ರಾಹುಲ್‌ ಎಂ ಖರ್ಗೆ ಟ್ರಸ್ಟಿಯಾಗಿರುವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪ.ಜಾತಿ ಕೋಟಾದಲ್ಲಿ 5 ಎಕರೆ ಮಂಜೂರು

ಬೆಂಗಳೂರು; ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಹಂಚಿಕೆಯಾಗಿರುವ 45.94 ಎಕರೆ ವಿಸ್ತೀರ್ಣದ ಪೈಕಿ ರಾಹುಲ್‌ ಎಂ ಖರ್ಗೆ ಅವರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ಗೆ ಪರಿಶಿಷ್ಟ ಜಾತಿ ಕೋಟಾದಡಿಯಲ್ಲಿ  5 ಎಕರೆ ವಿಸ್ತಿರ್ಣ ಜಾಗವನ್ನು ಮಂಜೂರು ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ (ಸಿ.ಎ) ಮೀಸಲಿಟ್ಟ ನಿವೇಶನಗಳ ಹಂಚಿಕೆಯಲ್ಲಿ ಒಳಸಂಚು ಮತ್ತು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ನೀಡಿರುವ ಬೆನ್ನಲ್ಲೇ ರಾಹುಲ್‌ ಎಂ ಖರ್ಗೆ ಅವರು ಟ್ರಸ್ಟಿಯಾಗಿರುವವ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಪ್ರಕರಣವೂ ಮುನ್ನೆಲೆಗೆ ಬಂದಿದೆ.

 

ಹೈಟೆಕ್‌ ಡಿಫೆನ್ಸ್‌ ಏರೋ ಸ್ಪೇಸ್‌ ಪಾರ್ಕ್‌ನಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್‌  ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಸಂಸ್ಥೆಗಳ ಸ್ಥಾಪನೆಗಾಗಿ ಜಾಗ ಮಂಜೂರಾತಿಗೆ ಕೋರಿತ್ತು. ಅದರಂತೆ ಸಚಿವ ಎಂ ಬಿ ಪಾಟೀಲ್‌ ಅಧ್ಯಕ್ಷತೆಯ ಸಭೆಯು ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ 5 ಎಕರೆ ಜಾಗವನ್ನು ಮಂಜೂರು ಮಾಡಿರುವುದು ಸಭೆಯ ನಡವಳಿಯಿಂದ ಗೊತ್ತಾಗಿದೆ.

 

ತರಬೇತಿ ಮತ್ತು ಸಂಶೋಧನೆ ಸಂಸ್ಥೆಗಳ ಸ್ಥಾಪನೆಗಾಗಿ ಈ ಜಾಗದಲ್ಲಿ ಒಟ್ಟು 25 ಕೋಟಿ ರು ಗಳನ್ನು ಹೂಡಿಕೆ ಮಾಡಲಿದ್ದಾರೆ ಎಂಬುದು ನಡವಳಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಕೈಗಾರಿಕೆಗಳನ್ನೇ ನಡೆಸದ ಕಂಪನಿಗಳಿಗೂ ಸಿ ಎ ನಿವೇಶನ ಹಂಚಿಕೆ ಮಾಡಲಾಗಿದೆ ಮತ್ತು ಮಂಡಳಿಯ ನಿಯಮ (7)ನ್ನು ನೇರವಾಗಿ ಉಲ್ಲಂಘಿಸಲಾಗಿದೆ  ಎಂದು ದಿನೇಶ್‌ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಆಪಾದಿಸಿದ್ದರು. ಈ ಸಂಬಂಧ ಪಟ್ಟಿಯನ್ನೂ ಒದಗಿಸಿದ್ದರು. ಇದೇ ಪಟ್ಟಿಯಲ್ಲಿ ರಾಹುಲ್‌ ಎಂ ಖರ್ಗೆ ಅವರು ಟ್ರಸ್ಟಿಯಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ ಕೂಡ ಇರುವುದು ಗೊತ್ತಾಗಿದೆ.

 

ಒಟ್ಟಾರೆ 45.94 ಎಕರೆ ವಿಸ್ತೀರ್ಣದ ಜಾಗದಲ್ಲಿ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ ಸೇರಿದಂತೆ ಒಟ್ಟಾರೆ  11 ಕಂಪನಿಗಳು 1,204.85 ಕೋಟಿ ರು. ಹೂಡಿಕೆಯಾಗಲಿದೆ. ಅದೇ ರೀತಿ ಎಸ್‌ಸಿ ಮತ್ತು ಎಸ್‌ ಟಿ ಕೋಟಾದಡಿಯಲ್ಲಿ ಎಂಎಂಆರ್‍‌ ಸ್ಕೈಯರ್‍‌ ಗೆ 2.41 ಎಕರೆ ಮಂಜೂರಾಗಿದೆ. ಈ ಜಾಗದಲ್ಲಿ ಹೋಟೆಲ್‌, ರೆಸಾರ್ಟ್‌ ಮತ್ತು ಕಾಟೇಜ್‌ ನಿರ್ಮಾಣಕ್ಕೆ 17.50 ಕೋಟಿ ರು. ಹೂಡಿಕೆಯಾಗಲಿದೆ.

 

ಅದೇ ರೀತಿ ಎಸ್‌ಸಿ ಕೋಟಾದಡಿಯಲ್ಲಿ ಅದ್ವಿಕ್‌ ಗೇಟ್‌ವೇ ನ ಮಂಜುನಾಥ್‌ ಅವರಿಗೆ 2.17 ಎಕರೆ ಮಂಜೂರಾಗಿದೆ.  ಈ ಪ್ರದೇಶದಲ್ಲಿ ರೆಸಿಡೆನ್ಷಿಯಲ್‌ ಅಪಾರ್ಟ್‌ಮೆಂಟ್‌ ಉದ್ದೇಶಕ್ಕೆ 47.92 ಕೋಟಿ ರು. ಹೂಡಿಕೆ ಮಾಡಲಿದೆ ಎಂದು ನಡವಳಿಯಿಂದ ತಿಳಿದು ಬಂದಿದೆ.

 

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು ರಚಿಸಿರುವ ಕೈಗಾರಿಕೆ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಗಳಿಗೆ ಮೀಸಲಿಟ್ಟ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಅವ್ಯವಹಾರ, ಅಕ್ರಮ, ಕ್ರಿಮಿನಲ್‌ ಒಳಸಂಚು ನಡೆಸಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ. ಇದರಿಂದ ಕೆಐಎಡಿಬಿಗೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ. ಇದರಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಸಚಿವ ಎಂ ಬಿ ಪಾಟೀಲ್‌ ಅವರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದರು.

 

 

ಹಂಚಿಕೆಯಾಗಿರುವ ಇತರೆ  ಕಂಪನಿಗಳ ಪಟ್ಟಿ

 

ಕರ್ನಾಟಕ ಡ್ರಗ್ಸ್‌ ಫಾರ್ಮಾಸ್ಯುಟಿಕಲ್ಸ್‌, ಕರ್ನಾಟಕ ಡ್ರಗ್ಸ್‌, ಕಾಫಿ ಪಾಯಿಮಟ್‌, ಪಾಟೀಲ್‌ ಅಂಡ್‌ ಪಾಟೀಲ್‌ ಇನ್ಫ್ರಾಸ್ಚಕ್ಟರ್‍‌, ಎನ್‌ಸಿಎಲ್‌ ಎಂಟರ್‍‌ ಪ್ರೈಸೆಸ್‌, ವಿನಾಯಕ ಪ್ರಿಸೆನ್ಸ್‌, ಹೋಟೆಲ್‌ ಇಪ್ಕಾನ್‌, ದಿತ್ಯ ಇಂಟಿರೀಯರ್‍‌ ಕನ್ಸ್‌ಟ್ರಕ್ಷನ್ಸ್‌, ಮೋಹನ್‌ ಕುಮಾರ್‍‌ ವೈ ಎನ್‌, ಶ್ರೀ ಶ್ಯಾಮ್‌ ಇನ್ಪ್ರಾಸ್ಟಕ್ಚರ್‍ಸ್‌, ಬಯೋ ತೆರೆಪಿಕ್ಸ್‌ ಪ್ರೈವೈಟ್‌ ಲಿಮಿಟೆಡ್‌, ಸೃಜನ್‌ ಇನ್ಫ್ರಾಸ್ಷಕ್ಚರ್‍ಸ್‌, ಏರ್‍‌ವೈ ಎಂಟರ್‍‌ ಪ್ರೈಸೆಸ್‌, ಬ್ರೋನ್‌, ಟ್ರೀ ಹಾಸ್ಪಿಟಲ್ಸ್‌, ಶರಾವತಿ ಬಿಪಿಒ ಸರ್ವಿಸ್‌, ಡಿಸ್ಕವರಿ ಇನ್ಫ್ರಾ ವೆಂಚರ್‍ಸ್‌, ಟ್ರೈಡೆಂಡ್‌ ಡೆವೆಲೆಪರ್ಸ್‌, ಎಡಿಯು ಇನ್ಪ್ರಾ, ರೇಖಾ ಎಂಟರ್‍‌ ಪ್ರೈಸೆಸ್‌, ಸಿದ್ದಾರ್ಥ ಎಂ ವಿಹಾರ್‍‌ ಟ್ರಸ್ಟ್‌, ಎಡಿಯು ಇನ್ಫ್ರಾ ಅರುನ್‌ ಪಾರ್ಟನಕ್‌, ವೈಗೈ ಇನ್‌ವೆಸ್ಟ್‌ಮೆಂಟ್ಸ್‌, ಅರವ್‌ ಎಂಟರ್‍‌ ಪ್ರೈಸೆಸ್‌, ಹರಿತಾ ಲಾಜಿಸ್ಟಿಕ್‌ ವೇರ್‍‌ಹೌಸಿಂಗ್‌ ಪ್ರೈವೈಟ್‌ ಲಿಮಿಟೆಡ್‌, ಅದ್ವೈಕ್‌ ಗೇಟ್‌ವೇ, ಸಫ್ರಾನ್‌ ಎಂಟರ್‍‌ ಪ್ರೈಸೆಸ್‌, ಮೆಕ್‌ ಇಂಜಿನಿಯರಿಂಗ್‌ ಪವರ್‍‌ ಸರ್ವಿಸ್‌, ವೆಂಕಟೇಶ್ವರ ಹೋಟೆಲ್‌, ಸಂಜೀವಿನಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌, ಶುಭದಾ ಸಂತೋಷ್‌ ಗಣಿ, ಸಿಎಂ ಕಿರಣ್‌ , ಎಕೋಲೈಫ್‌ ಪ್ರಾಜೆಕ್ಟ್ಸ್‌, ವಿ ಎನ್‌ ಹೋಟೆಲ್‌ ಫ್ಲಾಟ್‌, ಜಿ ಎನ್‌ ಮೂರ್ತಿ, ನಕ್ಷ್‌ ಎಂಟರ್‍‌ ಪ್ರೈಸೆಸ್‌, ಶಿವಗಂಗಾ ಎಂಟರ್‍‌ ಪ್ರೈಸೆಸ್‌, ಸಪ್ತಗಿರಿ ಇನ್‌, ರಾಷ್ಟ್ರೀಯ ಗ್ರೂಪ್ಸ್‌, ಸಿಂಫೊಸಿಸ್‌ ಹೆಲ್ತ್‌ ಕೇರ್‍‌ ಕಂಪನಿಗಳಿಗೆ ಸಿ ಎ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯಪಾಲರಿಗೆ ಪಟ್ಟಿಯನ್ನು ಒದಗಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಭಾರತೀಯ ನಾಘರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್‌ 218 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ 1988ರ ಸೆಕ್ಷನ್‌ 17 ಎ ಮತ್ತು 19ರ ಅಡಿಯಲ್ಲಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದನ್ನು ಸ್ಮರಿಸಬಹುದು.

ಸಿಎ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ; ಸಿದ್ದರಾಮಯ್ಯ ಬೆನ್ನಲ್ಲೇ ಎಂ ಬಿ ಪಾಟೀಲ್‌ಗೂ ಸಂಕಷ್ಟ

ಇಂತಹ ನಿವೇಶನವನ್ನು ಹರಾಜು ಮೂಲಕ ಹಂಚಿಕೆ ದರದ ದುಪ್ಪಟ್ಟು ದರದಲ್ಲಿ ಅಥವಾ ಹಂಚಿಕೆ ದರದ ಶೇಕಡಾ 1 ½ ಹಂಚಿಕೆಯ ದರದಲ್ಲಿ ಹಂಚಿಕೆ ಮಾಡಬೇಕಾಗಿತ್ತು. ಆದರೆ ಕೆಐಡಿಬಿಯು ನಿಯಮಗಳನ್ನು ಪಾಲಿಸದೇ ಹಂಚಿಕೆ ದರದಲ್ಲಿಯೇ ಸಿಎ ನಿವೇಶನವನ್ನು ಹಂಚಿಕೆ ದರದಲ್ಲಿ ಹಂಚಿಕೆ ಮಾಡುತ್ತಿದ್ದು, ಇದರಿಂದ ಕೆಐಡಿಬಿಗೆ ಕೋಟ್ಯಾಂತರ ರುಪಾಯಿಗಳು ನಷ್ಟವುಂಟಾಗಿದೆ ಎಂದು ದಿನೇಶ್‌ ಆರೋಪಿಸಿದ್ದಾರೆ.

 

ಕೆಐಎಡಿಬಿ ಅಭಿವೃದ್ಧಿಪಡಿಸಿದ್ದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ. ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಹಾಗೂ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪನಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts