ಕ್ರೈಮ್‌ ಆಫೀಸರ್‌ ಹುದ್ದೆಗಳ ನೇಮಕ; ಒಂದೇ ಕಾಲೇಜಿನ 103 ಮಂದಿ ಆಯ್ಕೆಯ ಹಿಂದೆ ನಡೆದಿದೆಯೇ ಅಕ್ರಮ?

photo credit-thehindu

ಬೆಂಗಳೂರು; ಸೀನ್‌ ಅಫ್‌ ಕ್ರೈಮ್‌ ಆಫೀಸರ್‌ ಹುದ್ದೆಗಳಿಗೆ ಒಂದೇ ಕಾಲೇಜಿನ 103 ಮಂದಿ ಆಯ್ಕೆಯಾಗಿರುವುದು ಇದೀಗ ಬಹಿರಂಗವಾಗಿದೆ. ಪಿಎಸ್ಐ ನೇಮಕಾತಿ ಪಟ್ಟಿಯಲ್ಲಿ ನಿರ್ದಿಷ್ಟ ಕೋಚಿಂಗ್‌ ಸೆಂಟರ್‌ ಮತ್ತು ಪರೀಕ್ಷಾ ಕೇಂದ್ರದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಅಕ್ರಮಕ್ಕೆ ದಾರಿಮಾಡಿಕೊಟ್ಟಿರುವ ಬೆನ್ನಲ್ಲೇ ಸೀನ್‌ ಆಫ್‌ ಕ್ರೈಮ್‌ ಆಫೀಸರ್‌ ವಿಭಾಗದಲ್ಲಿ ಖಾಲಿ ಇದ್ದ ಒಟ್ಟು 209 ಹುದ್ದೆಗಳ ಪೈಕಿ 103 ಹುದ್ದೆಗಳಿಗೆ ಒಂದೇ ಕಾಲೇಜಿಗೆ ಸೇರಿದವರೇ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಪೊಲೀಸ್‌ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಡಿಜಿಪಿ ಅಮೃತ್‌ ಪೌಲ್‌ ಅವರು ಈ ಹುದ್ದೆಯಿಂದ ವರ್ಗಾವಣೆ ಆಗುವ ಮುನ್ನ ನಡೆದಿದ್ದ ನೇಮಕಾತಿಯ ಆಯ್ಕೆಪಟ್ಟಿಯು ಬಿಡುಗಡೆಗೊಂಡ ಬೆನ್ನಲ್ಲೇ ಇದೀಗ ಒಂದೇ ಕಾಲೇಜಿನ 103 ಮಂದಿ ಆಯ್ಕೆಯಾಗಿರುವುದು ಮುನ್ನೆಲೆಗೆ ಬಂದಿದೆ.

 

ಆಯ್ಕೆಯಾಗಿರುವ 103 ಮಂದಿ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ವಿಜ್ಞಾನ ಕಾಲೇಜಿನ ಕ್ರಿಮಿನಾಲಜಿ ಮತ್ತು ಫೋರೆನ್ಸಿಕ್‌ ವಿಭಾಗದ ಬಿಎಸ್‌ಸಿ ಮತ್ತು ಬಿಎ ವಿದ್ಯಾರ್ಥಿಗಳಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಆಯ್ಕೆಪಟ್ಟಿ ಹೊರಬಿದ್ದ ಬೆನ್ನಲ್ಲೇ ಈ ಸಂಗತಿ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್‌ ಗ್ರೂಪ್‌ನಲ್ಲಿ ಅಭಿನಂದನೆಗಳು ವ್ಯಕ್ತವಾಗಿವೆ.

 

‘ಇದೊಂದು ಹೆಮ್ಮೆ ಸಂಗತಿ. ಕೆಎಸ್‌ಸಿಡಿ ಮತ್ತು ಕೆಎಸಿಡಿಯ ಒಟ್ಟು 103 ವಿದ್ಯಾರ್ಥಿಗಳು ಸೀನ್‌ ಆಫ್‌ ಕ್ರೈಮ್‌ ಅಫೀಸರ್‌ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇದು ಕೆಸಿಡಿ ಇತಿಹಾಸಕ್ಕೆ ಸೇರ್ಪಡೆಯಾಗಿದೆ. ನಿವೃತ್ತ ಮತ್ತು ಹಾಲಿ ಬೋಧಕ ವೃಂದವು ಸಾಧಕರನ್ನು ಅಭಿನಂದಿಸಿದೆ,’ ಎಂಬ ಬರಹವು ವಾಟ್ಸಾಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿದೆ. ಇದರ ಸ್ಕ್ರೀನ್‌ ಶಾಟ್‌ವೊಂದು ‘ದಿ ಫೈಲ್‌’ಗೆ ಲಭ್ಯವಾಗಿದೆ. ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಸಂದೇಶವು ಕೆಎಸ್‌ಸಿಡಿ ಮತ್ತು ಕೆಎಸಿಡಿಯ ಕಾಲೇಜಿನ ವಿದ್ಯಾರ್ಥಿಗಳ ವಾಟ್ಸಾಪ್‌ ಗ್ರೂಪ್‌ನದ್ದು ಎಂಬುದನ್ನು ‘ದಿ ಫೈಲ್‌’ ಖಚಿತಪಡಿಸಿಕೊಂಡಿಲ್ಲ. ಆದರೆ ವಾಟ್ಸಾಪ್‌ನಲ್ಲಿ ಈ ಸಂದೇಶವು ಹರಿದಾಡುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

 

ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಅಭಿನಂದನೆ ಸಂದೇಶ

 

2021ರಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತಾದರೂ 2022ರ ಜುಲೈ 2ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಸಿಐಡಿ ಪೊಲೀಸರು ಅಮೃತ್‌ ಪೌಲ್‌ ಅವರನ್ನು ಬಂಧನಕ್ಕೊಳಪಡಿಸಿ ಅಮಾನತುಗೊಳಿಸಿರುವ ಬೆನ್ನಲ್ಲೇ 2022ರ ಜುಲೈ 2ರಂದು ಬಿಡುಗಡೆಗೊಂಡಿತ್ತು.

 

ಅಮೃತ್‌ ಪೌಲ್‌ ಅವರು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಡೀ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ವಿಚಾರಣೆ ನಡೆಯುತ್ತಿದ್ದರಿಂದಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ ಎನ್ನಲಾಗಿದೆ. ನೇಮಕಾತಿ ಪ್ರಾಧಿಕಾರದ ಪ್ರಸ್ತುತ ಅಧ್ಯಕ್ಷರಾದ ಎಡಿಜಿಪಿ ಕಮಲ್‌ ಪಂತ್‌ ಅವರ ಸಹಿಯೊಂದಿಗೆ ತಾತ್ಕಾಲಿಕ ಆಯ್ಕೆಪಟ್ಟಿಯು ಬಿಡುಗಡೆಯಾಗಿತ್ತು.

the fil favicon

SUPPORT THE FILE

Latest News

Related Posts