Wednesday | July 22, 2026 |

ಟೋಯಿಂಗ್‌ ವಾಹನಗಳ ಬಾಡಿಗೆ; ವರ್ಷಕ್ಕೆ 4.75 ಕೋಟಿ ವೆಚ್ಚದ ಅಂದಾಜು ಪಟ್ಟಿ ಬಹಿರಂಗ

ಬೆಂಗಳೂರು; ಅನಧಿಕೃತ ವಾಹನಗಳ ನಿಲುಗಡೆ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಟೋಯಿಂಗ್‌ ವಾಹನಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ವರ್ಷಕ್ಕೆ 4.75 ಕೋಟಿ ರು ವೆಚ್ಚವಾಗಲಿದೆ ಎಂದು ಸಂಚಾರ, ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಕೆ ವಿ ಶರತ್‌ಚಂದ್ರ ಅವರು ಸರ್ಕಾರಕ್ಕೆ ಅಂದಾಜು ಪಟ್ಟಿ ಒದಗಿಸಿರುವುದು ಇದೀಗ ಬಹಿರಂಗವಾಗಿದೆ.

 

ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ಟೋಯಿಂಗ್‌ ಕಾರ್ಯಾಚರಣೆಗೆ ಅಧಿಕೃತ ಆದೇಶ ಬೀಳುವ ಮುನ್ನವೇ ಟೋಯಿಂಗ್‌ ಕಾರ್ಯಾಚರಣೆ ನಡೆಸಿದ್ದರ ಬೆನ್ನಲ್ಲೇ ಎಡಿಜಿಪಿ ಅವರು ಸಲ್ಲಿಸಿರುವ ಅಂದಾಜು ಪಟ್ಟಿಯು ಮುನ್ನೆಲೆಗೆ ಬಂದಿದೆ.

 

ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಶರತ್ ಚಂದ್ರ ಅವರು 2025ರ ಏಪ್ರಿಲ್‌ 21ರಂದು ಪ್ರಸ್ತಾವ ಮತ್ತು ಅಂದಾಜು ಪಟ್ಟಿ ಸಲ್ಲಿಸಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ತಿಂಗಳಿಗೆ 39.64 ಲಕ್ಷ ವೆಚ್ಚ

 

ಟಾಟಾ 407 ಹಾಗೂ ಅದಕ್ಕೆ ಸಮನಾದ ಒಟ್ಟು 10 ವಾಹನಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಪ್ರಸ್ತಾವ ಸಲ್ಲಿಕೆಯಾಗಿದೆ. ಈ ವಾಹನಗಳು ಪ್ರತಿ ದಿನ ಕನಿಷ್ಠ 100 ಕಿ ಮೀ ಚಲಿಸುತ್ತವೆ. ಪ್ರತಿ ದಿನ ವಾಹನವೊಂದಕ್ಕೆ 6,000 ರು ಬಾಡಿಗೆ ನೀಡಬೇಕು ಮತ್ತು ಚಾಲಕ ಹಾಗೂ ಸಹಾಯಕರ ವೇತನ ದಿನವೊಂದಕ್ಕೆ 5,200 ಮತ್ತು ಜಿಎಸ್‌ಟಿ 2,016 ರು ಸೇರಿ ದಿನವೊಂದಕ್ಕೆ 13,216 ರು ವೆಚ್ಚವಾಗಲಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ವರ್ಷಕ್ಕೆ 4.75 ಕೋಟಿ ವೆಚ್ಚ

 

ಒಟ್ಟು 10 ವಾಹನಗಳಿಗೆ ಒಂದು ದಿನಕ್ಕೆ 1,32,160 ರು, 10 ವಾಹನಗಳು ಮತ್ತು ಸಹಾಯಕರುಗಳಿಗೆ ಒಂದು ತಿಂಗಳಿಗೆ 39,64,800 ರು ನಂತೆ ಒಂದು ವರ್ಷಕ್ಕೆ 4,75,77,600 ರು ವೆಚ್ಚವಾಗಲಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿರುವುದು ಗೊತ್ತಾಗಿದೆ.

 

 

ಬಾಡಿಗೆ ರೂಪದಲ್ಲಿ ಟೋಯಿಂಗ್‌ ವಾಹನಗಳನ್ನು ನೇಮಿಸಿಕೊಳ್ಳುವ ಉದ್ದೇಶವು ಸಾರ್ವಜನಿಕರ ಸುಗಮ ಸಂಚಾರ ಮತ್ತು ಸಂಚಾರ ದಟ್ಟಣೆಯನ್ನು ನಿವಾರಿಸಲು ಕೈಗೊಂಡಿರುವ ಕ್ರಮವಾಗಿದೆ. ಬಾಡಿಗೆ ರೂಪದಲ್ಲಿ ಉಪ ವಿಭಾಗಕ್ಕೆ ಒಂದರಂತೆ 10 ಟೋಯಿಂಗ್‌ ವಾಹನಗಳನ್ನು ನೇಮಿಸಿಕೊಳ್ಳಲು ಸರ್ಕಾರವು ಒಪ್ಪಿದ್ದಲ್ಲಿ ಸಂಚಾರ ದಟ್ಟಣೆ ನಿವಾರಣೆ ಅಗಲಿದೆ. ಟೋಯಿಂಗ್‌ ವಾಹನಗಳನ್ನು ಬಾಡಿಗೆ ರೂಪದಲ್ಲಿ ನೇಮಿಸಿಕೊಳ್ಳಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

ಇದಕ್ಕೂ ಮುನ್ನವೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದ ದಯಾನಂದ್‌ ಅವರು ಸಹ ಡಿಜಿಐಜಿಪಿ ಅವರಿಗೆ 2024ರ ಡಿಸೆಂಬರ್‍‌ 17ರಂದು ಪತ್ರ ಬರೆದಿದ್ದರು. ಟೋಯಿಂಗ್‌ ವಾಹನಗಳನ್ನು ಬಾಡಿಗೆ ರೂಪದಲ್ಲಿ ಪಡೆಯುವ ಬಗ್ಗೆ ಪತ್ರದಲ್ಲಿ ಪ್ರಸ್ತಾವಿಸಿದ್ದರು.

 

 

‘ಬೆಂಗಳೂರು ನಗರ ಸಂಚಾರ ವಿಭಾಗದಿಂದ ಸಂಚಾರ ನಿಯಮಗಳ ಉಲ್ಲಂಘನೆಗಳ ವಿರುದ್ಧ ಕೈಗೊಳ್ಳುವ ಪ್ರವರ್ತನಾ ಚಟುವಟಿಕೆಗಳಿಗಿಂತ ಸಂಚಾರ ದಟ್ಟಣೆಯ ಸುಧಾರಣೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಗೆ ಮಿತಿ ಮೀರಿದ ವಾಹನಗಳ ಸಂಚರಣೆಯೇ ಕಾರಣವಾಗಿದೆ ಮತ್ತು ಸಂಚಾರ ನಿಯಮಗಳ ಕಟ್ಟುನಿಟ್ಟಾಗಿ ಪಾಲನೆ ಮಾಡದಿರುವುದು ಕೂಡ ಪ್ರಮುಖ ಕಾರಣವಾಗಿದೆ,’ ಎಂದು ಪತ್ರದಲ್ಲಿ ವಿವರಿಸಿದ್ದರು.

 

 

ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಈ ಹಿಂದೆ ಟೋಯಿಂಗ್‌ ವಾಹನಗಳನ್ನು ಟೆಂಡರ್‍‌ ಮೂಲಕ ನೇಮಿಸಿಕೊಳ್ಳಲಾಗುತ್ತಿತ್ತು. ಆದರೀಗ ಟೋಯಿಂಗ್ ಕಾರ್ಯಾಚರಣೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

 

ಟೋಯಿಂಗ್‌ ವಾಹನಗಳು, ಕೇವಲ ಅನಧಿಕೃತ ವಾಹನಗಳ ನಿಲುಗಡೆಯ ವಿರುದ್ಧ ಕ್ರಮ ಕೈಗೊಳ್ಳಲು ಮಾತ್ರ ಸಹಾಯಕವಾಗುವುದಿಲ್ಲ. ಬದಲಿಗೆ ಗಣ್ಯ ವ್ಯಕ್ತಿಗಳು, ಅತೀ ಗಣ್ಯ ವ್ಯಕ್ತಿಗಳ ಸಂಚರಣೆಯ ಸಮಯದಲ್ಲಿ ಅನಧಿಕೃತ ವಾಹನಗಳ ತೆರವು ಮಾಡಲು, ರಸ್ತೆಯಲ್ಲಿಯೇ ದುರಸ್ತಿಗೊಳಗಾದ ವಾಹನಗಳನ್ನು ತೆರವುಗೊಳಿಸಲು ಸಹಾಯಕವಾಗಲಿದೆ ಎಂದು ಆಯುಕ್ತರು ಸಮರ್ಥಿಸಿಕೊಂಡಿರುವುದು ತಿಳಿದು ಬಂದಿದೆ.

 

ಸಂಚಾರ ನಿಯಮಗಳಲ್ಲಿ ಪ್ರಮುಖವಾಗಿ ನಿಲುಗಡೆ ನಿಷೇಧ ರಸ್ತೆಗಳಲ್ಲಿ ವಾಹನ ನಿಲುಗಡೆ, ಪುಟ್‌ಪಾತ್‌ ರಸ್ತೆಯಲ್ಲಿ ವಾಹನಗಳ ನಿಲುಗಡೆ, ಇಂಟರ್‍‌ ಸೆಕ್ಷನ್‌ಗಳಲ್ಲಿ ವಾಹನಗಳ ನಿಲುಗಡೆ, ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುವುದು, ಡಬಲ್‌ ಪಾರ್ಕಿಂಗ್‌ ಮಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಪುನರಾವರ್ತಿತ ನಿಯಮ ಉಲ್ಲಂಘನೆಗಳಿಂದಾಗಿ ಸುಗಮ ಸಂಚಾರ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಬೆಂಗಳೂರು ನಗರವು ಸುಮಾರು 1.2 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಸುಮಾರು 1.19 ಕೋಟಿ ನೋಂದಾಯಿತ ವಾಹನಗಳನ್ನು ಹೊಂದಿರುವ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ವಾಹನಗಳ ನೋಂದಣಿ ಪ್ರಮಾಣದ ಬೆಳವಣಿಗೆಯಲ್ಲಿ ಕಳೆದ 2 ದಶಕಗಳಲ್ಲಿ ವರ್ಷದಿಂದ ವರ್ಷಕ್ಕೆ ಅಸಾಧಾರಣ ಬೆಳವಣಿಗೆ ಕಂಡು ಬಂದಿದೆ. ಪ್ರತಿ ದಿನ ಸರಿಸುಮಾರು 2,000ದಿಂದ 2,500 ವಾಹನಗಳು ನಗರದ ರಸ್ತೆಗಳಿಗೆ ಇಳಿಯುತ್ತಿವೆ.

 

ರಸ್ತೆಯ ಧಾರಣ ಸಾಮರ್ಥ್ಯವನ್ನು ಮೀರಿರುವ ವಾಹನಗಳ ಸಂಖ್ಯೆಯೇ ನಗರದ ಸಂಚಾರ ದಟ್ಟಣೆ ಹಾಗೂ ಸಂಚಾರ ಒತ್ತಡಕ್ಕೆ ಪ್ರಮುಖ ಕಾರಣವಾಗಿದೆ. ನಗರದಲ್ಲಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸುವ ಜತೆಗೆ ಸಾರ್ವಜನಿಕರ ಪ್ರಾಣ ಹಾನಿಯನ್ನು ರಕ್ಷಿಸುವ ಹೊಣೆಗಾರಿಕೆಯೂ ನಗರ ಸಂಚಾರ ಪೊಲಿಸ್‌ ವಿಭಾಗದ ಮೇಲಿದೆ ಎಂದು ಆಯುಕ್ತರು ವಿವರಿಸಿರುವುದು ತಿಳಿದು ಬಂದಿದೆ.

 

ಬೆಂಗಳೂರು ನಗರದಲ್ಲಿ ಒಟ್ಟು 12 ಹೈಡೆನ್ಸಿಟಿ ಕಾರಿಡಾರ್‍‌ ರಸ್ತೆಗಳಿವೆ. 99 ಅತಿ ಹೆಚ್ಚು ದಟ್ಟಣೆ ಉಂಟಾಗುವ ಪ್ರಮುಖ ರಸ್ತೆಗಳಿವೆ. 43 ಜಂಕ್ಷನ್‌ಗಳಲ್ಲಿ ಮಾತ್ರ ಟೋಯಿಂಗ್ ಮಾಡುವ ಉದ್ದೇಶಿಸಿರುವುದು ಗೊತ್ತಾಗಿದೆ.
ಸಂಚಾರ ನಿಯಮಗ ಉಲ್ಲಂಘಿಸಿದ ವಾಹನಗಳನ್ನು ಟೋಯಿಂಗ್ ಮಾಡುವ ಸಂಬಂಧ ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ನಗರ ಪೊಲೀಸ್‌ ಕಮಿಷನರ್ ಆಗಿದ್ದ ದಯಾನಂದ್ ಅವರು ಹೇಳಿಕೆ ನೀಡಿದ್ದರು.

 

ಹೇಳಿಕೆ ನೀಡಿ 24 ತಾಸು ಕಳೆಯುವಷ್ಟರಲ್ಲೇ ಆಡುಗೋಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಟೋಯಿಂಗ್‌ ಕಾರ್ಯಾಚರಣೆ ನಡೆದಿತ್ತು. ಮೊದಲ ದಿನವೇ 30ಕ್ಕೂ ಹೆಚ್ಚು ಪ್ರಕರಣವು ದಾಖಲಾಗಿತ್ತು.

Hot this week

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ಬಡ್ಡಿ ಪಾವತಿ; ಲೆಕ್ಕಪತ್ರವನ್ನೇ ನಿರ್ವಹಿಸಿಲ್ಲ, ದಾಖಲೆಗಳನ್ನೂ ಒದಗಿಸಿಲ್ಲ, ಮುಡಾ ದುರಾಡಳಿತ

ಮಂಗಳೂರು: ಕುಂಜತ್‌ ಬೈಲ್ ಸೇರಿದಂತೆ ಹಲವೆಡೆ ವಸತಿ ಬಡಾವಣೆಗಳನ್ನು ರಚಿಸುವ ಉದ್ದೇಶದಿಂದ...
Please Scan to make Your Contribution

Topics

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೇರದ ಭದ್ರಾ ಮೇಲ್ದಂಡೆ ಯೋಜನೆ; ಸಹಾಯಧನ ಬಿಡುಗಡೆ ವಿಳಂಬಕ್ಕೆ ನೆಪವೊಡ್ಡಿದ ಕೇಂದ್ರ

ಬೆಂಗಳೂರು; ರಾಜ್ಯದ ಮಹತ್ವಾಕಾಂಕ್ಷೆ ನೀರಾವರಿ ಯೋಜನೆ ಭದ್ರಾ ಮೇಲ್ದಂಡೆ ಯೋಜನೆಯ ಅಂದಾಜು...

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

Related Articles

Popular Categories

error: Content is protected !!