ಬೆಂಗಳೂರು; ರಾಜ್ಯದ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವು ವೇಗವಾಗಿ ಹೆಚ್ಚುತ್ತಿದ್ದರೂ ಸಹ ಶಿಕ್ಷಣದ ಮೇಲಿನ ಸಾರ್ವಜನಿಕ ಖರ್ಚು ನಿಧಾನವಾಗಿ ಸಾಗುತ್ತಿದೆ. ಇದು ಶಿಕ್ಷಣ ವಲಯದಲ್ಲಿನ ಸಂಪನ್ಮೂಲ ಅಂತರವನ್ನು ಹೆಚ್ಚಿಸುತ್ತಿದೆ. ಸಮಾನತೆ, ಗುಣಮಟ್ಟದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಶಿಕ್ಷಣದ ವೆಚ್ಚದ ಪಾಲು ಅತ್ಯಂತ ಕಡಿಮೆಯಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಅದಷ್ಟೇ ಅಲ್ಲ ಬಜೆಟ್ನಲ್ಲಿಯೂ ಈ ಕುಸಿತ ಮುಂದುವರೆದಿದೆ. ಬಜೆಟ್ ಅಂದಾಜಿನ ಪ್ರಕಾರ ಇದು ಮತ್ತಷ್ಟು ಕುಸಿಯಲಿದೆ. ಸರ್ಕಾರದ ವೆಚ್ಚದ ಸುಮಾರು ಶೇ.30ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಹಾಗೆಯೇ ಸರ್ಕಾರದ ವಿವಿಧ ಇಲಾಖೆಗಳು ನಡೆಸುವ ಎಲ್ಲಾ ಶಾಲೆಗಳನ್ನು ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ತರಬೇಕು. ಸರ್ಕಾರೇತರ ಮೂಲಗಳಿಂದ ಬರುವ ಸಂಪನ್ಮೂಲಗಳನ್ನು ಪೂರಕವಾಗಿ ನೋಡಬೇಕೇ ಹೊರತು ಸರ್ಕಾರದ ಪ್ರಯತ್ನಗಳಿಗೆ ಪರ್ಯಾಯವಾಗಿ ಎಂದಿಗೂ ನೋಡಬಾರದು. ಕಡೆಯಲ್ಲಿ ಚಟುವಟಿಕೆಗಳು ಸಂಪೂರ್ಣವಾಗಿ ಖಾಸಗೀಕರಣವಾಗದಂತೆ ಎಚ್ಚರಿಕೆ ವಹಿಸಬೇಕು ಪ್ರೊ ಸುಖ್ ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸರ್ಕಾರಕ್ಕೆ ಸಲಹೆ ನೀಡಿದೆ.
ಪ್ರೊ ಸುಖ್ ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ನೀಡಿರುವ ವರದಿಯ ಅಧ್ಯಾಯ 13ರಲ್ಲಿ ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ ಕುರಿತು ಚರ್ಚಿಸಿದೆ. ಥೋರಟ್ ನೇತೃತ್ವದ ಆಯೋಗವು ನೀಡಿರುವ ವರದಿಯ ಕುರಿತು ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಇದುವರೆಗೂ ಚರ್ಚೆಗೆ ಬಂದಿಲ್ಲ.
ಥೋರಟ್ ನೇತೃತ್ವದ ಆಯೋಗವು ನೀಡಿರುವ ಎಲ್ಲಾ ವರದಿಗಳು ದಿ ಫೈಲ್ಗೆ ಲಭ್ಯವಾಗಿವೆ.

ಶಿಕ್ಷಣಕ್ಕಾಗಿ ಹೆಚ್ಚುವರಿ ಆರ್ಥಿಕ ಹಂಚಿಕೆಗೆ ತಡೆ
ಶಿಕ್ಷಣದ ಮೇಲಿನ ಒಟ್ಟು ಸಾರ್ವಜನಿಕ ವೆಚ್ಚವು ನಾಮಮಾತ್ರದ ಬೆಲೆಗಳಲ್ಲಿ ಗಣನೀಯವಾಗಿ ಹೆಚ್ಚಿದ್ದರೂ ಪ್ರಸ್ತುತದಲ್ಲಿ ನಿಜವಾದ ಬೆಲೆಗಳು ಕಾಲಕಾಲಕ್ಕೆ ಹೆಚ್ಚುತ್ತಿವೆ. ಈ ಹಣದುಬ್ಬರದ ಅಂತರವು ನೈಜ-ಅವಧಿಯ ಲಾಭಗಳನ್ನು ನಗಣ್ಯವಾಗಿಸಿ ಶಿಕ್ಷಣಕ್ಕಾಗಿ ಹೆಚ್ಚುವರಿ ಆರ್ಥಿಕ ಹಂಚಿಕೆಯನ್ನು ತಡೆ ಹಿಡಿದಿದೆ. ಶಿಕ್ಷಣಕ್ಕೆ ನೀಡಲಾಗುವ ಆದ್ಯತೆಯನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ ಶಿಕ್ಷಣದ ವೆಚ್ಚದ ಪಾಲು ಎಷ್ಟು ಎಂಬ ರೂಪದಲ್ಲಿ ಅಳೆಯಲಾಗುವುದು ಮತ್ತು ಭಾರತದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ.

ಬಜೆಟ್ನಲ್ಲಿ ಮತ್ತಷ್ಟು ಕುಸಿತವಾಗಲಿದೆಯೇ?
2022-23ರಲ್ಲಿ ಶೇ.1.8ರಷ್ಟಿತ್ತು. 2012-13ರಲ್ಲಿ ಶೇ. 2.8ರಿಂದ ತೀವ್ರವಾಗಿ ಕುಸಿತ ಕಂಡಿದೆ. 2024-25ರ ಬಜೆಟ್ನಲ್ಲಿಯೂ ಈ ಕುಸಿತ ಮುಂದುವರೆದಿರಬಹುದು. ಬಜೆಟ್ ಅಂದಾಜಿನ ಪ್ರಕಾರ ಇದು 2024-25ರಲ್ಲಿ ಮತ್ತಷ್ಟು ಕುಸಿಯಲಿದೆ. ಎಲ್ಲಾ ನೀತಿ ದಾಖಲೆಗಳಲ್ಲಿ ಪುನರುಚ್ಛರಿಸಿರುವಂತೆ ಜಿಡಿಪಿಯ ಶೇ. 6ರಷ್ಟನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುವ ಮಾನದಂಡವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ಶಿಕ್ಷಣಕ್ಕೆ ತನ್ನ ಹಂಚಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕಾಗಿದೆ. ರಾಜ್ಯದ ಒಟ್ಟು ವೆಚ್ಚದ ಅನುಪಾತದಲ್ಲಿ 2022-23ರಲ್ಲಿ ಕರ್ನಾಟಕದ ಶಿಕ್ಷಣ ವೆಚ್ಚವು ಕೇವಲ ಶೇ.14ರಷ್ಟಿತ್ತು. ಸರ್ಕಾರದ ವೆಚ್ಚದ ಸುಮಾರು ಶೇ. 30ನ್ನು ಶಿಕ್ಷಣಕ್ಕೆ ಮೀಸಲಿಡಲು ರಾಜ್ಯವು ಹೆಚ್ಚು ಒಲವು ಹೊಂದಿರುವ ಮನಸ್ಥಿತಿಯನ್ನು ಗಮನಿಸಿದರೇ ರಾಜ್ಯದಲ್ಲಿ ಈ ಅನುಪಾತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿಯಿಂದ ಪ್ರಯತ್ನಗಳು ನಡೆಯಬೇಕಿದೆ ಎಂದು ಆಯೋಗವು ಸಲಹೆ ನೀಡಿದೆ.
ಭಾರತದ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳು ಶಿಕ್ಷಣಕ್ಕೆ ಶೇ. 20ಕ್ಕಿಂತ ಹೆಚ್ಚು ಖರ್ಚು ಮಾಡುತ್ತವೆ. ಒಟ್ಟು ವೆಚ್ಚದಲ್ಲಿ ಅದು ಕನಿಷ್ಟ ಪಕ್ಷ ಶೇ.30ನ್ನು ತಲುಪುವವರೆಗೆ ನಾವು ಶಿಕ್ಷಣದ ಪಾಲನ್ನು ಪ್ರತಿ ವರ್ಷ ಶೇ.0.5ರಷ್ಟು ಹೆಚ್ಚಿಸಬಹುದು. ಸಮಗ್ರ ಮೊತ್ತದಲ್ಲಿ ವರ್ಷಕ್ಕೆ ಕನಿಷ್ಟ ಶೇ. 5ರಷ್ಟು ಏರಿಕೆಯನ್ನು ಖಾತ್ರಿಪಡಿಸಿದರೆ ನಿಜದ ಬೆಲೆಗಳಲ್ಲಿ ಶಿಕ್ಷಣಕ್ಕೆ ಬಜೆಟ್ ಹಂಚಿಕೆಯಲ್ಲಿ ಸ್ಥಿರವಾದ ಹೆಚ್ಚಳ ಕಾಣುತ್ತದೆ. ಮುಂದಿನ 10-15 ವರ್ಷಗಳಿಗೆ ಸರಿದೂಗುವಂತೆ ಪ್ರತಿ ವರ್ಷದ ಹಣಕಾಸು ಯೋಜನೆಯನ್ನು ಸಿದ್ಧಪಡಿಸಬಹುದು.

ಅಂತರ ವಲಯ ಹಂಚಿಕೆ ಹೇಗಿರಬೇಕು
ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ಮೂಲಗಳ ಹಂಚಿಕೆಗೆ ಸಾಮಾನ್ಯವಾಗಿ ಬಯಸುವ ಮಾನದಂಡವೆಂದರೇ ಶಾಲಾ ಶಿಕ್ಷಣಕ್ಕೆ ಬಜೆಟ್ನ ಶೇ 75ರಷ್ಟು ( ಪ್ರಾಥಮಿಕ ಶಿಕ್ಷಣಕ್ಕೆ ಶೇ.50 ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ಶೇ.25) ಮತ್ತು ಉನ್ನತ ತಾಂತ್ರಿಕ ಶಿಕ್ಷಣವೂ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಶೇ. 25. ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯವು ಈಗಾಗಲೇ ಈ ಮಾನದಂಡದಂತೆಯೇ ಇದೆ. ಆದರೆ ಇದಕ್ಕೆ ಸಂಬಂಧಿಸಿದ ಆದ್ಯತೆಗಳನ್ನು ಮರುಪರಿಶೀಲಿಸುವುದು ಅಗತ್ಯವಾಗಬಹುದು ಎಂದು ಸಲಹೆ ನೀಡಿದೆ.
ಶಾಲಾ ಶಿಕ್ಷಣಕ್ಕೆ ಶೇ.87ರಷ್ಟು
ಶಿಕ್ಷಣದ ಸಮತೋಲಿತ ಅಭಿವೃದ್ಧಿ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣದ ಎಲ್ಲಾ ಸ್ತರಗಳಿಗೆ ಸಂಪನ್ಮೂಲಗಳ ಹಂಚಿಕೆಯ ಅಗತ್ಯವಿದೆ. ರಾಜ್ಯದ ಶಿಕ್ಷಣ ಬಜೆಟ್ನ ಸುಮಾರು ಶೇ.87ರಷ್ಟು ಶಾಲಾ ಶಿಕ್ಷಣಕ್ಕೆ ಹೋಗುತ್ತದೆ. ಶಿಕ್ಷಣ ಬಜೆಟ್ನ ಅತ್ಯಂತ ಕಡಿಮೆ ಮೊತ್ತವಾದ ಶೇ.13ರಷ್ಟು ಮಾತ್ರ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣಕ್ಕೆ ದೊರಕುತ್ತದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಪಾಲು ಕಡಿಮೆ ಇದೆ. ಶಿಕ್ಷಣಕ್ಕೆ ಒಟ್ಟಾರೆ ಹಂಚಿಕೆಯನ್ನು ಹೆಚ್ಚಿಸುವ ಗಣನೀಯ ಅಗತ್ಯವಿದೆ. ಇದರಿಂದ ಶಿಕ್ಷಣದ ವಿವಿಧ ಹಂತಗಳ ನಡುವೆ ಅರ್ಥಪೂರ್ಣ ಅನುಪಾತವನ್ನು ಕಾಪಾಡಿಕೊಳ್ಳಬಹುದು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯ ಸಾಪೇಕ್ಷ ಪಾಲು ಕಡಿಮೆ
ಹಾಗೆಯೇ ಶಾಲಾ ಶಿಕ್ಷಣದ ಮೇಲೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಷ್ಟೇ ಅಲ್ಲದೇ ಇತರೆ ಕೆಲವು ಇಲಾಖೆಗಳೂ ಸಹ ತಮ್ಮದೇ ಶಾಲೆ ನಡೆಸುತ್ತಾ ಅಥವಾ ವಿದ್ಯಾರ್ಥಿ ವೇತನ ನೀಡುತ್ತಾ ಅಥವಾ ಇತರೆ ಕಾರ್ಯವಿಧಾನಗಳ ಮೂಲಕ ಖರ್ಚು ಮಾಡುತ್ತವೆ. ಕಳೆದ ವರ್ಷಗಳಲ್ಲಿ ಶಿಕ್ಷಣ ಇಲಾಖೆಯು ಬೇರೆ ಇಲಾಖೆಗಳಿಗಿಂತ ದೊಡ್ಡ ಪಾತ್ರ ವಹಿಸಿದರೂ ಒಟ್ಟು ಶಾಲಾ ಧನಸಹಾಯದಲ್ಲಿ ಇತರೆ ಇಲಾಖೆಗಳ ಪಾಲು ಹೆಚ್ಚುತ್ತಿದೆ. ಮತ್ತು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯ ಸಾಪೇಕ್ಷ ಪಾಲು ಕಡಿಮೆಯಾಗಿದೆ. ಈ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿಗಳ ಕಲ್ಯಾಣ ಮತ್ತು ಹಿಂದುಳಿದ ಜಾತಿಗಳ ಕಲ್ಯಾಣ ಇಲಾಖೆಗಳ ಕೊಡುಗೆ ಪ್ರಮುಖವಾಗಿವೆ ಎಂದು ವಿಶ್ಲೇಷಿಸಿದೆ.
‘ಇತರೆ ರಾಜ್ಯಗಳಲ್ಲಿ ಅನೇಕ ಇಲಾಖೆಗಳು ಯಾವುದೇ ಸಮನ್ವಯವಿಲ್ಲದೇ ಖರ್ಚು ಮಾಡುವುದರಿಂದ ಶಿಕ್ಷಣದ ಅಭಿವೃದ್ಧಿಯಲ್ಲಿ ಅಸಮತೋಲನ ತಲೆದೋರಬಹುದು ಎಂದು ಭಾವಿಸಲಾಯಿತು. ಬೇರೆ ರಾಜ್ಯಗಳ ಅಭಿಪ್ರಾಯದಲ್ಲಿ ಶಿಕ್ಷಣ ಇಲಾಖೆಯ ವೆಚ್ಚದಲ್ಲಿ ಶಿಕ್ಷಣೇತರ ಇಲಾಖೆಗಳೂ ಸಹ ಪಾಲುದಾರಿಕೆ ಹೊಂದಿದೆ. ಆದರೆ ಸರಿಯಾದ ಸಮನ್ವಯತೆ ಇಲ್ಲದ ಕಾರಣ ಶಿಕ್ಷಣದ ಅಭಿವೃದ್ಧಿಯಲ್ಲಿನ ಅಸಮಾನತೆಗೆ ಇದು ಕಾರಣವಾಗಿರಬಹುದು,’ ಎಂದು ವಿವರಿಸಿದೆ.
ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳು ನಡೆಸುವ ಎಲ್ಲಾ ಶಾಲೆಗಳನ್ನು ಶಿಕ್ಷಣ ಇಲಾಖೆಯ ಅಡಿಯಲ್ಲಿ ತರುವುದು ಒಳ್ಳೆಯದು. ಅಥವಾ ಎಲ್ಲಾ ಶಾಲೆಗಳನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಮೂಲಕ ಅಥವಾ ಕನಿಷ್ಟ ಎಲ್ಲಾ ಶಾಲೆಗಳಿಗೆ ಶಿಕ್ಷಣದ ನೆರಳಿನಡಿ ಸಾಮಾನ್ಯ ವಿಧಾನ ಮತ್ತು ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಕನಿಷ್ಟ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಸಾಮಾನ್ಯ ವಿಧಾನ ಮತ್ತು ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಶಿಕ್ಷಣದ ಸರಿಯಾಧ ಯೋಜನೆಯೊಂದನ್ನು ಸಮಗ್ರವಾಗಿ ಪ್ರಯತ್ನಿಸಬಹುದು ಎಂದು ಸಲಹೆ ನೀಡಿದೆ.
ಶೈಕ್ಷಣಿಕ ಬಜೆಟ್ ಬಂಡವಾಳವು ಬಹಳ ಕಡಿಮೆ ಪ್ರಮಾಣದ್ದಾಗಿದೆ. ವಿಶೇಷವಾಗಿ ಮಾಧ್ಯಮಿಕ ಹಂತದಲ್ಲಿ ಮೂಲಸೌಕರ್ಯಗಳ ಮೇಲಿನ ಹೆಚ್ಚಿನ ಉಳಿಕೆ ಮತ್ತು ಹೊಸ ಶಾಲೆಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಹೇಳಿದೆ.
ಪ್ರತಿ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ವೆಚ್ಚ
2019-20 ಮತ್ತು 2023-24ರ ಅವಧಿಯಲ್ಲಿ ಪ್ರತಿ ವಿದ್ಯಾರ್ಥಿಯ ಶಿಕ್ಷಣ ವೆಚ್ಚವು ಸುಮಾರು ಶೇ.8ರಷ್ಟು ಹೆಚ್ಚಾಗಿದೆ. ಆದರೆ ನೈಜ ಬೆಲೆಯ್ಲಿ ಹೆಚ್ಚಳವು ಅಷ್ಟೊಂದು ಗಮನಾರ್ಹವಾಗಿಲ್ಲ. ಇದು ಯಾವುದೇ ಗಣನೀಯ ಹೆಚ್ಚಳವನ್ನು ತೋರದೇ ಬಹುತೇಕ ಸ್ಥಿರವಾಗಿ ಉಳಿದಿದೆ. ಪ್ರತಿ ವಿದ್ಯಾರ್ಥಿಯ ವೆಚ್ಚವು ವಿದ್ಯಾರ್ಥಿಗೆ ಸರಾಸರಿ ಲಭ್ಯವಿರುವ ಭೌತಿಕ ಮತ್ತು ಇತರ ಸಂಪನ್ಮೂಲಗಳ ಪ್ರಮಾಣದ ಪ್ರತಿಬಿಂಬಿತವಾಗಿದೆ. ಇದು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಪ್ರತಿ ವಿದ್ಯಾರ್ಥಿಯ ವೆಚ್ಚವು ಯಾವುದೇ ಸಮಯದಲ್ಲಿಯೂ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಹಾಗೂ ನೈಜ ಬೆಲೆಗಳಲ್ಲಿ ಪ್ರತಿ ವರ್ಷ ಶೇ.5-10ರಷ್ಟು ಕ್ರಮೇಣ ಏರಿಕೆಯಾಗುವುದನ್ನು ಖಚಿತಪಡಿಸಿಕೊಳ್ಳವುದು ಅವಶ್ಯಕ ಎಂದು ಹೇಳಿದೆ.

ಪದವಿಪೂರ್ವ ಕಾಲೇಜುಗಳನ್ನು ಉನ್ನತ ಮಾಧ್ಯಮಿಕ ಶಾಲೆಗಳನ್ನಾಗಿಸಿ
ರಾಜ್ಯದ ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ಶಾಲೆಗಳಲ್ಲಿನ ಪ್ರತಿ ವಿದ್ಯಾರ್ಥಿ ವೆಚ್ಚದ ಕ್ರಮವನ್ನು ರಾಜ್ಯದಲ್ಲಿ ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳು ನಡೆಸುವ ಎಲ್ಲಾ ಸಾರ್ವಜನಿಕ ಸಾಲೆಗಳು ಮಾನದಂಡವಾಗಿ ಪರಿಗಣಿಸಬೇಕು. ಕನಿಷ್ಟ ಪಕ್ಷ ರಾಜ್ಯದ ವಿಶೇಷ ಸಾರ್ವಜನಿಕ ಶಾಲೆಗಳಿಗೆ ಮಾಡಿದ ವೆಚ್ಚವನ್ನು ಅಲ್ಪಾವಧಿಯ ಮಾನದಂಡವೆಂದು ಪರಿಗಣಿಸಬಹುದು. ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಅತ್ಯುತ್ತಮ ಖಾಸಗಿ ಶಾಲೆ ಎದುರು ಮತ್ತು ನವೋದಯ ಮತ್ತು ಇತರೆ ಯಾವುದೇ ಹೋಲಿಕೆ ಮಾಡಲಾಗುವ ಶಾಲೆಗಳಷ್ಟು ಅಥವಾ ಇನ್ನು ಉತ್ತಮ ಮಾದರಿ ಶಾಲೆಯನ್ನಾಗಿ ಮಾಡುವ ಕಡೆಗೆ ನಮ್ಮ ಗುರಿ ಇರಬೇಕು. ಎಲ್ಲಾ ಪದವಿಪೂರ್ವ ಕಾಲೇಜುಗಳನ್ನು ಉನ್ನತ ಮಾಧ್ಯಮಿಕ ಶಾಲೆಗಳನ್ನಾಗಿ ಮಾಡಿದರೆ ಸಮನ್ವಯದ ಪರಿಣಾಮವು ಉತ್ತಮಗೊಳ್ಳುವುದು ಎಂದು ಸಲಹೆ ನೀಡಿದೆ.
ಅನುದಾನಿತ ಶಾಲೆಗಳನ್ನು ಸರ್ಕಾರಿ ಶಾಲೆಗಳಿಗೆ ಸಮಾನವಾಗಿ ಪರಿಗಣಿಸಬಹುದು. ಅನುದಾನಿತ ಶಾಲೆಗಳು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅಥವಾ ಇತರೆ ಕೊಡುಗೆಗಳ ಅಡಿಯಲ್ಲಿ ಯಾವುದೇ ಹೆಚ್ಚುವರಿ ಸಂಪನ್ಮೂಲಗಳನ್ನು ಪಡೆಯುತ್ತಿದ್ದು ವಿದ್ಯಾರ್ಥಿ ಶುಲ್ಕದಿಂದ ಉತ್ಪಾದನೆ ಇಲ್ಲದಿದ್ದರೇ ಹೆಚ್ಚುವರಿ ಗುಣಮಟ್ಟ ಮತ್ತು ಸಮಾನತೆಯ ಸುಧಾರಣೆಯ ಕಾರ್ಯಕ್ರಮಗಳಿಗೆ ಆ ಸಂಪನ್ಮೂಲಗಳನ್ನು ಬಳಸಲು ಶಾಲೆಗಳಿಗೆ ಅವಕಾಶ ನೀಡಬಹುದು ಎಂದು ಹೇಳಿದೆ.
ರಾಜ್ಯದ ಹಲವಾರು ಪ್ರದೇಶಗಳು, ಜಿಲ್ಲೆಗಳ ನಡುವೆ ಶಿಕ್ಷಣದ ಅಭಿವೃದ್ಧಿಯಲ್ಲಿ ವ್ಯಾಪಕ ಅಸಮಾನತೆಗಳಿವೆ. ರಾಜ್ಯದಿಂದಾಗುವ ಸಂಪನ್ಮೂಲಗಳ ಹಂಚಿಕೆಯು ಇದನ್ನು ಗಣನೆಗೆ ತೆಗೆದುಕೊಂಡು ರಾಜ್ಯದಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ವಿವಿಧ ಜಿಲ್ಲೆಗಳ ನಡುವಿನ ಶೈಕ್ಷಣಿಕ ಅಸಮಾನತೆಯನ್ನು ಕಡಿಮೆ ಮಾಡಬೇಕು. ಈ ಪರಿಸ್ಥಿತಿಯನ್ನು ಸುಧಾರಿಸಲು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಹಣವನ್ನು ಒದಗಿಸಬೇಕಾಗಬಹುದು ಎಂದು ಹೇಳಿದೆ.

ಹೆಚ್ಚುವರಿ ಸಂಪನ್ಮೂಲಗಳ ಕ್ರೋಢೀಕರಣ ಹೇಗಿರಬೇಕು?
ಸರ್ಕಾರವು ತನ್ನ ಸ್ವಂತ ಜವಾಬ್ದಾರಿಯನ್ನು ಬಿಟ್ಟುಕೊಡದೇ ಶಾಲಾ ಶಿಕ್ಷಣಕ್ಕಾಗಿ ಕಾರ್ಪೋರೇಟ್ ವಲಯ, ಜನೋಪಕಾರಿಗಳು ಮತ್ತು ಇತರ ವಿದ್ಯಾರ್ಥಿಯೇತರ ವಲಯದಿಂದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ವಿವಿಧ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ಅಂತಹ ಸಂಪನ್ಮೂಲಗಳು ಸಾಮಾನ್ಯವಾಗಿ ಮೂಲ ಸೌಕರ್ಯ ಸೌಲಭ್ಯಗಳು ಮತ್ತು ಗುಣಮಟ್ಟದ ಉಪ ಕ್ರಮಗಳಲ್ಲಿ ಹೆಚ್ಚುವರಿ ಸುಧಾರಣೆಗಾಗಿ ಮತ್ತು ಶಾಲೆಗಳ ಪ್ರಮುಖ ಚಟುವಟಿಕೆಗಳಿಗೆ ಬದಲಾಗಿ ಸಮಾನತೆ ಹೆಚ್ಚಿಸುವ ಚಟುವಟಿಕೆಗಳಿಗೆ ಮೀಸಲಾಗಿರಬೇಕು. ಮತ್ತು ಇದಕ್ಕಾಗಿ ರಾಜ್ಯವು ಸಾಕಷ್ಟು ಧನ ಸಹಾಯ ನೀಡಬೇಕು. ಸರ್ಕಾರೇತರ ಮೂಲಗಳಿಂದ ಬರುವ ಸಂಪನ್ಮೂಲಗಳನ್ನು ಪೂರಕವಾಗಿ ನೋಡಬೇಕೇ ವಿನಃ ಸರ್ಕಾರದ ಪ್ರಯತ್ನಗಳಿಗೆ ಪರ್ಯಾಯವಾಗಿ ಎಂದಿಗೂ ನೋಡಬಾರದು ಅಥವಾ ಯೋಜಿಸಬಾರದು ಎಂದು ಸಲಹೆ ನೀಡಿದೆ.

ಅದೇ ರೀತಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಬೇರೆ ಬೇರೆ ಮಾದರಿಗಳನ್ನು ಅಳವಡಿಸಿಕೊಳ್ಳುವಾಗ ಮತ್ತು ಪ್ರೋತ್ಸಾಹಿಸುವಾಗ ಮತ್ತು ಶಿಕ್ಷಣದಲ್ಲಿ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಬಂಧಗಳನ್ನು ಬೆಳೆಸುವಾಗ ಸಾರ್ವಜನಿಕರ ಪಾತ್ರವು ಕಡಿಮೆಯಾಗದಂತೆ ಮತ್ತು ಕಡೆಯಲ್ಲಿ ಚಟುವಟಿಕೆಯು ಸಂಪೂರ್ಣವಾಗಿ ಖಾಸಗೀಕರಣವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.




