ಒಕ್ಕಲಿಗರ ಸಂಘದ ಚುನಾವಣೆ; ಸರ್ಕಾರದಿಂದ ಸೂಚನೆ ಪಡೆಯಲು ಆಡಳಿತಾಧಿಕಾರಿಗೆ ಪತ್ರ

ಬೆಂಗಳೂರು; ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ನಡೆಸುವ ಸಂಬಂಧ ನ್ಯಾಯಾಲಯವು ನೀಡಿರುವ ಸೂಚನೆ ಕುರಿತು ಸರ್ಕಾರದಿಂದ ಮಾಹಿತಿ ಪಡೆಯಲು ಸಹಕಾರ ಇಲಾಖೆಯು ಸಂಘದ ಆಡಳಿತಾಧಿಕಾರಿಗೆ ಪತ್ರ ಬರೆದಿದೆ.

ಸಂಘದ ಆಡಳಿತಾಧಿಕಾರಿ ಅವಧಿಯಲ್ಲಿ ಬೈಲಾ ತಿದ್ದುಪಡಿ ಮಾಡಲು ಸರ್ಕಾರವು ನಿರಾಕರಿಸಿದ್ದರ ಬೆನ್ನಲ್ಲೇ ಸಂಘದ ಚುನಾವಣೆಯು ಯಾವಾಗ ನಡೆಯಲಿದೆ ಎಂಬ ಬಗ್ಗೆ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

ಅಲ್ಲದೆ ಸಂಘದ ಆಡಳಿತ ಮಂಡಳಿಯು ನಡೆಸಿರುವ ಅಕ್ರಮಗಳು, ದುರುಪಯೋಗ ಮತ್ತು ಅಸಮರ್ಪಕ ಕಾರ್ಯಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಂಘದ ಆಡಳಿತಾಧಿಕಾರಿಗೆ ಸೂಚಿಸಲಾಗಿದೆ. ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯ ಒಕ್ಕಲಿಗರ ಸಂಘದ ಬೈಲಾ ತಿದ್ದುಪಡಿ ಮಾಡಿ ಆ ನಂತರ ಸಂಘದ ಚುನಾವಣೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಸಚಿವ ಗೋಪಾಲಯ್ಯ, ವಿಧಾನಪರಿಷತ್‌ ಸದಸ್ಯ ಅ ದೇವೇಗೌಡ ಅವರು ಸಹಕಾರಿ ಇಲಾಖೆಗೆ ಪತ್ರ ಬರೆದಿದ್ದರು.

ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಇನ್ನಿತರೆ ಪದಾಧಿಕಾರಿಗಳನ್ನು ನೇರವಾಗಿ ಸಂಘದ ಎಲ್ಲಾ ಸದಸ್ಯರುಗಳಿಂದ ನಿರ್ದೇಶಕರ ಚುನಾವಣೆಯಲ್ಲಿಯೇ ಆಯ್ಕೆ ಮಾಡುವ ಸಂಬಂಧ ಉದ್ಧೇಶಿತ ಬೈಲಾ ತಿದ್ದುಪಡಿಗೆ ಒಪ್ಪದಿರಲು ಸಹಕಾರ ಇಲಾಖೆ ನಿಲುವು ತಾಳಿದೆ. ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಸೇರಿದಂತೆ ಹಲವರು ಬರೆದಿದ್ದ ಪತ್ರಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಮಾನ್ಯತೆ ನೀಡಿರಲಿಲ್ಲ.

ಸಂಘದಲ್ಲಿ ಒಟ್ಟು 5,20,721 ಮಂದಿ ಸದಸ್ಯರು ನೋಂದಣಿಯಾಗಿದ್ದಾರೆ. ಸಂಘದ ಬೈಲಾ 7(3)ರ ಪ್ರಕಾರ 11 ಜಿಲ್ಲಾ ಕ್ಷೇತ್ರಗಳಿಂದ 35 ಕಾರ್ಯಕಾರಿ ಸಮಿತಿ ಸದಸ್ಯರಿದ್ದಾರೆ. ಪದಾಧಿಕಾರಿಗಳ ನೇರ ಚುನಾವಣೆಗೆ ಬೈಲಾ ತಿದ್ದುಪಡಿ ಮಾಡಲು ಅಧ್ಯಕ್ಷರು, ಉಪಾಧ್ಯಕ್ಷರು, ಸಹಾಯಕ ಕಾರ್ಯದರ್ಶಿ, ಖಜಾಂಚಿ ಸೇರಿ ಒಟ್ಟು 5 ಸ್ಥಾನಗಳಿಗೆ ಯಾವ ಜಿಲ್ಲೆಯ ನಿರ್ದೇಶಕರ ಸಂಖ್ಯೆಯಲ್ಲಿ ಕಡಿಮೆ ಮಾಡಬೇಕು ಎಂಬ ಬಗ್ಗೆಯೂ ತೀರ್ಮಾನವಾಗಿಲ್ಲ ಎಂಬ ಸಂಗತಿ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಪದಾಧಿಕಾರಿಗಳ ನೇರ ಆಯ್ಕೆ ಮಾಡಲು 11 ಜಿಲ್ಲಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಮತಗಟ್ಟೆಯಲ್ಲಿಯೂ 6 ಪೆಟ್ಟಿಗೆಗಳನ್ನು ಇಡಬೇಕಿದೆ. ಇದರ ನಿರ್ವಹಣೆ ಮತ್ತು ಖರ್ಚು ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತದೆ. ಈ ರೀತಿಯ ಬೈಲಾ ತಿದ್ದುಪಡಿಯನ್ನು ಸಂಘದ ಆಡಳಿತಾಧಿಕಾರಿ ಅವಧಿಯಲ್ಲಿ ಆಡಳಿತಾಧಿಕಾರಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಸರ್ಕಾರವನ್ನು ಕೋರಲು ಇಲಾಖೆ ಮುಂದಾಗಿದೆ ಎಂಬುದು ಗೊತ್ತಾಗಿದೆ.

‘ಸಂಘದ ಸದಸ್ಯರ ಪೈಕಿ ಶೇ.60ಕ್ಕಿಂತಲೂ ಹೆಚ್ಚಿನ ಸದಸ್ಯರು ಗ್ರಾಮೀಣ ಭಾಗದವರಾಗಿದ್ದು ಅವರೆಲ್ಲರೂ ಮೊಬೈಲ್‌ ಸಂಖ್ಯೆಯನ್ನು ಹೊಂದಿರುವುದಿಲ್ಲ. ವರ್ಚುವಲ್‌ ಸರ್ವ ಸದಸ್ಯರ ಸಭೆಗೆ ಭಾಗವಹಿಸಲು ಅಗತ್ಯವಿರುವ ಸ್ಮಾರ್ಟ್‌ ಫೋನ್‌ ಹೊಂದಿರುವ ಸಾಧ್ಯತೆ ಕಡಿಮೆ ಇದೆ. ಇವರುಗಳು ವರ್ಚುವಲ್‌ ಸರ್ವ ಸದಸ್ಯರ ಸಭೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ದೊಡ್ಡಮಟ್ಟದ ಸದಸ್ಯರನ್ನೊಳಗೊಂಡ ಸಂಘದ ಸದಸ್ಯರನ್ನು ಕರೆದು ಬೈಲಾ ತಿದ್ದುಪಡಿ ಅಂಶಗಳನ್ನೊಳಗೊಂಡ ದೊಡ್ಡಮಟ್ಟದ ತೀರ್ಮಾನದ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಏಕಕಾಲದಲ್ಲಿ ಸಂಗ್ರಹಿಸುವುದು ಕಷ್ಟಕರ. ಹೀಗಾಗಿ ಸಂಘದ ಚುನಾವಣೆ ನಡೆಸಲು ಚುನಾವಣಾಧಿಕಾರಿ ನೇಮಕ ಮಾಡಬೇಕು,’ ಎಂದು ಹಲವರು ಕೋರಿದ್ದರು.

ಮಹತ್ವವಾದ ಬೈಲಾ ತಿದ್ದುಪಡಿಯನ್ನು ಆಡಳಿತಾಧಿಕಾರಿಯವರ ಅವಧಿಯಲ್ಲಿ ಸಂಘಗಳ ಕಾಯ್ದೆ ಅಡಿಯಲ್ಲಿ ಮಾಡುವುದು ಸೂಕ್ತವೇ ಎಂಬ ಬಗ್ಗೆ ಸರ್ಕಾರದ ನಿರ್ದೇಶನ ಕೋರಿದ್ದ ಇಲಾಖೆ, ಅಂತಿಮವಾಗಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ಸಂಘಗಳ ಬೈಲಾ ತಿದ್ದುಪಡಿ ಮಾಡುವ ಅವಕಾಶವಿಲ್ಲ ಎಂದು ನಿಲುವು ತಾಳಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ಶಂಕರಲಿಂಗೇಗೌಡ ಅವರನ್ನು ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ. ಫೆ.21ರಿಂದ ಜಾರಿಗೆ ಬರುವಂತೆ ಶಂಕರಲಿಂಗೇಗೌಡ ಅವರು ಮುಂದಿನ 6 ತಿಂಗಳವರೆಗೂ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನೂತನ ಆಡಳಿತಾಧಿಕಾರಿಯಾಗಿರುವ ಶಂಕರಲಿಂಗೇಗೌಡ ಅವರು 6 ತಿಂಗಳ ಅವಧಿಯಲ್ಲಿ ಸಂಘದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಹಕಾರ ಇಲಾಖೆ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts