ಬೆಂಗಳೂರು: ಕುಮಾರಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಸಂಸ್ಥೆಯು ಮಾಡಿದ್ದ ಶಿಫಾರಸ್ಸಿನ ಕುರಿತು ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿಬಿಐ ಸಂಸ್ಥೆಗೆ ಪತ್ರ ಬರೆದಿದೆ.
ಡಾ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ ಶಿಫಾರಸ್ಸು ಮಾಡಿತ್ತು. ಈ ಕುರಿತು ಕ್ರಮಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಮುಂದಾಗಿತ್ತು. ಈ ಸಂಬಂಧ ಒಳಾಡಳಿತ ಇಲಾಖೆಯೂ ಆರೋಗ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಿತ್ತು. ಆದರೀಗ ಈ ಮಾಹಿತಿಯನ್ನು ಆರ್ಟಿಐ ಅಡಿಯಲ್ಲಿ ಸಾರ್ವಜನಿಕಗೊಳಿಸಬಹುದೇ ಎಂದು ಸಿಬಿಐ ಸಂಸ್ಥೆಯನ್ನೇ ಸರ್ಕಾರವು ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ಸಿಬಿಐಗೆ ಪತ್ರ ಬರೆಯುವ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಇಲಾಖೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಆಕುಕ 29 ಎಂಎಸ್ಎ 2017ರ (ದಿನಾಂಕ 26/10/2023) ಟಿಪ್ಪಣಿಗೆ ಸಂಬಂಧಿಸಿದಂತೆ ತೆರೆದಿರುವ ಸಮಗ್ರ ಕಡತವನ್ನು ಒದಗಿಸಬೇಕು ಎಂದು ‘ದಿ ಫೈಲ್’, 2025ರ ಏಪ್ರಿಲ್ 29ರಂದು ಆರ್ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ‘ದಿ ಫೈಲ್’ ಸಲ್ಲಿಸಿರುವ ಆರ್ಟಿಐ ಅರ್ಜಿಗೆ ಮಾಹಿತಿ ನೀಡಬೇಕೇ, ಸಾರ್ವಜನಿಕಗೊಳಿಸಬೇಕೇ ಎಂಬ ಕುರಿತು ಸರ್ಕಾರವು ಸಿಬಿಐಗೆ 2025ರ ಮೇ 27ರಂದು ಸಿಬಿಐಗೆ ಪತ್ರ ಬರೆದಿತ್ತು.
ಆದರೆ ತಿಂಗಳಾದರೂ ಮಾಹಿತಿ ನೀಡದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜೂನ್ 25ರಂದು ಮತ್ತೊಂದು ನೆನಪೋಲೆಯನ್ನು ಬರೆದಿದೆ. ಈ ಎರಡೂ ಪತ್ರಗಳೂ ‘ದಿ ಫೈಲ್’ಗೆ ಲಭ್ಯವಾಗಿವೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಕೊಲೆ ಕುರಿತು ಕಡತವನ್ನು ಇಲಾಖೆಯು ಸೃಜಿಸಿತ್ತು. ಈ ಕಡತದಲ್ಲಿ ಸಿಬಿಐ ಪತ್ರ (DPMS 12016/733/C1/S/4C.2(2/2014 DATED 7/9/2016) ವೂ ಸಹ ಇತ್ತು.
ಸಿಬಿಐ ಪತ್ರದಲ್ಲೇನಿತ್ತು?
ಡಾ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ ಪ್ರಸ್ತಾವಿಸಿತ್ತು.
ಇಲಾಖೆಯ ಟಿಪ್ಪಣಿ ಹಾಳೆಯಲ್ಲೇನಿತ್ತು?
ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕುಮಾರಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯಿಂದ ಸ್ವೀಕೃತಗೊಂಡ ಪತ್ರದಲ್ಲಿ ಪ್ರಸ್ತಾವಿಸಿರುವಂತೆ ಡಾ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಪ್ರಸ್ತಾಪಿಸಿತ್ತು. ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸಬೇಕು ಎಂದು (ಕಡತ ಸಂಖ್ಯೆ; HD 06 CID 2013 ದಿ. 21.02.2017) ಅಧಿಕೃತ ಜ್ಞಾಪನದಲ್ಲಿ ತಿಳಿಸಿತ್ತು.
ಸೌಜನ್ಯ ಕೊಲೆ; ಆದಂ ಉಸ್ಮಾನ್, ಡಾ ಎನ್ ರಶ್ಮಿ ವಿರುದ್ಧ ಕಠಿಣ ದಂಡನೆ, ಸಿಬಿಐ ಶಿಫಾರಸ್ಸು ಪತ್ರ ಮುಚ್ಚಿಟ್ಟಿದೆಯೇ?
ಮಾಹಿತಿ ಸಾರ್ವಜನಿಕಗೊಳಿಸಬಹುದೇ?
‘ಪ್ರಸ್ತಾಪಿತ ಮಾಹಿತಿ ಹಕ್ಕು ಅರ್ಜಿಯಲ್ಲಿ ಕೋರಿರುವ ಕಡತದಲ್ಲಿ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಕೊಲೆಗೆ ಬಗ್ಗೆ ವ್ಯವಹರಿಸಲಾದ ಕಡತವಾಗಿದ್ದು ಸದರಿ ಕಡತದಲ್ಲಿ ನಿಮ್ಮ ಸಂಸ್ಥೆಯ ಪತ್ರ ಸಂಖ್ಯೆ (DPMS 12016/733/C1/S/4C.2(2/2014 DATED 7/9/2016) ಯಲ್ಲಿ ಸಲ್ಲಿಸಿರುವ ರಹಸ್ಯ ವರದಿ ಅಡಕವಾಗಿರುತ್ತದೆ ಎಂಬ ಮಾಹಿತಿಯನ್ನು ಅವಗಾಹನೆಗೆ ಸಲ್ಲಿಸಿದೆ. ಸದರಿ ಮಾಹಿತಿಯನ್ನು ಪ್ರಸ್ತಾಪಿತ ಮಾಹಿತಿ ಹಕ್ಕು ಅರ್ಜಿಯಲ್ಲಿನ ಕೋರಿಕೆಂತೆ ನೀಡಬಹುದೇ, ಸಾರ್ವಜನಿಕಗೊಳಿಬಹುದೇ ಎಂಬ ಬಗ್ಗೆ ನಿಯಮಾನುಸಾರ ಸೂಕ್ತ ಅಭಿಪ್ರಾಯ ನೀಡಬೇಕು,’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರು ಸಿಬಿಐನ ಪೊಲೀಸ್ ಅಧೀಕ್ಷಕರಿಗೆ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಒಳಾಡಳಿತ ಇಲಾಖೆಯು ಸಿಬಿಐ ಸಂಸ್ಥೆಯು ಸಲ್ಲಿಸಿರುವ ಮೂಲ ತನಿಖಾ ವರದಿಯನ್ನು ಒದಗಿಸಿರುವುದಿಲ್ಲ. ಇದರಿಂದಾಗಿ ಸಿಬಿಐ ಸಂಸ್ಥೆಯ ಶಿಫಾರಸ್ಸಿನ್ವಯ ಕ್ರಮವಹಿಸಲು ವಿಳಂಬವಾಗುತ್ತಿರುತ್ತದೆ. ಈ ಬಗ್ಗೆ ಪರಿಶೀಲಿಸಲು ಸಿಬಿಐ ವರದಿಯು ಹಾಗೂ ಎಫ್ಎಸ್ಎಲ್ ರಿಪೋರ್ಟ್ನ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯು ಸಲ್ಲಿಸಿರುವ ತನಿಖಾ ವರದಿ ಮತ್ತು ಎಫ್ಎಸ್ಎಲ್ ರಿಪೋರ್ಟ್ನ್ನು ಈ ದಿನವೇ ಒದಗಿಸುವಂತೆ, ಇದನ್ನು ಅತ್ಯಂತ ಜರೂರು ಎಂದು ಪರಿಗಣಿಸುವಂತೆ ಕೋರಿರುತ್ತಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.
ಒಳಾಡಳಿತ ಇಲಾಖೆಯು ಈ ಅಂಶವನ್ನು ಪರಿಶೀಲಿಸಿದೆ. ಈ ಕೋರಿಕೆಯನ್ನೂ ಸಹ ಒಳಾಡಳಿತ ಇಲಾಖೆಯು ತೆರೆದಿದ್ದ HD 06 CID 2013 ರಲ್ಲಿ ಇರಿಸಿತ್ತು. ಈ ದಾಖಲೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲು ಮೇಲಾಧಿಕಾರಿಗಳಿಗೆ ಮಂಡಿಸಿತ್ತು.
ಇದನ್ನು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಪಿಎಸ್ ಶರತ್ ಚಂದ್ರ ಅವರು ಸಹ ಅನುಮೋದಿಸಿದ್ದರು.
ಈ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರೊಂದಿಗೆ ಒಳಾಡಳಿತ ಇಲಾಖೆಯ ಅಧಿಕಾರಿಗಳು ಚರ್ಚಿಸಿರುವುದು ತಿಳಿದು ಬಂದಿದೆ.
ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ
ಡಾ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಪತ್ರ ಬರೆದಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ಸಿಂಹ್ ನಾಯಕ್, ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿದಂತೆ ಹಲವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು.
ಸೌಜನ್ಯ ಹತ್ಯೆ ಮರು ತನಿಖೆ; ಅಡ್ವೋಕೇಟ್ ಜನರಲ್ ಕಚೇರಿಯಿಂದ ಬಾರದ ಕಾನೂನು ಅಭಿಪ್ರಾಯ!
ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ 18 ತಿಂಗಳಿನಿಂದಲೂ ತೆವಳಿತ್ತು. 2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿತ್ತು.
ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ; 18 ತಿಂಗಳಿನಿಂದಲೂ ತೆವಳಿದ ಕಡತ, ಹೊರಬೀಳದ ತೀರ್ಮಾನ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್ಸಿಂಹ್ ನಾಯಕ್ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ಕೂಡ ನಿರಾಕರಿಸಿತ್ತು.
ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ ಈ ಕುರಿತು ತೀರ್ಮಾನ ಕೈಗೊಳ್ಳಲು ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿತ್ತು.
ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ
‘ ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಗಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ (children’s court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.
ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಚರ್ಚಿಸಿದ್ದನ್ನು ಸ್ಮರಿಸಬಹುದು.