ಬೆಂಗಳೂರು; ಬೆಂಗಳೂರು ಉತ್ತರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಕೃಷಿ ಉದ್ದೇಶಕ್ಕಾಗಿ ಈ ಹಿಂದೆಯೇ ವಿವಿಧ ಸರ್ವೇ ನಂಬರ್ಗಳಲ್ಲಿ ಖರೀದಿಸಿದ್ದ ಜಮೀನಿಗೆ ಹೊಂದಿಕೊಂಡಿರುವ 1 ಎಕರೆ 32 ಗುಂಟೆ ವಿಸ್ತೀರ್ಣದ ಖರಾಬು ಗುಂಡು ತೋಪನ್ನು ಮಂಜೂರು ಮಾಡಿಕೊಡಬೇಕು ಎಂದು ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಿಖಿತ ಪತ್ರದಲ್ಲಿ ಕೋರಿರುವುದು ಇದೀಗ ಬಹಿರಂಗವಾಗಿದೆ.
ಶಕುಂತಲ ಹೆಗಡೆ ಅವರು ಕೋರಿರುವ 1 ಎಕರೆ 32 ಗುಂಟೆ ವಿಸ್ತೀರ್ಣದ ಜಮೀನಿನ ಮೌಲ್ಯವು ಮಾರುಕಟ್ಟೆ ಮೌಲ್ಯದಲ್ಲಿ ಅಂದಾಜು 5 ಕೋಟಿ ರು ಇದೆ ಎಂದು ಹೇಳಲಾಗಿದೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲ ಹೆಗಡೆ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿಗೂ ಮುನ್ನ ಶಕುಂತಲ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಂಬಂಧ ಕೋರಿಕೆ ಸಲ್ಲಿಸಿದ್ದರು.


ಶಕುಂತಲ ಹೆಗಡೆ ಅವರು 2026ರ ಏಪ್ರಿಲ್ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿಕೆ ಪತ್ರವನ್ನು ಸಲ್ಲಿಸಿದ್ದರು. ಇದೇ ಪತ್ರದ ಮೇಲೆ ಇದನ್ನು ಪರಿಶೀಲಿಸಿ ಕೂಡಲೇ ಕಡತ ಮಂಡಿಸಿ ಎಂದು ಸಿದ್ದರಾಮಯ್ಯ ಅವರು ತಮ್ಮ ಹಸ್ತಾಕ್ಷರದಲ್ಲಿ ಷರಾ ಬರೆದಿದ್ದಾರೆ.
ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಕೋರಿಕೆಯಲ್ಲೇನಿದೆ?
ಬೆಂಗಳೂರು ಉತ್ತರ ತಾಲೂಕು ಹೆಸರಘಟ್ಟ ಹೋಬಳಿಯ ಕಸಘಟ್ಟಪುರದ ಗ್ರಾಮದಲ್ಲಿ ರಾಮಕೃಷ್ಣ ಹೆಗಡೆ ಅವರು ಕೃಷಿ ಉದ್ದೇಶಕ್ಕಾಗಿ ಸರ್ವೇ ನಂ.40



44/2A,


44/2B, 44/3, 44/4


ಮತ್ತು 38


ರಲ್ಲಿನ ಜಮೀನು ಖರೀದಿಸಿದ್ದರು.
ಇದರಲ್ಲಿ ಸರ್ವೆ ನಂಬರ್ಗೆ ಹೊಂದಿಕೊಂಡಂತೆ ಸರ್ವೆ ನಂಬರ್ 39ರಲ್ಲಿನ ಗುಂಡುತೋಪು ಸಹ ಹೊಂದಿಕೊಂಡಿದೆ.


‘ಪ್ರಸ್ತುತ ನಾವು ಈ ಖರಾಬು ಜಮೀನು ಸರ್ವೇ ನಂ. 39 ಸುತ್ತಲು ಕಂಬಿ ಬೇಲಿ ನಿರ್ಮಿಸಿದ್ದೇವೆ. ಈ ಜಮೀನಿಗೆ ಹೊರಗಿನಿಂದ ಯಾವುದೇ ಪ್ರವೇಶ ಮಾರ್ಗವಿಲ್ಲ. ಆದ್ದರಿಂದ ಈ ಜಮೀನನ್ನು ನಮಗೆ ಸಮಂಜಸ ಬೆಲೆಗೆ ಮಂಜೂರು ಮಾಡುವಂತೆ ವಿನಂತಿಸಿಕೊಳ್ಳುತ್ತೇವೆ. ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ,’ ಎಂದು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.
ಶಕುಂತಲ ಹೆಗಡೆ ಅವರು ಪತ್ರದಲ್ಲಿ ನಮೂದಿಸಿರುವ ಸರ್ವೆನಂಬರ್ಗಳಲ್ಲಿನ ಜಮೀನುಗಳನ್ನು ರಾಮಕೃಷ್ಣ ಹೆಗಡೆ ಅವರು ಯಾವ ವರ್ಷದಲ್ಲಿ ಖರೀದಿಸಿದ್ದರು ಎಂಬ ಬಗ್ಗೆ ಯಾವುದೇ ವಿವರ ಮತ್ತು ಮಾಹಿತಿಯನ್ನು ಹಂಚಿಕೊಂಡಿಲ್ಲ. ಈ ಬಗ್ಗೆ ‘ದಿ ಫೈಲ್’, ಶಕುಂತಲ ಹೆಗಡೆ ಅವರ ಮನೆಯ ದೂರವಾಣಿ ಸಂಖ್ಯೆ ( 23613737) ಗೆ ಕರೆ ಮಾಡಿತ್ತು. ಆದರೆ ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಕಂಡು ಬಂದಿದೆ.
ಶಕುಂತಲ ಹೆಗಡೆ ಅವರ ಕೋರಿಕೆ ಪತ್ರದಲ್ಲಿನ ಸರ್ವೆ ನಂಬರ್ಗಳನ್ನು ‘ದಿ ಫೈಲ್’ ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿತ್ತು. ಈ ಸರ್ವೆ ನಂಬರ್ಗಳ ಜಮೀನುಗಳಲ್ಲಿ ಹುಣಸೆ, ತೆಂಗು ಮತ್ತು ಮಾವು ಫಸಲು ಹೊಂದಿರುವುದು ಭೂಮಿ ದಾಖಲೆಗಳಿಂದ ತಿಳಿದು ಬಂದಿದೆ.
ಗುಂಡು ತೋಪು ಮಂಜೂರು ಮಾಡಲು ಸಾಧ್ಯವೇ?
ಹಳ್ಳಿಗಳಲ್ಲಿ ಮರಗಳು ಮತ್ತು ದನಕರುಗಳ ಆಶ್ರಯಕ್ಕಾಗಿಯೇ ಗುಂಡುತೋಪುಗಳಿವೆ. ಇಂತಹ ಗುಂಡುತೋಪುಗಳು ತನ್ನ ಸಂಪೂರ್ಣ ಗುಣಲಕ್ಷಣಗಳನ್ನು ಕಳೆದುಕೊಂಡಿದ್ದರೆ ಮಾತ್ರ ವಿಶೇಷ ನಿಯಮಗಳಡಿಯಲ್ಲಿ ಮಂಜೂರು ಮಾಡಲು ಅವಕಾಶಗಳಿವೆ. ಇದಕ್ಕೆ ಗ್ರಾಮಸ್ಥರ ಅಥವಾ ಗ್ರಾಮ ಪಂಚಾಯ್ತಿಯ ಆಕ್ಷೇಪಣೆ ಇರಬಾರದು. ಅಲ್ಲದೇ ಇದಕ್ಕೆ ಜಿಲ್ಲಾ ಪಂಚಾಯ್ತಿಯ ಅನುಮೋದನೆಯೂ ಅವಶ್ಯಕ. ಜಿಲ್ಲಾ ಪಂಚಾಯ್ತಿಯಿಂದ ಅನುಮತಿ ಪಡೆದಕೊಂಡ ನಂತರವಷ್ಟೆ ಗುಂಡುತೋಪು ಮಂಜೂರಾತಿ ಪ್ರಸ್ತಾವನೆಗೆ ಕಂದಾಯ ಇಲಾಖೆಯ ಮೂಲಕವೇ ಅಂತಿಮ ಅನುಮೋದನೆ ನೀಡಬೇಕು.
ಗುಂಡುತೋಪು ಮತ್ತು ಖರಾಬು ಜಮೀನುಗಳ ಮಂಜೂರಾತಿ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಚರ್ಚಿಸಿದ್ದರು. ರಾಜ್ಯದಲ್ಲಿ ಹಲವರ ಜಮೀನಿನಲ್ಲೇ ಖರಾಬು ಭೂಮಿ ಕೂಡ ಇರುತ್ತದೆ. ಇದನ್ನು ಕೆಲವರು ತಮ್ಮ ಸ್ವಾಧೀನಪಡಿಸಿಕೊಂಡಿರುವ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಈ ಖರಾಬು ಜಮೀನಿನ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಖರಾಬು ಜಮೀನನ್ನು ಮಂಜೂರು ಮಾಡಿಸಿಕೊಳ್ಳಬಹುದೇ ಎಂಬ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು.
ಈ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಖರಾಬು ಜಮೀನಿನ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರ ನೀಡಿದ್ದ ಸಚಿವ ಕೃಷ್ಣಬೈರೇಗೌಡ ಅವರು ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ. ಆಗಿನ ಸರ್ಕಾರ ಸರಿಯಾದ ಹೆಜ್ಜೆಯನ್ನು ಇಟ್ಟಿಲ್ಲ. ಆದರೆ, ಅದನ್ನು ನಾವು ಸರಿಮಾಡುವ ಕೆಲಸದಲ್ಲಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ, ಇದರ ನೈಜತೆ ಪರಿಶೀಲಿಸುವ ಜವಾಬ್ದಾರಿ ಕೊಟ್ಟಿದ್ದೇವೆ. ಇದರ ಬಗ್ಗೆ ತನಿಖೆ ಆರಂಭವಾಗಿದೆ. ಆದರೆ, ಇನ್ನೂ ಪ್ರಗತಿ ಆಗಿಲ್ಲ. ಈ ತನಿಖೆಯನ್ನು ಶೀಘ್ರದಲ್ಲೇ ಮುಗಿಸಲು ಸೂಚಿಸಿದ್ದೇನೆ,’ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು.
ಖರಾಬು ಜಮೀನುಗಳ ಪೋಡಿ ಬಂದ್!
ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದವು. ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದರು. ಇಂತಹ ಜಮೀನುಗಳು ಪೋಡಿ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗು ಸಹ ಕೇಳಿಬಂದಿತ್ತು. ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದರು. ಈಗಾಗಲೇ ಮಂಜೂರಾವರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ದವಾಗಿದೆ ಎಂದು ವಿವರಿಸಿದ್ದರು.
ರಾಮಕೃಷ್ಣ ಹೆಗಡೆ ಅವರ ವಿರುದ್ಧ ಭೂ ಹಗರಣಗಳ ಅರೋಪಗಳಿವು
ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ಅವರ ವಿರುದ್ಧ ರೇವಜೀತು ಬಿಲ್ಡರ್ಸ್ ಮತ್ತು ಡೆವಲಪರ್ಸ್ ಪ್ರಕರಣ (1988)ವು ಬೆಳಕಿಗೆ ಬಂದಿತ್ತು. ಇದನ್ನು ಲಂಕೇಶ್ ಪತ್ರಿಕೆಯ ತನಿಖಾ ವರದಿಗಾರ ರವೀಂದ್ರ ರೇಷ್ಮೆ ಅವರು ಲಂಕೇಶ್ ಪತ್ರಿಕೆಯಲ್ಲಿ ದಾಖಲೆ ಸಹಿತ ವರದಿ ಪ್ರಕಟಿಸಿದ್ದರು. ಈ ಆರೋಪವು ಹೆಗಡೆ ಅವರ ವಿರುದ್ಧದ ಅತ್ಯಂತ ಪ್ರಮುಖ ಆರೋಪಗಳಲ್ಲಿ ಒಂದಾಗಿತ್ತು.
ಜಯನಗರ ವಸತಿ ಪ್ರದೇಶದಲ್ಲಿ 22,662 ಚದರ ಮೀಟರ್ ಭೂಮಿಯನ್ನು ರೇವಜೀತು ಬಿಲ್ಡರ್ಸ್ ಮತ್ತು ಡೆವಲಪರ್ಸ್ಗೆ ಖರೀದಿಸಲು ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ಕಾಂಗ್ರೆಸ್(ಐ) ನಾಯಕರು, ವಿಶೇಷವಾಗಿ ಎಂಎಲ್ಸಿ ಕೆ.ಎನ್. ನಾಗೇಗೌಡ ಅವರು ವಿಧಾನಸೌಧದಲ್ಲಿ ಆರೋಪಿಸಿದ್ದರು.
ಸಂಬಂಧಿಕರ ಪಾತ್ರ
ಈ ಒಪ್ಪಂದದಲ್ಲಿ ಭಾಗಿಯಾಗಿದ್ದ 19 ಪಾಲುದಾರರಲ್ಲಿ ಒಬ್ಬರು ಹೆಗ್ಡೆ ಅವರ ಅಳಿಯ ಮನು ನಿಚಾನಿಯ ಸಹೋದರಿ ಶೋಭಾ ಮಖಿಜಾ ಆಗಿದ್ದರು. ಇದು ಸ್ವಜನಪಕ್ಷಪಾತದ ಆರೋಪಕ್ಕೆ ಕಾರಣವಾಗಿತ್ತು. ಈ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು ಮತ್ತು ಈ ಭೂ ಒಪ್ಪಂದಗಳು ಕಾನೂನಿನ ಲೋಪದೋಷಗಳನ್ನು ಬಳಸಿಕೊಂಡಿವೆ ಎಂದು ಆರೋಪಿಸಲಾಗಿತ್ತು.
ಎನ್ಆರ್ಐ ಭೂ ಮಂಜೂರಾತಿ ಹಗರಣ
1985ರಲ್ಲಿ, ಅನಿವಾಸಿ ಭಾರತೀಯರಿಗೆ ಭೂಮಿ ಮಂಜೂರು ಮಾಡಿದ ಪ್ರಕರಣದಲ್ಲೂ ಹೆಗಡೆ ಅವರ ಮೇಲೆ ಆರೋಪಗಳು ಬಂದಿದ್ದವು.ಈ ಆರೋಪಗಳು ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದವು.




