ಬೆಂಗಳೂರು; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್ ಲಿಂಗಯ್ಯ ಅವರನ್ನು ವರ್ಗಾವಣೆ ಮಾಡಲು ನಿಯಮದಲ್ಲ ಅವಕಾಶವಿಲ್ಲದೇ ಇದ್ದರೂ ಸಹ ವರ್ಗಾವಣೆ ಮಾಡಿಸುವಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಡೆಗೂ ಮೇಲುಗೈ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಯಾವುದೇ ತಕರಾರುಗಳನ್ನು ವ್ಯಕ್ತಪಡಿಸದೇ ವರ್ಗಾವಣೆ ಮಾಡಲು ಸಮ್ಮತಿಸಿದ್ದಾರೆ.
ಬಿಡಿಎನ ಇಂಜಿನಿಯರ್ ಮೆಂಬರ್ ಹುದ್ದೆಯು ಲೋಕೋಪಯೋಗಿ ಇಲಾಖೆಗೆ ಮೀಸಲಾಗಿತ್ತು. ಆದರೂ ಈ ಹುದ್ದೆಯನ್ನೇ ಬೇರೆಯವರು ಅತಿಕ್ರಮಿಸಿದ್ದರೂ ಸಹ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಇಂಜಿನಿಯರ್ ಮೆಂಬರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪಿಡಬ್ಲ್ಯೂಡಿ ಅಧಿಕಾರಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಅಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿರ್ಮಾಣಕ್ಕೆ ಅತ್ಯಂತ ಮುಖ್ಯವಾದ ಸರ್ವೇಯಿಂಗ್ ವಿಭಾಗದ ಶಿಕ್ಷಣ ಬಹುಮುಖ್ಯ. ಆದರೆ ಈ ಶಿಕ್ಷಣವನ್ನೇ ಪಡೆದಿರದ ಪರಿಸರ ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿರುವ ಪ್ರವೀಣ್ ಲಿಂಗಯ್ಯರನ್ನು ಬಿಡಿಎಗೆ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದಾರೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡಿರುವುದಲ್ಲದೇ ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್ ಲಿಂಗಯ್ಯ ಅವರನ್ನೇ ವರ್ಗಾವಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಾಲ್ಕು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿ ಹಾಕಿದ್ದರು. ಈ ಟಿಪ್ಪಣಿ ಕೈ ಸೇರಿದ ನಾಲ್ಕೇ ನಾಲ್ಕು ದಿನದೊಳಗೆ ಚಿರತೆ ವೇಗದಲ್ಲಿ ಪ್ರವೀಣ್ ಲಿಂಗಯ್ಯ ಅವರನ್ನು ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆ ಮಾಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆದೇಶವನ್ನೂ ಹೊರಡಿಸಿದೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಶಿಫಾರಸ್ಸನ್ನು ಅಂಗೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಪ್ರವೀಣ್ ಲಿಂಗಯ್ಯ ಅವರನ್ನು ಈ ಹುದ್ದೆಗೆ ವರ್ಗಾವಣೆ ಮಾಡಲು ನಿಯಮದಲ್ಲಿ ಅವಕಾಶವಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ಹುದ್ದೆಯು ಲೋಕೋಪಯೋಗಿ ಇಲಾಖೆಯ ವೃಂದಕ್ಕೆ ಎನ್ ಕೇಡರ್ ಆಗಿದ್ದರೂ ಬಿಬಿಎಂಪಿ ವೃಂದದ ಅಧಿಕಾರಿಯಾಗಿರುವ ಕಾರಣಕ್ಕೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.
ಈ ಎಲ್ಲಾ ಆರೋಪಗಳನ್ನು ಬದಿಗೊತ್ತಿ ಪ್ರವೀಣ್ ಲಿಂಗಯ್ಯ ಅವರನ್ನು ಬಿಡಿಎನ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೋರಿದ್ದರು.
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಬಿಡಿಎ ಸದಸ್ಯ ಇಂಜಿನಿಯರ್ ಹುದ್ದೆಯು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಹುದ್ದೆಯ ವೃಂದದ ಹುದ್ದೆಗೆ ಮೀಸಲಾಗಿದೆ. ಅಲ್ಲದೇ ಜಿಬಿಎ ಅಥವಾ ಈ ಹಿಂದಿನ ಬಿಬಿಎಂಪಿ ವೃಂದ ಮತ್ತು ನೇಮಕಾತಿಗಳ ಅನ್ವಯ ಬಿಬಿಎಂಪಿ ವೃಂದಕ್ಕೆ ಸೇರಿರುವ ಯಾವುದೇ ಅಧಿಕಾರಿಯು ಎರವಲು ಸೇವೆ ಮೇಲೆ ಅನ್ಯ ಇಲಾಖೆ ಅಥವಾ ಪ್ರಾಧಿಕಾರ, ನಿಗಮ, ಮಂಡಳಿಗಳಲ್ಲಿ ನಿಯೋಜನೆಗೆ ಅವಕಾಶವಿಲ್ಲ. ಹಾಗೆಯೇ ಬಿಬಿಎಂಪಿ ವೃಂದಕ್ಕೆ ಸೇರಿರುವ ಅಧಿಕಾರಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ಒಳಪಡುವುದಿಲ್ಲ.
ಹೀಗಿದ್ದರೂ ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರನ್ನು ಬಿಡಿಎನ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿರುವುದು ನಿಯಮ ಉಲ್ಲಂಘನೆ ಮಾಡಿದಂತಾಗಿದೆ.
ಡಿ ಕೆ ಶಿವಕುಮಾರ್ ಅವರು ಪ್ರವೀಣ್ ಲಿಂಗಯ್ಯ ಅವರನ್ನು ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿಯಲ್ಲಿ ಕೋರಿದ್ದಾರೆ. ಇದಕ್ಕೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ವರ್ಗದಲ್ಲೇ ಆಕ್ಷೇಪಗಳು ವ್ಯಕ್ತವಾಗಿದ್ದವು.

ಪ್ರವೀಣ್ ಲಿಂಗಯ್ಯ ಅವರು ಮೂಲತಃ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪ್ರಸ್ತುತ ಎರವಲು ಸೇವೆ ಮೇಲೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅವರನ್ನು ಬಿಡಿಎನಲ್ಲಿ ಖಾಲಿ ಆಗುತ್ತಿರುವ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲು ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರು ನಿಯಮ ಮೀರಿ ಮುಖ್ಯ ಅಭಿಯಂತರರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಪ್ರವೀಣ್ ಲಿಂಗಯ್ಯ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿಯಾಗುತ್ತಿರುವ ಮುಖ್ಯ ಇಂಜಿನಿಯರ್/ಪ್ರಾಧಿಕಾರದ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಜಲಮಂಡಳಿ ಮತ್ತು ಕೆಯುಡಿಎಫ್ಸಿ ಮುಖ್ಯ ಅಭಿಯಂತರರ ಹುದ್ದೆ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್ಗಳಿಗೆ ಎನ್ ಕೇಡರ್ ಆಗಿದೆ. ಅಂದರೆ ಎರವಲು ಸೇವೆಯ ಮೇಲೆ ಕೇವಲ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಮಾತ್ರ ಬಿಡಿಎನ ಮೆಂಬರ್ ಸೆಕ್ರೆಟರಿ ಹುದ್ದೆಗೆ ವರ್ಗಾವಣೆಗೊಳ್ಳಬಹುದು. ಆದರೆ ಬಿಬಿಎಂಪಿ ಕೇಡರ್ನಿಂದ ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆಗೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ.
ಅಲ್ಲದೇ ಬಿಡಿಎನಲ್ಲಿಯೂ ಇದೇ ಸಮಸ್ಯೆ ಇದೆ. ಸದಸ್ಯ ಅಭಿಯಂತರ ಹುದ್ದೆ ಲೋಕೋಪಯೋಗಿ ಇಲಾಖೆಗೆ ಎನ್ ಕೇಡರ್ ಆಗಿದೆ. ಎನ್ ಕೇಡರ್ ಅಂದರೇ ಯಾವ ಹುದ್ದೆಯನ್ನು ಇತರ ಇಲಾಖೆಯ ಯಾವ ಅಧಿಕಾರಿ ಅಲಂಕರಿಸಬಹುದು ಎಂದು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪಷ್ಟವಾಗಿ ಇದೆ. ಆದರೂ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಪ್ರವೀಣ್ ಲಿಂಗಯ್ಯ ಅವರನ್ನು ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆ ಮಾಡಲು ಕೋರಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಇವರಲ್ಲದೇ ಜಿಬಿಎಯ ಇನ್ನೋರ್ವ ಮುಖ್ಯ ಅಭಿಯಂತರ ನಂದೀಶ್ ಎಂಬುವರು ಸಹ ಕೆ.ಯು.ಐ.ಡಿ.ಎಫ್.ಸಿ ಯುಲ್ಲಿ ಮುಖ್ಯ ಅಭಿಯಂತರರಾಗಿದ್ದಾರೆ. ಅದರೆ ಇದು ಕೂಡ ನಿಯಮಬಾಹಿರ ಎಂಬ ಆರೋಪ ಕೇಳಿ ಬಂದಿದೆ. ಇವರು ಮೂಲತಃ ಪರಿಸರ ಅಭಿಯಂತರರಾಗಿದ್ದರೂ ಸಿವಿಲ್ ವಿಭಾಗದ ಮುಖ್ಯ ಅಭಿಯಂತರರ ಹುದ್ದೆಗೆ ನೇಮಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಘನತ್ಯಾಜ್ಯ ನಿರ್ವಹಣೆ-4 ನೇ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಲಿಂಗಯ್ಯ ಅವರನ್ನು ಬಿಬಿಎಂಪಿಯ ಟಿಇಸಿ ವಿಭಾಗದ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಹೆಚ್ಚುವರಿ ಪ್ರಭಾರದ ಮೇಲೆ 2021ರ ಸೆ.27ರಂದೇ ವರ್ಗಾಯಿಸಿತ್ತು.

ಐಐಟಿಯಲ್ಲಿ ಓದಿರುವ ಮತ್ತು ಎಂ.ಟೆಕ್ ಮಾಡಿರುವ ಮುಖ್ಯ ಇಂಜಿನಿಯರುಗಳು ಜಿಬಿಎ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೂ ಈ ಇಂಜಿನಿಯರ್ಗಳನ್ನು ನಗರಪಾಲಿಕೆಗಗಳಿಗೆ ಸೀಮಿತಗೊಳಿಸಿದೆ. ಅವರನ್ನು ಮುಖ್ಯವಲ್ಲದ ಕೆಲಸಗಳಿಗೆ ಅಂದರೆ ಕಸ ಸಂಗ್ರಹಣೆಯಂತಹ ಕೆಲಸಗಳಿಗೆ ತೊಡಗಿಸಲಾಗಿದೆ. ಅಂದರೆ ಅವರ ಸೇವೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ ಎಂಬ ಮಾತುಗಳು ಜಿಬಿಎ ವ್ಯಾಪ್ತಿಯಲ್ಲಿ ಕೇಳಿ ಬಂದಿದ್ದವು.
ಆದರೆ ಓರ್ವ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ರಾಜೇಶ್ ಎಂಬುವರಿಗೆ ಘನ ತ್ಯಾಜ್ಯ ನಿರ್ವಹಣೆ ಮತ್ತು ಬೃಹತ್ ನೀರುಗಾಲುವೆ ಮುಖ್ಯ ಇಂಜಿನಿಯರ್ ಹುದ್ದೆ ಕರುಣಿಸಿದೆ. ಇನ್ನೋರ್ವ ಕೆಮಿಕಲ್ ಇಂಜಿನಿಯರ್ ಮಾದೇಶ ಎಂಬುವರಿಗೆ ಮುಖ್ಯ ರಸ್ತೆ ಅಭಿವೃದ್ಧಿ ಮುಖ್ಯ ಇಂಜಿನಿಯರ್ ಹುದ್ದೆ ನೀಡಿದೆ. ಮತ್ತೊಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಆದ ವಿಶ್ವನಾಥ್ ಎಂಬುವರಿಗೆ ಎಲಿವೇಟೆಡ್ ಕಾರಿಡಾರ್ ಇಂಜಿನಿಯರ್ ಹುದ್ದೆ ನೀಡಲಾಗಿದೆ. ಇದಲ್ಲದೇ ಮತ್ತೋರ್ವ ಪರಿಸರ ಇಂಜಿನಿಯರ್ ಆದ ಪ್ರೇಮಲತಾ ಎಂಬುವರಿಗೆ ಟಿವಿಸಿಸಿ ಮುಖ್ಯ ಇಂಜಿನಿಯರ್ ಹುದ್ದೆ ನೀಡಿದೆ.
‘ಹೀಗೆ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನೇ ಹೊಂದಿರದ ಇಂಜಿನಿಯರ್ಗಳನ್ನು ಸಿವಿಲ್ ಇಂಜಿನಿಯರ್ಗಳಿಗೆ ಮೀಸಲಾದ ಹುದ್ದೆಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದಾಗಿ ನಗರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳು ತರಬೇತಿಯೇ ಇಲ್ಲದ ಇಂಜಿನಿಯರ್ಗಳಿಂದ ನಿರ್ವಹಿಸಲ್ಪಡುತ್ತಿದೆ, ‘ ಎನ್ನುತ್ತಾರೆ ಜಿಬಿಎನ ಹೆಸರು ಹೇಳಲಿಚ್ಛಿಸದ ಮುಖ್ಯ ಇಂಜಿನಿಯರ್ಯೊಬ್ಬರು.




