ಪಠ್ಯಪುಸ್ತಕಗಳ ಮುದ್ರಣದಲ್ಲಿ ಅವ್ಯವಹಾರ ಆರೋಪ; ಎಸಿಬಿಗೆ ದಾಖಲೆ ನೀಡದೇ ಸರ್ಕಾರದ ಕಳ್ಳಾಟ

ಬೆಂಗಳೂರು; ಶಾಲಾ ಪಠ್ಯಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರುಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸರ್ಕಾರವು ದಾಖಲೆಗಳನ್ನು ಒದಗಿಸದೇ ಕಾಲಹರಣದಲ್ಲಿ ತೊಡಗಿರುವುದು ಇದೀಗ ಬಹಿರಂಗವಾಗಿದೆ.

 

ಯಾವುದೇ ದಾಖಲೆಗಳನ್ನು ನೀಡದ ಕಾರಣ ಕಳೆದ 6 ವರ್ಷಗಳಿಂದಲೂ ಈ ದೂರಿನ ವಿಚಾರಣೆಯು ಇನ್ನೂ ಆಮೆಗತಿಯಲ್ಲೇ ಸಾಗಿದೆ. ಪಠ್ಯಪುಸ್ತಕಗಳ ಮುದ್ರಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳನ್ನು  ಸಾಮಾಜಿಕ ಕಾರ್ಯಕರ್ತರು ಮುನ್ನೆಲೆಗೆ ತಂದಿದ್ದರೂ ಸರ್ಕಾರ ಮಾತ್ರ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ.  ಈ ಸಂಬಂಧ ದೂರುಗಳನ್ನು ಸ್ವೀಕರಿಸಿರುವ ಭ್ರಷ್ಟಾಚಾರ ನಿಗ್ರಹ ದಳವು ತನಿಖೆ ನಡೆಸಲು ಮುಂದಾದರೂ ಸರ್ಕಾರವು ದಾಖಲೆಗಳನ್ನು ನೀಡದೇ ಸತಾಯಿಸುತ್ತಿದೆ. ಈ ಸಂಬಂಧ ಸಚಿವ ಬಿ ಸಿ ನಾಗೇಶ್‌ ಕೂಡ ಗಂಭೀರವಾಗಿ ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂದು ಗೊತ್ತಾಗಿದೆ.

 

ಪಠ್ಯ ಪುಸ್ತಕಗಳ ಪರಿಷ್ಕರಣೆ ಸುತ್ತ ಎದ್ದಿರುವ ವಿವಾದವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಕುರಿತು ಶಿಕ್ಷಣ ಇಲಾಖೆಯು 2022ರ ಜೂನ್‌ 16ರಂದು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಎಸಿಬಿಯು ಸತತವಾಗಿ ಪತ್ರ ಬರೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಯುಕ್ತರು, ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಿಗೆ ಮಾಹಿತಿ ಕೋರಿ ಪತ್ರವನ್ನು ಬರೆದಿದ್ದಾರೆ.

 

ಶಾಲಾ ಪುಸ್ತಕಗಳ ಮುದ್ರಣಕ್ಕೆ ಸಂಬಂಧಿಸಿದಂತೆ ಖಾಸಗಿ ಮುದ್ರಕರಿಗೆ ನೀಡಿದ್ದ ಗುತ್ತಿಗೆ ಮತ್ತು ಖಾಸಗಿ ಮುದ್ರಕರು ಬಳಸಿದ್ದ ಕಾಗದಗಳ ಗುಣಮಟ್ಟ, ಹಣ ಪಾವತಿಯಲ್ಲಿ ನಡೆದಿರುವ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಎಂಬುವರು 2016ರ ನವೆಂಬರ್‌ 22ರಂದು ದೂರು ಸಲ್ಲಿಸಿದ್ದರು.

 

‘ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ 10 ವರ್ಷಗಳಿಂದ ಸಾವಿರಾರು ಕೋಟಿ ರುಪಾಯಿಗಳಷ್ಟು ನೀಡಿದ್ದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಯಾವ ಕಚೇರಿಯಲ್ಲಿ ಲಭ್ಯವಿದೆಯೋ ಅಲ್ಲಿಂದ ಪಡೆದು ದಾಖಲೆಗಳನ್ನು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಕೋರಲಾಗಿತ್ತು. ಆದರೆ ಇದುವರೆಗೂ ವರದಿ ಸ್ವೀಕೃತವಾಗಿಲ್ಲ. ಈ ಪ್ರಕರಣದಲ್ಲಿನ ಹೆಚ್ಚಿನ ವಿಳಂಬಕ್ಕೆ ಆಸ್ಪದ ನೀಡದೇ ಪ್ರಕರಣದ ಗಂಭೀರತೆ ಅರಿತು ಕೋರಿರುವ ಮಾಹಿತಿಯನ್ನು ತುರ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕು,’ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.

 

ಶಿಕ್ಷಣ ಇಲಾಖೆ ಬರೆದಿರುವ ಪತ್ರದ ಪ್ರತಿ

 

2016ರಲ್ಲಿ ಸಲ್ಲಿಸಿದ್ದ ದೂರಿನಲ್ಲೇನಿತ್ತು?

 

ಕಳೆದ 10 ವರ್ಷಗಳಿಂದ ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಯಾವುದೇ ಲೆಕ್ಕ ಪರಿಶೋಧನೆ ಅಗಿಲ್ಲ. ಸಾವಿರಾರು ಕೋಟಿಯಷ್ಟು ಅನುದಾನವನ್ನು ಸರ್ಕಾರದಿಂದ ಪಡೆದಿದ್ದರೂ ಇಲ್ಲಿಯವರೆಗೂ ಮಹಾಲೇಖಪಾಲರಿಂದ ಲೆಕ್ಕ ತಪಾಸಣೆ ಮಾಡಿಸಿಲ್ಲ. ಹೊಸ ಲೆಕ್ಕಾಧಿಕಾರಿಗಳು ಬಂದು ಪತ್ರ ಬರೆಯುವ ತನಕ ಮಹಾಲೇಖಪಾಲರಿಗೆ ಪತ್ರ ಬರೆದಿರಲಿಲ್ಲ. 10 ವರ್ಷಗಳ ನಮತರ ಹೊಸ ಲೆಕ್ಕಾಧಿಕಾರಿಗಳು ಪತ್ರ ಬರೆದಿದ್ದರೂ ಅಧಿಕಾರಿಗಳು ಅದನ್ನು ತಡೆಹಿಡಿದಿದ್ದಾರೆ. ಈ ಇಲಾಖೆಯಲ್ಲಿ 7 ವರ್ಷಗಳಿಂದ ಬೀಡುಬಿಟ್ಟಿರುವ ಚಂದ್ರಯ್ಯ ಎಂಬ ಆಡಳಿತ ಅಧಿಕಾರಿ ನೂರಾರು ಕೋಟಿ ಅವ್ಯವಹಾರಕ್ಕೆ ಕೇಂದ್ರ ಬಿಂದುವಾಗಿದ್ದಾರೆ ಎಂದು ಸಾಯಿದತ್ತ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದರು.

 

‘2016-17ನೇ ಸಾಲಿನಲ್ಲಿ ಚಂದ್ರಯ್ಯ ಎಂಬ ಅಧಿಕಾರಿಯು ವೆಂಕಟೇಶ್ವರ ಪ್ರಿಂಟ್‌, ವಿನಾಯಕ ಪ್ರಿಂಟರ್‌, ರಮ್ಯ ಪ್ರಿಂಟರ್‌, ಬ್ರಹ್ಮತೇಜ ಪ್ರಿಂಟರ್ಸ್‌ನೊಂದಿಗೆ ಸೇರಿ ಕಳಪೆ ಗುಣಮಟ್ಟದ ಕಾಗದವನ್ನು ಬಳಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಪೂರೈಕೆ ಮಾಡಿದ್ದಾರೆ. ಸರ್ಕಾರಕ್ಕೆ ಒಳ್ಳೆಯ ಪುಸ್ತಕಗಳನ್ನು ತೋರಿಸಿ ಮಕ್ಕಳಿಗೆ ಕೋಟ್ಯಂತರ ಕಳಪೆ ಪುಸ್ತಕಗಳನ್ನು ಪೂರೈಕೆ ಮಾಡಿದ್ದಾರೆ. ಸರ್ಕಾರ 60 ಜಿಎಂಎಂ ಪೇಪರ್‌ನ್ನು ನಿಗದಿಪಡಿಸಿದೆ. ಆದರೆ ಈ ಮುದ್ರಕರು 50 ಜಿಎಸ್‌ಎಂ ಪೇಪರ್‌ 1 ಟನ್‌ಗೆ 46 ಸಾವಿರು ರು.ಗಳಿವೆ. ಅಂದರೆ 1 ಟನ್ನಿಗೆ 12 ಸಾವಿರ ರುಪಾಯಿ ವ್ಯತ್ಯಾಸವಿದೆ,’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

 

ಈ ಮುದ್ರಕರಿಗೆ 1.60 ಕೋಟಿ ಪುಸ್ತಕಗಳನ್ನು ಮುದ್ರಿಸಲು ಕೊಟ್ಟಿದೆ. ಇದಕ್ಕೆ ಉಪಯೋಗಿಸುವ ಕಾಗದವು 5ರಿಂದ 6 ಸಾವಿರ ಮೆಟ್ರಿಕ್‌ ಟನ್‌ ಅಂದರೆ 7ರಿಂದ 8 ಕೋಟಿಯಷ್ಟು ಹಣ ಉಳಿಸಿ ಮುದ್ರಕರೊಂದಿಗೆ ಕೈ ಜೋಡಿಸಿ ಕೋಟ್ಯಂತರ ರುಪಾಯಿಗಳ ಅವ್ಯವಹಾರ ನಡೆಸಿರುತ್ತಾರೆ. ಇದರಲ್ಲಿ ಸರ್ಕಾರಿ ಮುದ್ರಣದ ಅಧಿಕಾರಿಗಳು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈಗ 60 ಜಿಎಸ್‌ಎಂ ಪೇಪರ್‌ ಉಪಯೋಗಿಸಿದ್ದಾರೆ ಎಂದು ಮರೆಮಾಚಿದ್ದಾರೆ ಎಂದು ಆಪಾದಿಸಿದ್ದಾರೆ.

 

ಆಂಧ್ರದ ಬ್ರಹ್ಮತೇಜ ಪ್ರಿಂಟರ್ಸ್‌ ಇವರಿಗೆ ಕಳೆದ 3 ವರ್ಷ ಕೇವಲ ಒಂದು ಪ್ಯಾಕೇಜ್‌ ಕೊಡುತ್ತಿದ್ದರೂ ಸರಿಯಾದ ವೇಳೆಗೆ ಮಕ್ಕಳಿಗೆ ಸರಬರಾಜು ಮಾಡದೇ ದಂಡ ಹಾಕಿಸಿಕೊಂಡಿದ್ದಾರೆ. ಅಂತಹದರಲ್ಲಿ ಈ ವರ್ಷ 3 ಪ್ಯಾಕೇಜ್‌ಗಳನ್ನು ಕೊಟ್ಟಿದ್ದಾರೆ. ಕಳೆದ ಮೂರು ವರ್ಷ ಒಂದು ಪ್ಯಾಕೇಜ್‌ನ್ನು ವಿಳಂಬ ಮಾಡಿ ಸರಬರಾಜು ಮಾಡುತ್ತಿದ್ದ ಬ್ರಹ್ಮತೇಜ ಪ್ರಿಂಟರ್ಸ್‌ಗೆ ಈ ವರ್ಷ 3 ಪ್ಯಾಕೇಜ್‌ಗಳನ್ನು ಕೊಟ್ಟಿರುವುದು ಅವ್ಯವಹಾರ ಮಾಡಿರುವುದು ಎದ್ದು ಕಾಣುತ್ತದೆ ಎಂದು ಆಪಾದಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಕಳೆದ ವರ್ಷ ಬ್ರಹ್ಮತೇಜ ಹಾಗೂ ಇತರ ಮುದ್ರಕರಿಗೆ ಬ್ಯಾಂಕ್‌ ಗ್ಯಾರಂಟಿ ತೆಗೆದುಕೊಳ್ಳದೇ ಕಾರ್ಯಾದೇಶ ನೀಡಿರುತ್ತಾರೆ. ಮೂಲ ಬ್ಯಾಂಕ್‌ ಗ್ಯಾರಂಟಿಯನ್ನು ಲೆಕ್ಕಪತ್ರ ವಿಭಾಗಕ್ಕೆ ಕೊಡದೇ ಇವರೇ ಇಟ್ಟುಕೊಂಡಿರುತ್ತಾರೆ. ಕಾರಣ ಕೆಲವರು ಮೂಲ ಗ್ಯಾರಂಟಿ ಕೊಟ್ಟಿರುವುದಿಲ್ಲ. ಕಲರ್‌ ಜೆರಾಕ್ಸ್‌ ಕೊಟ್ಟಿರುತ್ತಾರೆ. ಹಾಗಾಗಿ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್‌ಗೆ ಹೆಚ್ಚಿನ ಅಧಿಕಾರ ಕೊಟ್ಟಿರುವುದಿಲ್ಲ. ಯಾವುದೇ ಪ್ರಿಂಟರ್ಸ್‌ ಬ್ಯಾಂಕ್‌ ಗ್ಯಾರಂಟಿ ಕೊಟ್ಟಾಗ ಆ ಬ್ಯಾಂಕ್‌ಗೆ ಪತ್ರ ಹಾಕಿ ದೃಢೀಕರಿಸಿಕೊಳ್ಳಬೇಕು. ಈ ಪ್ರಕ್ರಿಯೆ ಮಾಡಿರುವುದಿಲ್ಲ. ಇವೆಲ್ಲ ಅವ್ಯವಹಾರದ ಕುತಂತ್ರಗಳಾಗಿವೆ ಎಂದೂ ಸಾಯಿದತ್ತ ಆರೋಪಿಸಿದ್ದಾರೆ.

 

ಮುದ್ರಕರಿಗೆ ಸರಬರಾಜು ಮಾಡಲು ಹೆಚ್ಚುವರಿಯಾಗಿ ದಿನಗಳನ್ನು ಯಾವ ವರ್ಷವೂ ನೀಡಿರುವುದಿಲ್ಲ. ಆದರೆ ಈ ವರ್ಷ ಇಲಾಖೆ ಕಡೆಯಿಂದಲೇ ತಪ್ಪಾಗಿದೆ ಎಂದು ನೆಪ ಹೇಳಿ ಕಳಪೆ ಕಾಗದಗಳನ್ನು ಬಳಸಿರುವ ಬ್ರಹ್ಮತೇಜ ಪ್ರಿಂಟರ್ಸ್‌, ವಿನಾಯಕ ಪ್ರಿಂಟರ್ಸ್‌, ವೆಂಕಟೇಶ್ವರ ಪ್ರಿಂಟರ್ಸ್‌, ರಮ್ಯ ಪ್ರಿಂಟರ್ಸ್‌ಗಳಿಗೆ ಹೆಚ್ಚುವರಿ ದಿನಗಳನ್ನು ಕೊಟ್ಟು ದಂಡ ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಿಂಟರ್ಸ್‌ಗಳು ಶಾಲೆಗಳು ಪ್ರಾರಂಭವಾಗಿ 2 ತಿಂಗಳ ನಂತರ ಸರಬರಾಜು ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

‘ಈ ಮುದ್ರಕರುಗಳು 2 ತಿಂಗಳ ನಂತರ ಸರಬರಾಜು ಮಾಡಿದ್ದರೂ ಡಿಸಿಗಳನ್ನು ತಿದ್ದಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೇಗೆಂದರೆ ಬಿಇಒ ಕಚೇರಿಯಲ್ಲಿ ಸ್ವೀಕರಿಸಿದ ದಿನಾಂಕಕ್ಕೂ ಪಠ್ಯಪುಸ್ತಕ ಸಮಯದಲ್ಲಿರುವ ಡಿಸಿಯ ದಿನಾಂಕಕ್ಕೂ ವ್ಯತ್ಯಾಸವಿದೆ. ಇದರಿಂದ ಈ ಮೇಲಿನ ನಾಲ್ಕು ಮುದ್ರಕರಿಗೆ 4 ಕೋಟಿಗಳಷ್ಟು ದಂಡ ಬೀಳುವುದು ತಪ್ಪಿದೆ. ಇದರಲ್ಲಿ ವ್ಯವಹಾರ ಕುದುರಿಸಲಾಗಿದೆ,’ ಎಂದು ಆರೋಪಿಸಲಾಗಿದೆ.

the fil favicon

SUPPORT THE FILE

Latest News

Related Posts