ಪರವಾನಿಗೆಯಿಲ್ಲದೆಯೇ ಉಪ ಖನಿಜ ಸಾಗಾಣಿಕೆ; ಸಂದಾಯವಾಗದ ಶುಲ್ಕ, ಸರ್ಕಾರಕ್ಕೆ ಅಪಾರ ನಷ್ಟ

ಬೆಂಗಳೂರು;  ಸರ್ಕಾರಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು  ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ವಂತಿಕೆ ಸೇರಿದಂತೆ ಇನ್ನಿತರೆ ಅನ್ವಯಿಕ ಶುಲ್ಕಗಳನ್ನು ಕಟಾಯಿಸಿ ಸರ್ಕಾರಕ್ಕೆ ಸಂದಾಯ ಮಾಡುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟಾಗುತ್ತಿರುವ ಪ್ರಕರಣಗಳು ಇದೀಗ ಬಹಿರಂಗವಾಗಿವೆ.

 

ಹಾಗೆಯೇ ಬಹುತೇಕ ಸರ್ಕಾರಿ ಕಾಮಗಾರಿಗಳಲ್ಲಿ ಬಳಸಲಾಗುತ್ತಿರುವ ಉಪ ಖನಿಜವನ್ನು ಖನಿಜ ರವಾನೆ ಪರವಾನಿಗೆ ಪಡೆಯದೇ ಸಾಗಾಣಿಕೆಯಾಗುತ್ತಿದೆ.

 

ಸರ್ಕಾರಿ ಅಭಿವೃದ್ದಿ ಕಾಮಗಾರಿಗಳಿಗೆ ಸರಬರಾಜು ಮಾಡುವ ಉಪ ಖನಿಜಗಳ ಸಾಗಾಣಿಕೆಗೆ ಆರ್‍‌ಡಿಎಂಡಿಪಿ ವಿತರಿಸಲು ಕ್ರಮ ವಹಿಸುವ ಸಂಬಂಧ ಕಲ್ಲು ಗಣಿಗುತ್ತಿಗೆದಾರರ ಸಂಘವು ಸರ್ಕಾರವನ್ನು ಕೋರಿರುವ ಪತ್ರದಲ್ಲಿ ಡಿಎಂಎಫ್‌ ಸೇರಿದಂತೆ ಇನ್ನಿತರೆ ಶುಲ್ಕಗಳನ್ನು ಕಟಾಯಿಸಿ ಸರ್ಕಾರಕ್ಜೆ ಸಂದಾಯ ಮಾಡದಿರುವ ಕುರಿತು ಪ್ರಸ್ತಾವಿಸಿದೆ.

 

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಆರ್‍‌ ಗಿರೀಶ್‌ ಅವರು 2025ರ ಮೇ 6ರಂದು ವಾಣಿಜ್ಯ, ಕೈಗಾರಿಕೆ ಇಲಾಖೆಯ (ಗಣಿ) ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಉಪ ಖನಿಜಗಳನ್ನು ಸಾಗಿಸಲು ಸರಕು ಮತ್ತು ಸೇವಾ ತೆರಿಗೆ ಪೋರ್ಟಲ್‌ ಮೂಲಕ ಸೃಜಿಸಿರುವ ಇ-ವೇ ಬಿಲ್‌ನ್ನು ಖನಿಜ ಸಾಗಾಣಿಕೆ ಪರವಾನಿಗೆಯೊಂದಿಗೆ (ಎಂಡಿಪಿ) ಏಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಮತ್ತು ಅನಧಿಕೃತ ಗಣಿಗಾರಿಕೆ ತಡೆಗೆ ಭದ್ರಾ ಪಡೆಯ ನಿಯೋಜಿಸಲಾಗುವುದು ಎಂದು ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಈಚೆಗಷ್ಟೇ ಹೇಳಿಕೆ  ನೀಡಿದ್ದರ ಬೆನ್ನಲ್ಲೇ ಗಣಿ ಇಲಾಖೆಯ ನಿರ್ದೇಶಕರು ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ಸಚಿವ ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ರಾಜ್ಯದಲ್ಲಿ ಸರ್ಕಾರಿ ಅಭಿವೃದ್ದಿ ಕಾಮಗಾರಿಗಳಿಗೆ ಅವಶ್ಯವಿರುವ ಉಪ ಖನಿಜಗಳನ್ನು ಕಾಮಗಾರಿ ಗುತ್ತಿಗೆದಾರರು ಕಲ್ಲು ಗಣಿ ಗುತ್ತಿಗೆದಾರರು, ಸ್ಟೋನ್‌ ಕ್ರಷರ್‍‌ ಮಾಲೀಕರುಗಲಿಂದ ಖರೀದಿಸಿ ಬಳಕೆ ಮಾಡಲಾಗುತ್ತಿದೆ. ಈ ರೀತಿ ಉಪ ಖನಿಜ ಗಣಿ ಗುತ್ತಿಗೆದಾರರು ರಾಜಧನ ಹಾಗೂ ಇತರೆ ಅನ್ವಯಿಕ ಶುಲ್ಕಗಳನ್ನು ಪಾವತಿಸಿ ಖನಿಜ ರವಾನೆ ಪರವಾನಿಗೆ ಪಡೆದು ಸಾಗಾಣಿಕೆ ಮಾಡಬೇಕು.

 

ಪರವಾನಿಗೆ ಇಲ್ಲದೆಯೇ ಉಪ ಖನಿಜ ಸಾಗಾಣಿಕೆ

 

ಆದರೆ  ಸರ್ಕಾರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಬಳಕೆಯಾಗುವ ಉಪ ಖನಿಜಗಳ ಪ್ರಮಾಣಕ್ಕೆ  ಕಾಮಗಾರಿ ಬಿಲ್‌ಗಳಲ್ಲಿ ಕಾಮಗಾರಿ ನಿರ್ವಹಿಸುವ ಇಲಾಖೆ, ಏಜೆನ್ಸಿ ಅವರು ಕಟಾಯಿಸಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಪಾವತಿಸಬೇಕು. ಬಹುತೇಕ ಸರ್ಕಾರಿ ಕಾಮಗಾರಿಗಳಲ್ಲಿ ಬಳಸಲಾಗುತ್ತಿರುವ ಉಪ ಖನಿಜವನ್ನು ಖನಿಜ ರವಾನೆ ಪರವಾನಿಗೆ ಪಡೆಯದೇ ಸಾಗಾಣಿಕೆಯಾಗುತ್ತಿದೆ ಎಂಬ ಸಂಗತಿಯ ಕುರಿತು ಪತ್ರದಲ್ಲಿ ಗಣಿ ಇಲಾಖೆ ನಿರ್ದೇಶಕರು ವಿವರಿಸಿರುವುದು ಗೊತ್ತಾಗಿದೆ.

 

 

ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ 3 ಬಿ ಪ್ರಕಾರ ರಾಷ್ಟ್ರೀಯ ಮತ್ತು ರಾಜ್ಯ  ಹೆದ್ದಾರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಅವಶ್ಯಕವಿರುವ ಉಪಖನಿಜಗಳ ಪೂರೈಕೆಗಾಗಿ ಕಾಮಗಾರಿ ಗುತ್ತಿಗೆದಾರರಿಗೆ ಹರಾಜು ರಹಿತವಾಗಿ ಉಪ ಖನಿಜ ಗಣಿ ಗುತ್ತಿಗೆಗಳನ್ನು ಮಂಜೂರು ಮಾಡಲಾಗುತ್ತಿದೆ. ನಿಯಮ 3 ಬಿ ಪ್ರಕಾರ ಮಂಜೂರು ಮಾಡುವ ಗುತ್ತಿಗೆ ಪ್ರದೇಶಗಳಲ್ಲಿ ಉಪಖನಿಜ ಉತ್ಪಾದಿಸಿ ಕಾಮಗಾರಿ ನಿರ್ವಹಿಸುವ ಸ್ಥಳಗಳಿಗೆ ಸಾಗಾಣಿಕೆ ಮಾಡಲು ಆರ್‍‌ಇಎಂಡಿಪಿ (Royalty Exempted Mineral Dispatch Permit)  ವಿತರಿಸುತ್ತಿದೆ.

 

ಕಲ್ಲುಗಣಿ ಗುತ್ತಿಗೆಗಳ ಪ್ರದೇಶದಲ್ಲಿ  ಉತ್ಪಾದಿಸಿ ಸರ್ಕಾರಿ ಕಾಮಗಾರಿಗಳಿಗೆ ಬಳಕೆಯಾಗುವ ಉಪ ಖನಿಜದ ಪ್ರಮಾಣಕ್ಕೆ ಬಿಲ್‌ಗಳಲ್ಲಿ ರಾಜಧನ, ಹೆಚ್ಚುವರಿ ಪಾವತಿ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ವಂತಿಕೆ ಸೇರಿದಂತೆ ಇತರೆ ಅನ್ವಯಿಕ ಶುಲ್ಕಗಳನ್ನು ಕಟಾಯಿಸಲಾಗುತ್ತದೆ. ಇದನ್ನು ಸರ್ಕಾರಿ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲಾಗುತ್ತಿದೆ.

 

ಆದರೆ ಸರ್ಕಾರಿ ಅಭಿವೃದ್ದಿ ಕಾಮಗಾರಿ ಗುತ್ತಿಗೆದಾರರು ಕಾಮಗಾರಿಗಳಲ್ಲಿ ಉಪ ಖನಿಜವನ್ನು ಬೇರೆ ಕಲ್ಲುಗಣಿ ಗುತ್ತಿಗೆ, ಸ್ಟೋನ್‌ ಕ್ರಷರ್ ಮಾಲೀಕರಿಂದ ಖರೀದಿಸುತ್ತಿದ್ದಾರೆ. ಮತ್ತು ಇವುಗಳನ್ನು ಬಳಕೆ ಮಾಡುವ ಸಂದರ್ಭಗಳಲ್ಲಿ ಕಾಮಗಾರಿ ಅಂದಾಜು ಪಟ್ಟಿಯಲ್ಲಿ ನಮೂದಿಸಿರುವ ಉಪ ಖನಿಜ ಪ್ರಮಾಣಕ್ಕೆ ಅನುಗುಣವಾಗಿ ಬಿಲ್‌ಗಳಲ್ಲಿ ರಾಜಧನವನ್ನು ಕಟಾಯಿಸಲಾಗುತ್ತದೆ ಎಂದು ಗಣಿ ಇಲಾಖೆ ನಿರ್ದೇಶಕರು ವಿವರಿಸಿರುವುದು ಗೊತ್ತಾಗಿದೆ.

 

‘ಆದರೆ ಇಂತಹ ಸಂದರ್ಭಗಳಲ್ಲಿ ಹೆಚ್ಚುವರಿ ಪಾವತಿ, ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ವಂತಿಕೆ ಸೇರಿದಂತೆ ಇತರೆ ಅನ್ವಯಿಕ ಶುಲ್ಕಗಳನ್ನು ಕಟಾಯಿಸಿ ಸರ್ಕಾರಕ್ಕೆ ಸಂದಾಯ ಮಾಡದಿರುವುದು ಕಂಡುಬಂದಿರುತ್ತದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತಿರುತ್ತದೆ,’ ಎಂದು ಪತ್ರದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

 

 

ಅಲ್ಲದೇ ಈ ಯೋಜನೆ ಅನುಷ್ಠಾನಕ್ಕೆ ಹಲವು ವಿಧಾನಗಳನ್ನು ಅನುಸರಿಸಬೇಕು ಎಂದು ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದಾರೆ.

 

ಸರ್ಕಾರಿ ಕಾಮಗಾರಿ ನಿರ್ವಹಿಸುವ ಇಲಾಖೆ, ಸಂಸ್ಥೆಗಳಿಂದ ಕಾಮಗಾರಿ ಹಂಚಿಕೆ ಪಡೆದ ಗುತ್ತಿಗೆದಾರು ಕಾಮಗಾರಿಗಳಿಗೆ ಅಗತ್ಯವಿರುವ ಉಪ ಖನಿಜಗಳ ಪೂರೈಕೆಗಾಗಿ ಕಾಮಗಾರಿ ಕೈಗೊಳ್ಳುವ ಪ್ರದೇಶಕ್ಕೆ ಹತ್ತಿರವಿರುವ ಉಪ ಖನಿಜ ಗಣಿ ಗುತ್ತಿಗೆ, ಸ್ಟೋನ್‌ ಕ್ರಷರ್‍‌ ಘಟಕಗಳ ವಿವರಗಳ ಮಾಹಿತಿಯನ್ನು ಒದಗಿಸಲು ಸೂಚಿಸಬಹುದು.

 

 

ಅಂದಾಜುಪಟ್ಟಿಯಂತೆ ಅಗತ್ಯವಿರುವ ವಿವಿಧ ನಮೂನೆಯ ಕಟ್ಟಡ ಕಲ್ಲಿನ ಉತ್ಪನ್ನಗಳು, ಮರಳು, ಇತ್ಯಾದಿಗಳನ್ನು ಉಪಖನಿಜ ಗಣಿ ಗುತ್ತಿಗೆಗಳ, ಸ್ಟೋನ್‌ ಕ್ರಷರ್‍‌ಗಳ ಘಟಕ ಖರೀದಿಸುವ ಸಂಬಂಧ ಕಾಮಗಾರಿ ಗುತ್ತಿಗೆದಾರರರಿಗೆ ಬೇಡಿಕೆ ಚೀಟಿ ನೀಡಬಹುದು. ಐಎಲ್‌ಎಂಎಸ್‌ ತಂತ್ರಾಂಶದ ಮೂಲಕ ಲಾಗಿನ್‌ ಐ ಡಿ ನೀಡಬಹುದು. ಎಷ್ಟು ಪ್ರಮಾಣದ ಉಪ ಖನಿಜಗಳನ್ನು ಖರೀದಿ ಮಾಡಲಾಗುವುದು ಎಂಬ ಮಾಹಿತಿಯನ್ನು ಅಪ್‌ಲೋಡ್‌ ಮಾಡಬಹುದು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

 

ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ, ಹೆಚ್ಚುವರಿ ಪಾವತಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ವಂತಿಕೆ ಹಾಗೂ ಅನ್ವಯಿಕ ಶುಲ್ಕಗಳನ್ನು ಬಿಲ್‌ ಮಾಡುವ ಸಂದರ್ಭದಲ್ಲಿ ಕಟಾಯಿಸಬೇಕು. ಇದಕ್ಕೆ ಸಂಬಂಧಿಸಿದ ಲೆಕ್ಕ ಶೀರ್ಷಿಕೆ, ಬ್ಯಾಂಕ್‌ ಖಾತೆಗೆ ಜಮಾ ಮಾಡಬೇಕು ಎಂದು ಪತ್ರದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

 

 

ನೋಂದಾಯಿತರಲ್ಲದ ವರ್ತಕರಿಂದ ಸಾವಿರಾರು ಕೋಟಿ ರು ಮೌಲ್ಯದ ಕಬ್ಬಿಣದ ಅದಿರನ್ನು ಬೇನಾಮಿಗಳು ಖರೀದಿಸುತ್ತಿರುವ ದಂಧೆಯು ದೊಡ್ಡ ಪ್ರಮಾಣದಲ್ಲಿದೆ. ಈ ಎಲ್ಲಾ ಮಾಹಿತಿಯೂ ಸ್ಥಳೀಯ ಪೊಲೀಸರಿಗೆ ವಿಳಾಸ ಸಮೇತವೂ ಗೊತ್ತಿದೆ ಎಂದು ಖುದ್ದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಬಹಿರಂಗಪಡಿಸಿತ್ತು.

 

ಕರ್ನಾಟಕದಲ್ಲಿ ಊರ್ಜಿತಗೊಳ್ಳಬಲ್ಲ ಗಣಿಗಾರಿಕೆಗಾಗಿ ನಿಯಂತ್ರಣ ಮತ್ತು ವ್ಯವಸ್ಥೆಗಳ ಮೇಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸುದೀರ್ಘ ವಿವರಣೆಯನ್ನು ನೀಡಿತ್ತು.

 

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಈ ದಂಧೆಯನ್ನು ತನಿಖೆ ಮಾಡಲು ಹಾಗೂ ತಾರ್ಕಿಕ ತೀರ್ಮಾನ ತೆಗೆದುಕೊಳ್ಳಲು ಈ ಎಲ್ಲಾ ಪ್ರಕರಣಗಳನ್ನು ಸೂಕ್ತ ತನಿಖಾ ಸಂಸ್ಥೆಗೆ ವಹಿಸಬೆಕು ಎಂದು ಸರ್ಕಾರದ ಉನ್ನತಾಧಿಕಾರಕ್ಕೆ ಇಲಾಖೆಯು ಕೋರಿರುವುದು ತಿಳಿದು ಬಂದಿದೆ. ಆದರೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರು ಈ ಬಗ್ಗೆ ಆಸಕ್ತಿ ವಹಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿತ್ತು.

 

ಫಾರ್ಮ್ ವ್ಯಾಟ್‌ 100ರಲ್ಲಿ ಸಲ್ಲಿಸಿದ ರಿಟರ್ನ್ಸ್‌ನಲ್ಲಿ ನೋಂದಾಯಿಸದ ಡೀಲರ್‍‌ಗಳಿಂದ ಕಬ್ಬಿಣದ ಅದಿರನ್ನು ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು  ಖಚಿತಪಡಿಸಿಕೊಂಡಿತ್ತು.  ಈ ಸಂಬಂಧ ನೀಡಿದ್ದ  ನೋಟಿಸ್‌ಗಳಿಗೆ 23 ಡೀಲರ್‍‌ಗಳು ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂಬುದನ್ನೂ ಇಲಾಖೆಯು  ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಗಮನಕ್ಕೆ ತಂದಿತ್ತು.

 

‘ಈ ಕುರಿತು ಹೊಸಪೇಟೆಯಲ್ಲಿ ಪರಿಶೀಲನೆ ನಡೆಸಿದಾಗ ಬೇನಾಮಿ ಹೆಸರಿನಲ್ಲಿ ಹಲವು ದಂಧೆ ನಡೆಯುತ್ತಿರುವುದು ಖಚಿತವಾಗಿದೆ. ಸ್ಥಳೀಯ ಪೊಲೀಸರಿಗೆ ವಿವರ, ವಿಳಾಸ ಹಾಗೂ ಎಲ್ಲಿದ್ದಾರೆ ಎಂಬುದು ಖಚಿತವಾಗಿದೆ. ಇಡೀ ಸಮಸ್ಯೆಯು ದೊಡ್ಡ ಪ್ರಮಾಣದಲ್ಲಿದೆ. ಮತ್ತು ಕೆಲವು ಸಾವಿರ ಕೋಟಿಗಳನ್ನು ಒಳಗೊಂಡಿದೆ,’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ತನ್ನ ವರದಿಯಲ್ಲಿ ವಿವರಿಸಿತ್ತು.

 

ಬೇನಾಮಿಗಳಿಂದ ಸಾವಿರಾರು ಕೋಟಿ ಮೌಲ್ಯದ ಕಬ್ಬಿಣದ ಅದಿರು ಖರೀದಿ; ಮಾಹಿತಿ ಇದ್ದರೂ ಕೈಕಟ್ಟಿ ಕುಳಿತ ಸರ್ಕಾರ

 

ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ದಂಧೆ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಗೊತ್ತಿದ್ದರೂ ಸಹ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿತ್ತು.

 

ಹೀಗಾಗಿ ಸಂಪೂರ್ಣ ಸಮಸ್ಯೆಯನ್ನು ಸಮರ್ಥ ಮತ್ತು ಸೂಕ್ತ ತನಿಖಾ ಸಂಸ್ಥೆಗೆ ವಹಿಸಿಕೊಡಬೇಕು ಎಂದು ಇಲಾಖೆಯು ಸರ್ಕಾರವನ್ನು ಕೋರಿತ್ತು.

 

ರಾಜ್ಯದಲ್ಲಿ 2000-03ರಲ್ಲಿ 23.20 ಮೆಟ್ರಿಕ್ ಟನ್‌ ಇದ್ದ ಕಬ್ಬಿಣದ ಅದಿರಿನ ಉತ್ಪಾದನೆಯು 2005-06ರಲ್ಲಿ 41.40 ಮೆಟ್ರಿಕ್‌ ಟನ್‌ ತಲುಪಿತ್ತು. ಇದು ಜಾಗತಿಕ ಬೇಡಿಕೆ ಹಾಗೂ ನಿರ್ದಿಷ್ಟವಾಗಿ ಚೀನಾದ ಬೇಡಿಕೆಗೆ ಅನುಗುಣವಾಗಿತ್ತು. ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಬಳ್ಳಾರಿ ಜಿಲ್ಲೆಯು ಪ್ರಮುಖ ಪಾಲು ಹೊಂದಿತ್ತು. ಇದು 2002-03ರಲ್ಲಿ ಶೇ. 69 ಮತ್ತು 2005-06ರಲ್ಲಿ ಶೇ.87ಕ್ಕೇರಿತ್ತು. ಇದಲ್ಲದೇ ದಂಡದ ರಫ್ತು ಅನುಪಾತವು ಮೊದಲು 2.1 ಅಗಿತ್ತು. ಆದರೆ ಈ ಪ್ರಮಾಣವು 2005-06ರ ಸಮಯದಲ್ಲಿ 5;1ಕ್ಕೆ ಬದಲಾಗಿತ್ತು.

 

ಈ ಎಲ್ಲಾ ಅಂಶಗಳು ಹಲವಾರು ಮತ್ತು ಜಂಟಿಯಾಗಿ ಕಬ್ಬಿಣದ ಅದಿರು ಉತ್ಪಾದನೆಗೆ ಪ್ರಚೋದಿಸಿತ್ತು. ಅಕ್ರಮ ಗಣಿಗಳಿಂದ ಮತ್ತು ಪಟ್ಟಾ ಭೂಮಿಯಿಂದ ಕಬ್ಬಿಣದ ಅದಿರಿನ ಉತ್ಪನ್ನಗಳನ್ನು ನೋಂದಾಯಿಸದ ಡೀಲರ್‍‌ಗಳಿಗೆ (ಯುಆರ್‍‌ಡಿ) ಮಾರಾಟ ಮಾಡಲಾಗಿತ್ತು.

ಗಣಿಗಾರಿಕೆ; ಗುತ್ತಿಗೆದಾರರಿಂದ ಸಮರ್ಪಕವಾಗಿ ಸಂಗ್ರಹಣೆಯಾಗದ ರಾಜಧನ

ಇದಕ್ಕೆ ಪ್ರತಿಯಾಗಿ ನೋಂದಾಯಿತ ವ್ಯಾಪಾರಿಗಳು ಅಕ್ರಮ ಅದಿರನ್ನು ಖರೀದಿಸಿ ವಹಿವಾಟು ನಡೆಸಿದ್ದರು. ನೋಂದಣಿಯಾಗದ ಡೀಲರ್‍‌ಗಳು ವಹಿವಾಟು ನಡೆಸಿದ ಕಬ್ಬಿಣದ ಅದಿರಿನ ಪ್ರಮಾಣವನ್ನು ಅಂದಾಜು ಮಾಡಲು ನೋಂದಣಿಯಾಗದ ಡೀಲರ್‍‌ಗಳು ನೋಂದಾಯಿಸದ ವಿತರಕರು ಮಾಡಿದ ಖರೀದಿಗಳ ವಿವರಣೆಯನ್ನೂ ವಾಣಿಜ್ಯ ತೆರಿಗೆ ಇಲಾಖೆಯಿಂದ ಗಣಿ ಇಲಾಖೆಯು ಪಡೆದಿತ್ತು.

ಅಕ್ರಮ ಗಣಿಗಾರಿಕೆ; 354 ಕೋಟಿ ದಂಡದಲ್ಲಿ ವಸೂಲು ಮಾಡಿದ್ದು ಕೇವಲ 34 ಕೋಟಿ

ಹೊಸಪೊಏಟೆಯ 132, ಬಳ್ಳಾರಿಯಲ್ಲಿ 22, ಚಿತ್ರದುರ್ಗದ 10 ಮತ್ತು ಕೊಪ್ಪಳದ ಒಬ್ಬ ವಿತರಕರ ವಿಳಾಸಗಳಿಗೆ ನೋಟೀಸ್‌ ನೀಡಲಾಗಿತ್ತು. ಆದರೆ ಎಲ್ಲಾ ಡೀಲರ್‍‌ಗಳಿಗೂ ನೋಟೀಸ್‌ಗಳನ್ನು ನೀಡಿಲ್ಲ. ಕೇವಲ 29 ನೋಟೀಸ್‌ಗಳನ್ನು ನೀಡಲಾಗಿತ್ತು. ಇವುಗಳಲ್ಲಿ ಕೇವಲ ಇಬ್ಬರು ವಿತರಕರು ಮಾತ್ರ ಖರೀದಿಯ ವಿವರಗಳನ್ನು ಒದಗಿಸಿದ್ದಾರೆ. ನಾಲ್ಕು ವಿತರಕರು ಒದಗಿಸಲು ಸಮಯ ಕೋರಿದ್ದಾರೆ. ವಿಶೇಷವೆಂದರೆ ನೋಟೀಸ್‌ಗಳನ್ನು ಸ್ವೀಕರಿಸಿದ 23 ಡೀಲರ್‍‌ಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

 

ಸಿಎಜಿ ಆಕ್ಷೇಪಣೆಯಲ್ಲೇನಿತ್ತು?

 

2006-07ರಿಂದ 2009-10ರ ಅವಧಿಯಲ್ಲಿ 97 ವರ್ತಕರು 508.27 ಕೋಟಿ ರು.ಮೌಲ್ಯದ ಕಬ್ಬಿಣದ ಅದಿರನ್ನು ನೋಂದಾಯಿತರಲ್ಲದ ವರ್ತಕರಿಂದ ಖರೀದಿಸಿದ್ದರು. ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗದಲ್ಲೂ ಇಂತಹ ಪ್ರಕರಣಗಳಿದ್ದವು.

ಗಣಿ ಗುತ್ತಿಗೆದಾರರಿಂದ 2,855 ಕೋಟಿ ರು. ರಾಜಧನ ಬಾಕಿ; ವಸೂಲಾತಿಗೆ ಇಲಾಖೆ ಮೀನಮೇಷ

ಇದು ಕಬ್ಬಿಣ ಅದಿರಿನ ಒಂದು ದೊಡ್ಡ ಪ್ರಮಾಣವನ್ನು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಯಾವುದೇ ನೋಂದಣಿಯನ್ನು ಹೊಂದಿರದ ವ್ಯಕ್ತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದನ್ನು ಸ್ಪಷ್ಪಪಡಿಸಿದಾಗ ಈ ಬಗ್ಗೆ ನಿರ್ದೇಶಕರ ಕಚೇರಿಯಿಂದ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೊಸಪೇಟೆಯ ಉಪ ನಿರ್ದೇಶಕರು ತಿಳಿಸಿದ್ದರು.

 

ಆದರೂ ಸಂಬಂಧಿತ ವರ್ತಕರು ಇರಲಿಲ್ಲ. ಹಾಗೂ ಉಪ ನಿರ್ದೇಶಕರ ಕಚೇರಿಯು ಅವರನ್ನು ಕಂಡು ಹಿಡಿಯಲಿಲ್ಲ. ಈ ಕುರಿತು ಇಲಾಖೆಯು ಹೆಚ್ಚಿನ ಪ್ರಗತಿಯನ್ನು ಸಾಧಿಸಲಿಲ್ಲ. ಗಣಿ ಭೂ ವಿಜ್ಞಾನ ಇಲಾಖೆಯ ಜಾರಿ ವಿಭಾಗವು ದುರ್ಬಲವಾಗಿತ್ತು. ಕಬ್ಬಿಣದ ಅದಿರಿನ ಮಾರಾಟಗಳಲ್ಲಿ ನಿರತವಾಗಿರುವ ನೋಂದಾಯಿತರಲ್ಲದ ವರ್ತಕರನ್ನು ಕಂಡು ಹಿಡಿಯಲಿಲ್ಲ. ಹಾಗೂ ಖನಿಜವನ್ನು ಇಲಾಖೆಯ ಅರಿವಿಗೆ ಬಾರದಂತೆ ರವಾನಿಸಲಾಗುತ್ತಿತ್ತು.

 

ಕಬ್ಬಿಣ ಅದಿರಿನ ವ್ಯವಹಾರದಲ್ಲಿ ನಿರತರಾಗಿರುವ ಎಲ್ಲಾ ವರ್ತಕರನ್ನೂ ನೋಂದಾಯಿಸಲು ಒಂದು ವ್ಯವಸ್ಥೆಯ ಅನುಪಸ್ಥಿತಿ ಹಾಗೂ ವಾಣಿಜ್ಯ ತೆರಿಗೆಗಳ ಇಲಾಖೆಯ ಜೊತೆ ಸಮನ್ವಯತೆಯಲ್ಲಿನ ಸಮಯೋಚಿತ ಕ್ರಮಗಳ ಕೊರತೆಯು 7.09 ಕೋಟಿ (ಮೆಟ್ರಿಕ್‌ ಟನ್ ಒಂದಕ್ಕೆ 11 ರು.ನಂತೆ) ಮೊತ್ತದಷ್ಟು ರಾಜಧನವು ನಷ್ಟ ಉಂಟಾಗುವಲ್ಲಿ ಪರಿಣಿಮಿಸಿತು. ಅಲ್ಲದೇ ಈ ರೀತಿಯಾಗಿ ಅಕ್ರಮವಾಗಿ ಹೊರ ತೆಗೆಯಲಾದ ಕಬ್ಬಿಣ ಅದಿರಿನ ಮೌಲ್ಯವು 508.27 ಕೋಟಿ ರು. ಆಗುತ್ತದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

SUPPORT THE FILE

Latest News

Related Posts