ಡಿಜಿಟಲ್‌ ಮಾಧ್ಯಮದಲ್ಲಿ ಪ್ರಚಾರಕ್ಕೆ 7.20 ಕೋಟಿ; ಟೆಂಡರ್‌ ಇಲ್ಲ, ಸುತ್ತೋಲೆ ಪಾಲನೆಯಿಲ್ಲ, ‘ಗ್ಯಾರಂಟಿ’ ದುಂದುವೆಚ್ಚ

ಬೆಂಗಳೂರು; ಅಲ್ಪಾವಧಿ ಟೆಂಡರ್‌ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್‌  ಮೂಲಕ  ಖಾಸಗಿ ಏಜೆನ್ಸಿಯ ಸೇವೆ ಪಡೆಯಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಸಹ ರಾಜ್ಯ   ಕಾಂಗ್ರೆಸ್‌ ಸರ್ಕಾರವು ಉದ್ದೇಶಪೂರ್ವಕವಾಗಿ ಕೈಚೆಲ್ಲುತ್ತಲೇ ಬಂದಿದೆ.

 

ಗ್ಯಾರಂಟಿ ಯೋಜನೆಗಳ ಮಾಹಿತಿಯೂ ಸೇರಿದಂತೆ ಬಿಬಿಎಂಪಿ, ಬಿಡಿಎ, ಬಿಎಂಆರ್‍‌ಸಿಎಲ್‌, ಬಿಎಂಆರ್‍‌ಡಿಎ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಯೋಜನೆಗಳನ್ನು ಸಾಮಾಜಿಕ ಜಾಲ ತಾಣ, ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು ತುರ್ತು ಅಲ್ಲದೇ ಇದ್ದರೂ ಸಹ  ತಿಂಗಳಿಗೆ 60 ಲಕ್ಷ ರು.ನಂತೆ  ವರ್ಷಕ್ಕೆ 7.20 ಕೋಟಿ ರು. ವೆಚ್ಚ ಮಾಡಲು ಅಲ್ಪಾವಧಿ ಟೆಂಡರ್‌ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್‌ ಪ್ರಕ್ರಿಯೆ ನಡೆಸದೆಯೇ   4 (ಜಿ) ವಿನಾಯಿತಿ ಪಡೆದುಕೊಂಡಿದೆ.

 

ಇದು ಗ್ಯಾರಂಟಿ ಹೆಸರಿನಲ್ಲಿ ಪ್ರಚಾರ ಮಾಡುವ ಗೀಳು ಹತ್ತಿಸಿಕೊಂಡಂತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ದುಂದುವೆಚ್ಚಕ್ಕೆ ಪದೇ ಪದೇ ದಾರಿ ಮಾಡಿಕೊಡುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ವಿನಾಯಿತಿ ನೀಡುವ ಕುರಿತು ಆರ್ಥಿಕ ಇಲಾಖೆಯು 2024ರ ಮಾರ್ಚ್‌ 15ರಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯ ಕಂಡಿಕೆ 9ರ ಪ್ರಕಾರ ಕಾಲಾವಕಾಶ ಕಡಿಮೆ ಇರುವ ಸಂದರ್ಭಗಳಲ್ಲಿಯೂ ಕನಿಷ್ಠ 07 ದಿನಗಳ ಅವಧಿಗೆ  ಅಲ್ಪಾವಧಿ ಟೆಂಡರ್‌ ಕರೆಯಬೇಕಿತ್ತು.  ಆದರೆ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಅಲ್ಪಾವಧಿ ಟೆಂಡರ್‌ ಕರೆಯಲು ಮುಂದಾಗಿಲ್ಲ. ಬದಲಿಗೆ ನೇರವಾಗಿ 4 (ಜಿ) ವಿನಾಯಿತಿ ಪಡೆದುಕೊಂಡಿದೆ.

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಹಾಸಿಗೆ, ದಿಂಬು, ಮಂಚ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಒದಗಿಸಲು ಅನುದಾನ ಕೊರತೆ ಇದೆ ಎಂದು ಹೇಳಿತ್ತು. ಅಲ್ಲದೇ ದಲಿತ ಸಮುದಾಯಕ್ಕೆ ಸೇರಿದ ವೈದ್ಯಕೀಯ  ವಿದ್ಯಾರ್ಥಿನಿಯೊಬ್ಬರು 1 ಕೋಟಿ ರು ಮೊತ್ತದ ಪ್ರೋತ್ಸಾಹ ಧನಕ್ಕಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೆಲ್ಲದರ ನಡುವೆಯೇ  ಗ್ಯಾರಂಟಿ, ಬಿಬಿಎಂಪಿ, ಬಿಡಿಎ, ಬಿಎಂಆರ್‍‌ಸಿಎಲ್‌, ಬಿಎಂಆರ್‍‌ಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಯೋಜನೆಗಳ ಪ್ರಚಾರಕ್ಕೂ 7.20  ಕೋಟಿ ರು ವೆಚ್ಚ ಮಾಡಲಿರುವುದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿದೆ.

 

ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಡಿಜಿಟಲ್‌ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌  ಅವರು 2024ರ ಜೂನ್‌ 13 ಮತ್ತು ಸೆ.7ರಂದು ಎರಡು ಟಿಪ್ಪಣಿಗಳನ್ನು ಹೊರಡಿಸಿದ್ದರು.

 

ಈ ಬೆಳವಣಿಗೆ ಮಧ್ಯೆಯೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿ  ಎಂಸಿ ಅಂಡ್‌ ಎ ನಿಂದ 2024ರ ಆಗಸ್ಟ್‌ 12ರಂದೇ  ಪ್ರಸ್ತಾವನೆ ಪಡೆದಿದ್ದರು. ಅದೇ ದಿನದಂದು ವಾರ್ತಾ ಇಲಾಖೆಗೆ ಇದೇ ಪ್ರಸ್ತಾವನೆಯನ್ನು ಸಲ್ಲಿಸಿತ್ತು

 

 

ಇದನ್ನಾಧರಿಸಿ 2024ರ ಆಗಸ್ಟ್ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದರು.

 

 

ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಡಿಜಿಟಲ್‌ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮತ್ತು ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎನಿಂದ ಪ್ರಸ್ತಾವನೆ ಪಡೆಯಲಾಗಿದೆ. ಒಂದು ವರ್ಷದ ಅವಧಿಗೆ ಸೇವೆ ಪಡೆಯಲು 4 (ಜಿ) ವಿನಾಯಿತಿ ನೀಡಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಡಿ ಕೆ ಶಿವಕುಮಾರ್‌ ಅವರು ಕೋರಿದ್ದರು.

 

ಇದಕ್ಕೂ ಮುನ್ನವೇ ಡಿ ಕೆ ಶಿವಕುಮಾರ್‌ ಅವರು ಎರಡು ಟಿಪ್ಪಣಿಗಳನ್ನು ಹೊರಡಿಸಿದ್ದರು.

 

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕುರಿತು ಸುಳ್ಳು ಸುದ್ದಿಗಳು ಹೆಚ್ಚಾಗಿ ಪ್ರಕಟವಾಗುತ್ತಿದೆ. ಈ ಸುಳ್ಳು ಸುದ್ದಿಗಳ ಕುರಿತ ಅಪಪ್ರಚಾರ ತಡೆಗಟ್ಟಿ, ಸಾರ್ವಜನಿಕರಿಗೆ ನಿಜವಾದ ಮಾಹಿತಿ ಒದಗಿಸುವುದು ಸೂಕ್ತ. ಹೀಗಾಗಿ ಬಿಬಿಎಂಪಿಯ ಎಲ್ಲಾ ಯೋಜನೆಗಳ, ಸಾಧನೆಯ ಮಾಹಿತಿಯನ್ನು ಡಿಜಿಟಲ್‌ ಮಾಧ್ಯಮ ಮತ್ತು ಸಮಾಲೋಚನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರಪಡಿಸಲು ಹಾಗೂ ನಿರ್ವಹಣೆ ಮಾಡಲು ಒಂದು ಪ್ರತ್ಯೇಕ ತಂಡದ ಅವಶ್ಯಕತೆ ಇರುತ್ತದೆ. ಆದ್ದರಿಂದ ಬಿಬಿಎಂಪಿಗೆ ಒಂದು ಪ್ರತ್ಯೇಕ ತಂಡ ರಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿ ಕೆ ಶಿವಕುಮಾರ್‌ ಅವರು ಮೊದಲ ಟಿಪ್ಪಣಿಯಲ್ಲಿ ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸೂಚಿಸಿದ್ದರು.

 

 

ಈ ಟಿಪ್ಪಣಿ ಹೊರಡಿಸಿದ್ದ 2 ತಿಂಗಳ ಅಂತರದಲ್ಲಿ ಮತ್ತೊಂದು ಟಿಪ್ಪಣಿಯನ್ನು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಹೊರಡಿಸಿದ್ದರು. ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಡಿಜಿಟಲ್‌ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ, ನಿರ್ವಹಣೆ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣ ತಂಡವೊಂದನ್ನು ರಚಿಸಲು ಸೂಚಿಸಿದ್ದರು.

 

 

ಈ ಟಿಪ್ಪಣಿಯನ್ನಾಧರಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿಯೂ ಸಹ 2024ರ ಸೆ.24ಂದು ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದರು.

 

 

ಈ ಅನಧಿಕೃತ ಟಿಪ್ಪಣಿ ಹೊರಡಿಸಿದ ಕೇವಲ ಆರೇ ಆರೇ ದಿನದೊಳಗೆ ವಾರ್ತಾ ಇಲಾಖೆಯ ಆಯುಕ್ತರಿಗೆ ವಾರ್ತಾ ಇಲಾಖೆಯ ಅಪರ ಕಾರ್ಯದರ್ಶಿ ಪತ್ರ ಬರೆದಿದ್ದರು.

 

ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಡಿಎ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಡಿಜಿಟಲ್‌ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮತ್ತು ನಿರ್ವಹಣೆ ಮಾಡಲು ಕೆಎಸ್‌ಎಂಸಿ ಅಂಡ್‌ ಎ ಯು ವಾರ್ತಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು.

 

 

ಇದನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯದರ್ಶಿ ಬಿ ಬಿ ಕಾವೇರಿ ಅವರು ಸೂಚಿಸಿದ್ದರು.

 

ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ಜಿ ಎಸ್‌ ಟಿ ಸೇರಿದಂತೆ  ತಿಂಗಳಿಗೆ 60.00 ಲಕ್ಷ ರು.ಗಳನ್ನು ನಮೂದಿಸಿತ್ತು. ಇದರಲ್ಲಿ ಪ್ರಚಾರ ಹಾಗೂ ನಿರ್ವಹಣೆಗೆ 48,42,615 ರು., ಎಂಸಿ ಅಂಡ್‌ ಎ ಸೇವಾ ಶುಲ್ಕಕ್ಕೆ 2,42,131  ರು., ಜಿ ಎಸ್‌ ಟಿ ಶುಲ್ಕ 9,15,254 ರು ಸಹ ಒಳಗೊಂಡಿತ್ತು.

 

 

ಆದರೆ ಈ ದರಗಳು ಸಮಂಜಸವಾಗಿದೆ ಎಂಬುದನ್ನು ಆಡಳಿತ ಇಲಾಖೆಯು ಆರ್ಥಿಕ ಇಲಾಖೆಗೆ ದೃಢಪಡಿಸಿರಲಿಲ್ಲ.

 

 

ಮೇಲಾಗಿ ಡಿಜಿಟಲ್‌ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು ಸಹ ತುರ್ತಿನದ್ದಾಗಿರಲಿಲ್ಲ. ಮತ್ತು ಅತ್ಯಂತ ಅವಶ್ಯಕ ಮತ್ತು ತುರ್ತು ಸಂದರ್ಭಗಳಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗದ ಪ್ರಕರಣಗಳಲ್ಲಿ ಮಾತ್ರ ವಿನಾಯಿತಿ ಕೋರಬೇಕು.  ಈ ಸೇವೆ ಪಡೆಯಲು ಕನಿಷ್ಠ 7 ದಿನಗಳ ಅಲ್ಪಾವಧಿಯ ಟೆಂಡರ್‌ ಕರೆಯಬೇಕು ಎಂದು 2024ರ ಮಾರ್ಚ್‌ 15ರಂದೇ ಆರ್ಥಿಕ ಇಲಾಖೆಯು ಸುತ್ತೋಲೆ ಹೊರಡಿಸಿತ್ತು.

 

 

ಆದರೆ ಆರ್ಥಿಕ ಇಲಾಖೆಯು ತನ್ನದೇ ಸುತ್ತೋಲೆಯನ್ನು ಉಲ್ಲಂಘಿಸಿತು.  ಟೆಂಡರ್‌ ಕರೆಯದೇ ನೇರವಾಗಿ 4 (ಜಿ) ವಿನಾಯಿತಿ ಕೋರುವ ಪ್ರಸ್ತಾವನೆಗೆ   ತಕರಾರು ಎತ್ತಲಿಲ್ಲ. ಕನಿಷ್ಠ 7 ದಿನಗಳ ಅಲ್ಪಾವಧಿಯ ಟೆಂಡರ್‌ ಆಹ್ವಾನಿಸಲೂ ಆಡಳಿತ ಇಲಾಖೆಗೆ ಸೂಚಿಸಲಿಲ್ಲ.  ಬದಲಿಗೆ ಈ ಪ್ರಸ್ತಾವನೆಯನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು  ನೇರವಾಗಿ ಸಿಎಂ ಗೆ ಮಂಡಿಸಿದ್ದರು.

 

 

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದರು.

 

 

ಅನುಮೋದನೆ ನೀಡುತ್ತಿದ್ದಂತೆ ಆರ್ಥಿಕ ಇಲಾಖೆಯು 2024ರ ನವೆಂಬರ್‌ 22ರಂದು ಅಧಿಸೂಚನೆಯನ್ನೂ ಹೊರಡಿಸಿತು.

 

ಗ್ಯಾರಂಟಿ, ಬಿಬಿಎಂಪಿ, ಸಂಸ್ಥೆಗಳ ಯೋಜನೆಗಳ ಮಾಹಿತಿ; ಸಾಮಾಜಿಕ ಜಾಲತಾಣ ತಂಡಕ್ಕೆ 7.00 ಕೋಟಿ ವೆಚ್ಚ

 

ಗ್ಯಾರಂಟಿ ಯೋಜನೆ ಮತ್ತು ಸರ್ಕಾರದ ಸಾಧನೆ, ಯೋಜನೆಗಳನ್ನು ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲು ಪಾಲಿಸಿ ಫ್ರಂಟ್‌ ಹೆಸರಿನ ಕಂಪನಿಗೆ  7.20 ಕೋಟಿ ರು. ವೆಚ್ಚದ ಗುತ್ತಿಗೆ ನೀಡಿದೆ.

 

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ; ‘ದ ಪಾಲಿಸಿ ಫ್ರಂಟ್‌’ಗೆ 7.20 ಕೋಟಿ ಕೊಟ್ಟ ಸರ್ಕಾರ

 

ಅಲ್ಲದೇ ಗ್ಯಾರಂಟಿ ಯೋಜನೆಗಳನ್ನು  ಪ್ರಚಾರ ಮಾಡುವ ಸಲುವಾಗಿಯೇ  ಈಗಾಗಲೇ  ರೈಟ್‌ ಪೀಪಲ್‌ ಹೆಸರಿನ ಸಂಸ್ಥೆ ಮೂಲಕ  9.25 ಕೋಟಿ ರು. ವೆಚ್ಚ ಮಾಡಿದೆ.

 

ಗ್ಯಾರಂಟಿ ಪ್ರಚಾರ; ಅನುದಾನ ಕೊರತೆಯಿದ್ದರೂ ರೈಟ್‌ ಪೀಪಲ್‌ನ 9.25 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಒಪ್ಪಿಗೆ

 

ಇದರ ಮಧ್ಯೆಯೇ ಬಿಬಿಎಂಪಿ, ಬಿಡಿಎ, ಬಿಎಂಆರ್‍‌ಸಿಎಲ್‌, ಬಿಡಬ್ಲ್ಯೂಎಸ್‌ಎಸ್‌ಬಿ ಯೋಜನೆಗಳೊಂದಿಗೇ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಪ್ರತ್ಯೇಕ ತಂಡವೊಂದನ್ನು ರಚಿಸಲು ಹೊರಟಿರುವುದು ಸಾರ್ವಜನಿಕರ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

 

ವಿಶೇಷವೆಂದರೇ  9.25 ಕೋಟಿ ರುಗಳನ್ನು ಒದಗಿಸಲು ಸರ್ಕಾರದ ಬಳಿ ಅನುದಾನವೇ ಇರಲಿಲ್ಲ. ಅನುದಾನ ಕೊರತೆ ಇದ್ದರೂ ರೈಟ್‌ ಪೀಪಲ್‌ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರವು ಒಪ್ಪಿಕೊಂಡಿತ್ತು.

 

ಗ್ಯಾರಂಟಿ ಯೋಜನೆ ಕುರಿತಾಗಿ ಮೌಲ್ಯಮಾಪನ, ನಿರಂತರ ನಿಗಾವಣೆ ಸೇರಿದಂತೆ ಮತ್ತಿತರೆ ಸೇವೆಗಳನ್ನು ಪಡೆಯಲು ಸ್ಪರ್ಧಾತ್ಮಕ ಟೆಂಡರ್‌ ಆಹ್ವಾನಿಸಲು ಸಾಕಷ್ಟು  ಅವಕಾಶಗಳಿದ್ದವು. ಅಲ್ಲದೇ ಈ ಕುರಿತು ನುರಿತ ಮತ್ತು ಅನುಭವವುಳ್ಳ ಕಂಪನಿ, ಸಂಸ್ಥೆಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆಯ (ಇಒಐ) ಅರ್ಜಿ ಆಹ್ವಾನಿಸಬಹುದಿತ್ತು. ಅಂದಾಜು ವೆಚ್ಚವನ್ನು ದರ ಸಂಧಾನದ ಮೂಲಕ ನಿಗದಿಪಡಿಸಬಹುದಿತ್ತು. ಆದರೆ ಸರ್ಕಾರವು ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ. ಬದಲಿಗೆ ರೈಟ್‌ ಪೀಪಲ್‌ಗೆ ನೇರವಾಗಿ  4(ಜಿ) ವಿನಾಯಿತಿ ನೀಡಿತ್ತು.

 

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆಗೆ ರಾಜ್ಯ ಸರ್ಕಾರವು  12 ಕೋಟಿ ರು. ವೆಚ್ಚ ಮಾಡಿದೆ.

 

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.

 

ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

SUPPORT THE FILE

Latest News

Related Posts