ಅಮೃತ್‌ ಕಾವಲ್‌ ; 3,092.59 ಎಕರೆ ಡಿನೋಟಿಫಿಕೇಷನ್‌ಗೆ ಮುಂದಾದ ಸರ್ಕಾರ

photo credit;rashoktwitteraccount

ಬೆಂಗಳೂರು; ರಾಜ್ಯದ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಮೊಳಕಾಲ್ಮೂರು, ಚಳ್ಳಕೆರೆ ಸೇರಿದಂತೆ ಇಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ 23,189 ಎಕರೆ 8 ಗುಂಟೆ ವಿಸ್ತೀರ್ಣದ ಅಮೃತ ಮಹಲ್‌ ಕಾವಲ್‌ ಜಮೀನುಗಳ ಪೈಕಿ ಅರಣ್ಯ ಜಮೀನಿನ ವ್ಯಾಪ್ತಿಗೆ ಒಳಪಡದ ಜಮೀನುಗಳನ್ನು ಡಿ ನೋಟೀಫೈ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ಕಂದಾಯ, ಕಾನೂನು ಮತ್ತು ಅರಣ್ಯ ಇಲಾಖೆ ಸರ್ಕಾರದ ಹೆಚ್ಚುವರಿ ಮತ್ತು ಪ್ರಧಾನ ಕಾರ್ಯದರ್ಶಿಗಳ ಮಧ್ಯೆ ಪತ್ರ ವ್ಯವಹಾರಗಳು ನಡೆಯುತ್ತಿವೆ. ಈ ಸಂಬಂಧ ಕೆಲ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಮುಂದುವರೆದ ಭಾಗವಾಗಿ 2022ರ ಜುಲೈ 6ರಂದೇ ಕಂದಾಯ ಸಚಿವ ಆರ್‌ ಅಶೋಕ್‌ ಅಧ್ಯಕ್ಷತೆಯಲ್ಲಿ ಸಭೆ ಕೂಡ ನಡೆದಿದೆ. ಈ ಸಂಬಂಧ ಸಮಗ್ರ ದಾಖಲೆಗಳು ಮತ್ತು ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗ ಅಮೃತ್‌ ಮಹಲ್‌ ಕಾವಲ್‌ ಜಮೀನುಗಳನ್ನು ಡಿನೋಟಿಫೈ ಮಾಡುವ ಸಂಬಂಧ ಇಲಾಖೆಗಳ ಮಧ್ಯೆ ನಡೆಯುತ್ತಿರುವ ಪ್ರಕ್ರಿಯೆಗಳು ಮುನ್ನೆಲೆಗೆ ಬಂದಿವೆ.

 

ಅಲ್ಲದೇ ಸಾಮೂಹಿಕ ಬೇಸಾಯ ಸಹಕಾರಿ ಸಂಘಗಳಿಗೆ ಮಂಜೂರಾದ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರಿಗೇ ಮಂಜೂರು ಮಾಲು ಕ್ರಮ ಕೈಗೊಳ್ಳಬೇಕು ಎಂದು ಹೊಳಲ್ಕೆರೆ ಶಾಸಕರು ಮೌಖಿಕವಾಗಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಅಮೃತ ಮಹಲ್ ಕಾವಲ್‌ ಜಮೀನುಗಳನ್ನು ಡಿನೋಟಿಫೈ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಅಮೃತ್‌ ಮಹಲ್ ಕಾವಲು ಜಮೀನುಗಳು ಅರಣ್ಯ ಜಮೀನು ಎಂಬ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದಾದಲ್ಲಿ ಮಾತ್ರ ಅತ್ಯಂತ ವಿಶೇಷ ಪ್ರಕರಣಗಳಲ್ಲಿ ಸರ್ಕಾರವು ತನಗಿರುವ ಅಧಿಕಾರವನ್ನು ಚಲಾಯಿಸಿ ಅಮೃತ್‌ ಮಹಲ್ ಕಾವಲು ಜಮೀನುಗಳನ್ನು ಡಿ ನೋಟಿಫೈ ಮಾಡಬಹುದು ಎಂದು ಕಾನೂನು ಇಲಾಖೆಯು ಅಭಿಪ್ರಾಯ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಕಾನೂನು ಇಲಾಖೆಯು ನೀಡಿರುವ ಈ ಅಭಿಪ್ರಾಯವನ್ನಾಧರಿಸಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ವ್ಯಾಪ್ತಿಯಲ್ಲಿನ ವಿವಿಧ ಸಾಮೂಹಿಕ ಬೇಸಾಯ ಸಹಕಾರ ಸಂಘಗಳ ಹೆಸರಿನಲ್ಲಿರುವ ಜಮೀನುಗಳನ್ನು ಸರ್ಕಾರಕ್ಕೆ ಹಿಂಪಡೆದು ಅದನ್ನು ಸಾಗುವಳಿದಾರರಿಗೆ ಮಂಜೂರು ಮಾಡುವ ಪ್ರಸ್ತಾವನೆಗೆ ಕಂದಾಯ ಸಚಿವರ ಆದೇಶ ಕೋರಿ ಕಡತವೊಂದು ಸಲ್ಲಿಕೆಯಾಗಿದೆ ಎಂದು ತಿಳಿದು ಬಂದಿದೆ.

 

‘ಹೊಳಲ್ಕೆರೆ ತಾಲೂಕಿನ 4 ಗ್ರಾಮಗಳಲ್ಲಿ ಸೊಸೈಟಿಗೆ ಸೇರಿದ ಭೂಮಿಯನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳುವ ಸಂಬಂಧ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಭಿಪ್ರಾಯ ಪಡೆದು ಸಚಿವ ಸಂಪುಟಕ್ಕೆ ಮಂಡಿಸಬೇಕು,’ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

 

ಈ ಮಧ್ಯೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಅವರು ಹೊಳಲ್ಕೆರೆ ತಾಲೂಕಿನ 4 ಗ್ರಾಮಗಳಲ್ಲಿನ ಸೊಸೈಟೆಗೆ ಸೇರಿದ ಜಮೀನುಗಳನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಳ್ಳಲು ಕಡತವನ್ನು (ಆರ್‌ಡಿ 50) ತಕ್ಷಣವೇ ಮುಖ್ಯಮಂತ್ರಿಗೆ ಮಂಡಿಸಬೇಕು ಎಂದೂ ಟಿಪ್ಪಣಿ ಹೊರಡಿಸಿದ್ದಾರೆ ಎಂದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಹೊಳಲ್ಕೆರೆ ತಾಲೂಕಿನ ಕಸಬಾ ಗುಂಡೇರಿ ಕಾವಲ್‌, ರಾಮಗಿರಿ ಹೋಬಳಿಯ ವನಕೆ ಮರಡಿಕಾವಲ್‌, ತಾಳಿಕಟ್ಟೆ ಕಾವಲ್‌, ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌, ಆರ್‌ ನುಲೇನೂರು ಗ್ರಾಮಗಳಲ್ಲಿ ಒಟ್ಟಾರೆ 3,092.59 ಎಕರೆ ಜಮೀನು ಅಮೃತ್‌ ಮಹಲ್‌ ಕಾವಲ್‌ ಹೆಸರಿನಲ್ಲಿದೆ. ಈ ಜಮೀನುಗಳನ್ನು ವಿವಿಧ ಸಹಕಾರ ಸಂಘಗಳಿಗೆ 1956, 1960, 1967ರ ವಿವಿಧ ದಿನಾಂಕಗಳಲ್ಲಿ ಅಂದಿನ ಉಪ ವಿಭಾಗಾಧಿಕಾರಿಗಳು ಮಂಜೂರು ಮಾಡಿದ್ದಾರಾದರೂ ಯಾವ ನಿಯಮಗಳಡಿಯಲ್ಲಿ ಮಂಜೂರು ಮಾಡಿದ್ದರು ಎಂಬ ಕುರಿತು ಯಾವುದೇ ದಾಖಲೆಗಳು ಇಲ್ಲ.

 

ಗುಂಡೇರಿ ಕಾವಲ್‌ನ ಸರ್ವೇ ನಂಬರ್‌ 27/1ರಲ್ಲಿ 400 ಎಕರೆ (ಎಎಫ್‌23/59-60 ದಿನಾಂಕ 6-11-1960)ಯನ್ನು ಮಹಾತ್ಮಗಾಂಧಿ ಕೋ ಆಪರೇಟೀವ್‌ ಕಲೆಕ್ಷನ್‌ ಫಾರ್ಮಿಂಗ್ ಸೊಸೈಟಿ, ರಾಮಗಿರಿ ಹೋಬಳಿಯ ವನಕೆ ಮರಡಿ ಕಾವಲ್‌ನಲ್ಲಿ ಸರ್ವೆ ನಂಬರ್‌ 1ರಲ್ಲಿ 100 ಎಕರೆಯನ್ನು ಅನಾಥಸೇವಾ ಟ್ರಸ್ಟ್‌ ಮಲ್ಲಾಡಿಹಳ್ಳಿ, ವನಕೆ ಮರಡಿ ಕಾವಲ್‌ನ ಇದೇ ಸರ್ವೇ ನಂಬರ್‌ನಲ್ಲಿನ 1,125.25 ಎಕರೆಯನ್ನು ವನಕೆ ಮರಡಿ ಕಾವಲ್‌ ಸಾಮೂಹಿಕ ಸೇವಾ ಸಹಕಾರ ಸಂಘ, ರಾಮಗಿರಿ ಹೋಬಳಿಯ ತಾಳಿಕಟ್ಟೆ ಕಾವಲ್‌ನ ಸರ್ವೆ ನಂಬರ್‌ 41ರಲ್ಲಿ 807-34 ಎಕರೆಯನ್ನು ಕಾರ್ಯ ವಲ್ಲಭ ಸೇವಾ ಬೇಸಾಯ ಸಹಕಾರಿ ಸಂಘಕ್ಕೆ ಮಂಜೂರಾಗಿದೆ.

 

ಕಸಬಾ ಹೋಬಳಿಯ ಅರೇಹಳ್ಳಿ ಕಾವಲ್‌ನ ಸರ್ವೆ ನಂಬರ್‌ 1ರಲ್ಲಿನ 325 ಎಕರೆಯನ್ನು (ಎಎಫ್‌ 60 ವಿಎಲ್‌ಎಸ್‌ 67-68, ದಿನಾಂಕ 27-09-1967) ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ, ರಾಮಗಿರಿಯ ಆರ್‌ ನುಲೇನೂರು ಸರ್ವೇ ನಂಬರ್ 20ರಲ್ಲಿ 255 ಎಕರೆಯನ್ನು (ಎಎಫ್‌ 60, ವಿಎಲ್‌ಎಸ್‌ 67-68 ದಿನಾಂಕ 27-09-1967)ರಂದು ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘ, ಇದೇ ಗ್ರಾಮದ ಸರ್ವೆ ನಂಬರ್‌ 19ರಲ್ಲಿ 80 ಎಕರೆ (ಎಎಫ್‌ 60 ವಿಎಲ್‌ಎಸ್‌ 67-68 ದಿನಾಂಕ 27-09-1967)ರಂದು ಮಂಜೂರಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಈ ಪೈಕಿ ಗುಂಡೇರಿಕಾವಲ್‌ನಲ್ಲಿರುವ ಮಹಾತ್ಮಗಾಂಧಿ ಕೋ ಆಪರೇಟೀವ್‌ ಕಲೆಕ್ಷನ್‌ ಫಾರ್ಮಿಂಗ್‌ ಸೊಸೈಟಿ ಲಿಮಿಟೆಡ್‌ನ್ನು 2014ರ ಸೆ.29ರಂದು ಸಮಾಪನೆಗೊಳಿಸಿದೆ. ವನಕೆ ಮರಡಿ ಕಾವಲ್‌ ಸಾಮೂಹಿಕ ಸೇವಾ ಸಹಕಾರ ಸಂಘವು 2021ರ ಏಪ್ರಿಲ್‌ 1ರಂದು ಸ್ಥಗಿತಗೊಂಡಿದ್ದು ನಷ್ಟದಲ್ಲಿದೆ. ಕಾರ್ಯವಲ್ಲಭ ಸೇವಾ ಬೇಸಾಯ ಸಹಕಾರಿ ಸಂಘ ಮತ್ತು ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘವು 2014ರ ಸೆ.29ರಂದು ಸಮಾಪನೆಗೊಂಡಿದೆ. ಆರ್‌ ನುಲೇನೂರಿನಲ್ಲಿರುವ ನೆಹರೂ ಸಾಮೂಹಿಕ ವ್ಯವಸಾಯ ಸಹಕಾರ ಸಂಘವು ನೋಂದಣಿಯೇ ಆಗಿಲ್ಲ ಎಂಬುದು ಗೊತ್ತಾಗಿದೆ.

 

ಸಮಾಪನೆಗೊಂಡಿರುವ ಸಹಕಾರ ಸಂಘಗಳಿಗೆ ಮಂಜೂರಾಗಿರುವ ಜಮೀನುಗಳಲ್ಲಿ ಕೆಲವು ಸಾಗುವಳಿದಾರರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಈ ಜಂಇನುಗಳು ಸಹಕಾರ ಸಂಘಗಳ ಹೆಸರಿನಲ್ಲಿರುವ ಇರುವದುರಿಂದ ನಮೂನೆ 50, 53 ಮತ್ತು 57ರಲ್ಲಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

 

‘ಹೊಳಲ್ಕೆರೆ ತಾಲೂಕಿನ ಪ್ರಸ್ತಾಪಿತ ಜಮೀನುಗಳಲ್ಲಿ ಸಹಕಾರ ಸಂಘಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲದಿರುವುದು ಹಾಗೂ ಈ ಜಮೀನುಗಳಿಂದ ಸಂಘಗಳಿಗೆ/ಸರ್ಕಾರಕ್ಕೆ ಯಾವುದೇ ಕಂದಾಯ ಅಥವಾ ಆದಾಯ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಸದರಿ ಜಮೀನುಗಳನ್ನು ಸರ್ಕಾರಕ್ಕೆ ಹಿಂಪಡೆಯಲು ಕ್ರಮಕೈಗೊಳ್ಳಬಹುದು,’ ಎಂದು ಹೊಳಲ್ಕೆರೆ ತಹಶೀಲ್ದಾರ್‌ ವರದಿ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅಮೃತ್‌ ಮಹಲ್‌ ಕಾವಲ್‌ ಜಮೀನು ಅಮೃತ್‌ ಮಹಲ್‌ ತಳಿಯ ರಾಸುಗಳ ಮೇವಿನ ಉದ್ದೇಶಕ್ಕಾಗಿದೆ. ಈ ಜಮೀನಿನ ವಿಸ್ತೀರ್ಣ ಕಡಿಮೆಯಾಗುತ್ತಿರುವುದರಿಂದ ಉಳಿದ ಅಮೃತ್‌ ಮಹಲ್ ಕಾವಲ್‌ ಜಮೀನನ್ನು ಹುಲ್ಲುಗಾವಲು ಪ್ರದೇಶವಾಗಿ ಸಂರಕ್ಷಿಸಲು 1979ರ ಮಾರ್ಚ್‌ 22ರಂದೇ ಅಂದಿನ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ ನಿರ್ದೇಶಿಸಿದ್ದರು.

 

ಅದೇ ರೀತಿ ವಿಶೇಷ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಿರುವ ಜಮೀನುಗಳಲ್ಲಿ ಆಗಿರುವ ಅತಿಕ್ರಮಣಗಳನ್ನು ಸಕ್ರಮಗೊಳಿಸುವುದು ನಿಯಮಗಳಿಗೆ ವಿರುದ್ಧವಾಗಿರುವ ಕಾರಣ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಇಂತಹ ಪ್ರಕರಣಗಳನ್ನು ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಕರ್ನಾಟಕ ಭೂ ಕಂದಾಯ ನಿಯಮ 108-ಕೆ ಅನ್ವಯ ನಿಯಮಗಳಿಗೆ ಅನುಸಾರವಾಗಿ ಸೂಕ್ತ ಕ್ರಮ ಕೈಗೊಂಡು ಒಂದು ವೇಳೆ ನಿಯಮಗಳಿಗೆ ವಿರುದ್ಧವಾಗಿ ಅಮೃತ್‌ ಮಹಲ್‌ ಕಾವಲ್‌ ಜಮೀನುಗಳನ್ನು ಸಕ್ರಮಗೊಳಿಸಿದ್ದರೇ ಅಂತಹ ಪ್ರಕರಣಗಳನ್ನು ರದ್ದುಪಡಿಸಬೇಕು ಎಂದು 1995ರ ಜನವರಿ 16ಮತ್ತು 17ರಂದು ಕಂದಾಯ ಇಲಾಖೆಯು ಸುತ್ತೋಲೆ ಹೊರಡಿಸಿತ್ತು.

the fil favicon

SUPPORT THE FILE

Latest News

Related Posts