15 ಜಿಲ್ಲೆಗಳ ಶಾಲಾ ಮಕ್ಕಳಿಗೆ ಇನ್ನೂ ದೊರೆಯದ ಮೊದಲನೆ ಜೊತೆ ಸಮವಸ್ತ್ರ; ಷರತ್ತು ಉಲ್ಲಂಘನೆ

ಬೆಂಗಳೂರು; ರಾಜ್ಯದ 31 ಶೈಕ್ಷಣಿಕ ಜಿಲ್ಲೆಗಳ ಸರ್ಕಾರಿ ಶಾಲೆಗಳ ಒಂದರಿಂದ ಹತ್ತನೆ ತರಗತಿಯ ಎಲ್ಲಾ ಮಕ್ಕಳಿಗೆ 2022-23ನೇ ಸಾಲಿಗೆ ಉಚಿತ ಸಮವಸ್ತ್ರ ವಿತರಣೆಯ ಟೆಂಡರ್‌ ಪಡೆದಿದ್ದ ಪದಂಚಂದ್‌ ಮಿಲಾಪ್‌ ಜೈನ್‌ ಎಂಬ ಗುತ್ತಿಗೆದಾರರು ಟೆಂಡರ್‌ ಷರತ್ತಿನ ಪ್ರಕಾರ ಗುತ್ತಿಗೆ ಪಡೆದ ಜಿಲ್ಲೆಗಳಿಗೆ 90 ದಿನದಲ್ಲಿ ಮೊದಲನೇ ಜೊತೆ ಸಮವಸ್ತ್ರ ಪೂರೈಕೆ ಮಾಡುವಲ್ಲಿ ವಿಫಲರಾಗುವ ಮೂಲಕ ಷರತ್ತನ್ನು ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.

 

ಟೆಂಡರ್‌ ಷರತ್ತಿನ ಪ್ರಕಾರ ಪದಂಚಂದ್‌ ಮಿಲಾಪ್‌ ಜೈನ್‌ ಅವರಿಗೆ 2022ರ ಜೂನ್‌ 28ರಂದು ಕಾರ್ಯಾದೇಶ ನೀಡಿದ 90 ದಿನದೊಳಗೆ ಅಂದರೆ 2022ರ ಸೆಪ್ಟಂಬರ್‌ 28ರೊಳಗೇ 34 ಜಿಲ್ಲೆಗಳ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಬೇಕಿತ್ತು. ಆದರೆ ಅಕ್ಟೋಬರ್‌ 10ರವರೆಗೆ ಕೇವಲ 19 ಜಿಲ್ಲೆಗಳಿಗೆ ಮಾತ್ರ ಸರಬರಾಜು ಮಾಡಿರುವ ಈ ಗುತ್ತಿಗೆದಾರರು ಇನ್ನೂ 15 ಜಿಲ್ಲೆಗಳ ಮಕ್ಕಳಿಗೆ ಮೊದಲನೇ ಜೊತೆ ಸಮವಸ್ತ್ರವನ್ನು ಸರಬರಾಜು ಮಾಡಿಲ್ಲ.
ಅಷ್ಟೇ ಅಲ್ಲ, 2021-22ನೇ ಸಾಲಿನ ಎರಡನೇ ಜೊತೆ ಸಮವಸ್ತ್ರವನ್ನು ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದ ಕೆಹೆಚ್‌ಡಿಸಿಯು 34 ಜಿಲ್ಲೆಗಳ ಪೈಕಿ ಇನ್ನೂ 9 ಜಿಲ್ಲೆಗಳ ಶಾಲಾ ಮಕ್ಕಳಿಗೆ ಇನ್ನೂ ಸರಬರಾಜು ಮಾಡಿಲ್ಲ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್‌ ಅವರು 2022-23ನೇ ಸಾಲಿನ ಮೊದಲನೇ ಜೊತೆ ಮತ್ತು 2021-22ನೇ ಸಾಲಿಗೆ ಸಂಬಂಧಿಸಿದಂತೆ 2ನೇ ಜೊತೆ ಸಮವಸ್ತ್ರ ಸರಬರಾಜು ಪ್ರಗತಿ ಕುರಿತು ಇತ್ತೀಚೆಗೆ ಸಭೆ ನಡೆಸಿದ್ದ ವೇಳೆಯಲ್ಲಿ ಈ ವಿಚಾರದ ಕುರಿತು ಚರ್ಚೆಯಾಗಿದೆ. ಸಮವಸ್ತ್ರ ಸರಬರಾಜು ಪ್ರಗತಿ ಕುರಿತು ಅಧಿಕಾರಿಗಳು ಸಭೆಗೆ ಮಂಡಿಸಿದ್ದ ಅಂಕಿ ಅಂಶಗಳು ಮತ್ತು ಪ್ರಗತಿ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು, ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳು ಮತ್ತು ಬೆಳಗಾವಿ ವಿಭಾಗದ 7 ಜಿಲ್ಲೆಗಳ 1ರಿಂದ 10ನೇ ತರಗತಿಯ ಗಂಡು ಮತ್ತು 1ರಿಂದ 7ನೇ ತರಗತಿಯ ಹೆಣ್ಣು ಮಕ್ಕಳಿಗೆ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ 8ರಿಂದ 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು ಪದಂಚಂದ್‌ ಮಿಲಾಪ್‌ ಚಂದ್‌ ಜೈನ್‌ ಅವರಿಗೆ 67.74 ಕೋಟಿ ರು ಮೊತ್ತದ ಕಾರ್ಯಾದೇಶವನ್ನು 2022ರ ಜೂನ್‌ 28ರಂದು ನೀಡಲಾಗಿತ್ತು. ಟೆಂಡರ್‌ ಷರತ್ತಿನ ಪ್ರಕಾರ ಕಾರ್ಯಾದೇಶ ಪಡೆದ ದಿನದಿಂದ 2022ರ ಸೆ.28ರೊಳಗಾಗಿ 34 ಜಿಲ್ಲೆಗಳ ಮಕ್ಕಳಿಗೂ ಸಮವಸ್ತ್ರ ವಿತರಿಸಬೇಕಿತ್ತು. ಆದರೀಗ ಪ್ರಗತಿ ವರದಿ ಪ್ರಕಾರ ಇನ್ನೂ 15 ಜಿಲ್ಲೆಗಳ ಮಕ್ಕಳಿಗೆ ಮೊದಲನೇ ಜೊತೆ ಸಮವಸ್ತ್ರವೇ ದೊರೆತಿಲ್ಲ.

 

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು (ಕೆಹೆಚ್‌ಡಿಸಿ) ಟೆಂಡರ್ ಷರತ್ತಿನ ಪ್ರಕಾರ ಕಲ್ಬುರ್ಗಿ ವಿಭಾಗದ ಎಲ್ಲಾ 6 ಜಿಲ್ಲೆಗಳ 1ರಿಂದ 10ನೇ ತರಗತಿಯ ಗಂಡು ಮತ್ತು 1ರಿಂಂದ 7ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈ ನಿಗಮಕ್ಕೆ ಒಟ್ಟು 22.40 ಕೋಟಿ ರು. ಮೊತ್ತದ ಕಾರ್ಯಾದೇಶವನ್ನು 2022ರ ಜೂನ್‌ 14ರಂದು ನೀಡಲಾಗಿತ್ತು. ಸಮವಸ್ತ್ರವನ್ನು 2022ರ ಜುಲೈ 31ರೊಳಗೇ ಸರಬರಾಜು ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಈ ನಿಗಮವು ಎಲ್ಲಾ 6 ಜಿಲ್ಲೆಗಳಿಗೂ ನಿಗದಿತ ಕಾಲಾವಧಿಯಲ್ಲಿಯೇ ಮೊದಲನೇ ಜೊತೆ ಸಮವಸ್ತ್ರವನ್ನು ಸರಬರಾಜು ಮಾಡಿರುವುದು ಪ್ರಗತಿ ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಕೆಎಸ್‌ಟಿಐಡಿಸಿಯು ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳ 1ರಿಂದ 10ನೇ ತರಗತಿಯ ಗಂಡು ಮತ್ತು 1ರಿಂದ 7ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ ಸರಬರಾಜು ಮಾಡಲು 2 ಜಿಲ್ಲೆಗಳಿಗೆ 2022ರ ಜೂನ್‌ 14ರಂದು ಕಾರ್ಯಾದೇಶ ಪಡೆದಿತ್ತು. ಒಟ್ಟು 8.06 ಕೋಟಿ ರು ಮೊತ್ತದಲ್ಲಿ ಸಮವಸ್ತ್ರಗಳನ್ನು ವಿತರಿಸಬೇಕಿದ್ದ ಜಿಲ್ಲೆಗಳ ಪೈಕಿ ಒಂದು ಜಿಲ್ಲೆಗಷ್ಟೇ ವಿತರಿಸಿರುವ ಈ ನಿಗಮವು ಇನ್ನೂ ಒಂದು ಜಿಲ್ಲೆಯ ಶಾಲಾ ಮಕ್ಕಳಿಗೆ ಮೊದಲನೇ ಜೊತೆ ಸಮವಸ್ತ್ರವನ್ನು ಪೂರೈಕೆ ಮಾಡದೇ ಟೆಂಡರ್‌ ಷರತ್ತನ್ನು ಉಲ್ಲಂಘಿಸಿದೆ.

 

ಇಂಧನ, ಕಚ್ಛಾ ಸಾಮಗ್ರಿ, ಪೂರಕ ವಸ್ತು ಮತ್ತು ಸೇವೆಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಇದನ್ನು ಸರಿದೂಗಿಸುವ ಸಲುವಾಗಿ ಒಟ್ಟಾರೆ ಟೆಂಡರ್‌ ಮೊತ್ತದಲ್ಲಿ ಹೆಚ್ಚಳವಾಗಿತ್ತು.

 

2021-22ನೇ ಸಾಲಿನ ಮೊದಲನೇ ಜೊತೆ ಸಮವಸ್ತ್ರ ಖರೀದಿ ಮತ್ತು ಪೂರೈಕೆಗೆ ಕರೆದಿದ್ದ ಇ- ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ್ದ ದರವು ಎರಡನೇ ಜೊತೆಗೆ ನಮೂದಿಸಿದ್ದ ಅಂದಾಜು ದರದಲ್ಲಿ ಶೇ.30ರಷ್ಟು ಹೆಚ್ಚಾಗಿತ್ತು. 2021-22ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1-10ನೇ ತರಗತಿ ವಿದ್ಯಾರ್ಥಿಗಳಿಗೆ 2ನೇ ಜೊತೆ ಸಮವಸ್ತ್ರ ಸರಬರಾಜು ಸಂಬಂಧಿಸಿದಂತೆ ಮೂಲ ದರಗಳನ್ನು ಪುನರ್‌ ನಿಗದಿ ಮಾಡಿ ಅಲ್ಪಾವಧಿಗೆ ಮರು ಟೆಂಡರ್‌ ಆಹ್ವಾನಿಸಿತ್ತು.

 

ಬಿಡ್‌ದಾರರೊಂದಿಗೆ ನಡೆದ ದರ ಸಂಧಾನ ನಂತರ ಅಂತಿಮವಾಗಿ 99.15 ಕೋಟಿ ರು.ಗೆ ಅಂತಿಮಗೊಳಿಸಿದ್ದ ಸರ್ಕಾರವು ಈ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ ಹಿಂದಿನ ಟೆಂಡರ್‌ಗೆ ಹೋಲಿಸಿದರೆ 7.3 ಕೋಟಿ ರು. ಅಧಿಕವಾಗಿತ್ತು. ಈ ಹಿಂದಿನ ಟೆಂಡರ್‌ ಮೊತ್ತ ಮತ್ತು ಹೊಸದಾಗಿ ಕರೆದಿರುವ ಟೆಂಡರ್ ಮೊತ್ತ ಅಧಿಕವಾಗಲು ಇಂಧನ ಬೆಲೆ ಸೇರಿದಂತೆ ಇನ್ನಿತರೆ ಕಾರಣಗಳನ್ನು ಇಲಾಖೆಯು ಒದಗಿಸಿತ್ತು.

 

ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲು ಅತ್ಯಾಸಕ್ತಿ ವಹಿಸಿದ್ದ ರಾಜ್ಯ ಸರ್ಕಾರವು 2022-23ನೇ ಶೈಕ್ಷಣಿಕ ವರ್ಷವು ಆರಂಭವಾಗಲು ಇನ್ನು ಐದು ದಿನಗಳು ಬಾಕಿ ಇದ್ದರೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ಮೂರು ಲಕ್ಷ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ಪೂರೈಕೆ ಮಾಡಿರಲಿಲ್ಲ. ಸಮವಸ್ತ್ರ ಖರೀದಿ ಮತ್ತು ಪೂರೈಕೆ ಸಂಬಂಧ ಸರ್ಕಾರವು ಇನ್ನೂ ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಕಾಲಹರಣ ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2022ರ ಮೇ 11ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಶಾಲಾರಂಭಕ್ಕೆ ಐದೇ ಐದು ದಿನ ಬಾಕಿ; ವಿದ್ಯಾರ್ಥಿಗಳಿಗೆ ದೊರಕದ ಸಮವಸ್ತ್ರ, ಟೆಂಡರ್‌ನಲ್ಲೇ ಕಾಲಹರಣ

‘ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಧನಗಳು, ಕಚ್ಚಾ ಸಾಮಗ್ರಿಗಳು, ವೇತನ ಮತ್ತು ಇನ್ನಿತರೆ ಪೂರಕ ವಸ್ತುಗಳ ಹಾಗೂ ಸೇವೆಗಳ ಬೆಲೆ ಹೆಚ್ಚಾಗಿರುತ್ತದೆಯಲ್ಲದೆ ಕೊರತೆಯೂ ಇದೆ. ಸರ್ಕಾರದ ಶಾಲೆಗಳಲ್ಲಿ ಸುಮಾರು ಮೂರು ಲಕ್ಷ ಮಕ್ಕಳ ದಾಖಲಾತಿ ಹೆಚ್ಚಾಗಿರುತ್ತದೆ. ಆದ್ದರಿಂದ ಸಮವಸ್ತ್ರದ ಬಟ್ಟೆಯ ಪರಿಮಾಣವು ಸುಮಾರು 124 ಲಕ್ಷ ಮೀಟರ್‌ನಿಂದ 136 ಲಕ್ಷ ಮೀಟರ್‌ ಅಧಿಕವಾಗಿದೆ. 2021-22ನೇ ಸಾಲಿನ ಇ-ಟೆಂಡರ್‌ ಪ್ರಕ್ರಿಯೆಯಲ್ಲಿ ಹೊರಹೊಮ್ಮಿದ ದರವು ಅಂದಾಜು ದರಗಳಿಗಿಂತ ಶೇ. 17.41 ಕಡಿಮೆ ಇರುತ್ತದೆ. ಅಂದಾಜು ದರವು 47.00 ಕೋಟಿ ರು. ಆಗಿರುತ್ತದೆ,’ ಎಂದು ಅಧಿಕಾರಿಗಳು ವಿವರಿಸಿದ್ದರು.

 

2021-22ನೇ ಸಾಲಿನ ಮೊದಲನೆ ಜೊತೆ ಸಮವಸ್ತ್ರದ ಟೆಂಡರ್‌ ದರಗಳು ಅಂದಿನ ಸನ್ನಿವೇಶಗಳಿಗೆ (ಕೊರೋನ ಸಮಯ) ಸೀಮಿತವಾಗಿ ಕಡಿಮೆ ಆಗಿದೆ. ಆದರೀಗ ಎರಡನೇ ಬಾರಿಗೆ ಕರೆಯಲಾಗಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಹೊರಹೊಮ್ಮಿದ ಅಂತಿಮ ಟೆಂಡರ್‌ ದರಗಳು ಮತ್ತುಇನ್ನಿತರೆ ವೆಚ್ಚಗಳು ಸೇರಿ 99.15 ಕೋಟಿ ರು. ಆಗಿದೆ. ಈ ಮೊತ್ತವು ಮಂಜೂರಾಗಿರುವ ಅನುದಾನಕ್ಕಿಂತ 7.30 ಕೋಟಿ ರು. ಹೆಚ್ಚುವರಿಯಾಗಿತ್ತು.
‘2022-23ನೇ ಶೈಕ್ಷಣಿಕ ವರ್ಷವು 2022ರ ಮೇ 16ರಿಂದ ಪ್ರಾರಂಭವಾಗಲಿದ್ದು ಮಕ್ಕಳಿಗೆ ಸಮವಸ್ತ್ರ ಒದಗಿಸಲು ಕೂಡಲೇ ಕ್ರಮವಹಿಸಬೇಕಾಗಿದೆ. 2021-22ನೇ ಸಾಲಿನ ಎರಡನೆ ಜೊತೆ ಉಚಿತ ಸಮವಸ್ತ್ರ ಸರಬರಾಜಿಗೆ 99.15 ಕೋಟಿ ರು. ಭರಿಸಲು ಅರ್ಥಿಕ ಇಲಾಖೆ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋರಿತ್ತು.

 

2021ರ ಡಿಸೆಂಬರ್‌ 31ರಂದು ಕರೆದಿದ್ದ ಟೆಂಡರ್‌ನಲ್ಲಿ ಅರವಿಂದ್‌ ಕೋಟ್ಸ್‌ ಇಂಡಿಯಾ ಲಿಮಿಟೆಡ್‌, ಪದಂಚಂದ್‌ ಮಿಲಾಪ್‌ಚಂದ್‌ಜೈನ್‌ ಭಾಗವಹಿಸಿದ್ದರು. ಇದರಲ್ಲಿ ಅರವಿಂದ್‌ ಕೋಟ್ಸ್‌ 2ನೇ ಮತ್ತು ಪದಂಚಂದ್‌ 3ನೇ ಬಿಡ್‌ದಾರರಾಗಿ ಹೊರಹೊಮ್ಮಿದ್ದರು. ಪ್ಯಾಕೇಜ್‌ 1 ಮತ್ತು 2ರ ಐಟಂ ಸಂಖ್ಯೆ 1,2 ಮತ್ತು 3ರ ಕನಿಷ್ಠ ದರಗಳಿಗೆ ಇಳಿಸಲು ಈ ಬಿಡ್‌ದಾರರು ಸಹಮತಿ ಸೂಚಿಸಿರಲಿಲ್ಲ.

 

ಹೀಗಾಗಿ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿದ್ದ 91.85 ಕೋಟಿ ರು.ಗೆ 7 ಲಕ್ಷ ಅಧಿಕ ಸೇರ್ಪಡೆಗೊಂಡು ಒಟ್ಟು 91.92 ಕೋಟಿ ರು. ಆಗಿತ್ತು. ಕೆಟಿಪಿಪಿ ಕಾಯ್ದೆ 2000 ನಿಯಮ 12(5)ರ ಪ್ರಕಾರ ಶೇ. 25ರಷ್ಟು ಹೆಚ್ಚುಕಡಿಮೆ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮೂರು ಪ್ಯಾಕೇಜ್‌ಗಳನ್ನು ಪದಂಚಂದ್‌ ಮಿಲಾಪ್‌ಚಂದ್‌ ಜೈನ್‌ ಅವರಿಗೆ ಒಟ್ಟು 71.55 ಕೋಟಿ ರು. ವೆಚ್ಚದಲ್ಲಿ ಸಮವಸ್ತ್ರ ಬಟ್ಟೆ ಒದಗಿಲು ಆದೇಶ ನೀಡಲು ಆಯುಕ್ತರು ಕೋರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts