ಎಚ್‌ಎಂಟಿ ಅರಣ್ಯ ಜಮೀನು ಪ್ರಕರಣ; ಮಧ್ಯಂತರ ಅರ್ಜಿಗೆ ಘಟನೋತ್ತರ ಅನುಮೋದನೆ ಪಡೆಯದ ಗೋಕುಲ್‌

ಬೆಂಗಳೂರು; ಎಚ್‌ಎಂಟಿ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ವ್ಯಾಜ್ಯ ನಿರ್ವಹಣಾಧಿಕಾರಿ ಐಎಫ್‌ಎಸ್‌ ಆರ್‍‌ ಗೋಕುಲ್‌ ಅವರು ಸಚಿವ ಸಂಪುಟದಿಂದ ಘಟನೋತ್ತರ ಅನುಮೋದನೆಯನ್ನೂ ಪಡೆದಿರಲಿಲ್ಲ. ಈ ಅಂಶಕ್ಕೆ ಅವರು ಯಾವುದೇ ಸಮಜಾಯಿಷಿಯನ್ನೂ ನೀಡಿರಲಿಲ್ಲ.

 

ಎಚ್‌ಎಂಟಿ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧವೇ ಗೋಕುಲ್‌ ಅವರು ಗಂಭೀರ ಆರೋಪವೆಸಗಿ ಸಿಬಿಐನಿಂದ ರಕ್ಷಣೆ ಕೋರಿದ್ದರು. ಅರಣ್ಯ ಇಲಾಖೆಯೂ ಸಹ ಗೋಕುಲ್‌ ಅವರ ಸೇವಾಲೋಪವನ್ನು ಎತ್ತಿ ತೋರಿಸಿತ್ತು. ಇದರ ಬೆನ್ನಲ್ಲೇ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲೂ ಗೋಕುಲ್‌ ಅವರು ಎಸಗಿದ್ದ ತಪ್ಪುಗಳ ಸರಮಾಲೆಯೂ ಸಹ ಮುನ್ನೆಲೆಗೆ ಬಂದಿವೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕಡತದ (FEE/107/FLL/2025 COMPUTER NUMBER 1772747) ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

 

ಅರಣ್ಯ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸರ್ವೋಚ್ಛ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಕ್ಕೆ ಅರಣ್ಯ ಇಲಾಖೆಯು ಗೋಕುಲ್‌ ಅವರಿಗೆ ನೋಟೀಸ್‌ ಜಾರಿಗೊಳಿಸಿದ್ದರು. ಇದಕ್ಕೆ ಗೋಕುಲ್‌ ಅವರು ಸಮಜಾಯಿಷಿ ರೂಪದಲ್ಲಿ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದರು.

 

ಮಧ್ಯಂತರ ಅರ್ಜಿಯ ಕರಡನ್ನು ಬೆಂಗಳೂರಿನ ಅಂದಿನ ಉಪ ಅರಣ್ಯ ಸಂಕ್ಷಣಾಧಿಕಾರಿಯವರು ತಯಾರಿಸಿದ್ದರು. ಇದು ನಂತರ ಪಿಸಿಸಿಎಫ್‌ಗೆ ಸಲ್ಲಿಸಲಾಗಿತ್ತು. ನಂತರ ಇದಕ್ಕೆ ಸರ್ಕಾರವೂ ಅನುಮತಿ ನೀಡಿತ್ತು. ಇದಾದ ನಂತರ 2020ರ ಜೂನ್‌ 20ರಂದು ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದರು. ಆದರೆ ಈ ಅಂಶಕ್ಕೆ ಅರಣ್ಯ ಇಲಾಖೆಯು ತಕರಾರು ಎತ್ತಿದೆ.

 

 

2020ರ ಜುಲೈ 15ರಂದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆದಿತ್ತು. ಸಚಿವ ಸಂಪುಟದ ಅನುಮೋದನೆ ಪಡೆಯಬೇಕು ಎಂದು ಈ ಸಭೆಯಲ್ಲಿ ಸೂಚಿಸಲಾಗಿತ್ತು. ಇದಕ್ಕೂ ಮೊದಲೇ ಅಂದರೆ 25 ದಿನಕ್ಕೂ ಮೊದಲೇ 2020ರ ಜೂನ್‌ 20ರಂದು ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಇದು 2020ರ ಜುಲೈ 8ರಂದು ಅಂಗೀಕಾರವಾಗಿದೆ ಎಂದು ಹೇಳಿದ್ದಾರೆ. ಆದರೆ ಘಟನೋತ್ತರ ಅನುಮೋದನೆ (ಸ್ಥಿರೀಕರಣ) ಏಕೆ ಪಡೆದಿಲ್ಲ ಎಂಬುದಕ್ಕೆ ಗೋಕುಲ್‌ ಅವರು ಸಮಜಾಯಿಷಿಯನ್ನೇ ನೀಡಿಲ್ಲ ಎಂದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಹಾಗೆಯೇ ಎಚ್‌ಎಂಟಿಯು ಅನಧಿಕೃತವಾಗಿ ಅರಣ್ಯ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವುದು ಎಚ್‌ಎಂಟಿಯ ದುರುದ್ದೇಶದ ಕ್ರಮಕ್ಕೆ ನಿದರ್ಶನವಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರೇ ಉನ್ನತ ಮಟ್ಟದ ಹಲವು ಸಭೆಗಳಲ್ಲಿ ದಾಖಲಿಸಿದ್ದರು.

 

ಆದರೂ ಸಹ ಸರ್ಕಾರಿ ಸಂಸ್ಥೆಗಳಿಗೆ 111 ಎಕರೆ 15 ಗುಂಟೆ ಮತ್ತು ಖಾಸಗಿ ಸಂಸ್ಥೆಗಳಿಗೆ 48 ಎಕರೆ 92 ಗುಂಟೆ ಅರಣ್ಯ ಭೂಮಿಯನ್ನು ಮಾರಾಟ ಮಾಡಲಾಗಿತ್ತು. ಮತ್ತು ಪೀಣ್ಯ ಪ್ಲಾಂಟೇಷನ್‌ನ ಸರ್ವೇ ನಂಬರ್‍‌ 1 ಮತ್ತು 2ರಲ್ಲಿನ 443 ಎಕರೆ ಜಮೀನಿನ ಮತ್ತು ಪ್ಲಾಟ್‌ ನಂಬರ್‍‌ ಎಂವೈಎಸ್‌ 357 ರಲ್ಲಿದ್ದ ಜಾಗವನ್ನೂ ಡಿನೋಟಿಫಿಕೇಷನ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು ನಿಯಮಬಾಹಿರವಾಗಿತ್ತು ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಬೆಂಗಳೂರು ನಗರದ ಪೀಣ್ಯ ಪ್ಲಾಂಟೇಷನ್‌ ಸರ್ವೇ ನಂಬರ್ 1 ಮತ್ತು 2ರಲ್ಲಿ ಒಟ್ಟು 599 ಎಕರೆ ಪ್ರದೇಶವನನ್ನು ಅರಣ್ಯ ನಿಯಮಾವಳಿ 1878ರ ಸೆಕ್ಷನ್‌ 9ರಡಿಯಲ್ಲಿ ಅರಣ್ಯ ಎಂದು ಅಂದಿನ ಮೈಸೂರು ಮಹಾರಾಜರು 1896ರ ಜೂನ್‌ 11ರಂದೇ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದರು. ನಂತರ ಈ ಪ್ರದೇಶವನ್ನು 1901ರ ಜನವರಿ 31ರಂದು ರಾಜ್ಯ ಅರಣ್ಯ ಎಂದು ಘೋಷಣೆ ಮಾಡಲಾಗಿತ್ತು.

 

ಈ ಪೈಕಿ ಪೀಣ್ಯ ಪ್ಲಾಂಟೇಷನ್‌ ಸರ್ವೆ ನಂಬರ್‍‌ 2ರಲ್ಲಿ 180 ಎಕರೆ 26 ಗುಂಟೆ , ಇದೇ ಸರ್ವೇ ನಂಬರ್‍ 2ರಲ್ಲಿ 77 ಎಕರೆ 20 ಗುಂಟೆಯನ್ನು 1963ರ ಜೂನ್ 21ರಂದು ಗ್ರಾಂಟ್‌ ಸರ್ಟಿಫಿಕೇಟ್‌ ನೀಡಲಾಗಿತ್ತು. ‌ ಹಾಗೂ ಸರ್ವೆ ನಂಬರ್‍‌ 1ರಲ್ಲಿನ 185 ಎಕರೆ, ಜೆ ಬಿ ಕಾವಲ್‌ ನಲ್ಲಿ 26 ಎಕರೆ 32 ಗುಂಟೆ ಸೇರಿ ಒಟ್ಟು 211.32 ಎಕರೆ ಗಿಫ್ಟ್‌ ಡೀಡ್‌ ಆಗಿದೆ ಎಂದು ತೋರಿಸಿತ್ತು.

 

ಪೀಣ್ಯ ಪ್ಲಾಂಟೇಷನ್ ಸರ್ವೆ ನಂಬರ್‍‌ 1 ಮತ್ತು 2ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಲಿಮಿಟೆಡ್‌ಗೆ 1961ರಿಂದ 19654 ನಡುವೆ ಒಟ್ಟು 443.06 ಎಕರೆ ಜಮೀನನ್ನು ನೀಡಲಾಗಿತ್ತು.

SUPPORT THE FILE

Latest News

Related Posts