ಪೌರಕಾರ್ಮಿಕರಿಗೆ ಬಿಸಿಯೂಟ; ಇಂದಿರಾ ಕ್ಯಾಂಟೀನ್‌ಗೆ ಕೊಕ್‌, ಅಕ್ಷಯಪಾತ್ರೆಗೆ ರತ್ನಗಂಬಳಿ?

ಬೆಂಗಳೂರು; ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ ಗುತ್ತಿಗೆಯನ್ನು ಬಿಬಿಎಂಪಿ ಕಸಿದುಕೊಳ್ಳಲು ಮುಂದಾಗಿದೆ. ಬಿಸಿಯೂಟವನ್ನು ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ ಮೂಲಕ ಪಡೆದುಕೊಳ್ಳಲು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ತೀರ್ಮಾನಿಸಿದೆ. ಇದಕ್ಕಾಗಿ ಕೆಟಿಪಿಪಿ ಕಾಯ್ದೆಯ 4(ಜಿ) ವಿನಾಯಿತಿ ಕೋರಿ ಆರ್ಥಿಕ ಇಲಾಖೆಗೆ ಪತ್ರವನ್ನೂ ಬರೆದಿದೆ.

ಇಂದಿರಾ ಕ್ಯಾಂಟೀನ್‌ ಮೂಲಕ ಕೆಲ ವಾರ್ಡ್‌ಗಳಿಗೆ ಸರಬರಾಜಾದ ಊಟವು ಸೇವನೆಗೆ ಯೋಗ್ಯವಾಗಿರಲಿಲ್ಲ ಮತ್ತು ಊಟ ಸರಬರಾಜುದಾರರು ಪೌರ ಕಾರ್ಮಿಕರೊಂದಿಗೆ ಒರಟಾಗಿ ನಡೆದುಕೊಂಡಿರುವುದು, ಅಡುಗೆ ಮಾಡುವ ಪಾತ್ರೆಗಳ ಗುಣಮಟ್ಟವು ಸರಿಯಾಗಿಲ್ಲ ಎಂಬ ಕಾರಣಗಳನ್ನು ಮುಂದಿಟ್ಟುಕೊಂಡು ಬಿಸಿಯೂಟ ಸರಬರಾಜಿನ ಗುತ್ತಿಗೆಯನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ಗೆ ನೀಡಲು ಆರ್ಥಿಕ ಇಲಾಖೆಯ ಸಹಮತಿ ಕೋರಿದೆ.

ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಇನ್ನಿತರೆ ಗಂಭೀರ ಲೋಪಗಳ ಸ್ವರ್ಗಸೀಮೆಯಾಗಿರುವ ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ಗೆ ಬಿಸಿಯೂಟ ಯೋಜನೆಯನ್ನು ಮುನ್ನೆಡೆಸಲು ಎರಡನೇ ಬಾರಿಗೆ ರತ್ನಗಂಬಳಿ ಹಾಸಲು ಮುಂದಾಗಿದೆ. ಈ ಸಂಬಂಧ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರು ಕಾರ್ಮಿಕರಿಗೆ ಬಿಸಿಯೂಟವನ್ನು ಇಂದಿರಾ ಕ್ಯಾಂಟೀನ್‌ ಬದಲಿಗೆ ಅಕ್ಷಯ ನಿಧಿ ಫೌಂಡೇಷನ್‌ನಿಂದ ಪಡೆಯಲು ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆ ಈಗಾಗಲೇ ಆರ್ಥಿಕ ಇಲಾಖೆ ಕೈ ಸೇರಿದೆ ಎಂದು ತಿಳಿದು ಬಂದಿದೆ.

ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ ಸೇವೆಯನ್ನು ಯಾವ ಅವಧಿಗೆ ಪಡೆಯಲು ಉದ್ದೇಶಿಸಿದೆ, ಹಾಗೂ ಬಿಬಿಎಂಪಿ ಅಧೀನದಲ್ಲಿರುವ ಇಂದಿರಾ ಕ್ಯಾಂಟೀನ್‌ ಬದಲಿಗೆ ಇನ್ನೊಂದು ಬಾಹ್ಯ ಸಂಸ್ಥೆಗೆ ಬದಲಾವಣೆ ಮಾಡುತ್ತಿರುವುದಕ್ಕೆ ಕಾರಣಗಳನ್ನು ಒದಗಿಸಬೇಕು ಎಂದು ಆರ್ಥಿಕ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ 2021ರ ಫೆ.4ರಂದು ಸೂಚಿಸಿದೆ ಎಂದು ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

‘ಇಂದಿರಾ ಕ್ಯಾಂಟೀನ್‌ ಮೂಲಕ ನೀಡುತ್ತಿರುವ ರೈಸ್‌ ಬಾತ್‌, ಪಲಾವ್‌ ಇತ್ಯಾದಿಗಳ ಬದಲಿಗೆ ಪ್ರತಿ ದಿನ ಅನ್ನ, ಸಾಂಬರ್‌, ಕರಿ, ಉಪ್ಪಿನಕಾಯಿಯನ್ನು ಪಡೆದುಕೊಳ್ಳವುದು. ಈ ಕುರಿತು ಪರ್ಯಾಯವಾಗಿ ಟೆಂಡರ್‌ ಆಹ್ವಾನಿಸಿ ಸಮಂಜಸ ದರಗಳನ್ನು ನಿರ್ಧರಿಸಿ ಸರಬರಾಜುದಾರರನ್ನು ಆಯ್ಕೆ ಮಾಡಬೇಕು. ಈ ಹಿಂದೆ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸರಬರಾಜು ಪಡೆಯಲಾದಂತೆ ಸರ್ಕಾರದ ಅನುಮೋದನೆ ಪಡೆದು ಪುನಃ ಅಕ್ಷಯ ನಿಧಿ ಫೌಂಡೇಷನ್‌ನಿಂದಲೇ ಸರಬರಾಜು ಪಡೆದುಕೊಳ್ಳಬೇಕು’ ಎಂದು 2020ರ ಜುಲೈ 28ರಂದು ನಡೆದಿದ್ದ ಬಿಬಿಎಂಪಿಯ ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡಿಸಲಾಗಿತ್ತು. ಅದರಂತೆ ಸರ್ಕಾರದ ಅನುಮೋದನೆ ಪಡೆದು ಇಸ್ಕಾನ್‌ ಅಕ್ಷಯ ನಿಧಿ ಫೌಂಡೇಷನ್‌ನಿಂದ ಬಿಸಿಯೂಟ ಪಡೆದುಕೊಳ್ಳಲು ಬಿಬಿಎಂಪಿಯು ತೀರ್ಮಾನಿಸಿರುವುದು ದಾಖಲೆಗಳಿಂದ ಗೊತ್ತಾಗಿದೆ.

ಇಸ್ಕಾನ್‌-ಅಕ್ಷಯ ನಿಧಿ ಫೌಂಡೇಷನ್‌ನಿಂದ ಎಲ್ಲಾ ತೆರಿಗೆಗಳನ್ನೂ ಒಳಗೊಂಡಂತೆ 20 ರು. ದರದಲ್ಲಿ ಬಿಸಿಯೂಟ ಪಡೆದುಕೊಳ್ಳಲು ಕೆಟಿಪಿಪಿ ಕಾಯ್ದೆಯ 4(ಜಿ) ಅಡಿ ವಿನಾಯಿತಿ ನೀಡಬೇಕು ಎಂದು ಆಯುಕ್ತರು ಆರ್ಥಿಕ ಇಲಾಖೆಯನ್ನು ಕೋರಿರುವುದು ತಿಳಿದು ಬಂದಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು 2016ರ ನವೆಂಬರ್‌ 8ರಂದು ರಂದು ನಡೆದಿದ್ದ ಬಿಬಿಎಂಪಿಯು ಅಕ್ಷಯ ನಿಧಿ ಫೌಂಡೇಷನ್‌ ಜತೆ ಒಡಂಬಡಿಕೆಯನ್ನು ಮಾಡಿಕೊಂಡಿತ್ತು.

ಪಾಲಿಕೆಯ 8 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ, ಗುತ್ತಿಗೆ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಚಾಲಕರಿಗೆ, ವಾಹನ ಸಹಾಯಕರು, ಮೇಲ್ವಿಚಾರಕರಿಗೆ 2018ರ ಜುಲೈ 31ರವರೆಗೆ ಬಿಸಿಯೂಟ ಸರಬರಾಜು ಮಾಡಲು 2016ರ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿತ್ತು.

ಒಡಂಬಡಿಕೆ ಮುಕ್ತಾಯಗೊಂಡ ನಂತರ ಪಾಲಿಕೆಯು ಬಿಸಿಯೂಟ ವ್ಯವಸ್ಥೆಯನ್ನು ಸರಬರಾಜು ಮಾಡುತ್ತಿದ್ದ ಅಕ್ಷಯ ನಿಧಿ ಫೌಂಡೇಷನ್‌ನಿಂದ ಸ್ಥಗಿತಗೊಳಿಸಿ ಇಂದಿರಾ ಕ್ಯಾಂಟಿನ್‌ ಮೂಲಕ ಬಿಸಿಯೂಟ ಸರಬರಾಜು ಮಾಡಲು 2018ರ ಫೆ.19ರಂದು ಪಾಲಿಕೆಯ ಸಾಮಾನ್ಯ ಸಭೆ ತೀರ್ಮಾನಿಸಿತ್ತು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 20 ಇಂದಿರಾ ಕ್ಯಾಂಟಿನ್‌ ಅಡಿಗೆ ಮನೆಗಳನ್ನು ತೆರೆಯಲಾಗಿತ್ತು.

ಅಡಿಗೆ ಮನೆಗಳಿಂದ ಪಾಲಿಕೆಯ ಎಲ್ಲಾ 198 ವಾರ್ಡ್‌ಗಳಲ್ಲಿ (173 ಇಂದಿರಾ ಕ್ಯಾಂಟೀನ್‌ ಮತ್ತು 25 ಮೊಬೈಲ್‌ ಕ್ಯಾಂಟೀನ್‌) ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಸರಬರಾಜು ಮಾಡಲಾಗುತ್ತಿತ್ತು. ಒಟ್ಟು 198 ವಾರ್ಡ್‌ಗಳಲ್ಲಿನ 04 ವಲಯಗಳ 111 ವಾರ್ಡ್‌ಗಳಿಗೆ (ದಕ್ಷಿಣ, ಆರ್‌ ಆರ್‌ ನಗರ, ದಾಸರಹಳ್ಳಿ, ಪಶ್ಚಿಮ ವಲಯಗಳಲ್ಲಿನ 90 ಇಂದಿರಾ ಕ್ಯಾಂಟೀನ್‌, 20 ಮೊಬೈಲ್‌ ಕ್ಯಾಂಟೀನ್‌) ರೂರಲ್‌ ಎನ್ವಿರಾಮೆಂಟ್‌ ವಾಟರ್‌ ಅಸೆಟ್ಸ್‌ ರಿಪ್ರೊಡಕ್ಟೀವ್‌ ಮೂಲಕ ಮಹದೇವಪುರ, ಪೂರ್ವ, ಬೊಮ್ಮನಹಳ್ಳಿ, ಯಲಹಂಕ ವಲಯಗಳ 83 ಇಂದಿರಾ ಕ್ಯಾಂಟೀನ್‌ ಮತ್ತು 5 ಮೊಬೈಲ್‌ ಕ್ಯಾಂಟೀನ್‌ಗಳಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಒದಗಿಸಲು ಹೊರಗುತ್ತಿಗೆ ನೀಡಲಾಗಿತ್ತು.

ಅಕ್ಷಯ ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು 2020ರ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಸುಗತ ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು. ಅಲ್ಲದೆ ಇದನ್ನಾಧರಿಸಿ ವಿಧಾನಪರಿಷತ್‌ ಸದಸ್ಯ ಲೆಹರ್‌ಸಿಂಗ್ ಅವರು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೂ ಪತ್ರ ಬರೆದಿದ್ದರು.

Your generous support will help us remain independent and work without fear.

Latest News

Related Posts