‘ದಿ ಫೈಲ್‌’ ವರದಿ ಪರಿಣಾಮ; ಪುಸ್ತಕಗಳ ತರಾತುರಿ ಆಯ್ಕೆಗೆ ತಡೆ, ಅವಧಿ ವಿಸ್ತರಣೆ

ಬೆಂಗಳೂರು; ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪ ಯೋಜನೆ(ಎಸ್‌ಸಿಪಿ/ಟಿಎಸ್‌ಪಿ) ಅಡಿಯಲ್ಲಿ 2020ನೇ ಸಾಲಿನಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಸಲ್ಲಿಸುವ ಅವಧಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆ ವಿಸ್ತರಿಸಿದೆ.

ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಸಲ್ಲಿಸಲು ನಿರ್ದಿಷ್ಟ ಪ್ರಕಾಶಕರಿಗಷ್ಟೇ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಒಳಗಾಗಿದ್ದ ಇಲಾಖೆ ಅಧಿಕಾರಿಗಳು ಇದೀಗ ಕಡೆ ದಿನಾಂಕವನ್ನು 2020ರ ಆಗಸ್ಟ್‌ 31ರವರೆಗೆ ವಿಸ್ತರಿಸಿದೆ.

ಈ ಮೊದಲು ಆಗಸ್ಟ್‌ 17ರಂದು ಕಡೆ ದಿನಾಂಕ ಎಂದು ಹೇಳಿದ್ದ ಇಲಾಖೆ ಈ ಸಂಬಂಧ ಪತ್ರಿಕಾ ಜಾಹೀರಾತು ಪ್ರಕಟಿಸಿತ್ತು ಎನ್ನಲಾಗಿತ್ತು. ಆದರೆ ಪತ್ರಿಕಾ ಜಾಹೀರಾತು ಹೊರಡಿಸಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಮೊದಲು ಪ್ರಕಟಿಸಿದೆ ಎಂದು ಹೇಳಲಾಗಿದ್ದ ಜಾಹೀರಾತಿನ ಸಂಖ್ಯೆ ಮತ್ತು ದಿನಾಂಕವೂ ನಮೂದಾಗದಿರುವುದು ಮತ್ತಷ್ಟು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಈ ಕುರಿತು ‘ದಿ ಫೈಲ್‌’ 2020ರ ಆಗಸ್ಟ್‌ 14ರಂದು ಪುಸ್ತಕಗಳ ಆಯ್ಕೆಗೆ ತರಾತುರಿ; ಕಮಿಷನ್‌ ಹೊಡೆಯಲು ನಡೆದಿದೆ ಭರ್ಜರಿ ತಯಾರಿ’ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪುಸ್ತಕಗಳನ್ನು ಸಲ್ಲಿಸುವ ಅವಧಿಯನ್ನು ವಿಸ್ತರಿಸಿದ್ದಾರೆ. ಈ ಸಂಬಂಧ ಪ್ರಜಾವಾಣಿ ದಿನಪತ್ರಿಕೆಯಲ್ಲಿ 2020ರ ಆಗಸ್ಟ್‌ 19ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಕನ್ನಡ ಸಾಹಿತ್ಯ, ಪರಾಮರ್ಶನ, ಸ್ಪರ್ಧಾತ್ಮಕ, ಪಠ್ಯಪುಸ್ತಕ ಹಾಗೂ ಮಕ್ಕಳ ಪುಸ್ತಕ, ವಿಶ್ವಕೋಶಗಳು, ಕಾನೂನು, ವಿಜ್ಞಾನ ತಂತ್ರಜ್ಞಾನ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಪುಸ್ತಕಗಳು ಹಾಗೂ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಕನ್ನಡ ಮತ್ತು ಆಂಗ್ಲ ಪುಸ್ತಕಗಳನ್ನು ಮೀಸಲು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಂಥಾಲಯಗಳಿಗೆ ಖರೀದಿಸಲು ಪ್ರಕಟಣೆ ಹೊರಡಿಸಿದೆ.

ಪುಸ್ತಕಗಳ ಆಯ್ಕೆ ಸಮಿತಿಯೇ ಅಪೂರ್ಣವಾಗಿರುವುದು ಮತ್ತು ಕೊರೊನಾ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಜೇಬು ತುಂಬಿಸಿಕೊಳ್ಳಲು ಹೊರಟಿದ್ದಾರೆ ಎಂಬ ಬಲವಾದ ಆರೋಪಗಳು ಪ್ರಕಾಶಕರ ವಲಯದಿಂದ ಕೇಳಿ ಬಂದಿತ್ತು.

ಅಧಿಕಾರಿಗಳ ವಲಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಹೊಣೆಗಾರಿಕೆ ಹೊತ್ತಿರುವ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಈ ಬಗ್ಗೆ ಮೌನ ವಹಿಸಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದ್ದರು.

ಅಧಿಕಾರಿಗಳ ತರಾತುರಿಗೆ ತಡೆ

2020-21ನೇ ಸಾಲಿಗೆ ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕಾಶಕರಿಗಷ್ಟೇ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಪುಸ್ತಕಗಳನ್ನು ಆಹ್ವಾನಿಸಿದ್ದರು.
ಪ್ರಸಕ್ತ ಸಾಲಿನಲ್ಲಿ ಅಂದಾಜು 1.00 ಕೋಟಿ ಮೊತ್ತದಲ್ಲಿ ಪುಸ್ತಕಗಳನ್ನು ಇಲಾಖೆ ಖರೀದಿಸಲಿದೆ ಎಂದು ಗೊತ್ತಾಗಿದೆ. ಆದರೆ ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಲು ಆಗಸ್ಟ್‌ 17 ಕಡೆ ದಿನಾಂಕ ಎಂದು ಗೊತ್ತುಪಡಿಸುವ ಮೂಲಕ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಕಾಶಕರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡುವ ಸಂಚು ನಡೆದಿದೆ ಎಂದು ಹಲವು ಪ್ರಕಾಶಕರು ಆರೋಪಿಸಿದ್ದರು.

ಆಗಸ್ಟ್‌ 15 ಮತ್ತು 16ರ ಎರಡೂ ದಿನಗಳು ರಜಾ ದಿನಗಳಾಗಿವೆ. ಆದರೂ ಆಗಸ್ಟ್‌ 17 ಕಡೆ ದಿನಾಂಕ ಎಂದು ಅಧಿಕಾರಿಗಳೇ ಗೊತ್ತುಪಡಿಸಿದ್ದರು ಎನ್ನಲಾಗಿತ್ತು. ರಜಾ ದಿನಗಳಂದು ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿರುವ ಪ್ರಕಾಶಕರು ಹೇಗೆ ತಾನೆ ಪುಸ್ತಕಗಳನ್ನು ಆಯ್ಕೆ ಸಮಿತಿಗೆ ತಲುಪಿಸಬಲ್ಲರು ಎಂಬ ಪ್ರಶ್ನೆಯೂ ಎದುರಾಗಿತ್ತು.

‘ದಿ ಫೈಲ್‌’ ಜತೆ ಮಾತನಾಡಿದ್ದ ಪ್ರಕಾಶಕರೊಬ್ಬರು ಈ ಉಪಯೋಜನೆ ಹೊಣೆ ಹೊತ್ತಿರುವ ಅಧಿಕಾರಿಯೊಬ್ಬರ ಸಂಪರ್ಕದಲ್ಲಿರುವ ಪ್ರಕಾಶಕರಿಗಷ್ಟೇ ಈ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ತರಾತುರಿಯಲ್ಲಿ ಅವರಿಂದ ಮಾತ್ರವೇ ಪುಸ್ತಕಗಳನ್ನು ಈ ಯೋಜನೆ ಅಡಿ ಆಯ್ಕೆ ಮಾಡಲು ಸಂಚು ರೂಪಿಸಲಾಗಿದೆ,’ ಎಂದು ಗುಮಾನಿ ವ್ಯಕ್ತಪಡಿಸಿದ್ದರು.

ಪ್ರಕಟಣೆ ಹೊರಡಿಸಿತ್ತೇ?

ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಣೆ ಹೊರಡಿಸಬೇಕು. ಆದರೆ ಈ ಬಾರಿ ಯಾವ ದಿನಪತ್ರಿಕೆಯಲ್ಲೂ ಪ್ರಕಟಣೆ ಹೊರಡಿಸದೇ ಅಧಿಕಾರಿಯೊಬ್ಬರ ನಿಕಟ ಸಂಪರ್ಕದಲ್ಲಿರುವ ಪ್ರಕಾಶಕರಿಗಷ್ಟೇ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಗ್ರಂಥಾಲಯ ಇಲಾಖೆಯ ಅಧಿಕೃತ ಜಾಲತಾಣದಲ್ಲೂ ಈ ಬಗ್ಗೆ ಯಾವುದೇ ಪ್ರಕಟಣೆಯನ್ನ ಪ್ರಕಟಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.

ಆರ್‌ಆರ್‌ಎಲ್‌ಎಫ್‌ ಯೋಜನೆಯಡಿಯಲ್ಲಿ ಸರಬರಾಜು ಮಾಡುವ ಪುಸ್ತಕಗಳ ಸ್ವೀಕೃತಿಗಾಗಿ 2020ರ ಮಾರ್ಚ್‌ 13 ಕಡೆ ದಿನಾಂಕ ಎಂಬ ಮಾಹಿತಿ ಮತ್ತು 2019ನೇ ಸಾಲಿನಲ್ಲಿ ಪ್ರಕಟಗೊಂಡು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿ ವಿವರ ಸೇರಿದಂತೆ 2017, 2018 ಮತ್ತು 2019ನೇ ಸಾಲಿಗೆ ಸಂಬಂಧಿಸಿದ ಕೆಲ ಪ್ರಕಟಣೆಗಳ ಹೊರತಾಗಿ 2020ನೇ ಸಾಲಿನ ಪುಸ್ತಕಗಳ ಆಯ್ಕೆ ಸಂಬಂಧ ಯಾವ ಅಧಿಸೂಚನೆಯೂ ಇರಲಿಲ್ಲ.

ಹಂಪಿ ನಗರದಲ್ಲಿ ಶುರುವಾಗಿತ್ತು ಕಾರ್ಯಾಚರಣೆ?

ಈ ಬಗ್ಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ‘ದಿ ಫೈಲ್‌’ ಸಂಜೆ 7.58ಕ್ಕೆ ಭೇಟಿ ಕೊಟ್ಟಾಗಲೂ 2020ನೇ ಸಾಲಿನ ಪುಸ್ತಕ ಆಯ್ಕೆ ಕುರಿತು ಯಾವ ಪ್ರಕಟಣೆಯೂ ಕಂಡು ಬಂದಿರಲಿಲ್ಲ. ಬೆಂಗಳೂರಿನ ಹಂಪಿನಗರದಲ್ಲಿರುವ ಗ್ರಂಥಾಲಯ ಕಚೇರಿಯಲ್ಲಿ ಪುಸ್ತಕಗಳ ಕಾಪಿರೈಟ್ ಮಾಡಿಸುವ ಮತ್ತು ಅಲ್ಲಿಯೇ ಆಯ್ಕೆಗೆ ಪುಸ್ತಕಗಳನ್ನು ಸಲ್ಲಿಸುವ ಪ್ರಕ್ರಿಯೆಗೆ ಸದ್ದಿಲ್ಲದೇ ಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿತ್ತು.

‘ಆಯ್ಕೆ ಪ್ರಕ್ರಿಯೆ ಆರಂಭವಾಗಿರುವ ಹಾಗೂ ಕೊನೆಯ ದಿನಾಂಕದ ವಿವರಗಳ ಬಗ್ಗೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಆದರೆ ಈ ಬಾರಿ ಯಾವ ಪ್ರಕಟಣೆಯೂ ಹೊರಡಿಸಿಲ್ಲ. ಕನಿಷ್ಠ ಇಲಾಖೆಯ ಅಧಿಕೃತ ಜಾಲತಾಣದಲ್ಲಾದರೂ ಈ ಬಗ್ಗೆ ಮಾಹಿತಿ ಒದಗಿಸಬೇಕು. ಅಧಿಕಾರಿಗಳ ಪ್ರಕಾರ ಜುಲೈ 3 ಮತ್ತು 4 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆದರೆ ಪ್ರಕಟವಾದ ಪ್ರಜಾವಾಣಿ ಪತ್ರಿಕೆಯನ್ನೇ ಅಧಿಕಾರಿಗಳು ತೋರಿಸುತ್ತಿಲ್ಲ. ಹೀಗಾಗಿ ಪುಸ್ತಕ ಆಯ್ಕೆ ಸಮಿತಿ ಪಾರದರ್ಶಕವಾಗಿಲ್ಲ ಎಂದು ಮೇಲ್ನೋಟಕ್ಕೆ ಆರೋಪಿಸಬಹುದು,’ ಎಂದು ಪ್ರತಿಕ್ರಿಯಿಸಿದ್ದರು ಮತ್ತೊಬ್ಬ ಪ್ರಕಾಶಕರು.

the fil favicon

SUPPORT THE FILE

Latest News

Related Posts