ಬೆಂಗಳೂರು; ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆಗಿರುವ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿಯೇ 103 ಎಕರೆ 9 ಗುಂಟೆ ಸರ್ಕಾರಿ ಜಮೀನು ಕಬಳಿಸಲು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿವೆ. ಜಮೀನಿನ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗಲಿದೆ ಎಂದು ಖುದ್ದು ತಮಕೂರು ಜಿಲ್ಲಾಡಳಿವು ಆತಂಕ ವ್ಯಕ್ತಪಡಿಸಿದೆ. ಅಲ್ಲದೇ ಕಾನೂನು ಕ್ರಮ ಜರುಗಿಸಲು ಸರ್ಕಾರದ ಕದ ತಟ್ಟಿದೆ.
ರಾಜ್ಯದಲ್ಲಿ ಸರ್ಕಾರಿ ಜಮೀನು, ಗೋಮಾಳ, ಛತ್ರ, ಮುಜಾಫರ್ ಖಾನ ನಿರ್ವಹಣೆಗೆಂದು ನೂರಾರು ಎಕರೆ ವಿಸ್ತೀರ್ಣದ ಜಮೀನುಗಳನ್ನು ಮೀಸಲಿಡಲಾಗಿದೆ. ಆದರೆ ಬಹುತೇಕ ಜಮೀನುಗಳನ್ನು ಈಗಾಗಲೇ ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಿವೆ. ಹಲವು ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆದರೂ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಒಂದೇ ಒಂದು ಕ್ರಮ ಜರುಗಿಸಿಲ್ಲ.
ಈ ಮಧ್ಯೆ ಖುದ್ದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿಯೇ 103 ಎಕರೆ 9 ಗುಂಟೆ ವಿಸ್ತೀರ್ಣದ ಜಮೀನಿನ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗಲಿದೆ ಎಂದು ಕಂದಾಯ ಇಲಾಖೆಯೇ ವ್ಯಕ್ತಪಡಿಸಿರುವ ಆತಂಕವು ಮುನ್ನೆಲೆಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಕೇವಿಯೇಟ್ ಹಾಕಲೂ ಸಹ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಏನಿದು ಪ್ರಕರಣ?
ತುಮಕೂರು ಜಿಲ್ಲೆಯ ತುಮಕೂರು ತಾಲೂಕು ಗೂಳೂರು ಹೋಬಳಿ ಕಲ್ಲುಮಠ ಗ್ರಾಮದ ಸರ್ವೆ ನಂಬರ್ 13, 17.1, 17/2, 17/3, 17/4, 20 ಮತ್ತು ಕೊಂಡಾಪುರ ಗ್ರಾಮದ ಸರ್ವೆ ನಂಬರ್ 3ರಲ್ಲಿ ಒಟ್ಟು 103 ಎಕರೆ 9 ಗುಂಟೆ ಜಮೀನಿನ ಹಕ್ಕುದಾರಿಕೆ ಸಂಬಂಧ ತುಮಕೂರು ಜಿಲ್ಲಾಡಳಿತವು ದಾವೆ ದಾಖಲಿಸಿಕೊಂಡು ಪ್ರಕರಣದ ವಿಚಾರಣೆ ನಡೆಸಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 48 ಎ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.
2026ರ ಏಪ್ರಿಲ್ 24ರಂದು ನಡೆದಿದ್ದ ವಿಚಾರಣೆಯಲ್ಲಿ ಈ ಎಲ್ಲಾ ಜಮೀನುಗಳು ದೇವಾದಾಯ ಇನಾಂ ಜಮೀನುಗಳು, ಗೂಳೂರು ಛತ್ರ, ಮುಜಾಫರ್ ಖಾನ್ ನಿರ್ವಹಣೆಗೆ ಮೀಸಲು ಆಗಿ ಕಾಯ್ದಿರಿಸಿರುವ ಜಮೀನುಗಳು ಎಂದು ಹೇಳಲಾಗಿತ್ತು. ಹೀಗಾಗಿ ಈ ಎಲ್ಲಾ ಸರ್ವೆ ನಂಬರ್ಗಳಲ್ಲಿನ ಜಮೀನಿನ ಹಕ್ಕು ದಾಖಲೆಗಳಲ್ಲಿ ಗೂಳೂರು ಛತ್ರ/ಮುಜಾಫರ್ ಖಾನ ನಿರ್ವಹಣೆ ಉದ್ದೇಶಕ್ಕಾಗಿ ಮೀಸಲಿಡಲಾದ ಸಾರ್ವಜನಿಕ ಸ್ವತ್ತು ಎಂದು ನಮೂದಿಸಬೇಕು ಎಂದು ತುಮಕೂರು ತಾಲೂಕಿನ ತಹಶೀಲ್ದಾರ್ ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಆದೇಶಿಸಿತ್ತು.

ಈ ಆದೇಶದ ಪ್ರಕಾರ ಗೂಳೂರು ಹೋಬಳಿಯ ಕಲ್ಲುಮಠ ಗ್ರಾಮದ ಸರ್ವೇ ನಂಬರ್ 13, 17/1, 17/2, 17/3, 17/4, 20 ಮತ್ತು ಕೊಂಡಾಪುರ ಗ್ರಾಮದ ಸರ್ವೆ ನಂಬರ್ 3 ರಲ್ಲಿ 103 ಎಕರೆ 09 ಗುಂಟೆ ಜಮೀನಿನ ಹಕ್ಕು ದಾಖಲೆಗಳಲ್ಲಿ ಗೂಳೂ ಛತ್ರ ಮುಜಾಫರ್ ಖಾನ್ ನಿರ್ವಹಣೆ ಉದ್ದೇಶಕ್ಕಾಗಿ ಮೀಸಲಿಡಲಾದ ಸಾರ್ವಜನಿಕ ಸ್ವತ್ತು ಎಂದು ನಮೂದಿಸಿತ್ತು.












ಪಟ್ಟ ಭದ್ರ ಹಿತಾಸಕ್ತಿಗಳ ಭೀತಿ ಎದುರಾಯಿತೇ?
ಈ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಈ ಜಮೀನುಗಳು ಎಂದು ಹೊರಡಿಸಿದ್ದ ಆದೇಶವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಈ ಆದೇಶದ ವಿರುದ್ಧ ಕರ್ನಾಟಕ ಕಂದಾಯ ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಲಿದ್ದಾರೆ ಎಂಬ ಭೀತಿಯು ಜಿಲ್ಲಾಡಳಿತಕ್ಕೆ ಕಾಡತೊಡಗಿದೆ. ಇದರಿಂದ ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಧಿಕಾರಿಯವರ ನ್ಯಾಯಾಲಯದ ಪ್ರಕರಣ (ಐಎನ್ಎ 26/2000 ದಿನಾಂಕ 24.04.2026) ರ ಆದೇಶದ ವಿರುದ್ಧ ಉಚ್ಛ ನ್ಯಾಯಾಲಯ ಮತ್ತು ಕಂದಾಯ ಮೇಲ್ಮನವಿ ಪ್ರಾಧಿಕಾರದಲ್ಲಿ ಮೇಲ್ಮನವಿ ದಾಖಲು ಮಾಡಿ ಈ ಆದೇಶಕ್ಕೆ ತಡೆಯಾಜ್ಞೆ ಕೋರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂಧ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು ಎಂದು ಕೇವಿಯೇಟ್ ಸಲ್ಲಿಸಲು ಜರೂರಾಗಿ ಅನುಮತಿ ನೀಡಬೇಕು. ಅಲ್ಲದೇ ಈ ಪ್ರಕರಣದಲ್ಇ ಸರ್ಕಾರಿ ವಕೀಲರು, ವ್ಯಾಜ್ಯ ನಿರ್ವಹಣಾಧಿಕಾರಿಯನ್ನಾಗಿ ತುಮಕೂರು ತಹಶೀಲ್ದಾರ್ ಅವರನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿಗಳು ಸರ್ಕಾರವನ್ನು ಕೋರಿರುವುದು ತಿಳಿದು ಬಂದಿದೆ.

ಅಲ್ಲದೇ ಜಿಲ್ಲಾಧಿಕಾರಿಯವರು ಕೋರಿರುವ ಪ್ರಸ್ತಾವದ ಕುರಿತು ಕಾನೂನು ಕೋಶಕ್ಕೆ ಕಡತವನ್ನು ಕಳಿಸಲಾಗಿದೆ. ಆದರೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ಕೇವಿಯೇಟ್ ಸಲ್ಲಿಸಲು ಸರ್ಕಾರಿ ವಕೀಲರನ್ನು ಪ್ರಾಧಿಕರೀಸುವ ಅಧಿಕಾರ ವ್ಯಾಪ್ತಿಯು ಕಾನೂನು ಕೋಶಕ್ಕೆ ಇಲ್ಲ ಎಂದು ತಿಳಿದು ಬಂದಿದೆ.

ತುಮಕೂರು ಭಾಗವು ಮೈಸೂರು ಸಂಸ್ಥಾನದ ಅಧೀನದಲ್ಲಿದ್ದಾಗ ಮುಖ್ಯವಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶದಲ್ಲಿ ಧಾರ್ಮಿಕ ಮತ್ತು ಸಾರ್ವಜನಿಕ ಸೇವೆಗಾಗಿ ಹಲವು ಛತ್ರಗಳನ್ನು ನಿರ್ಮಿಸಲಾಗಿತ್ತು.
ಏನಿದು ಮುಜಾಫರ್ ಖಾನ್ ಛತ್ರ?
ಇದು ಸಾರ್ವಜನಿಕರು ಮತ್ತು ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಶ್ರಯ ನೀಡಲು ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ನಿರ್ಮಿಸಲಾದ ಐತಿಹಾಸಿಕ ಕಟ್ಟಡವಾಗಿದೆ. ಇಂತಹ ಛತ್ರಗಳು ಧಾರ್ಮಿಕ ಮತ್ತು ಐತಿಹಾಸಿಕ ಮೌಲ್ಯಗಳನ್ನು ಹೊಂದಿವೆ. ಕಲ್ಲಮಠವು ತುಮಕೂರಿನ ಬಾಣಸಂದ್ರ ಬಳಿಯಿರುವ ಅರಲಗುಪ್ಪೆ ಪ್ರದೇಶಕ್ಕೆ ಹತ್ತಿರದಲ್ಲಿದೆ. ಇಲ್ಲಿ 9ನೇ ಶತಮಾನದ ಪ್ರಸಿದ್ಧ ಗಂಗಾ-ನೊಲಾಂಬಾ ಶೈಲಿಯ ಕಲ್ಲೇಶ್ವರ ದೇವಾಲಯವಿದೆ. ಈ ದೇವಾಲಯದ ಕೆತ್ತನೆಗಳು, ನೃತ್ಯ ಶಿವನ ಶಿಲ್ಪ ಮತ್ತು ದಿಕ್ಪಾಲಕರ ಕೆತ್ತನೆಗಳು ಬಹಳ ಅದ್ಭುತವಾಗಿವೆ.
ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ವ್ಯವಸ್ಥಿತವಾಗಿ ಒತ್ತುವರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿದೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ ಪಾಲಾಗಿದೆ. ಇದರಲ್ಲಿ ಅಮೂಲ್ಯವಾದ ಗೋಮಾಳ, ಕೆರೆ ಅಂಗಳಗಳೂ ಇವೆ.




