ನಗದು ಬಾಕಿಯಲ್ಲಿ 5,344.26 ಕೋಟಿ ರು. ನಿವ್ವಳ ವ್ಯತ್ಯಾಸ; ಸರ್ಕಾರಕ್ಕೆ ಅಕೌಂಟೆಂಟ್‌ ಜನರಲ್‌ ಪತ್ರ

ಬೆಂಗಳೂರು; ಪ್ರಸಕ್ತ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆ  ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶ ಮತ್ತು ರಾಜ್ಯ ಸರ್ಕಾರದೊಂದಿಗಿನ ಹಣಕಾಸಿನ  ಅಂಕಿ ಅಂಶಗಳ ಮಧ್ಯೆ ವ್ಯತ್ಯಾಸವಿದೆ. ಆರ್‌ಬಿಐ ಮತ್ತು ಮತ್ತು ರಾಜ್ಯ ಸರ್ಕಾರದ ಅಂಕಿ ಅಂಶಗಳ ಮಧ್ಯೆ  ನಗದು ಬಾಕಿಯ ನಿವ್ವಳ ವ್ಯತ್ಯಾಸವು 5,344.26 ಕೋಟಿ ರು. ವ್ಯತ್ಯಾಸವಿರುವುದನ್ನು ಅಕೌಂಟೆಂಟ್‌ ಜನರಲ್‌ ಅವರು ಪತ್ತೆ ಹಚ್ಚಿದ್ದಾರೆ.

 

ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರಿಗೆ ಅಕೌಂಟೆಂಟ್‌ ಜನರಲ್‌ ಸ್ಮಿತಾ ಗೋಪಾಲ್‌ ಅವರು ಸ್ವೀಕೃತಿ (receipt) ಮತ್ತು ವೆಚ್ಚ (expenditure) ಗಳ ಸಮನ್ವಯಕ್ಕೆ ಸಂಬಂಧಿಸಿದಂತೆ 2024ರ ಜೂನ್‌ 14ರಂದು ಬರೆದಿರುವ ಪತ್ರದಲ್ಲಿ ನಿವ್ವಳ ವ್ಯತ್ಯಾಸದ ಕುರಿತಾದ ಅಂಕಿಅಂಶಗಳಿವೆ.

 

ಅಕೌಂಟೆಂಟ್‌ ಆಫ್‌ ಜನರಲ್‌ ಅವರು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಸಕ್ತ ಆರ್ಥಿಕ ಸಾಲಿಗೆ ಸಂಬಂಧಿಸಿದಂತೆಯೇ ಕಳೆದ ಎರಡು ತಿಂಗಳ ಅವಧಿಯಲ್ಲಿ ಅಂದರೇ ಮೇ 2024ರ ಅಂತ್ಯಕ್ಕೆ ನಗದು ಬಾಕಿಯಲ್ಲಿ 683.97 ಕೋಟಿ ರು. ವ್ಯತ್ಯಾಸವಿದೆ. ಒಟ್ಟಾರೆಯಾಗಿ ನಗದು ಬಾಕಿಯಲ್ಲಿನ ನಿವ್ವಳ ವ್ಯತ್ಯಾಸವನ್ನು 5,344.26 ಕೋಟಿ ರು ಗೆ ಹೆಚ್ಚಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಸ್ವೀಕೃತಿ ಮತ್ತು ವೆಚ್ಚದ ಸಮನ್ವಯವು ಕ್ರಮವಾಗಿ 24.54 ಪ್ರತಿಶತ ಮತ್ತು 73 ಪ್ರತಿಶತದಷ್ಟಿದೆ. 857 ವಿನಿಯೋಗ ಆದೇಶ ಮತ್ತು 79 ಆದ್ಯರ್ಪಣೆ ಮಾಡಿರುವ ಆದೇಶಗಳು ಸ್ವೀಕೃತವಾಗಿವೆ. ಸಾರ್ವಜನಿಕ ಖಾತೆಗಳಲ್ಲಿನ ಬಡ್ಡಿಯ ನಿಧಿಗಳ ಮೇಲಿನ ಬಡ್ಡಿ, ಮೀಸಲು ನಿಧಿಗೆ ಕೊಡುಗೆ ಇತ್ಯಾದಿಗಳಂತಹ ಆವರ್ತಕ ಹೊಂದಾಣಿಕೆಗಳಿಂದ ಉಳಿದ ಎಲ್ಲಾ ಆದೇಶಗಳನ್ನು ಒದಗಿಸಬೇಕು ಎಂದು ಪತ್ರದಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

ಹಣಕಾಸು ಖಾತೆಗಳಲ್ಲಿ (ಅನುಬಂಧ-v)ಕಂಡುಬರುವ ಕೇಂದ್ರೀಯ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಪಾಲು ಮತ್ತು ರಾಜ್ಯದ ಪಾಲಿನ ವಿವರಗಳ ಕುರಿತಾದ ಮಾಹಿತಿಯನ್ನು ಖಜಾನೆಗಳ ಆಯುಕ್ತರಿಂದಲೂ ಕೇಳಿರುವುದು ಗೊತ್ತಾಗಿದೆ.

 

ರಾಜ್ಯ ಸರ್ಕಾರವು ನೀಡಿದ ಗ್ಯಾರಂಟಿಗಳ ವಿವರಗಳು, ಸಂಗ್ರಹಿಸಲಾದ ಗ್ಯಾರಂಟಿ ಶುಲ್ಕಗಳ ಕುರಿತೂ ಪ್ರಸ್ತಾಪಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವು ಭಾರತ ಸರ್ಕಾರಕ್ಕೆ ಒದಗಿಸಿರುವ ಮಾಹಿತಿಯನ್ನು ಒದಗಿಸಬೇಕು ಎಂದು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.

 

ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವ ಎರಡು ತಿಂಗಳ ಮೊದಲು ರಾಜ್ಯದ ಬೊಕ್ಕಸದಲ್ಲಿ  ಕೇವಲ 24,714.77 ಕೋಟಿ ರು ನಗದು ಬಾಕಿಯಿತ್ತು. 2023ರ ಮಾರ್ಚ್‌ 31ರ ಅಂತ್ಯದವರೆಗಿನ ರಾಜ್ಯ ಹಣಕಾಸು ಲೆಕ್ಕ ಪರಿಶೋಧನೆ ಕುರಿತು ಚರ್ಚೆಯಾಗಿತ್ತು.

 

ಪ್ರಧಾನ ಮಹಾಲೇಖಪಾಲರಾದ ಶಾಂತಿ ಪ್ರಿಯ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌, ಖಜಾನೆ ಇಲಾಖೆಯ ಆಯುಕ್ತರಾದ ಡಾ ಅರುಂಧತಿ ಚಂದ್ರಶೇಖರ್‍‌ ಮತ್ತಿತರರ ಅಧಿಕಾರಿಗಳೊಂದಿಗೆ 2023ರ ನವೆಂಬರ್‍‌ 23ರಂದು ಸಭೆ ನಡೆದಿತ್ತು. ಈ  ಸಭೆಯಲ್ಲಿ ಹಿಂದಿನ ಸರ್ಕಾರದ ಅವಧಿಯ  ಬೊಕ್ಕಸದಲ್ಲಿದ್ದ ನಗದು ಬಾಕಿ ವಿವರಗಳ ಕುರಿತು ಚರ್ಚೆಯಾಗಿದ್ದವು.

 

 

ಸಿಎಜಿ ಕಂಡಿಕೆಯಲ್ಲಿ ನಗದು ಬಾಕಿ (Cash Balance And Their Investment) ಮತ್ತು ಅದರ ಹೂಡಿಕೆ ಕುರಿತು ವಿವರಣೆ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿರುವ ಉತ್ತರದಲ್ಲಿ ನಗದು ಬಾಕಿ ಎಂದು ಉಲ್ಲೇಖಿಸಿಲ್ಲ. ಬದಲಿಗೆ ರಾಜ್ಯ ಸರ್ಕಾರದ ವಾಸ್ತವಿಕ ಮುಕ್ತಾಯ (Closing Balacne) ಬಾಕಿ 24,714.77 ಕೋಟಿ  ಎಂದಷ್ಟೇ ಹೇಳಿರುವುದು (Finance Department stated that the State Government’s actual closing balance stand at 24,714.77 crore) ನಡವಳಿಯಿಂದ ತಿಳಿದು ಬಂದಿತ್ತು.

 

 

ಬಿಜೆಪಿ ಸರ್ಕಾರದ ಅಂತ್ಯದಲ್ಲಿ ಬೊಕ್ಕಸದಲ್ಲಿ 24, 714.77 ಕೋಟಿ ರುಪಾಯಿಗಳಿತ್ತು. ಆ ನಂತರ ಅದಕ್ಕೆ 2023 ಮೇ ನಂತರದ ಸರ್ಕಾರದ ಆದಾಯ (ಕೇಂದ್ರ ಅನುದಾನ, ರಾಜ್ಯ ಆದಾಯ ಮತ್ತು ಸಾಲ) ಸೇರಿಕೊಂಡು ಮತ್ತಿತರ ಮೂಲಗಳಿಂದ ಬಂದ ಮೊತ್ತ ಸರ್ಕಾರದ ಬೊಕ್ಕಸದಲ್ಲಿ ಇತ್ತು. ಆ ಮೊತ್ತದಿಂದ ಅಕ್ಟೋಬರ್ ಅಂತ್ಯದವರೆಗೆ ರೂ.1.54 ಲಕ್ಷ ಕೋಟಿ ರು.ಗಳನ್ನು  ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಿತ್ತು.

ಬಿಜೆಪಿ ಸರ್ಕಾರದ ಅವಧಿಯ ಬೊಕ್ಕಸದಲ್ಲಿ 24,714.77 ಕೋಟಿ ರು ನಗದು ಬಾಕಿ; ಕಾಂಗ್ರೆಸ್‌ ಸರ್ಕಾರದಲ್ಲಿ ಎಷ್ಟಿದೆ?

ಇದಲ್ಲದೇ 2024ರ ಮಾರ್ಚ್‌ 31ರೊಳಗೆ ಸರ್ಕಾರ ಇನ್ನೂ ರೂ.1.24 ಲಕ್ಷ ಕೋಟಿ ಬಿಡುಗಡೆ ಮಾಡಬೇಕಿತ್ತು.  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ 2023-24ರ ಬಜೆಟ್‌ನಲ್ಲೇ ಘೋಷಿಸಿದಂತೆ ಹಿಂದಿನ ಸಾಲಿನ ಅನುದಾನದಲ್ಲಿ ಬಳಕೆಯಾಗದೇ ಉಳಿದ ಆರಂಭಿಕ ಶಿಲ್ಕು 19, 804.8 (2023ರ ಅಕ್ಟೋಬರ್‍‌ ಅಂತ್ಯಕ್ಕೆ) ಕೋಟಿಯಷ್ಟು ವಿವಿಧ ಇಲಾಖೆಗಳಲ್ಲಿತ್ತು. ಆ ನಂತರದಲ್ಲಿ ಈ ವರ್ಷ ಇಲಾಖೆಗಳಿಗೆ 2.78 ಲಕ್ಷ ಕೋಟಿ ಬಿಡುಗಡೆ ಮಾಡಬೇಕಿತ್ತು. ಪ್ರಾಥಮಿಕ ಶಿಲ್ಕು ಸೇರಿ ಒಟ್ಟಾರೆ 2,98,230.46 ಕೋಟಿ ರು. ಇದೆ. ಈ ಪೈಕಿ ರೂ.1.54 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ ಮತ್ತು 1.24 ಲಕ್ಷ ಕೋಟಿ ಬಿಡುಗಡೆಗೆ ಬಾಕಿ ಇತ್ತು.

 

 

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ಅಲ್ಲದೇ ಈವರೆಗೆ ಕೇವಲ 71.38% ಪ್ರಗತಿ ಸಾಧಿಸಿರುವ ಇಲಾಖೆಗಳು ಈ ಸಾಲಿನ ವಿತ್ತೀಯ ಗುರಿಗಳಿಗೆ ತಕ್ಕ ಅನುಷ್ಠಾನ ಕೈಗೊಳ್ಳಲು ವಿಫಲವಾಗುವುದನ್ನು ಮತ್ತು ಆ ಮೂಲಕ ಆದಾಯ ಆಕರಕ್ಕೆ ಈ ಸಾಲಿನಲ್ಲಿ ತುರ್ತು ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇಲ್ಲದಿರುವುದನ್ನು ಸರ್ಕಾರ ಊಹಿಸಿದಂತಿತ್ತು.

 

ಕೇಂದ್ರ ಪುರಸ್ಕೃತ ಯೋಜನೆಗಳಡಿ 20,775.56 ಕೋಟಿ ರು. ಮತ್ತು ರಾಜ್ಯದ ಅನುದಾನ 21,071.57 ಕೋಟಿ ರು., ಪ್ರಾಥಮಿಕ ಶಿಲ್ಕು 10,151.75 ಕೋಟಿ ರು. ಸೇರಿ ಒಟ್ಟಾರೆ 51,998.89 ಕೋಟಿ ರು ಇದೆ. ಇದರಲ್ಲಿ ಅಕ್ಟೋಬರ್‍‌ 2023ರ ಅಂತ್ಯಕ್ಕೆ 9,398.78 ಕೋಟಿ ರು. (ಶೇ.45.2) ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು, ಬಿಡುಗಡೆಗೆ 11,376.78 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು.

 

 

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಈ ಹಿಂದಿನ ಸರ್ಕಾರ ಎಲ್ಲ ವಿಭಾಗಗಳಲ್ಲಿ ಜಮೆಯನ್ನು ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚಿಗೆ ಸಂಗ್ರಹಿಸಿತ್ತು.  ಮುದ್ರಾಂಕ ಮತ್ತು ನೋಂದಣಿ ದರ ಹೆಚ್ಚಿಸಿದ್ದರೂ ಉದ್ದೇಶಿತ 25000 ಕೋ.ರೂ. ಪೈಕಿ ಶೇಕಡ 43.76 ಮಾತ್ರ ಆಕರಗೊಂಡಿದೆ.  ಇದೇ ಅವಧಿಯಲ್ಲಿ ಹಿಂದಿನ ಸರ್ಕಾರವು ಶೇ.  63.72ರಷ್ಟು ಬೊಕ್ಕಸಕ್ಕೆ ಜಮೆ ಮಾಡಿತ್ತು. ಬಿಜೆಪಿ ಸರ್ಕಾರದ 2 ವರ್ಷದ ಅವಧಿಯಲ್ಲಿ 30 ಇಲಾಖೆಗಳಿಗೆ ಸಂಬಂಧಿಸಿದಂತೆ 1.42 ಲಕ್ಷ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಟೆಂಡರ್‍‌ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಈ ಟೆಂಡರ್‍‌ನಲ್ಲಿ ಸಿಂಹಪಾಲು ಪಡೆದಿದೆ.

 

2 ವರ್ಷದಲ್ಲಿ 1.42 ಲಕ್ಷ ಕೋಟಿ ರು. ಟೆಂಡರ್‍‌ ಅಂತಿಮ; ಜಲಸಂಪನ್ಮೂಲ, ಗ್ರಾಮೀಣ, ನಗರಾಭಿವೃದ್ಧಿ ಸಿಂಹಪಾಲು

 

ಹೀಗಾಗಿ ಈ ಯೋಜನೆಗಳನ್ನು ಮುಂದುವರೆಸಲೇಬೇಕಾದ ಅನಿವಾರ್ಯತೆಯೂ ಈಗಿನ ಸರ್ಕಾರಕ್ಕಿದೆ. ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿಯನ್ನು ಖಾತೆಗಳ ಪ್ರಮಾಣೀಕರಣವನ್ನು ಪೂರ್ಣಗೊಳಿಸಿದ ನಂತರ ತಯಾರಿಸಲಾಗುತ್ತದೆ. ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯನ್ನು ಸಿಎಜಿಯ ಅನುಮೋದನೆಯ ನಂತರ ರಾಜ್ಯ ಶಾಸಕಾಂಗಕ್ಕೆ ಸಲ್ಲಿಕೆಯಾಗಿತ್ತು.

the fil favicon

SUPPORT THE FILE

Latest News

Related Posts