Friday | April 17, 2026 |

ನ್ಯಾಕ್‌ ಮಾನ್ಯತೆಗೆ ಲಂಚ; ಸಿಬಿಐನಿಂದ ಬಂಧನಕ್ಕೊಳಗಾಗಿ 48 ಗಂಟೆಗಳಾದರೂ ಹೊರಬೀಳದ ಅಮಾನತು ಆದೇಶ

ಬೆಂಗಳೂರು;  ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ರಾಜ್ಯದ ದಾವಣಗೆರೆ ವಿಶ್ವವಿದ್ಯಾಲಯದ ಹಿಂದಿನ ರಿಜಿಸ್ಟ್ರಾರ್‍‌ ಹಾಗೂ ಹಾಲಿ ಹಿರಿಯ ಪ್ರಾಧ್ಯಾಪಕಿಯಾಗಿರುವ ಪ್ರೊ ಗಾಯತ್ರಿ ದೇವರಾಜ್‌ ಅವರನ್ನು ಬಂಧಿಸಿ 48 ಗಂಟೆಗಳಾದರೂ ಸಹ ಇದುವರೆಗೂ ಅವರನ್ನು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯಾಗಲೀ, ದಾವಣಗೆರೆ ವಿಶ್ವವಿದ್ಯಾಲಯವಾಗಲೀ ಇದುವರೆಗೂ ಸೇವೆಯಿಂದ ಅಮಾನತುಗೊಳಿಸಿಲ್ಲ.

 

ಗಾಯತ್ರಿ ದೇವರಾಜ್‌ ಅವರನ್ನು ಬಂಧಿಸಿರುವ ಕುರಿತು ಸಿಬಿಐನಿಂದ ಯಾವುದೇ ಮಾಹಿತಿಯು ಕುಲಾಧಿಪತಿಗಳಾದ ರಾಜ್ಯಪಾಲರಿಗೆ, ಸರ್ಕಾರಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಬಂದಿಲ್ಲ ಎಂಬ ನೆಪವನ್ನು ಮುಂದೊಡ್ಡಿದೆ.

 

ಇದೇ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಪ್ರೊ. ರಾಜೀವ್ ಸಿಜಾರಿಯಾ ಅವರನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಅವರನ್ನು ಅಮಾನತುಗೊಳಿಸಿತ್ತು. ಆದರೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ್‌ ಅವರು ಸಿಬಿಐ ಬಂಧನಕ್ಕೊಳಗಾಗಿ 48 ಗಂಟೆಗಳಾದರೂ ಇದುವರೆಗೂ ಅಮಾನತು ಆದೇಶ ಹೊರಬೀಳದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಗಾಯತ್ರಿ ದೇವರಾಜ್ ಅವರನ್ನ ಅಮಾನತುಗೊಳಿಸಿ ಇದುವರೆಗೂ ಆದೇಶ ಹೊರಡಿಸಿಲ್ಲ ಎಂದು ದಾವಣಗೆರೆ ವಿವಿಯ ಕುಲಪತಿ ಕುಂಬಾರ್‍‌ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಗಾಯತ್ರಿ ದೇವರಾಜ್ ಅವರು ಬಂಧನಕ್ಕೊಳಗಾಗಿರುವ ಬಗ್ಗೆ ಸಿಬಿಐನಿಂದ ಯಾವುದೇ ನೇರ ಮಾಹಿತಿಯು ತಮಗೆ ಬಂದಿಲ್ಲ. ಹೀಗಾಗಿ ಅಮಾನತು ಆದೇಶ ಹೊರಡಿಸಿಲ್ಲ ಎಂದು ಹೇಳಿದರು.

 

ಅಲ್ಲದೆ ಈ ಪ್ರಕರಣದ ಕುರಿತು ರಾಜ್ಯದ ರಾಜ್ಯಪಾಲರಿಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ ಎಂ ಸಿ ಸುಧಾಕರ್, ಇಲಾಖೆಯ ಪ್ರಧಾನ ಕಾರ್ಯದರ್ಶಿಗೂ ಸಹ ಯಾವುದೇ ಮಾಹಿತಿಯನ್ನೂ ಸಿಬಿಐ ನೀಡಿಲ್ಲ. ಯಾವ ಮಾಹಿತಿಯೂ ಇಲ್ಲದೇ ಏನು ಮಾಡುವುದು ಎಂದು ಕುಂಬಾರ್‍‌ ಅವರು ತಮ್ಮ ಪ್ರತಿಕ್ರಿಯೆಯನ್ನು ವಿಸ್ತರಿಸಿದರು.

 

‘ಸಿಬಿಐ ವೆಬ್‌ಸೈಟ್‌ನಿಂದ ಮಾಹಿತಿಯನ್ನ ಡೌನ್‌ ಲೌಡ್‌ ಮಾಡಿಕೊಂಡಿದ್ದೇವೆ. ಕೆಸಿಎಸ್‌ಆರ್‍‌ ನಿಯಮಗಳು ನೋಡುತ್ತೇವೆ. ಈ ಸಂಬಂಧ ರಾಜ್ಯಪಾಲರಿಗೆ, ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಿದ್ದೇವೆ. ನಂತರ ಕ್ರಮ ವಹಿಸಲಾಗುವುದು,’ ಎಂದು ಕುಂಬಾರ್‍‌ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

 

ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಪ್ರೊ. ರಾಜೀವ್ ಸಿಜಾರಿಯಾ ಅವರನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಅವರನ್ನು ಅಮಾನತುಗೊಳಿಸಿರುವ ಬಗ್ಗೆಯೂ ‘ದಿ ಫೈಲ್‌’, ಕುಲಪತಿ ಕುಂಬಾರ್‍‌ ಅವರ ಗಮನ ಸೆಳೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು ‘ ಸಿಬಿಐ ದೆಹಲಿಯಲ್ಲಿದೆ. ಅವರಿಗೆ ನೇರವಾಗಿ ಮಾಹಿತಿ ತಲುಪಿದೆ. ನಮಗೆ ನೇರವಾಗಿ ಸಂಪರ್ಕವಿಲ್ಲ,’ ಎಂದಷ್ಟೇ ಹೇಳಿದರು.

 

ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದರು ಮತ್ತು ಮೈಕ್ರೋಬಯಾಲಜಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (NAAC) ಏಳು ಸದಸ್ಯರಲ್ಲಿ ಒಬ್ಬರಾಗಿದ್ದರು.

 

ನ್ಯಾಕ್​ ಗ್ರೇಡ್​​​​ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ದಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್​​ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ವ್ಯಕ್ತಿಗಳಲ್ಲಿ ತಪಾಸಣಾ ಸಮಿತಿಯ ಅಧ್ಯಕ್ಷರು ಮತ್ತು ಆರು ಸದಸ್ಯರು ಸೇರಿದ್ದಾರೆ. ಬಂಧಿತರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಉಪಕುಲಪತಿಗಳು ಮತ್ತು ಇಬ್ಬರು ಕಾರ್ಯನಿರ್ವಾಹಕರು ಸೇರಿದ್ದಾರೆ.

 

ಅಧಿಕೃತ ಹೇಳಿಕೆಯಲ್ಲಿ, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನ್ಯಾಕ್ ಪರಿಶೀಲನಾ ತಂಡದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ದೃಢಪಡಿಸಿತ್ತು. ಅನುಕೂಲಕರವಾದ NAAC ರೇಟಿಂಗ್‌ಗಳಿಗೆ, ನಿರ್ದಿಷ್ಟವಾಗಿ A++ ಮಾನ್ಯತೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

 

ಕೆಎಲ್‌ಇಎಫ್ ಅಧ್ಯಕ್ಷ ಕೋನೇರು ಸತ್ಯನಾರಾಯಣ, ನ್ಯಾಕ್ ಮಾಜಿ ಉಪ ಸಲಹೆಗಾರ ಎಲ್ ಮಂಜುನಾಥ ರಾವ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ನಿರ್ದೇಶಕ (ಐಕ್ಯೂಎಸಿ-ಎನ್‌ಎಸಿ) ಎಂ ಹನುಮಂತಪ್ಪ ಮತ್ತು ನ್ಯಾಕ್ ಸಲಹೆಗಾರ ಎಂಎಸ್ ಶ್ಯಾಮಸುಂದರ್ ಅವರನ್ನೂ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ ಎಂದು ಸಿಬಿಐ ತಿಳಿಸಿತ್ತು.

 

ನ್ಯಾಕ್ ತಪಾಸಣೆಯ ಸದಸ್ಯರಿಗೆ ಲಂಚ ನೀಡುವಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಕೆಎಲ್‌ಇಎಫ್ ಉಪಕುಲಪತಿ ಜಿ ಪಿ ಸಾರಧಿ ವರ್ಮ, ಕೆಎಲ್‌ಇಎಫ್ ಉಪಾಧ್ಯಕ್ಷ ಕೊನೇರು ರಾಜಾ ಹರೇನ್ ಮತ್ತು ಹೈದರಾಬಾದ್ ಕ್ಯಾಂಪಸ್‌ನ ಕೆಎಲ್ ವಿಶ್ವವಿದ್ಯಾಲಯದ ನಿರ್ದೇಶಕ ಎ ರಾಮಕೃಷ್ಣ ಅವರನ್ನು ಸಿಬಿಐ ಬಂಧಿಸಿದೆ. ಪ್ರಕರಣದಲ್ಲಿ ಒಟ್ಟು 14 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐ ತಿಳಿಸಿತ್ತು. ಅಪರಾಧದ ಸಂಪೂರ್ಣ ವ್ಯಾಪ್ತಿಯನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ ಎಂದು ದೃಢಪಡಿಸಿತ್ತು.

 

ತನಿಖಾ ಸಂಸ್ಥೆಯು ವಿಜಯವಾಡ, ಚೆನ್ನೈ, ಬೆಂಗಳೂರು, ಪಲಮು, ಸಂಬಲ್‌ಪುರ್, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳ 20 ಸ್ಥಳಗಳಲ್ಲಿ ಶೋಧ ನಡೆಸಿತ್ತು. ಈ ಶೋಧದ ವೇಳೆ ಸಿಬಿಐ ಅಧಿಕಾರಿಗಳು 37 ಲಕ್ಷ ರೂಪಾಯಿ ನಗದು, ಆರು ಲ್ಯಾಪ್‌ಟಾಪ್‌ಗಳು, ಒಂದು ಮೊಬೈಲ್ ಫೋನ್ ಮತ್ತು ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

 

ಆಂಧ್ರಪ್ರದೇಶದ ಗುಂಟೂರಿನ ವಡ್ಡೇಶ್ವರಂನಲ್ಲಿರುವ ಕೊನೆರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನ (KLEF) ಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ತಪಾಸಣೆಯ ಸಮಯದಲ್ಲಿ A++ ರೇಟಿಂಗ್ ಪಡೆಯಲು ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

Hot this week

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

Topics

ಪುರಾತತ್ವ ಇಲಾಖೆಯಲ್ಲಿಯೂ ಶೇ.60ರಷ್ಟು ಕಮಿಷನ್‌ಗೆ ಬೇಡಿಕೆ; ಲಂಚದ ಪ್ರಮಾಣ ಕಡಿಮೆ ಮಾಡಿಸಲು ಅಲವತ್ತುಕೊಂಡ ಗುತ್ತಿಗೆದಾರರು

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಚೇರಿ ಹೊಂದಿರುವ  ಪುರಾತತ್ವ...

1704.69 ಕೋಟಿ ರು ಗೆ ಆಕ್ಷೇಪಣೆ; ಸಾವಿರಾರು ಕೋಟಿ ವೆಚ್ಚವಾಗಿದ್ದರೂ ಬಂಡವಾಳ ವೆಚ್ಚ ಕಾಮಗಾರಿಗೆ ಅತ್ಯಲ್ಪ ಮೊತ್ತ ಪರಿಗಣನೆ

ಬೆಂಗಳೂರು; ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಸಾಮಾನ್ಯ ಆಡಳಿತ, ಕಾಮಗಾರಿ, ಆರೋಗ್ಯ, ಕಂದಾಯ,...

ಪಿಂಚಣಿಗೆ ಕೇಳಿದ್ದು 5.63 ಕೋಟಿ, ಬಜೆಟ್‌ನಲ್ಲಿ ನಿಗದಿಪಡಿಸಿದ್ದು ಕೇವಲ 1 ಲಕ್ಷ; ಆರ್ಥಿಕ ಮುಗ್ಗಟ್ಟಿಗೆ ಸಿಲುಕಲಿದೆಯೇ ವಿಶ್ವವಿದ್ಯಾಲಯ?

ಬೆಂಗಳೂರು; ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ  ಪಾವತಿಸಲು ವಿಶ್ವವಿದ್ಯಾಲಯಗಳು ಕೇಳಿದ್ದ ಸಹಾಯಾನುದಾನದ...

ಗ್ಯಾರಂಟಿ ಯೋಜನೆಗಳಿಗೆ ಜಾಹೀರಾತು; 3 ವರ್ಷದಲ್ಲಿ 348.25 ಕೋಟಿ ವೆಚ್ಚ

ಬೆಂಗಳೂರು; ಗ್ಯಾರಂಟಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ ಜಾಹೀರಾತುಗಳ ಮೂಲಕ...

11,721 ಟ್ರಾನ್ಸ್‌ಫಾರ್ಮ್‌ರ್ ಖರೀದಿ; ಕೇರಳ ವಿದ್ಯುತ್ ಕಂಪನಿಗೆ 4 ಜಿ ವಿನಾಯಿತಿ ಅಧಿಸೂಚನೆ, ಕವಿಕಾಕ್ಕೆ 174.73 ಕೋಟಿ ಆದಾಯ ತಪ್ಪಿಸಿತೇ ಕಾಂಗ್ರೆಸ್ ಸರ್ಕಾರ?

ಬೆಂಗಳೂರು;  ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721...

Related Articles

Popular Categories

error: Content is protected !!