ಸಿಎಂ ಆಪ್ತಸಹಾಯಕನ ಹನಿಟ್ರ್ಯಾಪ್‌; ಸಂಧಾನ ನಡೆಸಿ ಮುಚ್ಚಿ ಹಾಕಿದರೇ ಎನ್‌ ರವಿಕುಮಾರ್‌?

ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲಾಗಿತ್ತು ಎಂಬ ಪ್ರಕರಣವನ್ನು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಮತ್ತು ಮುಖ್ಯಮಂತ್ರಿ ಕಚೇರಿಯ ಮತ್ತೊಬ್ಬ ಉನ್ನತ ಅಧಿಕಾರಿಯೊಬ್ಬರು ಸಂಧಾನ ನಡೆಸಿ  ಮುಚ್ಚಿಹಾಕಿದ್ದಾರೆ ಎಂಬ ಗುರುತವಾದ ಆರೋಪ ಕೇಳಿ ಬಂದಿದೆ.

 

ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಗುತ್ತಿಗೆ ನೌಕರ ಮತ್ತು ವಿಧಾನಪರಿಷತ್‌ ಸಚಿವಾಲಯದ ಡಿ ಗ್ರೂಪ್‌ನ ಮಹಿಳಾ ನೌಕರರೊಬ್ಬಳ ತಂಡವು ಮುಖ್ಯಮಂತ್ರಿಯ ಆಪ್ತ ಸಹಾಯಕನನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲಾಗಿದೆ ಎಂಬ ಮಾಹಿತಿ ದೊರಕುತ್ತಿದ್ದಂತೆ ಪ್ರವಾಸದಲ್ಲಿದ್ದರೂ ಅದನ್ನು ಮೊಟಕುಗೊಳಿಸಿ ಎನ್‌ ರವಿಕುಮಾರ್‌ ಅವರು ದೌಡಾಯಿಸಿದ್ದರು ಎಂದು ಗೊತ್ತಾಗಿದೆ.

 

ಈ ಪ್ರಕರಣವು ಬಹಿರಂಗಗೊಂಡಲ್ಲಿ ಸಾರ್ವಜನಿಕವಾಗಿ ಪಕ್ಷದ ವರ್ಚಸ್ಸು ಮತ್ತು ಸರ್ಕಾರದ ಘನತೆಗೆ ಧಕ್ಕೆ ತರಬಹುದು ಎಂಬ ಭೀತಿಯಿಂದ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರೇ ಪ್ರಕರಣವನ್ನು ಸುಸೂತ್ರವಾಗಿ ಇತ್ಯರ್ಥಗೊಳಿಸಲು ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರಿಗೆ ನಿರ್ದೇಶನ ನೀಡಿದ್ದರು ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

 

ಅಲ್ಲದೇ ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎನ್‌ ರವಿಕುಮಾರ್‌ ಅವರು ಏಕಕಾಲಕ್ಕೆ ಪಕ್ಷ ಮತ್ತು ಸರ್ಕಾರಕ್ಕೆ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಲು ಮುಖ್ಯಮಂತ್ರಿ ಕಚೇರಿಯ ಉನ್ನತ ಅಧಿಕಾರಿಯೊಂದಿಗೆ ನೇರವಾಗಿ ವಿಧಾನಪರಿಷತ್‌ ಸಚಿವಾಲಯದ ಕಾರ್ಯದರ್ಶಿ ಕಚೇರಿಗೆ ದೌಡಾಯಿಸಿದ್ದರು ಎಂದು ತಿಳಿದು ಬಂದಿದೆ.

 

ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ಭೇಟಿ ಮಾಡಿದ್ದ ಎನ್‌ ರವಿಕುಮಾರ್‌ ಮತ್ತು ಮುಖ್ಯಮಂತ್ರಿ ಕಚೇರಿಯ ಉನ್ನತ ಅಧಿಕಾರಿಯು ಕಾರ್ಯದರ್ಶಿ ಕಚೇರಿಗೇ ಡಿ ಗ್ರೂಪ್‌ ಮಹಿಳಾ ನೌಕರಳನ್ನೂ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿಯನ್ನೂ ಪಡೆದಿದ್ದಾರೆ. ಹಾಗೆಯೇ ಆಕೆ ಬಳಿ ಇದ್ದ ಮೊಬೈಲ್‌, ವಾಟ್ಸಾಪ್‌ ಚಾಟ್‌ಗಳನ್ನು ವೀಕ್ಷಿಸಿದ್ದರು. ಮತ್ತು ಮುಖ್ಯಮಂತ್ರಿ ಆಪ್ತ ಸಹಾಯಕ ಮತ್ತು ಡಿ ಗ್ರೂಪ್‌ ಮಹಿಳಾ ನೌಕರಳಿಂದ ಯಾವುದೇ ದೂರು ದಾಖಲಾಗದಂತೆ ಸಂಧಾನ ನಡೆಸಿದ್ದರು ಎಂದು ತಿಳಿದು ಬಂದಿದೆ.

 

ಆದರೆ ಈ ಬಗ್ಗೆ ‘ದಿ ಫೈಲ್‌’ಗೆ ಮಾಹಿತಿ ನೀಡಿರುವ ಎನ್‌ ರವಿಕುಮಾರ್‌ ಅವರು ಸಂಧಾನ ನಡೆಸಿದ್ದನ್ನು ತಳ್ಳಿಹಾಕಿದ್ದಾರೆ. ‘ಅದರೊಳಗೆ ತಲೆಹಾಕಿಲ್ಲ. ಆ ವಿಷಯ ಗೊತ್ತಿಲ್ಲ. ಪ್ರಕರರಣದ ಮಾಹಿತಿಯೇ ಇಲ್ಲ. ನಾನು ಟೂರ್‌ನಲ್ಲಿದ್ದೇನೆ. ಸಿಎಂ ಜತೆಯಲ್ಲಿಯೇ ಇದ್ದೇನೆ. ಖಂಡಿತವಾಗಿಯೂ ಈ ಯಾವ ಮಾಹಿತಿಯೂ ಇಲ್ಲ.,’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ಹಾಗೆಯೇ ಇದೇ ಪ್ರಕರಣ ಸಂಬಂಧ ಪ್ರತಿಕ್ರಿಯೆ ಬಯಸಿ ವಿಧಾನಪರಿಷತ್‌ನ ಕಾರ್ಯದರ್ಶಿ ಮಹಾಲಕ್ಷ್ಮಿ ಅವರನ್ನು ‘ದಿ ಫೈಲ್‌’ ಸಂಪರ್ಕಿಸಿತ್ತಾದರೂ ಕರೆ ಸ್ವೀಕರಿಸಲಿಲ್ಲ. ಅಲ್ಲದೇ ಅವರ ವಾಟ್ಸಾಪ್‌ ನಂಬರ್‌ಗೆ ಪ್ರತಿಕ್ರಿಯೆ ಕೋರಿ ಕಳಿಸಿದ್ದ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಈ ವರದಿಯನ್ನು ಅಪ್‌ಡೇಟ್‌ ಮಾಡಲಾಗುವುದು.

 

ಹನಿಟ್ರ್ಯಾಪ್‌ಗೆ ಒಳಗಾಗಿದ್ದ ಎಂದು ಹೇಳಲಾಗಿರುವ ಸಚಿವಾಲಯದ ಸಿ ಗುಂಪಿನ ನೌಕರನನ್ನು ಮುಖ್ಯಮಂತ್ರಿಗಳ ಆಪ್ತ ಸಹಾಯಕನ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಆತ ಈಗಾಗಲೇ ಬಹುಮಹಡಿ ಕಟ್ಟಡದಲ್ಲಿರುವ ಡಿಪಿಎಆರ್‌ ಕಚೇರಿಗೆ ವರದಿ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

 

ಮತ್ತೊಂದು ಮೂಲದ ಪ್ರಕಾರ ಹನಿಟ್ರ್ಯಾಪ್‌ಗೆ ಒಳಗಾಗಿದ್ದಾನೆ ಎಂದು ಹೇಳಲಾಗಿರುವ ಮುಖ್ಯಮಂತ್ರಿಗಳ ಆಪ್ತ ಸಹಾಯಕ, ವಿಧಾನಪರಿಷತ್‌ ಸಚಿವಾಲಯದ ಡಿ ಗ್ರೂಪ್‌ ಮಹಿಳಾ ನೌಕರಳ ಹೆಸರಿನಲ್ಲಿ ಕನಕಪುರದ ಬಳಿ 13 ಎಕರೆ ಜಮೀನು ಖರೀದಿಸಿದ್ದ. ಈ ಜಮೀನಿನ ದಾಖಲೆಗಳನ್ನು ತನ್ನ ವಶಕ್ಕೆ ನೀಡಲು ಸಿಎಂ ಆಪ್ತ ಸಹಾಯಕನು ಒತ್ತಾಯಪಡಿಸಿದಾಗ ಆಕೆ ವಿಡಿಯೋ ಮತ್ತು ಆಡಿಯೋವನ್ನು ತೋರಿಸಿ ಬ್ಲಾಕ್‌ಮೇಲ್‌ ಮಾಡಿದ್ದಳು ಎಂದೂ ಹೇಳಲಾಗುತ್ತಿದೆ.

the fil favicon

SUPPORT THE FILE

Latest News

Related Posts