ಪಠ್ಯ ಕಡಿತ; ಗಡುವು ಮೀರಿದರೂ ವರದಿ ಸಲ್ಲಿಸದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ

ಬೆಂಗಳೂರು; ವೈದಿಕ ಧರ್ಮದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎಂಬ ಸಾರಾಂಶವಿದ್ದ ಆರನೇ ತರಗತಿ ಸಮಾಜ ವಿಜ್ಞಾನ ವಿಷಯದ ಭಾಗ 1 ರ ಪಠ್ಯ ಪುಸ್ತಕದ ನಿರ್ದಿಷ್ಟ ಪಾಠಾಂಶವನ್ನು ಕೈ ಬಿಡುವ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪರಿಶೀಲನಾ ಸಮಿತಿಯು ಗಡುವು ಮೀರಿದರೂ ವರದಿ ಸಲ್ಲಿಸಿಲ್ಲ.

ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಿ 2021ರ ಸೆಪ್ಟಂಬರ್‌ನಲ್ಲಿ ಆದೇಶ ಹೊರಡಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ವರದಿಯನ್ನು ತಿಂಗಳೊಳಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಆದರೆ ಸಮಿತಿಯು 2 ತಿಂಗಳಾದರೂ ವರದಿಯನ್ನು ಸಲ್ಲಿಸಿಲ್ಲ. ಈ ಕುರಿತು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಬೋರೇಗೌಡ ಅವರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

ಸಮಿತಿ ರಚನೆಯಾದ ದಿನದಿಂದ ಎಷ್ಟು ಬಾರಿ ಸಭೆ ನಡೆಸಲಾಗಿದೆ ಎಂಬ ಮಾಹಿತಿಯೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಬಳಿ ಯಾವ ಮಾಹಿತಿಯೂ ಇಲ್ಲ. ಅಲ್ಲದೆ ಗಡುವು ಮೀರಿದರೂ ವರದಿ ನೀಡುವ ಸಂಬಂಧ ಇಲಾಖೆಯು ಸಮಿತಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನೂ ನಡೆಸಿಲ್ಲ. ಹಾಗೆಯೇ ವರದಿ ಸಲ್ಲಿಕೆಗೆ ಅವಧಿ ವಿಸ್ತರಿಸುವ ಸಂಬಂಧವೂ ಸಮಿತಿಯು ಸರ್ಕಾರಕ್ಕೆ ಯಾವುದೇ ಪತ್ರವನ್ನೂ ಬರೆದಿಲ್ಲ ಎಂಬುದು ತಿಳಿದು ಬಂದಿದೆ.

‘ಸಮಿತಿಯು ಯಾವುದೇ ವರದಿ ಸಲ್ಲಿಸಿಲ್ಲ ಮತ್ತು ವಿಸ್ತರಣೆಗೂ ಸಮಯ ಕೇಳಿಲ್ಲ. ಸಮಿತಿ ಅಧ್ಯಕ್ಷರು ನೇರವಾಗಿ ಸಚಿವರ ಜತೆ ಮಾತನಾಡಿದ್ದಾರೆ ಎಂದು ಗೊತ್ತಾಗಿದೆ. ಇಲಾಖೆಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ. ಸರ್ಕಾರವು ಸಮಿತಿಯನ್ನು ರಚಿಸಿದೆ. ವರದಿಯನ್ನು ಕೇಳಿ ಸರ್ಕಾರವು ಸಮಿತಿಗೆ ಪತ್ರವನ್ನು ಬರೆದಿಲ್ಲ. ಸಮಿತಿಯು ವರದಿ ಕೊಟ್ಟ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ,’ ಎಂದು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಬೋರೇಗೌಡ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಬಿ ಸಿ ನಾಗೇಶ್‌ ಅಧಿಕಾರ ವಹಿಸಿಕೊಂಡ ಅತ್ಯಲ್ಪ ದಿನಗಳಲ್ಲೇ ಆರನೇ ತರಗತಿ ಸಮಾಜ ವಿಜ್ಞಾನ ವಿಷಯದ ಭಾಗ 1ರ ಪಠ್ಯ ಪುಸ್ತಕದ ಪಾಠಾಂಶವನ್ನು ಕೈ ಬಿಡುವ ಕುರಿತು7 ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು.

ಆರನೇ ತರಗತಿ ಸಮಾಜ ವಿಜ್ಞಾನ ಭಾಗ -1 ಪಠ್ಯ ಪುಸ್ತಕದ ಪುಟ ಸಂಖ್ಯೆ 82 ಹಾಗೂ 83ರಲ್ಲಿನ ‘ಹೊಸ ಧರ್ಮಗಳು ಏಕೆ ಉದಯಿಸಿದವು’ ಎಂಬ ಶೀರ್ಷಿಕೆಯಲ್ಲಿನ ಎರಡು ಪ್ಯಾರಾಗಳು ಮತ್ತು ಪುಟ ಸಂಖ್ಯೆ 83ರ ಪ್ರಾರಂಭಿಕ ಆರು ಸಾಲುಗಳನ್ನು 2021-22ನೇ ಶೈಕ್ಷಣಿಕ ಸಾಲಿನಿಂದ ಎಲ್ಲಾ 7 ಮಾಧ್ಯಮಗಳ ಪಠ್ಯ ಪುಸ್ತಕದಿಂದ ಕೈ ಬಿಡಲು ಮತ್ತು 1ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪರಿಸರ ಅಧ್ಯಯನ ಮತ್ತು ಭಾಷ ವಿಷಯಗಳ ಪಠ್ಯಗಳಲ್ಲಿ ಇರಬಹುದಾದ ಸಂಕೀರ್ಣ ವಿಚಾರಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ವರದಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.

ಈ ಸಮಿತಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಂಶುಪಾಲ ಮತ್ತು ಮಿಥಿಕ್‌ ಸೊಸೈಟಿಯ ಸಂಶೋಧಕರೊಬ್ಬರನ್ನು ಸೇರಿಸಲಾಗಿದೆ. ಅದೇ ರೀತಿ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿವೃತ್ತ ಮುಖ್ಯಸ್ಥ ಡಾ ರಾಜರಾಮ್‌ ಹೆಗಡೆ, ಹಗರಿಬೊಮ್ಮನಹಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಪ್ರಾಂಶುಪಾಲ, ರಂಗನಾಥ್‌, ಮಿಥಿಕ್‌ ಸೊಸೈಟಿಯ ಸಂಶೋಧಕ ವಿಠಲ್‌ ಪೋತೆದಾರ್‌, ಪ್ರಾಣಿಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ ಎಂ ಜೆ ಸುಂದರರಾವ್‌, ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಜಾನಪದ ಶಾಸ್ತ್ರ ಬುಡಕಟ್ಟು ಅಧ್ಯಯನ ವಿಭಾಗದ ಸಹಾಯ ಪ್ರಾಧ್ಯಾಪಕ ಡಾ ರೋಹಿಣಾಕ್ಷ ಸೇರಿದಂತೆ ಒಟ್ಟು 16 ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಿತ್ತು.

ಪಠ್ಯ ಪುಸ್ತಕದಲ್ಲಿ ಇದ್ದಿದ್ದೇನು?

ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆಯು ಕುಂಠಿತವಾಯಿತು. ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ಹವಿಸ್ಸು ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು.

ಇನ್ನೊಂದು ಕಡೆ ವೈದಿಕ ಆಚರಣೆಗಳಾದ ಯಾಗ, ಯಜ್ಞ, ಮೊದಲಾದ ಆಚರಣೆಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಈ ದುಬಾರಿ ಆಚರಣೆಗಳು ಜನ ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಈ ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು. ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಅದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ.

ಜನ ಸಾಮಾನ್ಯರ ಭಾಷೆಯಲ್ಲಿಯೇ ಸರಳಮಾರ್ಗಗಳ ಮೂಲಕ ಮುಕ್ತಿ ತೋರುವ ಹೊಸ ಧರ್ಮಗಳನ್ನು ಜನರು ಅಪೇಕ್ಷಿಸುತ್ತಿದ್ದರು. ಮತ್ತೊಂದು ಕಡೆ ಉತ್ತರ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಎಡೆಮಾಡಿತು.

ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗವು ಹಲವು ಸವಲತ್ತುಗಳನ್ನು ಹೊಂದಿತ್ತು. ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು. ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು ಎಂಬ ವಿವರಣೆ ಇತ್ತು.

ಇವೆಲ್ಲವುಗಳ ಪರಿಣಾಮವಾಗಿ 2600 ವರ್ಷಗಳ ಹಿಂದೆ ಗಂಗಾ ಬಯಲಿನಲ್ಲಿ ಸುಮಾರು 62 ಹೊಸ ಧರ್ಮಗಳು ಉದಯಿಸಿದವು. ಅವುಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು. ಬೌದ್ಧ ಧರ್ಮ ಸ್ಥಾಪಕ ಗೌತಮ ಬುದ್ಧ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಂಕರ ವರ್ಧಮಾನ ಮಹಾವೀರ. ಈ ಇಬ್ಬರೂ ಕೂಡ ಗಣರಾಜ್ಯಗಳ ಕುಲಗಳಿಗೆ ಸೇರಿದ ಕ್ಷತ್ರಿಯರು ಎಂದು ಹೇಳಲಾಗಿತ್ತು.
ಇದು ವಿವಾದಕ್ಕೀಡಾಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಹಿಂದಿನ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸ್ಪಷ್ಟ ಕಾರಣವನ್ನು ನೀಡಿರಲಿಲ್ಲ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಯೋಗವು ಇದಕ್ಕೆ ವಿರೋಧ ವ್ಯಕ್ತಪಡಿಸಿ, “ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ವಿಷಯವನ್ನು ಸೇರಿಸಿರುವುದು ಆಘಾತಕಾರಿ ವಿಷಯ. ಅಲ್ಲದೆ, ಇದು ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ” ಎಂದು ತನ್ನ ಮನವಿಯಲ್ಲಿ ದೂರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts