ಬೆಂಗಳೂರು; ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕೋರಿದ್ದ ಮೊತ್ತಕ್ಕಿಂತಲೂ ಕಡಿಮೆ ಬಿಡುಗಡೆ ಮಾಡುತ್ತಿದೆ ಎಂದು ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಗಿಬಿದ್ದಿದೆ. ಸುಪ್ರೀಂ ಕೋರ್ಟ್ನ ಕದ ತಟ್ಟಿದ ನಂತರ ಕೇಂದ್ರ ಸರ್ಕಾರವು ಬರ ಪರಿಹಾರ ಬಿಡುಗಡೆ ಮಾಡಿದ ನಂತರವೂ ರಾಜಕೀಯ ಹಗ್ಗ ಜಗ್ಗಾಟಗಳು ಈಗಲೂ ಮುಂದುವರೆಯುತ್ತಲೇ ಇದೆ. ಈ ಮಧ್ಯೆ ಪ್ರತಿಪಕ್ಷ ಬಿಜೆಪಿಯು ಯುಪಿಎ ಸರ್ಕಾರವನ್ನೂ ಮಧ್ಯೆ ಎಳೆದು ತಂದು ಕಾಂಗ್ರೆಸ್ಗೆ ತಿರುಗೇಟು ನೀಡಲಾರಂಭಿಸಿದೆ.
ಕೇಂದ್ರ ಸರ್ಕಾರವು ಕೇವಲ ಬರ ಪರಿಸ್ಥಿತಿ ಮಾತ್ರವಲ್ಲದೇ ನೆರೆ, ಪ್ರವಾಹದ ಸಂದರ್ಭದಲ್ಲೂ ರಾಜ್ಯ ಕೋರಿದ್ದ ಮೊತ್ತಕ್ಕಿಂತಲೂ ಕಡಿಮೆ ಮೊತ್ತ ಬಿಡುಗಡೆ ಮಾಡುತ್ತಲೇ ಬಂದಿದೆ. ಬರ ಪರಿಹಾರ ಮೊತ್ತ ಬಿಡುಗಡೆಯಲ್ಲಿ ಆಗುತ್ತಿರುವ ತಾರತಮ್ಯದ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರವು ಸರಣಿ ಪ್ರತಿಭಟನೆ ಮಾಡುತ್ತಿರುವುದರ ಬೆನ್ನಲ್ಲೇ ನೆರೆ ಪರಿಹಾರದಲ್ಲಿಯೂ ಆಗಿರುವ ತಾರತಮ್ಯ ಮತ್ತು ಬಿಡುಗಡೆಯಾಗಿರುವ ಮೊತ್ತದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.
2008-09ರಿಂದ 2019-20 ಸಾಲಿನವರೆಗೂ (ಅಕ್ಟೋಬರ್ 15 ಅಂತ್ಯಕ್ಕೆ) ಒಟ್ಟು 11 ವರ್ಷಗಳಲ್ಲಿ 55,777.29 ಕೋಟಿ ರು.ಗಳನ್ನು (ಆಯಾ ವರ್ಷದ ತಿಂಗಳವಾರು ಲೆಕ್ಕದಲ್ಲಿ) ರಾಜ್ಯ ಸರ್ಕಾರ ಕೋರಿದ್ದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 11,495.55 ಕೋಟಿ ರು.ಗಳಷ್ಟೇ. ಕೋರಿಕೆ ಸಲ್ಲಿಸಿದ್ದ ಒಟ್ಟು ಮೊತ್ತದ ಪೈಕಿ 44,281.74 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಈ ಪೈಕಿ ನಿರ್ದಿಷ್ಟವಾಗಿ ನೆರೆ, ಪ್ರವಾಹದ ಸಂದರ್ಭದಲ್ಲಿ 2008-09ರಿಂದ 2019-20ರವರೆಗೆ ರಾಜ್ಯವು 19,088.38 ಕೋಟಿ ರು. ಕೋರಿತ್ತು. ಆದರೆ ಕೇಂದ್ರ ಸರ್ಕಾರವು ಕೇವಲ 3,770 ಕೋಟಿ ಮಾತ್ರ ಪರಿಹಾರ ನೀಡಿದೆ.
2008-09ರಲ್ಲಿ ಎದುರಾಗಿದ್ದ ನೆರೆ ಸಂದರ್ಭದಲ್ಲಿ (ಜುಲೈ, ಆಗಸ್ಟ್) ರಾಜ್ಯ ಸರ್ಕಾರವು ಒಟ್ಟಾರೆ 911.64 ಕೋಟಿ ರು. ಪರಿಹಾರಕ್ಕೆ ಮೆಮೋರಂಡಮ್ ಸಲ್ಲಿಸಿತ್ತು. ಈ ಪೈಕಿ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವು 161.16 ಕೋಟಿ ರು. ಮಾತ್ರ ಬಿಡುಗಡೆ ಮಾಡಿ, 750.48 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು.
2009-10ರಲ್ಲಿ 7,042.34 ಕೋಟಿ ರು. ನೆರವು ಕೇಳಿದ್ದರೇ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವು 1,452.49 ಕೋಟಿ ರು. ಬಿಡುಗಡೆ ಮಾಡಿ 5,589.85 ಕೋಟಿ ರು ಬಾಕಿ ಉಳಿಸಿಕೊಂಡಿತ್ತು. ಅದೇ ರೀತಿ 2010-11ರಲ್ಲಿ 1,045.36 ಕೋಟಿ ರು ನೆರವು ಕೋರಿದ್ದರೇ, ಯುಪಿಎ ಸರ್ಕಾರವು ಬಿಡಿಗಾಸನ್ನೂ ನೀಡಿರಲಿಲ್ಲ.
2012-13ರಲ್ಲಿ 610.84 ಕೋಟಿ ರು. ನೆರವು ಕೋರಲಾಗಿತ್ತು. 76.53 ಕೋಟಿ ರು. ಬಿಡುಗಡೆ ಮಾಡಿದ್ದ ಕೇಂದ್ರದ ಯುಪಿಎ ಸರ್ಕಾರವು 534.31 ಕೋಟಿ ರು. ಬಾಕಿ ಇರಿಸಿಕೊಂಡಿತ್ತು. 2013-14ರಲ್ಲಿ 963.44 ಕೋಟಿ ರು. ನೆರವು ಕೋರಿದ್ದರ ಪೈಕಿ ಎನ್ಡಿಎ ಸರ್ಕಾರವು 82.77 ಕೋಟಿ ರು. ನೀಡಿತ್ತು.
ಬಿಡುಗಡೆಗೆ 880.67 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. 2014-15ರಲ್ಲಿ 362.52 ಕೋಟಿ ರು ನೆರವು ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಕೇಂದ್ರದಲ್ಲಿದ್ದ ಎನ್ಡಿಎ ಸರ್ಕಾರವು ಕೇವಲ 49.45 ಕೋಟಿ ರು.ಗಳನ್ನಷ್ಟೇ ನೀಡಿತ್ತು. ಬಿಡುಗಡೆಗೆ 313.07 ಕೋಟಿ ರು ಬಾಕಿ ಇರಿಸಿಕೊಂಡಿತ್ತು.
2014ರಿಂದ 2020ರವರೆರಗೆ ಒಟ್ಟು 10,611 ಕೋಟಿ ರು.ಬಿಡುಗಡೆ ಮಾಡಿದೆ ಎಂದು ಅಂದಿನ ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದರು. ಯುಪಿಎ ಮತ್ತು ಎನ್ಡಿಎ ಅಧಿಕಾರಾವಧಿಯಲ್ಲಿ ಪರಿಹಾರ ಮೊತ್ತ ಬಿಡುಗಡೆ ಸಂದರ್ಭದಲ್ಲಿ ರಾಜ್ಯ ಕೋರಿದ್ದಕ್ಕಿಂತಲೂ ಅತ್ಯಲ್ಪ ಪ್ರಮಾಣದಲ್ಲಿ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 6 ವರ್ಷ (2008-2014) ಮತ್ತು ಬಿಜೆಪಿ ನೇತೃತ್ವದ 5 ವರ್ಷ (2014-19)ರಲ್ಲಿ ಬಿಡುಗಡೆ ಮಾಡಬೇಕಿದ್ದ ಒಟ್ಟು ಮೊತ್ತದಲ್ಲೇ ಅರ್ಧದಷ್ಟು ಬಾಕಿ ಉಳಿಸಿಕೊಂಡಿತ್ತು.
2008-09ರಿಂದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 29,656.09 ಕೋಟಿ ರು. ಕೋರಿದ್ದರೆ, ಕೇವಲ 2,499.85 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿ 32,155.94 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.
ಅದೇ ರೀತಿ 2014-15ನೇ ಸಾಲಿನಿಂದ 2019-20ನೇ ಸಾಲಿನವರೆಗೆ ಬಿಜೆಪಿ ನೇತೃತ್ವದ ಎನ್ಡಿಎ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 23,691.09 ಕೋಟಿ ರು.ಪರಿಹಾರ ಕೋರಿದ್ದರೆ, ಬಿಡುಗಡೆ ಆಗಿದ್ದು ಕೇವಲ 8,694.33 ಕೋಟಿ ರು.ಗಳಷ್ಟೇ. 14,996.76 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು.
2008-09ರ ಆಗಸ್ಟ್ ತಿಂಗಳಲ್ಲಿ ಎದುರಾಗಿದ್ದ ಪ್ರವಾಹ ಪರಿಹಾರವೆಂದು 516.72 ಕೋಟಿ ರು., ಮುಂಗಾರು ಬರವೆಂದು 2,019.50 ಕೋಟಿ ರು. ಸೇರಿ ಒಟ್ಟು 2,536.22 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕೋರಿತ್ತು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 79.19 ಕೋಟಿ ರು.ಗಳಷ್ಟೇ.
ಮತ್ತೊಂದು ಸಂಗತಿ ಎಂದರೆ ಮುಂಗಾರು ಬರದಿಂದಾಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೋರಿದ್ದ 2,019.50 ಕೋಟಿ ರು.ಗೆ ಬದಲಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1.86 ಕೋಟಿ ರು.ಗಳಷ್ಟೆ. ಅದೇ ರೀತಿ 2009-10ರಿಂದ 2012ರಲ್ಲಿಯೂ ಹಣಕಾಸು ಸಚಿವರಾಗಿ ಮುಂದುವರೆದಿದ್ದ ಮನಮೋಹನ್ ಸಿಂಗ್, ಪ್ರಣಬ್ ಮುಖರ್ಜಿ ಮತ್ತು ಪಿ ಚಿದಂಬರಂ ಅವಧಿಯಲ್ಲಿಯೂ ರಾಜ್ಯಕ್ಕೆ ಕನಿಷ್ಟ ಮೊತ್ತ ಬಿಡುಗಡೆ ಆಗಿತ್ತು.
ಈ ಮೂವರ ಅವಧಿಯಲ್ಲಿ ಒಟ್ಟು 26,509.03 ಕೋಟಿ ರು.ನೆರವಿಗೆ ರಾಜ್ಯ ಸರ್ಕಾರ ಕೋರಿತ್ತು. ಆದರೆ ಬಿಡುಗಡೆ ಆಗಿದ್ದು ಕೇವಲ 1,946.94 ಕೋಟಿ ರು.ಗಳಷ್ಟೆ. 2010ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ 1,045.36 ಕೋಟಿ ರು.ಗಳನ್ನು ಕೇಳಿದ್ದರೆ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೀಡಿರಲಿಲ್ಲ ಎಂಬ ವಿಚಾರ ದಾಖಲೆಯಿಂದ ತಿಳಿದು ಬಂದಿದೆ.
ಪ್ರವಾಹ, ಬರ ಎದುರಾದಾಗಲೆಲ್ಲ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಆಡಳಿತ ಪಕ್ಷವು ಪ್ರತಿಪಕ್ಷಗಳ ನಿಯೋಗವನ್ನು ನಿಲ್ಲಿಸಿ ಕೈಯೊಡ್ಡುತ್ತಲೇ ಇದೆ. ಆದರೆ ಯಾವ ಸರ್ಕಾರವೂ ಪಕ್ಷಾತೀತವಾಗಿ ಇರಲಿ, ಪರಿಸ್ಥಿತಿ ಗಂಭೀರತೆ ಅರಿತು ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕಂತೆ ಹಣ ಬಿಡುಗಡೆ ಮಾಡಿಲ್ಲ.
2009-09ರಿಂದ ಬಿ ಎಸ್ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಕೇಂದ್ರಕ್ಕೆ ಕರ್ನಾಟಕ ಸಾವಿರಾರು ಕೋಟಿ ರು.ಮೊತ್ತದಲ್ಲಿ ತೆರಿಗೆ ನೀಡುತ್ತಿದೆಯಾದರೂ ಪರಿಹಾರಕ್ಕಾಗಿ ಕೇಂದ್ರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಸ್ಥಿತಿ ಇದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ, ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಪ್ರತಿಭಟನೆ ನಡೆಸಿರುವುದನ್ನು ಸ್ಮರಿಸಬಹುದು.