ಗಣಿಗಾರಿಕೆ; ಗುತ್ತಿಗೆದಾರರಿಂದ ಸಮರ್ಪಕವಾಗಿ ಸಂಗ್ರಹಣೆಯಾಗದ ರಾಜಧನ

ಬೆಂಗಳೂರು; ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜಧನ ಸಂಗ್ರಹಣೆಗೆ ನಿಗದಿಪಡಿಸಿರುವ ಅಡ್‌-ವಲೋರಮ್‌ ದರಗಳು ನಿರ್ದಿಷ್ಟ ದರಗಳಲ್ಲದ ಕಾರಣ ರಾಜ್ಯಕ್ಕೆ ಗುತ್ತಿಗೆದಾರರಿಂದ ಸಮರ್ಪಕ ರಾಜಧನ ಸಂಗ್ರಹಣೆ ಆಗುತ್ತಿಲ್ಲ ಎಂದು ರಾಜ್ಯ ಸರ್ಕಾರವು ವ್ಯಕ್ತಪಡಿಸಿರುವ ಅಭಿಪ್ರಾಯವು ಇದೀಗ ಬಹಿರಂಗವಾಗಿದೆ.

 

ಕರ್ನಾಟಕದಲ್ಲಿ ಊರ್ಜಿತಗೊಳ್ಳಬಲ್ಲ ಗಣಿಗಾರಿಕೆಗಾಗಿ ನಿಯಂತ್ರಣ ಮತ್ತು ವ್ಯವಸ್ಥೆಗಳ ಮೇಲೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2012ರಲ್ಲಿ ನೀಡಿದ್ದ ವರದಿಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಈ ಮಾಹಿತಿಯನ್ನು ಒದಗಿಸಿದೆ. ಇಲಾಖೆಯು ಒದಗಿಸಿರುವ ಸಮಗ್ರ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2006-07ರಿಂದ 2009-10ರ ಅವಧಿಯಲ್ಲಿ ಕಬ್ಬಿಣ ಅದಿರಿನಿಂದ ಸಂಗ್ರಹಿಸಲಾದ ರಾಜಸ್ವವು 648.90 ಕೋಟಿ ರು.ಗಳನ್ನು ಸಂಗ್ರಹಿಸಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಅವಧಿಯಲ್ಲಿ ಸಂಗ್ರಹಿಸಿದ್ದ ರಾಜಸ್ವಕ್ಕೆ ಸಂಬಂಧಿಸಿದಂತೆ ಖನಿಜವಾರು ರಾಜಸ್ವದ ವಿವರಗಳನ್ನು ಒದಗಿಸಿಲ್ಲ ಎಂದು ಸಿಎಜಿ ನೀಡಿದ್ದ ಅಭಿಪ್ರಾಯವನ್ನು ಬದಿಗೆ ಸರಿಸಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಈ ಕುರಿತು ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಅವರು ಹಲವು ಸಭೆಗಳನ್ನು ನಡೆಸಿದ್ದಾರೆ ಎಂದು ಗೊತ್ತಾಗಿದೆ.

 

ಸಿಎಜಿ ಆಕ್ಷೇಪಣೆ ಏನು?

 

ಅಂದಾಜು ಪತ್ರಗಳ ಹಾಗೂ ವಾಸ್ತವಿಕ ನಡುವಿನ ವ್ಯತ್ಯಾಸವು ಶೇ.21.28ರಿಂದ ಶೇ.28.16ರಷ್ಟಿತ್ತು. ಇದು ರೂಪಿಸಲಾದ ಅಂದಾಜು ಪತ್ರಗಳು ವಾಸ್ತವಿಕವಾಗಿರಲಿಲ್ಲ. 2007-08ರಲ್ಲಿ ಸಂಗ್ರಹಿಸಲಾದ ರಾಜಸ್ವವು ಅಂದಾಜು ಮಾಡಲಾಗಿದ್ದ ಸ್ವೀಕೃತಿಗಳಿಗೆ ಹೋಲಿಸಿದಲ್ಲಿ ಶೇ.21.28ರಷ್ಟು ಕಡಿಮೆಯಾಗಿತ್ತು. ಇದನ್ನು ಸ್ಪಷ್ಟಪಡಿಸಿದ ನಂತರ 2007-08 ಮತ್ತು 2008-09ರಲ್ಲಿ ಪ್ರಧಾನ ಖನಿಜಗಳಿಗೆ ಸಂಬಂಧಿಸಿದಂತೆ ರಾಜಧನ ದರಗಳನ್ನು ಪರಿಷ್ಕರಣೆ ಮಾಡದಿದ್ದ ಕಾರಣ ಸಂಗ್ರಹಣೆಯೂ ಕಡಿಮೆಯಾಗಿತ್ತು.

 

ಇದಕ್ಕೆ ಓಬಳಾಪುರಂ ಮೈನಿಂಗ್‌ ಮತ್ತು ವಿ ಎಸ್‌ ಲಾಡ್‌ ಅಂಡ್‌ ಸನ್ಸ್‌, ಎಂ ಎಸ್‌ ಪಿಎಲ್‌ ಕಂಪನಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸುದೀರ್ಘ ವಿವರಣೆ ನೀಡಿದೆ.

 

‘2009ನೇ ಸಾಲಿನ ಆಗಸ್ಟ್‌ ತಿಂಗಳಿನಿಂದ ಕೆಲವು ಮುಖ್ಯ ಖನಿಜಗಳಿಗೆ ಅಡ್‌ ವಲೋರಮ್‌ ದರಗಳ ಅನ್ವಯ ರಾಜಧನ ಸಂಗ್ರಹಣೆ ಮಾಡಲಾಗುತ್ತಿದೆ. ಐಬಿಎಂ ಸಂಸ್ಥೆಯು ಕಬ್ಬಿಣ ಅದಿರಿನ PIT MOUTH ಮೌಲ್ಯವನ್ನು ನಿರ್ಧರಿಸುವ ಪ್ರಾಧಿಕಾರವಾಗಿದೆ. ಈ ನಿರ್ಧರಣೆ ಆಧಾರದ ಮೇಲೆ ಅಡ್‌ ವಲೋರಮ್‌ ದರಗಳ ರಾಜಧನವನ್ನು ಲೆಕ್ಕಚಾರ ಮಾಡಲಾಗುತ್ತಿದೆ. ಗಣಿ ಗುತ್ತಿಗೆದಾರರ ಇನ್‌ವಾಯ್ಸ್‌ ಮೊತ್ತವು ಪ್ರತಿ ತಿಂಗಳಿನಲ್ಲಿಯೂ ವ್ಯತ್ಯಯವಿರುತ್ತದೆ. ಐಬಿಎಂ ಆಯಾ ತಿಂಗಳುಗಳಲ್ಲಿಯೇ ವಿವಿಧ ಗುತ್ತಿಗೆದಾರರ ಇನ್‌ವಾಯ್ಸ್‌ಗಳ ಮೊತ್ತಗಳನ್ನು ಗಣನೆಗೆ ತೆಗೆದುಕೊಂಡು ಒಟ್ಟಾರೆ ಭಾರತದ ಅಡ್‌ ವಲಾರಮ್‌ ಮೌಲ್ಯವನ್ನು ನಿರ್ಧರಿಸುತ್ತದೆ,’ ಎಂದು ವಿವರಣೆ ನೀಡಿರುವುದು ಗೊತ್ತಾಗಿದೆ.

 

ಹಾಗೆಯೇ ಆಯಾ ತಿಂಗಳಿನಲ್ಲಿ ಗುತ್ತಿಗೆದಾರರನ್ನು ತನ್ನ ಇನ್‌ವಾಯ್ಸ್‌ಗಳ ಸರಾಸರಿ ಮೊತ್ತಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಮದಿನ ದಿನಗಳಲ್ಲಿ ಪ್ರಕಟಿಸುವ ಅಡ್‌ ವಲೋರಮ್‌ ಮೌಲ್ಯಕ್ಕೂ ವ್ಯತ್ಯಯ ಉಂಟಾಗುತ್ತದೆ ಎಂದು ಸಮರ್ಥನೆ ನೀಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ರೀತಿಯ ಸಮರ್ಪಕವಲ್ಲದ ಮಾರುಕಟ್ಟೆ ಮೌಲ್ಯ ನಿರ್ಧರಣೆಯ ಕುರಿತ ವಿಷಯವನ್ನು ರಾಜ್ಯವು ಈಗಾಗಲೇ ಐಬಿಎಂ ಹಾಗೂ ಗಣಿ ಮಂತ್ರಾಲಯದ ಮುಂದೆ ಇಟ್ಟಿದೆ ಎಂದೂ ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.

 

ಕಡಿಮೆ ರಾಜಧನ ಸಂಗ್ರಹಣೆಯಾಗಿರುವುದಿಲ್ಲ ಎಂದು ಪ್ರತಿಪಾದಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಅಂಕಿ ಅಂಶಗಳನ್ನು ಮುಂದಿರಿಸಿದೆ.

 

2006-07ರಲ್ಲಿ ಆಯವ್ಯಯದಲ್ಲಿ 350 ಕೋಟಿ ರು. ಅಂದಾಜಿಸಿತ್ತು. ಆದರೆ ವಾಸ್ತವಿಕದಲ್ಲಿ 366.29 ಕೋಟಿ ರು. ಆದಾಯ ಸಂಗ್ರಹಿಸಿತ್ತು. 2007-08ರಲ್ಲಿ 600 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಅಂದಾಜಿಸಲಾಗಿತ್ತಾದರೂ ಆ ನಂತರ ಅದನ್ನು ಪರಿಷ್ಕರಿಸಿ 450 ಕೋಟಿ ರು ಗೆ ಇಳಿಕೆ ಮಾಡಲಾಗಿತ್ತು. ವಾಸ್ತವಿಕವಾಗಿ 472.35 ಕೋಟಿ ರು. ಸಂಗ್ರಹಿಸಲಾಗಿತ್ತು. 2008-09ರಲ್ಲಿ 632.70 ಕೋಟಿ ರು. ಗಳನ್ನು ಆಯವ್ಯಯದಲ್ಲಿ ಅಂದಾಜಿಸಿ ನಂತರ ಅದನ್ನು 519.00 ಕೋಟಿ ರು.ಗೆ ಪರಿಷ್ಕರಿಸಲಾಗಿತ್ತು. ಈ ಅವಧಿಯಲ್ಲಿ ವಾಸ್ತವಿಕವಾಗಿ 556.07 ಕೋಟಿ ರು. ಸಂಗ್ರಹಿಸಲಾಗಿತ್ತು.

 

2009-10ರಲ್ಲಿ 670.64 ಕೋಟಿ ರು. ಆಯವ್ಯಯದಲ್ಲಿ ಅಂದಾಜಿಸಿ ಅದನ್ನು 719.00 ಕೋಟಿ ರು. ಗೆ ಪರಿಷ್ಕರಿಸಲಾಗಿತ್ತು. ವಾಸ್ತವಿಕವಾಗಿ 859.50 ಕೋಟಿ ರು. ಆದಾಯವಾಗಿತ್ತು. 2010-11ರಲ್ಲಿ 1,000 ಕೋಟಿ ರು. ಅಂದಾಜಿಸಿ ನಂತರ 1,125 ಕೋಟಿ ರು.ಗೆ ಪರಿಷ್ಕರಿಸಲಾಗಿತ್ತು. ಕಡೆಯಲ್ಲಿ 1,185.96 ಕೋಟಿ ರು.ವಾಸ್ತವಿಕ ಆದಾಯವಾಗಿತ್ತು. ಒಟ್ಟಾರೆಯಾಗಿ ಈ ಐದು ವರ್ಷಗಳಲ್ಲಿ 3,253.34 ಕೋಟಿ ರು. ಅಂದಾಜಿಸಿದ್ದು, ನಂತರ 3,234 ಕೋಟಿ ರು.ಗೆ ಪರಿಷ್ಕರಿಸಿತ್ತು. ವಾಸ್ತವಿಕವಾಗಿ 3,440.17 ಕೋಟಿ ರು. ಆದಾಯವಿತ್ತು ಎಂದು ಇಲಾಖೆಯು ಪಿಎಸಿಗೆ ಮಾಹಿತಿ ಒದಗಿಸಿರುವದು ತಿಳಿದು ಬಂದಿದೆ.

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಕಾನೂನುಬಾಹಿರವಾಗಿ ಕಲ್ಲು  ಗಣಿಗಾರಿಕೆ ನಡೆಸಿದ್ದ ಉದ್ಯಮಿಗಳಿಂದ ವಸೂಲು ಮಾಡಬೇಕಿದ್ದ 354 ಕೋಟಿ ರು.ದಂಡದ ಪೈಕಿ 2021ರ ಸೆ.7ರ ಅಂತ್ಯಕ್ಕೆ ಕೇವಲ 34 ಕೋಟಿಯನ್ನಷ್ಟೇ ವಸೂಲು ಮಾಡಲಾಗಿತ್ತು. ಈ ಕುರಿತು ‘ದಿ ಫೈಲ್‌’ 2021ರ ಸೆ.7ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

ಅಕ್ರಮ ಗಣಿಗಾರಿಕೆ; 354 ಕೋಟಿ ದಂಡದಲ್ಲಿ ವಸೂಲು ಮಾಡಿದ್ದು ಕೇವಲ 34 ಕೋಟಿ

ಅದೇ ರೀತಿ ಗಣಿ ಗುತ್ತಿಗೆದಾರರು ಕಳೆದ 5 ವರ್ಷದಲ್ಲಿ 2,855 ಕೋಟಿ ರು.ಗಳ ರಾಜಧನವನ್ನು ಬಾಕಿ ಉಳಿಸಿಕೊಂಡಿದ್ದರು.

ಗಣಿ ಗುತ್ತಿಗೆದಾರರಿಂದ 2,855 ಕೋಟಿ ರು. ರಾಜಧನ ಬಾಕಿ; ವಸೂಲಾತಿಗೆ ಇಲಾಖೆ ಮೀನಮೇಷ

 

ಕಳೆದ 13 ವರ್ಷಗಳಲ್ಲಿ ಗಣಿಗಾರಿಕೆ ಚಟುವಟಿಕೆಗಳಿಂದ ರಾಜ್ಯದ ಬೊಕ್ಕಸಕ್ಕೆ 39,562.69 ಕೋಟಿ ರು. ಆದಾಯ ಸಂಗ್ರಹಣೆಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಂಕಿ ಅಂಶ ನೀಡಿದೆ.

the fil favicon

SUPPORT THE FILE

Latest News

Related Posts