Sunday | July 12, 2026 |

900 ಎಕರೆಯಲ್ಲಿ ನೆಲೆಗೊಳ್ಳಲಿಲ್ಲ ಒಂದೇ ಒಂದು ಕೈಗಾರಿಕೆ; ಎಂಎಸ್‌ಪಿಎಲ್‌ ರಕ್ಷಣೆಗೆ ನಿಂತ ಬಿಜೆಪಿ ಸರ್ಕಾರ?

ಬೆಂಗಳೂರು; ಪ್ರತಿಷ್ಠಿತ ಎಂಎಸ್‌ಪಿಎಲ್‌ ಒಡೆತನದ ಮತ್ತೊಂದು ಕಂಪನಿ ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ (AARESS IRON STEEL LIMITED) ಕೈಗಾರಿಕೆ ಉದ್ದೇಶಕ್ಕೆ ಮಂಜೂರು ಮಾಡಿಸಿಕೊಂಡಿದ್ದ 900 ಎಕರೆ  ವಿಸ್ತೀರ್ಣದ ಪ್ರದೇಶದಲ್ಲಿ ಈವರೆವಿಗೂ ಒಂದೇ ಒಂದು ಕೈಗಾರಿಕೆಯನ್ನು ಸ್ಥಾಪಿಸಿಲ್ಲ. 

ಎಂಎಸ್‌ಪಿಎಲ್‌ ಕಂಪನಿಗೆ ಕೊಪ್ಪಳ ಜಿಲ್ಲಾಧಿಕಾರಿ ನೋಟೀಸ್‌ ನೀಡಿರುವ ಬೆನ್ನಲ್ಲೇ ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿಯ ಬಂಡವಾಳವೂ ಹೊರಬಿದ್ದಿದೆ. ಜಮೀನು ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರ ಬೆನ್ನಲ್ಲೇ ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ 900 ಎಕರೆಯ ವೃತ್ತಾಂತವೂ ಮುನ್ನೆಲೆಗೆ ಬಂದಿದೆ. 

ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು  ಎಂಎಸ್‌ಪಿಎಲ್‌ ಸಮೂಹದ ಆರ್‌ ಎಸ್‌ ಸ್ಟೀಲ್‌ ಕಂಪನಿ ನೇರನೇರಾ ಉಲ್ಲಂಘಿಸುತ್ತಿದ್ದರೂ ಕಂದಾಯ ಸಚಿವ ಆರ್‌ ಅಶೋಕ್‌ ಮತ್ತು ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಅವರು ಮುಗುಮ್ಮಾಗಿ ಕುಳಿತಿದ್ದಾರೆ. ಈ ಪ್ರಕರಣ ವಿಧಾನಸಭೆಯ ಅಂದಾಜು ಸಮಿತಿಯಲ್ಲಿ ವಿಚಾರಣೆ ನಡೆಯುತ್ತಿದ್ದರೂ ಕಂದಾಯ ಮತ್ತು ಕೈಗಾರಿಕೆ, ವಾಣಿಜ್ಯ ಇಲಾಖೆ ಅಧಿಕಾರಿಗಳು  ಹಾರಿಕೆ ಉತ್ತರ ನೀಡಿ ನುಣುಚಿಕೊಳ್ಳುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ. 

ಕಳೆದ  10  ವರ್ಷಗಳಿಂದಲೂ ಯಾವುದೇ ಕೈಗಾರಿಕೆಯನ್ನು ಸ್ಥಾಪಿಸದೇ ಪಡಾ ಬಿಟ್ಟಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಜಾಣ ಕುರುಡನ್ನು ಪ್ರದರ್ಶಿಸಿದೆ. ಆರ್‌ ಎಸ್‌ ಐರನ್‌ ಸ್ಟೀಲ್‌ ಕಂಪನಿ ಪಡಾ ಬಿಟ್ಟಿರುವ ಈ ಜಮೀನಿನ ಮಾರುಕಟ್ಟೆಯ ಅಂದಾಜು ಮೌಲ್ಯ 270 ಕೋಟಿ ರು.ಇದೆ. 

900 ಎಕರೆ ಜಾಗದಲ್ಲಿ ಕೈಗಾರಿಕೆಯನ್ನೇ ಸ್ಥಾಪಿಸಿಲ್ಲ  ಎಂದು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಮುಂದೆ ಒಪ್ಪಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಗೆ ದಾಖಲೆಗಳು ಲಭ್ಯವಾಗಿವೆ.

 

ವಿಮಾನ ನಿಲ್ದಾಣ, ಏರ್‌ ಸ್ಟ್ರಿಪ್‌ ಯೋಜನೆ ಹೆಸರಿನಲ್ಲಿ ಜಮೀನುಗಳನ್ನು ಖರೀದಿಸಿರುವ ಪ್ರಕರಣಗಳ ಕುರಿತು ಅಂದಾಜು ಸಮಿತಿ ಪರಿಶೀಲಿಸುತ್ತಿದೆ. ಆದರೆ ಸಮಿತಿಯ ಸದಸ್ಯ ಶಾಸಕರುಗಳನ್ನೇ ಕಂದಾಯ ಇಲಾಖೆಯ ಅಧಿಕಾರಿಗಳು ದಿಕ್ಕು  ತಪ್ಪಿಸುತ್ತಿದ್ದಾರಲ್ಲದೆ ಹಾರಿಕೆ ಉತ್ತರ ನೀಡಿ ನುಣುಚಿಕೊಳ್ಳುತ್ತಿರುವುದು ದಾಖಲೆಗಳಿಂದ ತಿಳಿದು ಬಂದಿದೆ. 

ಅಲ್ಲದೆ ಕೆಐಎಡಿಬಿ ವ್ಯಾಪ್ತಿಗೆ ಸೇರಿದ ಭೂಮಿಯಲ್ಲಿ ಏರೋಡ್ರಮ್‌  ಸ್ಥಾಪನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ  ಈ ಜಾಗವನ್ನು  ಕೈಗಾರಿಕೆ ಅಭಿವೃದ್ಧಿಗಾಗಿ ಮಂಜೂರಾಗಿದೆ. ಇದರ ಮತ್ತೊಂದು ವಿಶೇಷವೆಂದರೆ ಮಂಜೂರಾಗಿರುವ ಜಾಗ ಎ-ಖರಾಬು ವರ್ಗೀಕರಣದಲ್ಲಿದೆ. ಇಂತಹ  ಜಾಗವನ್ನು ರೈತ ಮಾರಾಟ ಮಾಡಲು ಸಾಧ್ಯವೇ ಇಲ್ಲ. ಆತ ಇರುವವರೆಗೂ ಎ-ಖರಾಬು ಜಮೀನಿನ ಅನುಭವದಾರನಾಗಬಹುದೇ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ. 

ಏರೋಡ್ರಮ್‌ ಸ್ಥಾಪನೆ ಮಾಡಲು ಕೊಟ್ಟಿರುವ ಜಾಗ ಯಾರಿಗೆ ಸಂಬಂಧಪಟ್ಟಿದೆ, ರೈತರಿಂದ ಅವರು ಖರೀದಿ ಮಾಡಿದ್ದಾರೆಯೇ, ಸರ್ಕಾರದಿಂದ ಭೂ ದಾನ ನೀಡಲಾಗಿದೆಯೇ  ಅಥವಾ 109 ರ ಪ್ರಕಾರ ಇವರಿಗೆ ಅವಕಾಶ ನೀಡಿದ್ದಾರೆಯೇ, ಯಾವ ಆಧಾರದ ಮೇಲೆ ಮಂಜೂರು ಮಾಡಿದ್ದಾರೆ ಎಂದು ಅಂದಾಜು ಸಮಿತಿ ಕೇಳುತ್ತಿರುವ ಪ್ರಶ್ನೆಗಳಿಗೆ ಕಂದಾಯ ಇಲಾಖೆ ಮತ್ತು ವಾಣಿಜ್ಯ, ಕೈಗಾರಿಕೆ ಇಲಾಖೆ ಬಳಿ ಸಮರ್ಪಕ ಉತ್ತರಗಳಿಲ್ಲ.

ಸಮಿತಿ ಸದಸ್ಯ ಶಾಸಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸುತ್ತಿರುವ ಅಧಿಕಾರಿಗಳನ್ನು ಸದಸ್ಯ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ತರಾಟೆಗೆ ತೆಗೆದುಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ. ‘ಈ ವಿಚಾರದಲ್ಲಿ ಏನೋ ವಂಚನೆ ಆಗಿದೆ. ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ. ಸರ್ಕಾರದ ಖರಾಬು ಜಮೀನನ್ನು ಲೂಟಿ ಹೊಡೆದಿರಬಹುದು ಅಥವಾ ಸರ್ಕಾರದಿಂದಲೇ ಮಂಜೂರು ಮಾಡಿರಬಹುದು,’ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

ಇನ್ನು ಇದೇ ಪ್ರಕರಣದಲ್ಲಿ ರೈತರು  2017ರಲ್ಲಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಆದರೆ 2009ರಲ್ಲೇ ಕಂಪನಿಗೆ ಭೂಮಿ ಕೊಟ್ಟಿರುವ ಸರ್ಕಾರ, ನಿಗದಿತ ಉದ್ದೇಶಕ್ಕೆ  ಬಳಕೆ ಮಾಡದಿದ್ದರೂ ಭೂಮಿಯನ್ನು ವಾಪಸ್‌ ಪಡೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬಲ್ದೋಟಾ ಸಮೂಹದ ಕಂಪನಿಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆಯನ್ನು  ನೇರನೇರಾ ಉಲ್ಲಂಘಿಸುತ್ತಿದ್ದರೂ ಕಂದಾಯ ಇಲಾಖೆ  ಅಧಿಕಾರಿಗಳದ್ದು ಮಾತ್ರ ಜಾಣ ಕುರುಡು. ಕರ್ನಾಟಕ ವಿಧಾನಸಭೆಯ ಅಂದಾಜು ಸಮಿತಿ ಈ ಪ್ರಕರಣವನ್ನು ಹೊರಗೆಡವವರೆಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೇ ಯಾವ ಮಾಹಿತಿಯೂ ಇರಲಿಲ್ಲ ಎಂಬ ಅಂಶ  ದಾಖಲೆಯಿಂದ ತಿಳಿದು ಬಂದಿದೆ. 

ಆರ್‌ ಎಸ್‌ ಐರನ್‌  ಸ್ಟೀಲ್‌ ಕಂಪನಿ ಕೊಪ್ಪಳ ಯೋಜನೆಗಾಗಿ ಒಟ್ಟು 4,500 ಕೋಟಿ ರು. ಹೂಡಿಕೆ ಮಾಡಲು ಉದ್ದೇಶಿಸಿತ್ತು. ಇದು ಉತ್ತರ ಕರ್ನಾಟಕ ಭಾಗದಲ್ಲಿ  ಹೆಚ್ಚಿನ ಹೂಡಿಕೆ ಎಂದು ಹೇಳಲಾಗಿತ್ತು.  ಎರಡು ಹಂತದಲ್ಲಿ ಘಟಕಗಳನ್ನು ಆರಂಭಿಸುವ ಉದ್ದೇಶ ಹೊಂದಿದ್ದ ಈ ಕಂಪನಿ 2010ರ ಮಧ್ಯದಲ್ಲಿ ಪ್ರಾರಂಭಿಕ ಹಂತದಲ್ಲಿ 1.2 ಮಿಲಿಯನ್‌ ಟನ್ ಕಬ್ಬಿಣ,ಉಕ್ಕು ಉತ್ಪಾದನೆ ಗುರಿ ಹೊಂದಿತ್ತು. 

ಕೈಗಾರಿಕೆ ಉದ್ದೇಶಕ್ಕಾಗಿ ಸರ್ಕಾರದಿಂದ ವಿನಾಯಿತಿ ಪರವಾನಿಗೆ ಪಡೆದು ಖಾಸಗಿ ಹಿಡುವಳಿದಾರರಿಂದ ನೂರಾರು ಎಕರೆ ವಿಸ್ತೀರ್ಣದ ಕೃಷಿ ಜಮೀನು ಖರೀದಿಸಿರುವ ಬಲ್ದೋಟಾ ಸಮೂಹದ ಕಂಪನಿಗಳು ನಿಗದಿತ  ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ. ಅಲ್ಲದೆ  ಈ ಹಿಂದಿನ ಕಾಂಗ್ರೆಸ್‌, ಮೈತ್ರಿ ಸರ್ಕಾರ ಮತ್ತು ಹಾಲಿ ಬಿಜೆಪಿ ಸರ್ಕಾರ ಕಣ್ಣೆತ್ತಿಯೂ ನೋಡಿಲ್ಲ.

Hot this week

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

Related Articles

Popular Categories

error: Content is protected !!