ಬೆಂಗಳೂರು; ರಾಜ್ಯದ ವಿವಿಧೆಡೆ ಗ್ರಾಮ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಣ್ಣ ಕೆರೆ ಅಭಿವೃದ್ದಿ, ತಡೆಗೋಡೆ, ಕಾಲುವೆ, ಸಣ್ಣ ಪ್ರಮಾಣದ ಬ್ರಿಡ್ಜ್ , ಬ್ಯಾರೇಜು ನಿರ್ಮಾಣಕ್ಕೆ ಅನುದಾನ ಕೋರಿ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಯು ಪುರಸ್ಕರಿಸಿಲ್ಲ. ಸದ್ಯದ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಸ್ತಾವನೆಗಳನ್ನು ಒಪ್ಪಲು ಆರ್ಥಿಕ ಇಲಾಖೆಯು ನಿರಾಕರಿಸಿದೆ.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣ ವಿಧಾನಸಭೆ ಕ್ಷೇತ್ರದಲ್ಲಿನ ಕಾಲುವೆ, ತಡೆಗೋಡೆ, ಬ್ರಿಡ್ಜ್, ಬ್ಯಾರೇಜು ಮತ್ತಿತರ ಸಣ್ಣ ಕಾಮಗಾರಿಗಳಿಗೆ ಅನುದಾನ ಒದಗಿಸಬೇಕು ಎಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಒಪ್ಪಿಲ್ಲ. ಇದರ ನಡುವೆಯೇ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಪ್ರಸ್ತಾವನೆಗಳ ಪಟ್ಟಿಯೂ ಮುನ್ನೆಲೆಗೆ ಬಂದಿದೆ.
ಕೆರೆಗಳ ಆಧುನೀಕರಣ, ಏತ ನೀರಾವರಿ, ಪ್ರವಾಹ ನಿಯಂತ್ರಣ, ಸಣ್ಣ ಕಾಮಗಾರಿಗಳಿಗೂ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು 2023-24 ಮತ್ತು 2024-25ನೇ ಸಾಲಿನಲ್ಲಿಯೂ ಸಚಿವರು, ಶಾಸಕರು ಸಲ್ಲಿಸಿರುವ ಕೋರಿಕೆಗಳನ್ನು ‘ದಿ ಫೈಲ್’ ಆರ್ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರು ಸಲ್ಲಿಸಿದ್ದ ಪ್ರಸ್ತಾವಗಳು ತಿರಸ್ಕೃತಗೊಂಡಿರುವುದು ಆರ್ಟಿಐ ದಾಖಲೆಗಳಿಂದ ಗೊತ್ತಾಗಿದೆ.
ಕಾಂಗ್ರೆಸ್ ಶಾಸಕರ ಪಟ್ಟಿ ಇಲ್ಲಿದೆ
ಟಿ ಬಿ ಜಯಚಂದ್ರ ಅವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆ ಹಾಗೂ ಮೊಸರುಕುಂಟೆ ಮಧ್ಯೆ ಹರಿಯುವ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣಕ್ಕೆ 5.00 ಕೋಟಿ ರು, ಮಾಜಿ ಸಂಸದ ಡಿ ಕೆ ಸುರೇಶ್ ಅವರು ಆನೇಕಲ್ ತಾಲೂಕಿನ ಜಿಗಣಿ ಹೋಬಳಿಯ ಹೆನ್ನಾಗರ ಕೆರೆ ಶುದ್ದೀಕರಿಸುವ ಕಾಮಗಾರಿಗೆ 2.00 ಕೋಟಿ ರು., ಕೆರೆ ಕೋಡಿ ಅಭಿವೃದ್ದಿ ಕಾಮಗಾರಿಗೆ 1.00 ಕೋಟಿ ರು. ಅನುದಾನ ಕೋರಿದ್ದರು.
ಹಳಿಯಾಳದ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರು ಕುಂಬಾರ ಕೆರೆಯ ವೇಸ್ಟ್ವೇರ್ ಸುಧಾರಣೆಗೆ 2.00 ಕೋಟಿ ರು., ಡಾ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ತಾಲೂಕಿನ ಜಡಗನಹಳ್ಳಿ ಗ್ರಾಮದ ಹತ್ತಿರದ ಕ್ಯಾಟಲ್ ರ್ಯಾಂಪ್, ಸೋಪಾನ ಮತ್ತು ಸಂರಕ್ಷಣೆ ಕಾಮಗಾರಿಗೆ 1.25 ಕೋಟಿ ರು., ತುರ್ಚಘಟ್ಟ ಗ್ರಾಮದ ಹಳ್ಳಕ್ಕೆ ಸಂರಕ್ಷಣಾ ಕಾಮಗಾರಿಗೆ 1.00 ಕೋಟಿ ರು. ಕೈದಾಳ ಗ್ರಾಮದ ಹತ್ತಿರ ಇರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 1.00 ಕೋಟಿ ರು., ಅನುದಾನ ಕೋರಿದ್ದರು.
ಚನ್ನಗಿರಿ ಶಾಸಕ ಶಿವಗಂಗಾ ಅವರು ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ಹರಿಯುವ ಹಳ್ಳಕ್ಕೆ ಸೇತುವೆ ಸಹಿತ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮನ್ನಾಪುರ ಮತ್ತು ಮಾಳೆಕೊಪ್ಪ ಗ್ರಾಮಗಳ ಮಧ್ಯೆ ಹರಿಯುವ ಮಂಗನಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು.,ಸೋಂಪುರ, ಮಾಳೆಕೊಪ್ಪ ಮಧ್ಯೆ ಹರಿಯುತ್ತಿರುವ ಮಾನೆದಹಳ್ಳಕ್ಕೆ ಚೆಕ್ ಡ್ಯಾಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 1.80 ಕೋಟಿ ರು., ಸಿದ್ನೆಕೊಪ್ಪ, ಯರೆಹಂಚಿನಾಳ ಗ್ರಾಮಗಳ ಮಧ್ಯೆ ಹರಿಯುತ್ತಿರುವ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 2.50 ಕೋಟಿ ರು., ಬೇಡಿಕೆ ಇಟ್ಟಿದ್ದರು.
ಕೆಟ್ಟ ಆರ್ಥಿಕ ಪರಿಸ್ಥಿತಿ; ಕಾಮಗಾರಿಗಳಿಗೆ 200 ಕೋಟಿಯೂ ಇಲ್ಲ, ಸಿಎಂ ಸೇರಿ ಸಚಿವರ ಪ್ರಸ್ತಾವನೆಗಳೇ ತಿರಸ್ಕೃತ
ಜೇವರ್ಗಿ ಕ್ಷೇತ್ರದ ಶಾಸಕ ಡಾ ಅಜಯ್ ಧರ್ಮಸಿಂಗ್ ಅವರು ಜೇವರ್ಗಿ ತಾಲೂಕಿನ ಕಡಕೋಳ ಗ್ರಾಮದ ಹತ್ತಿರ ಇರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 9.50 ಕೋಟಿ ರು., ಯೋಜನಾ ಆಯೋಗದ ಹಾಲಿ ಉಪಾಧ್ಯಕ್ಷ ಹಾಗೂ ಅಳಂದ ಶಾಸಕ ಬಿ ಆರ್ ಪಾಟೀಲ ಅವರು ಕವಲಗಾ ಗ್ರಾಮದ ಹತ್ತಿರ ಇರುವ ಸ್ಥಳೀಯ ನಾಲಕ್ಕೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಹಾಗೂ ನಾಲಾ ಅಗೆತ ಕಾಮಗಾರಿಗೆ 1.70 ಕೋಟಿ ರು., ದೇವಂತಗಿ ಗ್ರಾಮದ ಹತ್ತಿರದ ಸ್ಥಳೀಯ ನಾಲಾಕ್ಕೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಹಾಗೂ ನಾಲಾ ಅಗೆತ ಕಾಮಗಾರಿಗೆ 1.35 ಕೋಟಿ ರು ಅನುದಾನ ಕೋರಿದ್ದರು.
ಸ್ಪೀಕರ್ ಹಾಗೂ ಉಳ್ಳಾಲದ ಶಾಸಕ ಯು ಟಿ ಖಾದರ್ ಅವರು ಹರೇಕಳ-ಪಾವೂರು ನಲ್ಲಿನ ನೇತ್ರಾವತಿ ನದಿಗೆ ನದಿದಂಡೆ ಸಂರಕ್ಷಣಾ ಕಾಮಗಾರಿ ನಡೆಸಲು 4.00 ಕೋಟಿ ರು., ಮಂಗಳೂರು ತಾಲೂಕಿನ ಕಾಟಿಪಾಳ್ಯ ಗ್ರಾಮದ ಸರ್ವೆ ನಂಬರ್ 49ರ ಕೆರೆ ಕಾಮಗಾರಿಗೆ 50.00 ಲಕ್ಷ ರು., ಸುಳ್ಯದ ಶಾಸಕರು ಸುಳ್ಯದ ಪೆರುವಾಜೆ ಗ್ರಾಮದ ಚೆನ್ನಾವರ ಎಂಬಲ್ಲಿ ಗೌರಿಹೊಳೆಗೆ ಇರುವ ಕಿಂಡಿ ಅಣೆಕಟ್ಟಿನ ಮಳೆಯಿಂದ ಹಾನಿಯಾದ ಭಾಗಕ್ಕೆ ಸಂರಕ್ಷಣಾ ಕಾಮಗಾರಿಗೆ 1.00 ಕೋಟಿ ರು., ಅನುದಾನಕ್ಕೆ ಬೇಡಿಕೆ ಇಟ್ಟಿದ್ದರು.
ಧಾರವಾಡ ತಾಲೂಕಿನ ಕಬ್ಬೆನೂರ, ಕಲ್ಲೆ ಗ್ರಾಮಗಳ ಹತ್ತಿರ ಹರಿಯುವ ಸ್ಥಳೀಯ ಹಳ್ಳಕ್ಕೆ ಬಿಸಿಬಿ ನಿರ್ಮಾಣ ಕಾಮಗಾರಿಗೆ 1.40 ಕೋಟಿ ರು., ಗುಳೇದಕೊಪ್ಪ, ಮದಿಕೊಪ್ಪ ಗ್ರಾಮಗಳ ಮಧ್ಯೆ ಹರಿಯುವ ಸ್ಥಳೀಯ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ 70.00 ಲಕ್ಷ ರು.,ಅನುದಾನಕ್ಕೆ ಶಾಸಕ ವಿನಯ್ ಕುಲಕರ್ಣಿ ಅವರು ಪ್ರಸ್ತಾವ ಸಲ್ಲಿಸಿದ್ದರು. ಅದೇ ರೀತಿ ಕೆ ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ ತಾಲೂಕಿನ ಅಳವಂಡಿ ಹೋಬಳಿಯ ಹಲವಾಗಲಿ, ಅಳವಂಡಿ ಗ್ರಾಮದ ಸರ್ವೆ ನನಂಬರ್ 13,23,21/1 ಮತ್ತು 612ರ ಮಧ್ಯೆ ಹರಿಯುವ ಹಳ್ಳಿಗಳಿಗೆ ಸರಣಿ ಚೆಕ್ ಡ್ಯಾಂ ನಿರ್ಮಾಣ ಮಾಡಲು 2.50 ಕೋಟಿ ರು., ಕಾತರಿಕಿ ಗುಡ್ಲಾನೂರು ಏತ ನೀರಾವರಿ ಯೋಜನೆಯ ಏರು ಅಳವಡಿಸುವ ಕಾಮಗಾರಿಗೆ 1.95 ಕೋಟಿ ರು. ಅನುದಾನಕ್ಕೆ ಬೇಡಿಕೆ ಇರಿಸಿದ್ದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪ ಗ್ರಾಮದ ಕಬರಸ್ತಾನದಲ್ಲಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು., ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದ ಮೇಲ್ಮುರಿ ಸರ್ವೆ ನಂಬರ್ 81 ಮತ್ತು ಸರ್ವೆ ನಂಬರ್ 1ರ ಹತ್ತಿರ ಇರುವ ತಡೆಗೋಡೆ ನಿರ್ಮಾಣ ಕಾಮಗಾರಿಗೆ 3.00 ಕೋಟಿ ರು., ವಿಜಯಾನಂದ ಎಸ್ ಕಾಶಪ್ಪನವರ ಅವರು ಹುನಗುಂದ ಕ್ಷೇತ್ರದ ಬಿಸನಾಳ ಕೆರೆಯ ಅಭಿವೃದ್ಧಿ ಕಾಮಗಾರಿಗೆ 1.00 ಕೋಟಿ ರು., ಇಲಕಲ್ ತಾಲೂಕಿನ ಇಲಕಲ್ ನಗರದ ಹಳ್ಳಕ್ಕೆ ಇಂಗು ಕೆರೆ ನಿರ್ಮಾಣ ಮುಂದುವರೆದ ಕಾಮಗಾರಿಗೆ 3.00 ಕೋಟಿ ರು., ಅನುದಾನ ಕೋರಿದ್ದರು.
ಇಂಡಿ ಶಾಸಕ ಯಶವಂತರಾಯಗೌಡ ವಿ ಪಾಟೀಲ ಅವರು ಇಂಡಿ ತಾಲೂಕಿನ ಹಿರೇ ಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆಯವರೆಗೆ ಹಳ್ಳ ಅಭಿವೃದ್ದಿ ಕಾಮಗಾರಿಗೆ 1.00 ಕೋಟಿ ರು., ಲಾಳಸಂಗಿ ಗ್ರಾಮದ ಸರ್ವೇ ನಂಬರ್ 43 ಮತ್ತು 41ರ ಹತ್ತಿರದ ಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು., ಬೈಲಹೊಂಗಲ ಕೊರವಿಕೊಪ್ಪ ಗ್ರಾಮದ ಏರಿಯಾದಲ್ಲಿರುವ ಹೊಸೂರು ಸರವದ ಹತ್ತಿರ ಬಿಸಿಬಿ ನಿರ್ಮಾಣಕ್ಕೆ 1.00 ಕೋಟಿ ರು.,ಗಳ ಅನುದಾನಕ್ಕೆ ಬೈಲಹೊಂಗಲ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಜಕ್ಕರಸನಕೊಪ್ಪ ಗ್ರಾಮದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ 50.00 ಲಕ್ಷ ರು., ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ಬಂಡಿಗೆರೆ ಗ್ರಾಮದಿಂದ ಬ್ಯಾಡಮೂಡ್ಲುಗೆ ಹೋಗುವ ರಸ್ತೆ ಪಕ್ಕದ ಬೀಳು ಕಾಲುವೆಗೆ ಬಾಕ್ಸ್ ಮಾದರಿ ಕಾಲುವೆ ನಿರ್ಮಾಣ ಕಾಮಗಾರಿಗೆ 1.00 ಕೋಟಿ ರು., ಶಾಸಕ ಹಾಗೂ ಕ್ರೆಡಿಲ್ ಅಧ್ಯಕ್ಷ ಬಿ ಕೆ ಸಂಗಮೇಶ್ವರ ಅವರು ತಡಸ ಗ್ರಾಮದ ಹೊಳೆನೇರಲೆ ಕೆರೆ ಕೋಡಿ ಹರಿಯುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 30.00 ಲಕ್ಷ ರು ಕೋರಿದ್ದರು.
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅವರು ಕೆಂಗೇರಿ ಹೋಬಳಿಯ ಕೆ ಗೊಲ್ಲಹಳ್ಳಿ ಗ್ರಾಮದ ಕೆರೆಯ ಅಭಿವೃದ್ಧಿ ಕಾಮಗಾರಿಗೆ 2.00 ಕೋಟಿ ರು., ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಉಪ್ಪಿನಂಗಡಿ ಮಲಿಕುದ್ದೀನರ್ ಜುಮ್ಮಾ ಮಸೀದಿ ಬಳಿ ನೇತ್ರಾವತಿ ನದಿಗೆ ತಡೆಗೋಡೆ ಸಂರಕ್ಷಣಾ ನಿರ್ಮಾಣ ಕಾಮಗಾರಿಗೆ 3.00 ಕೋಟಿ ರು., ಕೆಮ್ಮಾರ್ ಮುಹಿಯುದ್ದೀನ್ ಜುಮ್ಮಾ ಮಸೀದಿ ಪಕ್ದಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 20.00 ಲಕ್ಷ ರು., ಕೊಳ್ತಿಗೆ ಗ್ರಾಮದ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 15.00 ಲಕ್ಷ, ರು. ಅನುದಾನಕ್ಕೆ ಬೇಡಿಕೆ ಇರಿಸಿದ್ದರು.
ಮಸ್ಕಿ ಕ್ಷೇತ್ರದ ಬಸನಗೌಡ ತುರುವಿಹಾಳ ಅವರು ಚಿಲ್ಕರಾಗಿ ಗ್ರಾಮದ ಪ್ರಮುಖ ಸರ್ಕಾರಿ ನಾಲೆಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ 1.60 ಕೋಟಿ ರು., ತೂಪದೂರು ಗ್ರಾಮದಲ್ಲಿನ ಮದಲೂಟಿ ಅಮರೇಶ್ವರ ಸರ್ಕಾರಿ ನಾಲಾಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ 1.42 ಕೋಟಿ ರು., ನೆಲ್ಕೊಳ್ಳ ಗ್ರಾಮದಲ್ಲಿನ ಸರ್ಕಾರಿ ನಾಲಾಗೆ ಚೆಕ್ ಡ್ಯಾಂ ನಿರ್ಮಾಣಕ್ಕೆ 1.95 ಕೋಟಿ ರು., ಮಾರಲದಿನ್ನಿ ಗ್ರಾಮದ ತಾಂಡಾದಿಂದ ಮಟ್ಟೂರು ತಾಂಡಾದ ಹಳ್ಳಕ್ಕೆ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 2.50 ಕೋಟಿ ರು., ನೆಲ್ಕೊಳ್ಳ ಗ್ರಾಮದಲ್ಲಿನ ಸರ್ಕಾರಿ ನಾಲಾಗೆ 1.92 ಕೋಟಿ ರು., ಕುರುಗುಂದ ಗ್ರಾಮದ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 1.70 ಕೋಟಿ ರು ಕೋರಿದ್ದರು.
ಕಾಗವಾಡ ಶಾಸಕ ಭರಮಗೌಡ ಕಾಗೆ ಅವರು ಅಥಣಿ ತಾಲೂಕಿನ ಅನಂತಪುರದ ಜಿನುಗು ಕೆರೆ ಅಭಿವೃದ್ದಿ ಕಾಮಗಾರಿಗೆ 1.50 ಕೋಟಿ ರು., ಚಮಕೇರಿ ಕೆರೆ ಅಭಿವೃದ್ಧಿ ಕಾಮಗಾರಿಗೆ 1.00 ಕೋಟಿ ರು., ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಅವರು ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಅಭಿವೃದ್ದಿಪಡಿಸುವ ಕಾಮಗಾರಿಗೆ 5.00 ಕೋಟಿ ರು., ಮಹೇಂದ್ರ ಕ ತಮ್ಮಣ್ಣವರ ಅವರು ಬೆಳಗಾವಿಯ ರಾಯಭಾಗ ಕುಡಚಿಯ ನಿಲಜಿ ಗ್ರಾಮದ ಹತ್ತಿರ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 1.20 ಕೋಟಿ ರು., ಬಾಬಾಸಾಹೇಬ ಡಿ ಪಾಟೀಲ ಅವರು ರಣಗಟ್ಟಿಕೆರೆ ಅಭಿವೃದ್ಧಿ ಕಾಮಗಾರಿಗೆ 3.00 ಕೋಟಿ ರು., ಅನುದಾನಕ್ಕೆ ಬೇಡಿಕೆ ಇರಿಸಿದ್ದರು.
ಯು ಬಿ ಬಣಕಾರ ಅವರು ಹಿರೇಕೆರೂರ ತಾಲೂಕಿನ ಬೇಟಕರೂರು ಗ್ರಾಮದ ದೊಡ್ಡಕೆರೆ ಮತ್ತು ಚಿಕ್ಕಕೆರೆಗಳ ಸುಧಾರಣೆಗೆ 1.00 ಕೋಟಿ ರು., ಆಲದಕಟ್ಟಿ ಗ್ರಾಮದ ಸರ್ವೆ ನಂಬರ್ 12ರ ಹೊಸಕಟ್ಟೆ ಕೆರೆ ಸುಧಾರಣೆಗೆ 1.00 ಕೋಟಿ ರು., ಜಿ ಎಸ್ ಪಾಟೀಲ ಅವರು ಸವಡಿ-ಹೊನ್ನಾಪುರ ಮಾರ್ಗದಲ್ಲಿನ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 2.50 ಕೋಟಿ ರು., ಚೆನ್ನಾರೆಡ್ಡಿ ಪಾಟೀಲ ಅವರು ಗೊಂದೆನೂರು ಗ್ರಾಮದ ಹತ್ತಿರ ಇರುವ ಸ್ಥಳೀಯ ಹಳ್ಳಕ್ಕೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಿದ್ದರು.
ಸುರಪುರ ತಾಲೂಕಿನ ವಣಕಿಹಾಳ ಗ್ರಾಮದ ಹತ್ತಿರ ಹಳ್ಳಕ್ಕೆ ಅಡ್ಡಲಾಗಿ ಬಿಸಿಬಿ ನಿರ್ಮಾಣ ಕಾಮಗಾರಿಗೆ 4.50 ಕೋಟಿ ರು., ರಾಜಾ ವೆಂಕಟಪ್ಪ ನಾಯಕ ಅವರು ಅನುದಾನ ಕೋರಿದ್ದರು. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೊಸನಗರ ತಾಲೂಕಿನ ಹಾರೋಹಿತ್ಲು ಊರಮುಂದಿನ ಕೆರೆ ಕಾಮಗಾರಿಗೆ 1.00 ಕೋಟಿ ರು., ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಮತಿಘಟ್ಟ ಸರ್ವೆ ನಂಬರ್ 121, 122ರ ಜಮೀನಿನ ಹತ್ತಿರ ಹರಿಯುವ ಶಿಂಷಾ ಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 1.00 ಕೋಟಿ ರು., ಕಿಬ್ಬನಹಳ್ಳಿಯ ಹೋಬಳಿಯ ಬಿಳಿಗೆರೆಯ ಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಂ ಕಂ ಕಾಸ್ವೇ ನಿರ್ಮಾಣ ಕಾಮಗಾರಿಗೆ 80.00 ಲಕ್ಷ ರು.,ಗಳ ಅನುದಾನಕ್ಕೆ ಶಾಸಕ ಕೆ ಷಡಕ್ಷರಿ ಅವರು ಬೇಡಿಕೆ ಇರಿಸಿದ್ದರು.
ಬಂಗಾರಪೇಟೆಯ ಕಾಮಸಮುದ್ರ ಹೋಬಳಿ ದೋಣಿಮಡಗು ಗ್ರಾಮದ ಹತ್ತಿರ ಇರುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು., ಕೆಜಿಎಫ್ ತಾಲೂಕಿನ ವೆಂಗಸಂದ್ರ ಗ್ರಾ.ಪಂ.ನ ಕೊಡಿಗೇಪಲ್ಲಿ ಗ್ರಾಮದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು 50.00 ಲಕ್ಷ ರು., ಅನುದಾನಕ್ಕೆ ಎಸ್ ಎನ್ ನಾರಾಯಣಸ್ವಾಮಿ ಅವರು ಪ್ರಸ್ತಾವ ಸಲ್ಲಿಸಿದ್ದರು.
ಅದೇ ರೀತಿ ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು ನಾಗತಿಹಳ್ಳಿ ತಿಮ್ಮಪ್ಪನಾಯ್ಕನ ಕೆರೆ ರಾಜಕಾಲುವೆಯ ಎರಡೂ ಬದಿಗೆ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿಗೆ 2.50 ಕೋಟಿ ರು., ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಚಿಕ್ಕಹೆಡಗಿಹಳ್ಳಿ ಶೇಷನಹಳ್ಳಿ ಕೆರೆ ಫೀಡರ್ ಹಳ್ಳಕ್ಕೆ ಅಡ್ಡಲಾಗಿ ಆಂಜನೇಯಸ್ವಾಮಿ ದೇವಸ್ಥಾನ, ರೈತರ ಜಮೀನುಗಳಿಗೆ ತೆರಳುವ ರಸ್ತೆಗೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು. ಅನುದಾನಕ್ಕೆ ಎಸ್ ಆರ್ ಶ್ರೀನಿವಾಸ್ ಅವರು ಪ್ರಸ್ತಾವ ಸಲ್ಲಿಸಿದ್ದರು.
ಕುಣಿಗಲ್ ಶಾಸಕ ಡಾ ಹೆಚ್ ಡಿ ರಂಗನಾಥ್ ಅವರು ಯಡಿಯೂರು ಹೋಬಳಿಯ ಚಿಕ್ಕಮದುರೆ ಕೆರೆ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು., ಅಮೃತೂರು ಹೋಬಳಿಯ ತೊರೆಹಳ್ಳಿ ಮತ್ತು ಕಾಡಶೆಟ್ಟಿಹಳ್ಳಿ ಮಧ್ಯೆ ಹರಿಯುವ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು ಒದಗಿಸಲು ಕೋರಿದ್ದರು. ಮಳವಳ್ಳಿ ತಾಲೂಕಿನ ರಾವಣಿ ಏತ ನೀರಾವರಿ ಯೋಜನೆಯ ಪುನರುಜ್ಜೀವನ ಕಾಮಗಾರಿಗೆ 4.95 ಕೋಟಿ ರು., ವಿರಾಜಪೇಟೆಯ ಕಣ್ಣಾಂಗಲ ಗ್ರಾಮದ ದೇವರಮೊಟ್ಟೆ ಪೈಸಾರಿ ಸಮೀಪದ ಕೊಮ್ಮೆಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 1.00 ಕೋಟಿ ರು ನೀಡಬೇಕು ಎಂದು ಎ ಎಸ್ ಪೊನ್ನಣ್ಣ ಅವರು ಕೋರಿದ್ದರು.
ಹಾನಗಲ್ ತಾಲೂಕಿನ ಆಡೂರ ಬ್ಯಾರೇಜಜ್ ಗೇಟ್ ಬದಲಾವಣೆ ಕಾಮಗಾರಿಗೆ 1.00 ಕೋಟಿ ರು ನೀಡಬೇಕು ಎಂದು ಶಾಸಕ ಶ್ರೀನಿವಾಸ ವಿ ಮಾನೆ ಅವರು ಕೋರಿದ್ದರು. ಮಡಿಕೇರಿ ತಾಲೂಕಿನ ಕೇತರಿಕಟ್ಟೆ ಹಾಗೂ ಪೆರೂರು ಪಿಕಪ್ ಅಭಿವೃದ್ದಿ ಕಾಮಗಾರಿಗೆ 1.00 ಕೋಟಿ ರು ಬೇಕು ಡಾ ಮಂತರ್ ಗೌಡ ಅವರು ಬೇಡಿಕೆ ಇರಿಸಿದ್ದರು.
ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಗೆ 4.50 ಕೋಟಿ ರು ಗೆ ರಮೇಶ್ ಬಂಡಿಸಿದ್ದೇಗೌಡ ಅವರು ಕೋರಿದ್ದರು. ಹುಕ್ಕೇರಿಯ ತಾಲೂಕಿನ ಹುಲ್ಲೊಳಿ ಗ್ರಾಮದ ಹತ್ತಿರ ಬ್ಯಾರೇಜ್ ನಿರ್ಮಾಣಕ್ಕೆ 2.00 ಕೋಟಿ ರು., ಶೃಂಗೇರಿಯ ಮೆಣಸೆ ಪಂಚಾಯ್ತಿಯ ಓಡ್ಡಿಪಾಲು ಕಿಕ್ರೆ ಗ್ರಾಮದ ಓಡ್ಡಿಪಾಲು ಪಿಕಪ್ ಮತ್ತು ಚಾನಲ್ ನಿರ್ಮಾಣ ಕಾಮಗಾರಿಗೆ 50.00 ಲಕ್ಷ ರು., ಹೆಚ್ ಡಿ ಕೋಟೆ ತಾಲೂಕಿನ ವಡಕನಮಾಳ ಏತ ನೀರಾವರಿ ಯೋಜನೆಗೆ 1.00 ಕೋಟಿ ರು. ಗಳನ್ನು ಅನಿಲ್ ಚಿಕ್ಕಮಾದು ಅವರು ಕೋರಿದ್ದರು.
ದಾವಣಗೆರೆ ತಾಲೂಕಿನ ಮಂಡ್ಲೂರು ಗ್ರಾಮದ ಲಕ್ಕಮುತ್ತೇನಹಳ್ಳಿ ರಸ್ತೆ ಮಧ್ಯೆ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣಕ್ಕೆ 1.50 ಕೋಟಿ ರು ನೀಡಬೇಕು ಎಂದು ಮಾಯಕೊಂಡ ಶಾಸಕ ಬಸವಂತಪ್ಪ ಅವರು ಬೇಡಿಕೆ ಇರಿಸಿದ್ದರು. ಕೂಡ್ಲಿಗಿ ಶಾಸಕ ಡಾ ಎನ್ ಟಿ ಶ್ರೀನಿವಾಸ್ ಅವರು ಅಮರದೇವರಗುಡ್ಡ ಹತ್ತಿರ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ 3.00 ಕೋಟಿ ರು., ಚಳ್ಳಕೆರೆ ನಗರದಲ್ಲಿನ ನಗರಂಗೆರೆ ಕೆರೆಗೆ ಹೋಗುವ ಹಳ್ಳದ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ 2.00 ಕೋಟಿ ರು., ಒದಗಿಸಲು ಟಿ ರಘುಮೂರ್ತಿ ಅವರು ಕೋರಿದ್ದರು.
ಪಾವಗಡ ತಾಲೂಕಿನ ತಿರುಮಣಿ ಹತ್ತಿರ ಇರುವ ಕೆಂಪು ನೀರು ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 1.20 ಕೋಟಿ ರು., ನೇರಳೆಗುಂಟೆ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು., ಒದಗಿಸಲು ಶಾಸಕ ಹೆಚ್ ವಿ ವೆಂಕಟೇಶ್ ಅವರು ಪ್ರಸ್ತಾವ ಸಲ್ಲಿಸಿದ್ದರು. ತರೀಕೆರೆ ಶಾಸಕ ಜಿ ಹೆಚ್ ಶ್ರೀನಿವಾಸ್ ಅವರು ಬೆಟ್ಟದಹಳ್ಳಿ ಗ್ರಾಮದ ಹತ್ತಿರದ ಬ್ರಹ್ಮನಹಳ್ಳಿ, ಕೋರನಹಳ್ಳಿ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಮಾಡಲು 1.50 ಕೋಟಿ, ದಳವಾಯಿ ಕೆರೆಯ ತೂಬು ಚಾನಲ್ಗೆ ಕಾಂಕ್ರಿಟ್ ಚಾನಲ್ ತಡೆಗೋಡೆ ನಿರ್ಮಾಣ ಮಾಡಲು 50.00 ಲಕ್ಷ ರು., ಕೋರಿದ್ದರು.
ಗುಂಡ್ಲುಪೇಟೆ ಶಾಸಕ ಹೆಚ್ ಎಂ ಗಣೇಶ್ ಪ್ರಸಾದ್ ಅವರು ತಗ್ಗಲೂರು ಗ್ರಾಮದ ಚಾಮರಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ 80.00 ಲಕ್ಷ ರು., ಕೋಡಳ್ಳಿಯ ವಸ್ತಿಹಳ್ಳದಲ್ಲಿ ಚೆಕ್ ಡ್ಯಾಂ ಗೆ 50.00 ಲಕ್ಷ ರು., ರಾಘವಾಪುರ ಕೆರೆ, ಕಮರಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ 75 ಲಕ್ಷ ರು, ಬೀರಂಬಾಡಿ ಕೆಂಪುಸಾಗರ ಕೆರೆ, ಹೊನ್ನೇಗೌಡನ ವಡಗಟ್ಟೆ ಕೆರ ಮತ್ತು ಕುತನುರು ಕೆರೆ ಅಭಿವೃದ್ಧಿಗೆ 1.00 ಕೋಟಿ ರು ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ರಾಯಚೂರು ತಾಲೂಕಿನ ಮಿರ್ಜಾಪೂರ ಹತ್ತಿರ ಹರಿಯುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 3.00 ಕೋಟಿ ರು. , ಜಾಗೀರ ವೆಂಕಟಾಪೂರಕ್ಕೆ ಹೋಗುವ ರಸ್ತೆಯಲ್ಲಿನ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 3.00 ಕೋಟಿ ರು ಒದಗಿಸಬೇಕು ಎಂದು ಬಸನಗೌಡ ದದ್ದಲ ಅವರು ಪ್ರಸ್ತಾವ ಸಲ್ಲಿಸಿದ್ದರು. ಕೊಳ್ಳೆಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ಯಳಂದೂರು ತಾಲೂಕಿನ ಹೊಸಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಗೆ 75.00 ಲಕ್ಷ ರು., ಗುರುಮಿಠಕಲ್ ತಾಲೂಕಿನ ದೇವನಹಳ್ಳಿ ಗ್ರಾಮದಲ್ಲಿ ಹರಿಯುವ ನಾಲಾಗೆ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 2.50 ಕೋಟಿ ರು ಒದಗಿಸಬೇಕು ಎಂದು ಶರಣಗೌಡ ಕಂದಕೂರು ಅವರು ಕೋರಿದ್ದರು.
ನಂಜನಗೂಡು ತಾಲೂಕಿನ ಹುರಾ ಕೆರೆ ಅಭಿವೃದ್ಧಿಪಡಿಸುವುದು, ಹೂಳು ತೆಗೆಯುವ ಕಾಮಗಾರಿಗೆ 1.00 ಕೋಟಿ ರು ಬೇಕು ಎಂದು ದರ್ಶನ್ ಧೃವನಾರಾಯಣ್ ಅವರು ಕೋರಿದ್ದರು. ಲಕ್ಯಾ ಹೋಬಳಿಯ ಲಕ್ಕಮ್ಮಹಳ್ಳಿಯ ಕುನ್ನಾಳು ಗ್ರಾಮದ ಬಾಳೆಹಳ್ಳಿ ಪಿಕಪ್ ಚಾನಲ್ ಅಭಿವೃದ್ದಿ ಕಾಮಗಾರಿಗೆ 1.50 ಕೋಟಿ ರು ಬೇಕು ಎಂದು ಶಾಸಕ ಎಚ್ ಡಿ ತಮ್ಮಯ್ಯ ಅವರು ಪ್ರಸ್ತಾವ ಸಲ್ಲಿಸಿದ್ದರು. ಹಾಗೆಯೇ ಶಿರಸಿ ತಾಲೂಕಿನ ಹನುಮಂತಿ ಕೆರೆಯ ಅಭಿವೃದ್ದಿ ಕಾಮಗಾರಿಗೆ 25.00 ಲಕ್ಷ ರು. ಮಂಜೂರು ಮಾಡಬೇಕು ಎಂದು ಶಾಸಕ ಭೀಮಣ್ಣ ಟಿ ನಾಯ್ಕ ಅವರು ಬೇಡಿಕೆ ಇರಿಸಿದ್ದರು.
ಗಣೇಶ್ ಹುಕ್ಕೇರಿ ಅವರು ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಏತ ನೀರಾವರಿ ಯೋಜನೆಗೆ 4.40 ಕೋಟಿ ರು., ಪ್ರದೀಪ್ ಈಶ್ವರ್ ಅಯ್ಯರ್ ಅವರು ವಿವಿಧ ಕಾಮಗಾರಿಗಳಿಗೆ 4.00 ಕೋಟಿ ರು ಮಂಜೂರಾತಿಗೆ ಕೋರಿದ್ದರು. ಬದಾಮಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಅವರು ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜುಗಳಿಗೆ ಗೇಟು ಅಳವಡಿಸುವ ಕಾಮಗಾರಿಗೆ 1.70 ಕೋಟಿ ರು., ಜಿ ಡಿ ಹರೀಶ್ ಗೌಡ ಅವರು ಹುಣಸೂರು ತಾಲೂಕಿನ ಶಿರಿಯೂರು ನಾಲೆ ಏರಿ ಅಭಿವೃದ್ಧಿಗೆ 1.00 ಕೋಟಿ ರು., ಹುಸೇನ್ಪುರ ನಾಲಾ ಏರಿ ಅಭಿವೃದ್ಧಿಗೆ 1.00 ಕೋಟಿ ರು., ರಾಯನಹಳ್ಳಿ ಕೆರೆ ಫೀಡರ್ ನಾಲೆ, ಡ್ರಾಫ್ಸ್ ಚಾನಲ್ ಏರಿ ಅಭಿವೃದ್ಧಿಪಡಿಸಲು 1.00 ಕೋಟಿ ರು., ಕಡೇಮನುಗನಹಳ್ಳಿ ಕೆರೆ ಫೀಡರ್ ನಾಲೆ ಮತ್ತು ಡ್ರಾಫ್ಸ್ ಚಾನಲ್ ಏರಿ ಅಭಿವೃದ್ಧಿಪಡಿಸುವ ಕಾಮಗಾರಿಗೆ 1.00 ಕೋಟಿ ರು, ಕೋರಿದ್ದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊನ್ನೇಬೈಲು ಗ್ರಾಮದ ಸರ್ವೆ ನಂಬರ್ 32ರ ಹತ್ತಿರದ ಹಳ್ಳಕ್ಕೆ ಸೇತುವೆ ಸಹಿತ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 1.50 ಕೋಟಿ ರು. ಒದಗಿಸಲು ವಿಧಾನಪರಿಷತ್ ಸದಸ್ಯ ಯು ಬಿ ವೆಂಕಟೇಶ್ ಕೋರಿದ್ದರೇ, ದಿನೇಶ್ಗೂಳಿ ಗೌಡ ಅವರು ಮದ್ದೂರು ತಾಲೂಕು ಕದಲೂರು ಗ್ರಾಮದ ಕೆರೆ ರಸ್ತೆ ಪಕ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ 3.00 ಕೋಟಿ ರು., ಹೊನ್ನಾಳಿ ಶಾಸಕ ಡಿ ಜಿ ಶಾಂತನಗೌಡ ಅವರು ಹಿರೇಗೋಣಿಗೆರೆ ಗ್ರಾಮದ ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ 6.00 ಕೋಟಿ ರು ಕೋರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಹೆಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಕೆ ಹೆಚ್ ಮುನಿಯಪ್ಪ, ಎಂ ಬಿ ಪಾಟೀಲ, ಎನ್ ಎಸ್ ಬೋಸರಾಜು, ಡಾ ಶರಣ ಪ್ರಕಾಶ್ ಪಾಟೀಲ, ಪ್ರಿಯಾಂಕ್ ಖರ್ಗೆ, ಎಸ್ ಎಸ್ ಮಲ್ಲಿಕಾರ್ಜುನ್, ಕೆ ಎನ್ ರಾಜಣ್ಣ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಕೋರಿದ್ದ 169 ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನವೇ ಇಲ್ಲದಂತಾಗಿತ್ತು.
ಕೆರೆಗಳ ಆಧುನೀಕರಣ, ಏತ ನೀರಾವರಿ, ಪ್ರವಾಹ ನಿಯಂತ್ರಣ, ಸಣ್ಣ ಕಾಮಗಾರಿಗಳಿಗೂ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು 2023-24 ಮತ್ತು 2024-25ನೇ ಸಾಲಿನಲ್ಲಿಯೂ ಸಚಿವರು, ಶಾಸಕರು ಸಲ್ಲಿಸಿರುವ ಕೋರಿಕೆಗಳು, ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿರುವುದು ಆರ್ ಟಿ ಐ ದಾಖಲೆಗಳು ಬಯಲು ಮಾಡಿದ್ದವು.
2,500 ಕೋಟಿ ರು., ಮೊತ್ತದ ಬಿಲ್ ಬಾಕಿ, ಚಾಲ್ತಿ ಕಾಮಗಾರಿಗಳಿಗೂ ಹಣವಿಲ್ಲ; ಆರ್ಥಿಕ ಪರಿಸ್ಥಿತಿ ಕೆಟ್ಟಿತೇ?
ಕೆರೆ ಸಂಜೀವಿನಿ, ಕೆರೆಗಳ ಸಮಗ್ರ ಅಭಿವೃದ್ಧಿ, ಏತ ನೀರಾವರಿ ಸೇರಿದಂತೆ ಇನ್ನಿತರೆ ಚಾಲ್ತಿಯಲ್ಲಿರುವ ಕಾಮಗಾರಿ ನಿರ್ವಹಿಸಿರುವ ಸಣ್ಣ ನೀರಾವರಿ ಇಲಾಖೆಯ ಗುತ್ತಿಗೆದಾರರಿಗೆ 2,500 ಕೋಟಿ ರು. ಮೊತ್ತದ ಬಿಲ್ಗಳನ್ನು ಪಾವತಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಹರಸಾಹಸ ಪಡುತ್ತಿದೆ. ದುರಸ್ತಿ ಕಾಮಗಾರಿಗಳಿಗೆ ಹಣಕಾಸನ್ನು ಹೊಂದಿಸಲು ಜಿಲ್ಲಾ ವಿಪತ್ತು ನಿಧಿಗೆ ಕೈ ಹಾಕಿತ್ತು.