62.77 ಕೋಟಿ ದುರುಪಯೋಗ ಪ್ರಕರಣ; ಜೈಲು ಸೇರಿದರೂ ಮಂಜುನಾಥಗೌಡರಿಗೆ ಮುಂದುವರೆದ ಅಧಿಕಾರ ‘ಭಾಗ್ಯ’

ಬೆಂಗಳೂರು;  ಶಿವಮೊಗ್ಗ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ)ನಲ್ಲಿ ನಡೆದಿದೆ ಎನ್ನಲಾದ 62.77 ಕೋಟಿ ರು. ದುರುಪಯೋಗವೂ ಸೇರಿದಂತೆ ಇನ್ನಿತರೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍‌ ಎಂ ಮಂಜುನಾಥ ಗೌಡ ಅವರು  ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ 22 ದಿನಗಳಾದರೂ ಸಹ ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರ ಹುದ್ದೆಯಲ್ಲಿಯೇ ಮುಂದುವರೆದಿರುವುದು ಚರ್ಚೆಗೆ ಗ್ರಾಸವಾಗಿದೆ. 

 

ವಿಶೇಷವೆಂದರೇ ಇ ಡಿ ಯಿಂದ ಬಂಧನಕ್ಕೊಳಗಾದ ನಂತರ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹುದ್ದೆಯಿಂದಲೂ ಮಂಜುನಾಥ ಗೌಡರನ್ನು ಕೆಳಗಿಳಿಸಿತ್ತು. ಬ್ಯಾಂಕ್‌ನ ಉಪಾಧ್ಯಕ್ಷ ಎಸ್‌ ಕೆ ಮರಿಯಪ್ಪ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹುದ್ದೆಯಿಂದ ಮಾತ್ರ ಇದುವರೆಗೂ ಕೆಳಗಿಳಿಸಿಲ್ಲ. 

 

ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಭ್ರಷ್ಟರನ್ನು ರಕ್ಷಿಸುತ್ತಿದೆ ಎಂದ ವಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ  ಅವ್ಯವಹಾರ ಪ್ರಕರಣದಲ್ಲಿ ಜೈಲು ಸೇರಿರುವ ಮಂಜುನಾಥ್ ಗೌಡ ಅವರನ್ನು ಎಂಎಡಿಬಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವ ವಿಚಾರವು ಮುನ್ನೆಲೆಗೆ ಬಂದಿದೆ. 

 

ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.  

 

ಡಿಸಿಸಿ ಬ್ಯಾಂಕ್ ಹಗರಣದಲ್ಲಿ ತನಿಖೆ ಮುಂದಾಗಿದ್ದ ಜಾರಿ ನಿರ್ದೇಶನಾಲಯ(ಇ.ಡಿ) ಏಪ್ರಿಲ್‌ 8 ಮತ್ತು 9ರಂದು  ಆರ್. ಎಂ ಮಂಜುನಾಥಗೌಡ ಮತ್ತವರ ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಿತ್ತು. ಏಪ್ರಿಲ್‌ 9ರಂದು  ಮಂಜುನಾಥ್ ಗೌಡರನ್ನು ಬಂಧಿಸಿದ್ದ ಜಾರಿನಿರ್ದೇಶನಾಲಯವು 14 ದಿನಗಳವರೆಗೆ ವಶಕ್ಕೆ ಪಡೆದಿತ್ತು. ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು.  ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದ್ದರೂ ಸಹ ಯೋಜನೆ ಇಲಾಖೆಯ ಸಚಿವ ಡಿ ಸುಧಾಕರ್‍‌ ಅವರು, ಮಂಜುನಾಥ ಗೌಡ ಅವರನ್ನು  ಎಂಎಡಿಬಿಗೆ ಅಧ್ಯಕ್ಷ ಸ್ಥಾನದಿಂದ ಕದಲಿಸಿಲ್ಲ. ಬದಲಿಗೆ ಅಧಿಕಾರ ಭಾಗ್ಯವನ್ನು ಮುಂದುವರೆಸಿದ್ದಾರೆ. 

 

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರೂ ಸಹ ಈ ಬಗ್ಗೆ ಯಾವುದೇ ಕ್ರಮವನ್ನೂ ವಹಿಸಿಲ್ಲ. ಇದರಿಂದಾಗಿ  ಭ್ರಷ್ಟಾಚಾರ ವಿಷಯದಲ್ಲಿ ರಾಜ್ಯ ಕಾಂಗ್ರೆಸ್‌   ಸರ್ಕಾರದ ನೈತಿಕತೆಯನ್ನು ಬಟಾಬಯಲುಗೊಳಿಸಿದಂತಾಗಿದೆ. ಹಾಗೆಯೇ ಇದೇ  ವಿಷಯದಲ್ಲಿ ಮೊದಲಿನಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದ ಬಿಜೆಪಿಯೂ ಸಹ  ಈಗ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. 

 

ಆರ್ ಎಂ  ಮಂಜುನಾಥಗೌಡ ಅವರ ಮೇಲೆ ಗಂಭೀರ ಆರೋಪಗಳಿದ್ದಾಗಲೂ ಸಹ  ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ನಂತರ ಅವರನ್ನು  ಎಂಎಡಿಬಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಈ ಮಂಡಳಿಯು   ಸುಮಾರು 90  ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಮತ್ತು ಇದರ ಅಧ್ಯಕ್ಷರಿಗೆ  ಸಚಿವ ಸಂಪುಟ ದರ್ಜೆಯ ಸ್ಥಾನಮಾನವೂ ಇದೆ. 

 

2014 ರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ಗಾಂಧಿಬಜಾರ್ ಶಾಖೆಯಲ್ಲಿ ನಕಲಿ ಚಿನ್ನ ಅಡಮಾನವಿಟ್ಟು 62.77 ಕೋ.ರೂ.ಗಳ ವಂಚನೆ ನಡೆದಿತ್ತು. ಈ  ಪ್ರಕರಣದಲ್ಲಿ  ಅರೋಪಿಯಾಗಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್. ಎಂ ಮಂಜುನಾಥ್ ಗೌಡ ಅವರನ್ನು ಪೊಲೀಸ್ ತನಿಖೆಯ ಆರೋಪಪಟ್ಟಿಯಿಂದ ಕೈಬಿಡಲಾಗಿತ್ತು. ಆದರೂ ಈ ಪ್ರಕರಣದಲ್ಲಿ   ಜಾರಿ ನಿರ್ದೇಶನಾಲಯ (ಇ.ಡಿ) ಮಧ್ಯ ಪ್ರವೇಶಿಸಿತ್ತು.  ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು .ಇದರ ವಿರುದ್ದ ಮಂಜುನಾಥ ಗೌಡರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು.  ಅದರ ಅವಧಿ ಮುಗಿಯುತ್ತಿದ್ದಂತೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯವು  ಅವರನ್ನು ಬಂಧಿಸಿತ್ತು. 

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕರು 2021ರವರೆಗೂ  ಮರು ಲೆಕ್ಕ ಪರಿಶೋಧನೆ ಪೂರ್ಣ ವರದಿ ಸಲ್ಲಿಸಿರಲಿಲ್ಲ.  ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣವು ಗಂಭೀರವಾಗಿತ್ತು. ಆದರೂ  ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ನಿರ್ದೇಶಕರು ಮರು ಲೆಕ್ಕ ಪರಶೋಧನೆ ವರದಿ ಸಲ್ಲಿಸುವಲ್ಲಿನ  ವಿಳಂಬವು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು. 

 

2011-12ರಿಂದ 2013-14ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮರು ಲೆಕ್ಕ ಪರಿಶೋಧನೆ ನಡೆಸುವ ಸಂಬಂಧ ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2021ರ ನವೆಂಬರ್‌ 9ರಂದೇ ಪತ್ರ ಬರೆದಿದ್ದರು.

 

62 ಕೋಟಿ ದುರುಪಯೋಗ; ಮರು ಲೆಕ್ಕ ಪರಿಶೋಧನೆ ವರದಿ ಬಿಡುಗಡೆಗೆ ಮೀನಮೇಷ

 

‘ಬ್ಯಾಂಕ್‌ನ ಮರು ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು ನೀಇಡರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ಮರು ಲೆಕ್ಕ ಪರಿಶೋಧನೆ ವರದಿಯ ಪೂರ್ಣ ವರದಿಯನ್ನು ಬಿಡುಗಡೆಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಹಲವು ಬಾರಿ ಸೂಚಿಸಲಾಗಿದೆ. ಆದರೂ ಈ ವಿಷಯದಲ್ಲಿ ನಿರೀಕ್ಷಿತ ಬೆಳವಣಿಗೆಗಳು ಆಗಿರುವುದಿಲ್ಲ. ಇದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹಾಗಾಗಿ ವಿಷಯದ ಗಂಭೀರತೆ ಮನಗಂಡು ವೈಯಕ್ತಿಕ ಗಮನಹರಿಸಿ ತುರ್ತು ಕ್ರಮ ತೆಗೆದುಕೊಂಡು ಕೈಗೊಂಡ ಕ್ರಮದ ವರದಿಯನ್ನು ಅತಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ನಿರ್ದೇಶಿಸಿದ್ದರು. 

 

 

 

ಬ್ಯಾಂಕ್‌ನಲ್ಲಿ ನಡೆದಿರುವ ಹಗರಣದ ವಿವರ

 

ಬ್ಯಾಂಕ್‌ನನಗರ ಶಾಖೆಯಲ್ಲಿನ ನಗದು ಶಿಲ್ಕಿನಲ್ಲಿ 1,79,20,235.58 ರು. ಕೊರತೆ ಕಂಡು ಬಂದಿತ್ತು. ನಗದು ಶಿಲ್ಕಿನಲ್ಲಿನ ಈ ಕೊರತೆಗೆ ಕಾರಣರಾಗಿದ್ದ ಶಾಖಾ ವ್ಯವಸ್ಥಾಪಕರಾದ ಬಿ ಶೋಭಾ, ನಗದು ಗುಮಾಸ್ತ ವಿ ರವೀಂದ್ರ ವಿರುದ್ಧ 2014ರಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿತ್ತು. 

 

ಹೂಡಿಕೆ ಖರೀದಿಯಲ್ಲಿಯೂ ಅಪರಾತಪರಾ; ಅಪೆಕ್ಸ್‌ ಬ್ಯಾಂಕ್‌ಗೆ ಆದ ನಷ್ಟ 33.21 ಕೋಟಿ

 

ಈ ಶಾಖೆಯಲ್ಲಿ ಒಟ್ಟು 34 ವ್ಯಕ್ತಿಗಳ ಹೆಸರಿನಲ್ಲಿ 785 ಖಾತೆಗಳಿಂದ 62,77,63,560 ರು ದುರುಪಯೋಗವಾಗಿತ್ತು. ಇದು ಬಂಗಾರ ಆಭರಣಗಳ ಸಾಲದ ಅಡಿಯಲ್ಲಿ ಅಡುವು ಮಾಡಿದ್ದ ಆಭರಣಗಳನ್ನು ಪರಿಶೀಲಿಸಿದ್ದ ವೇಳೆಯಲ್ಲಿ ಹಣ ದುರುಪಯೋಗವಾಗಿರುವುದು ತಿಳಿದು ಬಂದಿತ್ತು.

 

ಈ ಪೈಕಿ ನಕಲಿ ಬಂಗಾರ ಆಭರಣಗಳನ್ನು ಅಡವಿಟ್ಟ ಪ್ರಕರಣಗಳಲ್ಲಿ 40,57,83,762 ರು., ಭಾಗಶಃ ಬಂಗಾರವಿರುವ ಆಭರಣಗಳನಬ್ನು ಅಡವಿಟ್ಟ ಪ್ರಕರಣಗಳಲ್ಲಿ 5,05,85,641 ರು., ಆಭರಣಗಳನ್ನು ಅಡವಿಡದೇ ಸಾಲ ನೀಡಿದ್ದ ಪ್ರಕರಣಗಳಲ್ಲಿ 17,13,94,157 ರು. ದುರುಪಯೋಗವಾಗಿತ್ತು. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿತ್ತು. 

 

ನಕಲಿ ಬಂಗಾರದ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದ 34 ಗ್ರಾಹಕರಗಳ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 ರಡಿಯಲ್ಲಿ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರು ನ್ಯಾಯಾಲಯಗಳಲ್ಲಿ ಪ್ರತ್ಯೇಕ ದಾವೆ ಹೂಡಿದ್ದಾರೆ. ಇದರಲ್ಲಿ 17 ಪ್ರಕರಣಗಳು ಸಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ವಹಿಸಲಾಗಿತ್ತು. 

 

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರು 34 ವ್ಯಕ್ತಿಗಳನ್ನು ಸಿಐಡಿ ಪೊಲೀಸರು ವಿಚಾರಣೆ ನಡೆಸಿದ್ದರು. ಸಿಐಡಿ ಕೋರಿಕೆಯಂತೆ ಶಿವಮೊಗ್ಗ ನಗರ ಶಾಖೆಗೆ ಸಂಬಂಧಿಸಿದಂತೆ 2011-12ನೇ ಸಾಲಿನಿಂದ 2014ನೇ ಸಾಲಿನ ಸೆಪ್ಟಂಬರ್‌ವರೆಗಿನ ಲೆಕ್ಕಪತ್ರಗಳನ್ನು ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸಿ ಅದರ ವರದಿ ಆಧರಿಸಿ 2015ರ ಆಗಸ್ಟ್‌ 21ರಂದು ಶಿವಮೊಗ್ಗ ನ್ಯಾಯಾಲಯಕ್ಕೆ ಅಂತಿಮ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

 

ಇದರಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಆರ್‌ ಎಂ ಮಂಜುನಾಥಗೌಡ, ಸಿಬ್ಬಂದಿ ಎನ್‌ ಜೆ ನಾಗಭೂಷಣ, ಎಚ್‌ ಗೀತಾ, ಎನ್‌ ಮಾಲತೇಶ ಇವರ ವಿರುದ್ಧದ ಆರೋಪಗಳು ಸಾಬೀತಾಗದ ಕಾರಣ ಆರೋಪ ಪಟ್ಟಿಯಿಂದ ಕೈಬಿಟ್ಟಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts