ಬಿಟ್‌ಕಾಯಿನ್‌; ಕಮಲ್‌ಪಂತ್, ಸಂದೀಪ್‌, ಅಡಿಗ ನಡುವಿನ ವಾಟ್ಸಾಪ್‌ ಸಂದೇಶ ಬಹಿರಂಗ

ಬೆಂಗಳೂರು; ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಕುರಿತು ಸೂಕ್ತ ದಾಖಲೆಗಳ ಸಮೇತ ಸಲ್ಲಿಸಿದ್ದ ದೂರನ್ನು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಮತ್ತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ನಿರ್ಲಕ್ಷ್ಯಿಸಿದ್ದರು ಎಂಬ ಸಂಗತಿಯನ್ನು ಸಾಮಾಜಿಕ ಕಾರ್ಯಕರ್ತ ಅಶೋಕ್‌ಕುಮಾರ್‌ ಅಡಿಗ ಅವರ ವಾಟ್ಸಾಪ್‌ ಸಂದೇಶವು ಬಹಿರಂಗಗೊಳಿಸಿದೆ.

ಹಗರಣದ ಕುರಿತು 2021ರ ಏಪ್ರಿಲ್‌ 20ರಂದು ಬೆಂಗಳೂರು ನಗರದ ಪೊಲಿಸ್‌ ಕಮಿಷನರ್‌ ಮತ್ತು ಸಿಸಿಬಿಯ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಏಪ್ರಿಲ್‌ 26ರಂದು ವಾಟ್ಸಾಪ್‌ ಮೂಲಕ ಮಾಹಿತಿ ಒದಗಿಸಿದ್ದರು. ಆದರೆ ಈ ಮಾಹಿತಿಯನ್ನು ಈ ಇಬ್ಬರು ಐಪಿಎಸ್‌ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದರು. ಅಡಿಗ ಅವರು ನೇರವಾಗಿ ಕಳಿಸಿದ್ದ ಸಂದೇಶದ ವಾಟ್ಸಾಪ್‌ನ ಸ್ಕ್ರೀನ್‌ ಶಾಟ್‌ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ನೀವು ನನ್ನ ದೂರನ್ನು ನಿರ್ಲಕ್ಷ್ಯಿಸಿದ್ದೀರಿ. ನಾನು ಈಗಾಗಲೇ ವಾಷಿಂಗ್ಟನ್‌ನಲ್ಲಿನ ಎಫ್‌ಬಿಐಗೆ ದೂರು ಸಲ್ಲಿಸಿದ್ದೇನೆ. ಅವರು ಈಗಾಗಲೇ ತನಿಖೆ ಕೈಗೆತ್ತಿಕೊಂಡಿದ್ದಾರೆ. ಅವರಿಗೆ ನಾನು ಎಲ್ಲಾ ಮಾಹಿತಿಯನ್ನೂ ಕಳಿಸಿದ್ದೇನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ರವಿಕುಮಾರ್‌ ಅವರ ವಿರುದ್ಧ ಸಲ್ಲಿಸಿದ್ದ ದೂರನ್ನೂ ನಿರ್ಲಕ್ಷ್ಯಿಸಿದ್ದೀರಿ,’ ಎಂದು ನೇರವಾಗಿ ಅಡಿಗ ಅವರು ವಾಟ್ಸಾಪ್‌ನಲ್ಲಿ ಸಂದೇಶ ಕಳಿಸಿದ್ದರು. ಆದರೆ ಈ ಯಾವ ಸಂದೇಶಗಳಿಗೂ ಸಿಸಿಬಿಯ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಾಗಲಿ, ಕಮಲ್‌ ಪಂತ್‌ ಅವರಾಗಲೀ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

ಹಾಗೆಯೇ ಸಿಸಿಬಿಯ ಮತ್ತೊಬ್ಬ ಡಿಸಿಪಿ ಅಂಗಡಿ ಅವರಿಗೂ ಅಡಿಗ ಅವರು ವಾಟ್ಸಾಪ್‌ ಮೂಲಕ ಸಂದೇಶ ಕಳಿಸಿದ್ದರು. ಅವರೊಂದಿಗೆ ಸಿಸಿಬಿ ಕಚೇರಿಯಲ್ಲಿ ವಿವರಣೆಗಳನ್ನು ಪಡೆದಿದ್ದರು ಎಂಬುದಕ್ಕೆ ಪೂರಕವಾಗಿ ಅಡಿಗ ಅವರು ನಡೆಸಿದ್ದ ವಾಟ್ಸಾಪ್‌ ಸಂದೇಶಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ಸಿಸಿಬಿಯ ದೊಡ್ಡ ಮಟ್ಟದ ಅಧಿಕಾರಿಗಳು ಮತ್ತು ಹಿರಿಯ ಐಪಿಎಸ್‌ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಡಿಸಿಪಿ ಅಂಗಡಿ ಅವರಿಗೆ ಖುದ್ದಾಗಿ ಒದಗಿಸಿದ್ದೆ. ಆದರೆ ಮಾಹಿತಿ ಪಡೆದುಕೊಂಡ ಅಂಗಡಿ ಅವರು ಇದನ್ನು ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ನೀಡುತ್ತೇನೆ ಎಂದು ತಿಳಿಸಿದ್ದರು. ಆ ನಂತರ ಏನಾಯಿತು ಎಂಬುದು ಗೊತ್ತಿಲ್ಲ,’

ಅಶೋಕ್‌ಕುಮಾರ್‌ ಅಡಿಗ, ಸಾಮಾಜಿಕ ಕಾರ್ಯಕರ್ತ

ಅಲ್ಲದೆ ಅಂಗಡಿ ಭೇಟಿ ಸಂದರ್ಭದಲ್ಲಿ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದೆ. 12,900 ಬಿಟ್‌ಕಾಯಿನ್‌ಗಳನ್ನು ಶ್ರೀಕಿ ಎಂಬಾತನಿಂದ ಸಿಸಿಬಿ ಮೇಲಾಧಿಕಾರಿಗಳು ಮತ್ತು ಐಪಿಎಸ್‌ ಅಧಿಕಾರಿಗಳು ಪಡೆದುಕೊಂಡಿದ್ದಾರೆ, ‘ ಎಂಬ ಆರೋಪವನ್ನು ವೇಲ್‌ ಅಲರ್ಟ್‌ಗಳ ದಾಖಲೆಗಳೊಂದಿಗೆ ಮಾಡಿದ್ದೆ,’ ಎಂದೂ ‘ದಿ ಫೈಲ್‌’ಗೆ ಅಶೋಕ್‌ಕುಮಾರ್‌ ಅಡಿಗ ಅವರು ತಿಳಿಸಿದ್ದಾರೆ.

ಬಿಟ್‌ಕಾಯಿನ್‌ ಹಗರಣ ಕುರಿತು ಸಾಮಾಜಿಕ ಕಾರ್ಯಕರ್ತ ಅಶೋಕ್‌ ಕುಮಾರ್‌ ಅಡಿಗ ಎಂಬುವರು 2021ರ ಜನವರಿ, ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿಯೇ ಹಲವು ಸಾಕ್ಷ್ಯಗಳನ್ನು ಸಿಸಿಬಿಯ ಜಂಟಿ ಆಯುಕ್ತರು ಮತ್ತು ಪ್ರಧಾನಿ ಕಚೇರಿಗೆ ನೇರವಾಗಿ ಸಲ್ಲಿಸಿದ್ದರು

ಈ ಹಗರಣದ ಕುರಿತು ಸಚಿನ್‌ ಮಾಮನಿ ಎಂಬುವರು ಪ್ರಧಾನಿ ಕಚೇರಿಗೆ ಸಲ್ಲಿಸಿದ್ದಾರೆ ಎನ್ನಲಾಗಿರುವ ದೂರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಾದರೂ ಆ ದೂರಿನಲ್ಲಿ ವಿಳಾಸವಿರಲಿಲ್ಲ. ಆದರೆ ಅಶೋಕ್‌ ಕುಮಾರ್‌ ಅಡಿಗ ಅವರು ತಮ್ಮ ವಿಳಾಸದೊಂದಿಗೆ ಸಿಸಿಬಿ ಜಂಟಿ ಆಯುಕ್ತರು ಮತ್ತು ಪ್ರಧಾನಿ ಕಚೇರಿಗೆ ಹಲವು ಮಾಹಿತಿ ಮತ್ತು ದಾಖಲೆಗಳ ಸಮೇತ ಸಲ್ಲಿಸಿದ್ದ ದೂರು ಮುನ್ನೆಲೆಗೆ ಬಂದಿದೆ.

ಅಲ್ಲದೆ ಅಡಿಗ ಅವರು ಸಲ್ಲಿಸಿದ್ದ ದೂರನ್ನು ಸಿಸಿಬಿಯ ಜಂಟಿ ಆಯುಕ್ತರ ಕಚೇರಿ ಸ್ವೀಕರಿಸಿರಲಿಲ್ಲ. ಇದಾದ ನಂತರ ಸಿಸಿಬಿಯ ಡಿಸಿಪಿ ಅಂಗಡಿ ಅವರು ಅಡಿಗ ಅವರನ್ನು ಕರೆಸಿ ಮಾಹಿತಿ ಪಡೆದಿದ್ದರು. ಆದರೆ ಹಗರಣದ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅಡಿಗ ಅವರು ನೇರವಾಗಿ ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು.

ಶ್ರೀಕಿ ಎಂಬಾತ ಸಿಸಿಬಿಯ ವಶದಲ್ಲಿದ್ದಾಗಲೇ 12,900 ಬಿಟ್‌ಕಾಯಿನ್‌ಗಳನ್ನು ನಗದೀಕರಿಸಲಾಗಿತ್ತು. ಇದು ಸಾವಿರಾರು ಕೋಟಿ ರುಪಾಯಿಗಳ ಮೌಲ್ಯದ್ದು. ಕೆಲವನ್ನು ಸಿಸಿಬಿಯ ಕೆಳ ಹಂತದ ಅಧಿಕಾರಿಗಳು ಪಡೆದುಕೊಂಡಿದ್ದರು. ಇಡೀ ಪ್ರಕರಣದಲ್ಲಿ 17 ಮಂದಿ ಭಾಗಿಯಾಗಿದ್ದಾರೆ. 2021ರ ಜನವರಿ 3ರ ಹೊತ್ತಿಗೆ 9,600 ಬಿಟ್‌ಕಾಯಿನ್‌ಗಳನ್ನು ಸಿಸಿಬಿಯ ಪೊಲೀಸರು ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಿದ್ದರು.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಶ್ರೀಕಿ ಎಂಬಾತನನ್ನು2020ರ ಡಿಸೆಂಬರ್‌ನಲ್ಲಿಯೇ ಬಂಧಿಸಿದ್ದ ಹೊತ್ತಿನಲ್ಲೇ ಅಡಿಗ ಅವರು ಸಿಸಿಬಿಯ ಜಂಟಿ ಆಯುಕ್ತರಿಗೆ 2021ರ ಜನವರಿ 3 ಮತ್ತು ಏಪ್ರಿಲ್‌ 26 ರಂದು ದೂರು ಸಲ್ಲಿಸಿದ್ದರು. ಇದೇ ಶ್ರೀಕಿ ಬಿಟ್‌ಕಾಯಿನ್‌ ಹಗರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕಳೆದ ಏಪ್ರಿಲ್‌ನಲ್ಲೇ ಅಡಿಗ ಅವರು ಸಿಸಿಬಿ ಗಮನಕ್ಕೆ ತಂದಿದ್ದರು. ಬಿಟ್‌ಕಾಯಿನ್‌ನ ಅಧಿಕೃತ ವೆಬ್‌ಸೈಟ್‌ನ್ನು ಹ್ಯಾಕ್‌ ಮಾಡಿ ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ಸಾವಿರಾರು ಸಂಖ್ಯೆಯ ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯನ್ನೂ ಒದಗಿಸಿದ್ದರು.

‘ಈ ಸಂಬಂಧ ನೆದರ್‌ಲ್ಯಾಂಡ್‌ನ ಆ್ಯಮ್‌ಸ್ಟರ್ ಡ್ಯಾಮ್‌, ನಲ್ಲಿ ಶ್ರೀಕಿ ವಿರುದ್ಧ ಪ್ರಕರಣ ದಾಖಲಕಾಗಿದೆ. ನ್ಯಾಷನಲ್‌ ಪೊಲೀಸ್‌ ಕಾರ್ಪ್ಸ್‌ (ಎನ್‌ಪಿಸಿ) ಈ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಬಿಟ್‌ಕಾಯಿನ್‌ಗಳನ್ನು ಅಕ್ರಮವಾಗಿ ತನ್ನ ವ್ಯಾಲೆಟ್‌ಗೆ ವರ್ಗಾಯಿಸಿಕೊಂಡಿರುವ ಶ್ರೀಕಿಯನ್ನು ಈ ತನಿಖಾ ತಂಡ ಬೆನ್ನೆತ್ತಿದೆ. ಪ್ರತಿ ಬಿಟ್‌ಕಾಯಿನ್‌ನ ಯುನಿಕ್‌ ಐಡೆಂಟಿಫಿಕೇಷನ್‌ ನಂಬರ್‌ನ್ನು ಜಾಲಾಡುತ್ತಿದೆ. ಈ ಸಂಬಂಧ ಕೆಲ ದಾಖಲೆಗಳನ್ನು ನಾನು ಸಂಗ್ರಹಿಸಿದ್ದೇನೆ. ಅಲ್ಲದೆ ಅಮೇರಿಕದ ಫೆಡರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ ಗೆ ತಲುಪಿಸಲಿದ್ದೇನೆ,’ ಎಂಬ ಮಾಹಿತಿಯನ್ನು ಸಿಸಿಬಿಯ ಜಂಟಿ ಆಯುಕ್ತರಿಗೆ ಒದಗಿಸಿದ್ದರು ಎಂಬುದು ದೂರಿನಿಂದ ಗೊತ್ತಾಗಿದೆ.

‘ಈ ಹಗರಣಕ್ಕೆ ಸಂಬಂಧಿಸಿದಂತೆ 3 ಕಡತಗಳನ್ನು ಆ್ಯಮ್‌ಸ್ಟರ್ ಡ್ಯಾಮ್‌ನಿಂದ ಪಡೆದಿದ್ದೇನೆ. 2 ಕಡತಗಳನ್ನು ಅಮೇರಿಕದಿಂದ ಪಡೆದಿದ್ದೇನೆ. ಅಂದಾಜು 1,017 ವೇಲ್‌ ಅಲರ್ಟ್‌ಗಳ ಸ್ಕ್ರೀನ್‌ ಶಾಟ್‌ಗಳನ್ನು ತರಿಸಿಕೊಂಡಿದ್ದೇನೆ. ಸಿಂಗಾಪೂರ್‌ನಲ್ಲಿರುವ ಇಂಟರ್‌ಪೋಲ್‌ ಕಚೇರಿಗೆ 3 ಕಡತಗಳನ್ನು ರವಾನಿಸಿದ್ದೇನೆ,’ ಎಂಬ ಮಾಹಿತಿಯನ್ನೂ ಸಿಸಿಬಿಯ ಜಂಟಿ ಆಯುಕ್ತರಿಗೆ ಬರೆದಿರುವ ದೂರಿನಲ್ಲಿ ಅಡಿಗ ಅವರು ತಿಳಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts