Tuesday | June 16, 2026 |

ಸಿದ್ದರಾಮಯ್ಯರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್‌ನಲ್ಲಿ ಲೋಪ!; ಬಹಿರಂಗವಾಗದ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ವರದಿ

ಬೆಂಗಳೂರು; ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍‌, ಅನುಮೋದಿತ ಸ್ಥಳದಲ್ಲಿ ಇಳಿಯದೇ ಬೇರೆ ಸ್ಥಳದಲ್ಲಿ ಇಳಿದಿರುವ ಕುರಿತು ರಾಯಚೂರು ಜಿಲ್ಲಾಧಿಕಾರಿ ಅವರು ವರದಿ ಕೇಳಿ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ ಬರೆದಿದ್ದ ಪತ್ರವು ಇದೀಗ ಬಹಿರಂಗವಾಗಿದೆ.

ರಾಯಚೂರಿನಲ್ಲಿ ಅನುಮೋದಿತ ಹೆಲಿಪ್ಯಾಡ್ ಹಂಚಿಕೆ ಹಾಗೂ ವಿಮಾನ ಕಾರ್ಯಾಚರಣಾ ನಿಯಮಾವಳಿಗಳ ಪಾಲನೆಯಲ್ಲಿ ಉಲ್ಲಂಘನೆಯಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್‌ ಅವರು 2026ರ ಫೆ.10ರಂದು ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಸಂಬಂಧಿತ ಕಂಪನಿಯು ವರದಿ ನೀಡಿದೆಯೇ ಇಲ್ಲವೇ ಎಂಬ ಕುರಿತು ಯಾವುದೇ ಮಾಹಿತಿಯು ಬಹಿರಂಗವಾಗಿಲ್ಲ.

ರಾಯಚೂರು ಜಿಲ್ಲಾಧಿಕಾರಿ ನಿತೀಶ್‌ ಅವರು ಬರೆದಿದ್ದ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ವತಿಯಿಂದ ಕಾರ್ಯಾಚರಿಸಲ್ಪಟ್ಟ ಹೆಲಿಕಾಪ್ಟರ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದರು. 2026ರ ಫೆ.8ರಂದು ಅನುಮೋದಿತ ಹೆಲಿಪ್ಯಾಡ್ ಹಂಚಿಕೆ ಹಾಗೂ ಸಂಚಾರ ಯೋಜನೆಯ ಪ್ರಕಾರ ನಿಗದಿಪಡಿಸಲಾದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಇಳಿದಿರಲಿಲ್ಲ. ಬೇರೆ ಸ್ಥಳದಲ್ಲಿ ಇಳಿಸಲಾಗಿದೆ ಎಂಬುದು ಈ ಕಚೇರಿಯ ಗಮನಕ್ಕೆ ಬಂದಿದೆ.

ಆ ಹೆಲಿಕಾಪ್ಟರ್ ಅನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗಾಗಿ ವಿಶೇಷವಾಗಿ ಮೀಸಲಿರಿಸಲಾದ ಮತ್ತೊಂದು ಹೆಲಿಪ್ಯಾಡ್‌ನಲ್ಲಿ ಇಳಿಸಲಾಗಿದೆ. ಅನುಮೋದಿತ ಯೋಜನೆಯಿಂದ ಈ ರೀತಿಯ ವ್ಯತ್ಯಾಸವು ಗೊಂದಲವನ್ನು ಉಂಟುಮಾಡಿದೆ. ಭದ್ರತಾ ವ್ಯವಸ್ಥೆಗಳು, ವಿಮಾನ ಸಂಯೋಜನೆ ಹಾಗೂ ಮುಖ್ಯಮಂತ್ರಿ ಅವರ ಸಂಬಂಧಿತ ಪ್ರೋಟೋಕಾಲ್ ಪಾಲನೆಗೆ ಸಂಭವನೀಯ ಅಪಾಯವನ್ನು ಉಂಟುಮಾಡಿದೆ ಎಂದು ಪತ್ರದಲ್ಲಿ ವಿವರಿಸಿದ್ದರು.

 

 

ಹೆಲಿಪ್ಯಾಡ್ ಹಂಚಿಕೆಯನ್ನು ಭದ್ರತೆ, ಸುರಕ್ಷತೆ ಹಾಗೂ ಆಡಳಿತಾತ್ಮಕ ನಿಯಮಾವಳಿಗಳನ್ನು ಪರಿಗಣಿಸಿ ಮಾಡಲಾಗುತ್ತದೆ. ಸಂಬಂಧಿತ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ರೀತಿಯ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ನಿಗದಿಪಡಿಸಲಾದ ಹೆಲಿಪ್ಯಾಡ್‌ನಿಂದ ವ್ಯತ್ಯಾಸವಾಗಲು ಕಾರಣವಾದ ಬಗ್ಗೆ ಲಿಖಿತ ವಿವರಣೆಯನ್ನು ಸಲ್ಲಿಸಬೇಕು. ಈ ರೀತಿ ಬೇರೆಡೆ ಇಳಿಯುವಿಕೆಗೆ ಕಾರಣವಾದ ಸಂದರ್ಭಗಳು ಹಾಗೂ ನಿರ್ಧಾರ ಕೈಗೊಂಡ ಪ್ರಕ್ರಿಯೆಯನ್ನು ಸ್ಪಷ್ಟಪಡಿಸಬೇಕು. ಇಂತಹ ಲೋಪಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕೈಗೊಳ್ಳಲಿರುವ ತಿದ್ದುಪಡಿ ಹಾಗೂ ತಡೆಗಟ್ಟುವ ಕ್ರಮಗಳ ವಿವರವನ್ನು ನೀಡಬೇಕು ಎಂದು ರಾಯಚೂರು ಜಿಲ್ಲಾಧಿಕಾರಿ ಸೂಚಿಸಿರುವುದು ತಿಳಿದು ಬಂದಿದೆ.

 

 

‘ಈ ಪತ್ರ ಸ್ವೀಕರಿಸಿದ ದಿನಾಂಕದಿಂದ 3 (ಮೂರು) ದಿನಗಳೊಳಗೆ ನಿಮ್ಮ ಉತ್ತರವು ಈ ಕಚೇರಿಗೆ ತಲುಪಬೇಕು. ಹಾಗಾಗದಿದ್ದಲ್ಲಿ, ಅನ್ವಯಿಸುವ ನಿಯಮಗಳು ಹಾಗೂ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಸಿರುವುದು ಗೊತ್ತಾಗಿದೆ.

ಈ ಪತ್ರವನ್ನಾಧರಿಸಿ ಹೈಕ್ರಾಫ್ಟ್ ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ ಏನು ವರದಿ ನೀಡಿದೆ, ವರದಿಯ ಮುಖ್ಯಾಂಶಗಳೇನು, ವರದಿ ಆಧರಿಸಿ ಕ್ರಮ ಕೈಗೊಂಡಿದೆಯೇ ಇಲ್ಲವೇ ಎಂಬ ಕುರಿತು ದಿ ಫೈಲ್‌, ಪ್ರಶ್ನಾವಳಿಗಳನ್ನು ರಾಯಚೂರು ಜಿಲ್ಲಾಧಿಕಾರಿಗೆ 2026ರ ಜೂನ್‌ 14ರಂದು ಇ ಮೈಲ್  ಮೂಲಕ ಕಳಿಸಿದೆ. ಜಿಲ್ಲಾಧಿಕಾರಿ ಕಚೇರಿಯು ಇದುವರೆಗೂ ಯಾವುದೇ ಪ್ರತಿಕ್ರಿಯೆ ಒದಗಿಸಿಲ್ಲ. ಪ್ರತಿಕ್ರಿಯೆ ಒದಗಿಸಿದ ನಂತರ ಇದೇ ವರದಿಯನ್ನು ನವೀಕರಿಸಲಾಗುವುದು.

ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅವರಿದ್ದ ಹೆಲಿಕಾಪ್ಟರ್ ನಿಗದಿತ ಹೆಲಿಪ್ಯಾಡ್ ಬದಲು ಬೇರೊಂದು ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಿತ್ತು. ಇದರಿಂದ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಸಿದ್ಧರಾಗಿದ್ದ ಅಧಿಕಾರಿಗಳು ಗೊಂದಲಕ್ಕೊಳಗಾಗಿದ್ದರು.

ಮುಖ್ಯಮಂತ್ರಿಯಿದ್ದ ಹೆಲಿಕಾಪ್ಟರ್ ಇಳಿಯಲು ರಾಯಚೂರು ರಸ್ತೆಯಲ್ಲಿ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು. ಎಲ್ಲ ಅಧಿಕಾರಿಗಳು ಮುಖ್ಯಮಂತ್ರಿಯ ಆಗಮನಕ್ಕಾಗಿ ಅಲ್ಲಿ ಕಾಯುತ್ತಿದ್ದರು. ಅಲ್ಲಿಗೆ ಹೆಲಿಕಾಪ್ಟರ್ ಬಂದಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಆಗಮಿಸಿದ್ದಾರೆಂದು ಸ್ವಾಗತಿಸಲು ಅಧಿಕಾರಿಗಳು ಸಿದ್ಧರಾದರು. ಆದರೆ, ಈ ಹೆಲಿಕಾಪ್ಟರ್ ನಲ್ಲಿ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಇದ್ದರು.

ಇದರಿಂದ ಕ್ಷಣಕಾಲ ವಿಚಲಿತಗೊಂಡಿದ್ದ ಅಧಿಕಾರಿಗಳು ಮುಖ್ಯಮಂತ್ರಿಯ ಹೆಲಿಕಾಪ್ಟರ್ ಎಲ್ಲಿ ಹೋಯಿತು ಎನ್ನುವ ಗೊಂದಲಕ್ಕೆ ಒಳಗಾಗಿದ್ದರು. ಆತಂಕದಲ್ಲಿದ್ದ ಅಧಿಕಾರಿಗಳಿಗೆ ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯ ಹೆಲಿಕಾಪ್ಟರ್ ಗುಲ್ಬರ್ಗಾ ರಸ್ತೆಯಲ್ಲಿರುವ ಶಾಸಕ ಮಾನಪ್ಪ ವಜ್ಜಲ್ ಅವರ ಹೆಲಿಪ್ಯಾಡ್ ನಲ್ಲಿ ಇಳಿದಿದೆ ಎನ್ನುವ ಮಾಹಿತಿ ತಿಳಿದಿತ್ತು.

ಸಿದ್ದರಾಮಯ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್ ಆದ ಹೆಲಿಪ್ಯಾಡ್ ನಲ್ಲಿ ಇಬ್ಬರು ಪಿಎಸ್ಸೈ ಮಾತ್ರ ಇದ್ದರು. ಹೆಲಿಕಾಪ್ಟರ್ ನಿಂದ  ಸಿದ್ದರಾಮಯ್ಯ ಇಳಿಯುತ್ತಿದ್ದಂತೆ ಬೆರಗಾದ ಪಿಎಸ್ಸೈಗಳು ಮುಖ್ಯಮಂತ್ರಿಯನ್ನು ಸ್ವಾಗತಿಸಿ, ಮದುವೆ ಸಮಾರಂಭಕ್ಕೆ ಕರೆದೊಯ್ದಿದ್ದರು.

 

ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರವಾಗಿ ಈ ಬದಲಾವಣೆ, ಗೊಂದಲಕ್ಕೆ ಸ್ಪಷ್ಟ ಕಾರಣ ಏನೆಂದು ತಿಳಿದು ಬಂದಿರಲಿಲ್ಲ. ಲಿಂಗಸೂಗೂರು ಪಟ್ಟಣದಲ್ಲಿ ನಿಗದಿತ ಹೆಲಿಪ್ಯಾಡ್ ಬದಲು ತಪ್ಪಾಗಿ ಮತ್ತೊಂದು ಹೆಲಿಪ್ಯಾಡ್‌ನಲ್ಲಿ ಇಳಿದಾಗ ಗೊಂದಲ ಉಂಟಾಗಿತ್ತು.

 

 

ಪೈಲಟ್‌ನ ತಪ್ಪು ಮತ್ತು ಸಂವಹನದ ಕೊರತೆಯಿಂದ ಈ ಘಟನೆ ಸಂಭವಿಸಿದ್ದು, ಭದ್ರತಾ ಲೋಪವೆಂದು ಪರಿಗಣಿಸಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದರು. ಇದೇ ಘಟನೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍‌ ಅವರು 2026ರ ಫೆ.9ರಂದು ಲಿಂಗಸುಗೂರು ಎಸ್‌ ಪಿ ಗೂ ಸಹ ಪತ್ರ ಬರೆದಿದ್ದರು.

ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಮೊಮ್ಮಗನ ಮದುವೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವರ ಹೆಲಿಪ್ಯಾಡ್‌ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ನಿರಾಕ್ಷೇಪಣ ವರದಿಗಳನ್ನು ಮರು ಪರಿಶೀಲಿಸಬೇಕು ಎಂದು ಲಿಂಗಸುಗೂರು ಎಸ್‌ ಪಿ ಅವರು 2026ರ ಫೆ.8ರಂದು ಪತ್ರ ಬರೆದಿದ್ದರು. ಈ ಪತ್ರಕ್ಕೆ 2026ರ ಫೆ.9ರಂದು ಲೋಕೋಪಯೋಗಿ ಇಲಾಖೆಯ ಎಇಇ ಸ್ಪಷ್ಟೀಕರಣ ನೀಡಿದ್ದರು.

 

 

ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಮೊಮ್ಮಗನ ಮದುವೆ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಲಿಂಗಸುಗೂರು ತಾಲೂಕಿನ ಯಲಗಲದನ್ನಿ ಗ್ರಾಮದ ಸರ್ವೆ ನಂಬರ್‍‌ 14/1ರಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ಗಳ ಲ್ಯಾಂಡಿಂಗ್‌ ಮತ್ತು ಟೇಕಾಫ್‌ ನಿರಾಕ್ಷೇಪಣಾ ವರದಿಗಳನ್ನು ಸಲ್ಲಿಸಿದ್ದು ಇವುಗಳಲ್ಲಿ ನಮೂದಿಸಿದ ಅಕ್ಷಾಂಶ ಮತ್ತು ರೇಖಾಂಶದ ಬಗ್ಗೆ ಮರು ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದು ಎಸ್‌ ಪಿ ಸೂಚಿಸಿದ್ದರು.

ಲಿಂಗಸೂಗೂರು ಪಟ್ಟಣದ ಹೊರವಲಯದ ರಾಯಚೂರು ರಸ್ತೆಯಲ್ಲಿರುವ ಶ್ರೀನಿವಾಸ್ ಲೇಔಟ್‌ನಲ್ಲಿ ಸಿಎಂ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಲಿಕಾಪ್ಟರ್‌ಗಳಿಗೆ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು.  ಸಿಎಂ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ತಪ್ಪಾಗಿ ಕಲಬುರಗಿ ರಸ್ತೆಯಲ್ಲಿದ್ದ ಶಾಸಕ ಮಾನಪ್ಪ ವಜ್ಜಲ್ ಅವರ ಹೆಲಿಪ್ಯಾಡ್‌ನಲ್ಲಿ ಇಳಿಯಿತು. ಇದು ಸಚಿವ ಸತೀಶ್ ಜಾರಕಿಹೊಳಿ ಅವರ ಹೆಲಿಕಾಪ್ಟರ್ ಇಳಿಯಬೇಕಾಗಿದ್ದ ಸ್ಥಳವಾಗಿತ್ತು.

 

ಸಿಎಂ, ರಾಜ್ಯಪಾಲರ ಹೆಲಿಕಾಪ್ಟರ್‌ ಪ್ರಯಾಣ; ತಾಂತ್ರಿಕ ಪರಿಣಿತವಲ್ಲದ ಪಿಡಬ್ಲ್ಯೂಡಿಗೆ ಟೆಂಡರ್‌ ಹೊಣೆ

 

ಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಗಣ್ಯಾತಿಗಣ್ಯರ ಹೆಲಿಕಾಪ್ಟರ್ ಗಳಲ್ಲಿ ಹಲವು ದೋಷಗಳು ಕಂಡಿದ್ದವು. ಅಲ್ಲದೇ ತಾಂತ್ರಿಕವಾಗಿ ಪರಿಣಿತವಲ್ಲದ ಪಿಡಬ್ಲ್ಯೂಡಿಗೆ ಇದರ ಹೊಣೆಯನ್ನು ಹೊರಿಸಲಾಗಿತ್ತು. ಈ ಬಗ್ಗೆ ದಿ ಫೈಲ್‌ 2021ರ ಡಿಸೆಂಬರ್‍‌ 9ರಂದೇ ವರದಿ ಪ್ರಕಟಿಸಿತ್ತು.

Hot this week

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...
Please Scan to make Your Contribution

Topics

ಪಠ್ಯಪುಸ್ತಕ ಪರಿಷ್ಕರಣೆ; ರಾಜಕೀಯ ನಾಯಕತ್ವ ಸ್ಥಾಪಿಸಿದ ತಾತ್ಕಾಲಿಕ ಸಮಿತಿಗಳಿಂದ ನಿರ್ವಹಣೆಗೆ ಆಯೋಗ ಆಕ್ಷೇಪ

ಬೆಂಗಳೂರು; ಕರ್ನಾಟಕದಲ್ಲಿ ಪಠ್ಯಕ್ರಮ ಅಭಿವೃದ್ಧಿ, ಪಠ್ಯಪುಸ್ತಕ ತಯಾರಿಕೆ ಮತ್ತು ಇತರೆ ಸಂಬಂಧಿತ...

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

Related Articles

Popular Categories

error: Content is protected !!