರ್ಪ; ಪೌರಾಯುಕ್ತರ ಸಮ್ಮುಖದಲ್ಲೇ ರಿಜಿಸ್ಟರ್‍‌, ಕಡತ, ದಾಖಲೆಗಳ ಹೊತ್ತೊಯ್ದರೇ ಮಾಜಿ ಸಚಿವರ ಅಳೀಮಯ್ಯ?

ಆನಂದ್‌ ಸಿಂಗ್‌ ಅವರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮೊದಲು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts