ಕೃಷ್ಣ ಮಠಕ್ಕೆ ಶ್ರೀಗಂಧ; ಡಿ ಸಿ ಶಿಫಾರಸ್ಸು ಬದಿಗಿರಿಸಿತೇ ಬಿಜೆಪಿ ಸರ್ಕಾರ?

ಬೆಂಗಳೂರು; ಪ್ರವರ್ಗ ಎ ಮತ್ತು ಬಿ ಪಟ್ಟಿಯಲ್ಲಿ ಇಲ್ಲದ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ವಾರ್ಷಿಕ 10.00 ಕೆ ಜಿ ಶ್ರೀಗಂಧ ಮಂಜೂರು ಮಾಡಬಹುದು ಎಂದು ಜಿಲ್ಲಾಧಿಕಾರಿ ಶಿಫಾರಸ್ಸನ್ನು ಬದಿಗಿರಿಸಿ ಪ್ರತಿ ತಿಂಗಳಿಗೆ 10.00 ಕೆ ಜಿ ಯಂತೆ ವಾರ್ಷಿಕ 120 ಕೆ ಜಿ ಶ್ರೀಗಂಧವನ್ನು ಮಂಜೂರು ಮಾಡಲಿರುವ ಬಿಜೆಪಿ ಸರ್ಕಾರವು ಕೃಷ್ಣ ಭಕ್ತಿಯನ್ನು ಮೆರೆಯಲಿದೆ!

ಪ್ರವರ್ಗ ಎ ಮತ್ತು ಬಿ ಪಟ್ಟಿಯಲ್ಲಿ ನಮೂದಿಸಿದ ದೇವಸ್ಥಾನ ಹಾಗೂ ಸಂಸ್ಥೆಗಳಿಗೆ ಕ್ರಮವಾಗಿ 20 ಕೆ ಜಿ ಹಾಗೂ 10 ಕೆ ಜಿ ಶ್ರೀಗಂಧವನ್ನು ಮಂಜೂರು ಮಾಡಲು ಅವಕಾಶವಿದೆ. ಉಡುಪಿಯ ಶ್ರೀ ಕೃಷ್ಣ ಮಠವು ಈ ಎರಡೂ ಪಟ್ಟಿಯಲ್ಲಿ ಸೇರಿಲ್ಲ. ಒಂದು ವೇಳೆ ಇವೆರಡೂ ಪ್ರವರ್ಗಕ್ಕೆ ಒಳಗೊಂಡಿಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಶಿಫಾರಸ್ಸಿನ ಆಧಾರದ ಮೇಲೆ ವಾರ್ಷಿಕವಾಗಿ 10.00 ಕೆ ಜಿ ಶ್ರೀಗಂಧವನ್ನು ದೇವಸ್ಥಾನ ಹಾಗೂ ಸಂಸ್ಥೆಗಳಿಗೆ ಬೇಡಿಕೆ ಇವುಗಳಲ್ಲಿ ಯಾವುದು ಪ್ರಮಾಣ ಕಡಿಮೆ ಇರುತ್ತದೆಯೋ ಅದನ್ನು ಪರಿಗಣಿಸಬಹುದು ಎಂದು ಸರ್ಕಾರ ಆದೇಶಿಸಿತ್ತು.

ಆದರೆ ಈ ಆದೇಶವನ್ನೇ ಅರಣ್ಯ, ಪರಿಸರ ಇಲಾಖೆಯು ಬದಿಗಿರಿಸಿ ಪ್ರತಿ ಮಾಹೆ 10 ಕೆ ಜಿ ಯಂತೆ ವಾರ್ಷಿಕ 120 ಕೆ ಜಿ ಶ್ರೀಗಂಧವನ್ನು ಪ್ರತಿ ವರ್ಷ ಒದಗಿಸು ಹಾಗೂ ಶ್ರೀಗಂಧದ ಲಭ್ಯತೆ ಮೇರೆಗೆ ಈ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ.

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ದೇವರಿಗೆ ವಿಶೇಷವಾಗಿ ಗಂಧವನ್ನು ಸಮರ್ಪಿಸಿ ಭಕ್ತರಿಗೆ ಪ್ರಸಾದ ರೂಪವಾಗಿ ನೀಡಲು ತಿಂಗಳಿಗೆ ಪ್ರತಿ ಮಾಹೆ 50 ಕೆ ಜಿ ಯಂತೆ ವಾರ್ಷಿಕವಾಗಿ 6 ಕ್ವಿಂಟಾಲ್‌ ಶ್ರೀಗಂಧ ಒದಗಿಸಬೇಕು ಎಂದು ಕೃಷ್ಣಮಠ ಪರ್ಯಾಯ ಆದಮಾರು ಮಠವು ಸರ್ಕಾರಕ್ಕೆ ಕೋರಿತ್ತು.

ಸ್ವಾತಂತ್ರ್ಯ ಪೂರ್ವದಿಂದಲೂ ಶ್ರೀ ಕೃಷ್ಣನ ಪೂಜಾ ಕೈಂಕರ್ಯಗಳಿಗಾಗಿ ರಾಜರಿಂದ ಬಳವಳಿಯಾಗಿ ಬಂದ ಪ್ರದೇಶದಿಂದ ಶ್ರೀಗಂಧ ದೊರಕುತ್ತಿತ್ತು. ಆ ನಂತರ ಬ್ರಿಟಿಷರ ಕಾಲದಿಂದ ಪ್ರತಿ ವರ್ಷವೂ 1090 ಕೆ ಜಿ ಶ್ರೀಗಂಧವನ್ನು ಭೂಮಿ ನೋಡಿಕೊಂಡು ಸರ್ಕಾರವೇ ಒದಗಿಸುತ್ತಿತ್ತು. ಆದರೆ 2017ರಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಇದನ್ನು ರದ್ದುಗೊಳಿಸಿತ್ತು. ಇದನ್ನು ಪರಿಶೀಲಿಸಿ ಪುನಃ ಶ್ರೀಗಂಧವನ್ನು ಒದಗಿಸಿ ಅದನ್ನು ಭಕ್ತರಿಗೆ ವಿನಿಯೋಗಿಸಲು ಅನುಕೂಲ ಮಾಡಿಕೊಟ್ಟು ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಶ್ರೀಕೃಷ್ಣಮಠ ಪರ್ಯಾಯ ಶ್ರೀ ಆದಮಾರು ಮಠದ ವ್ಯವಸ್ಥಾಪಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2021ರ ಆಗಸ್ಟ್‌ 17ರಂದು ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಾಗೆಯೇ ಮಠವು 2021ರ ಏಪ್ರಿಲ್‌ 23ರಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪತ್ರ ಬರೆದಿತ್ತು. ಉಡುಪಿ ಶ್ರೀ ಕೃಷ್ಣ ಮಠಕ್ಕೆ ಪ್ರತಿ ವರ್ಷವೂ ಉಚಿತವಾಗಿ ಶ್ರೀಗಂಧವನ್ನು ಪೂರೈಕೆ ಮಾಡಬೇಕು ಎಂದು ಕೋರಿಕೊಂಡಿತ್ತು. ಶ್ರೀಗಂಧವನ್ನು ಪಡೆಯಲು ಮಠವು ಕಾನೂನುಬದ್ಧವಾಗಿ ಹಕ್ಕು ಹೊಂದಿತ್ತಾದರೂ ಅದನ್ನು 2017ರ ಡಿಸೆಂಬರ್‌ 4ರಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಮಠವು ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿತ್ತು.

‘ಉಚಿತವಾಗಿ ಶ್ರೀಗಂಧವನ್ನು ಪಡೆಯಲು ಮಠವು ಟೈಟಲ್‌ ಡೀಡ್‌ ಹೋಲ್ಡರ್‌ ಆಗಿದೆ. ಕರ್ನಾಟಕ ಅರಣ್ಯ ಸಂಹಿತೆ 97ರ ಪ್ರಕಾರ 29 ಧಾರ್ಮಿಕ ಸಂಸ್ಥೆಗಳಿಗೆ ಉಚಿತವಾಗಿ ಶ್ರೀಗಂಧವನ್ನು ಪೂರೈಕೆ ಮಾಡಬೇಕು. ಹೀಗಾಗಿ ಶ್ರೀಗಂಧವನ್ನು ಮಠಕ್ಕೆ ಪೂರೈಕೆ ಮಾಡುವುದು ಸರ್ಕಾರದ ಹೊಣೆಗಾರಿಕೆಯಾಗಿದೆ,’ ಎಂದು ಏಪ್ರಿಲ್‌ 2021ರಂದು ಬರೆದಿದ್ದ ಪತ್ರದಲ್ಲಿ ವಿವರಿಸಲಾಗಿತ್ತು.

the fil favicon

SUPPORT THE FILE

Latest News

Related Posts