ಸಹಭಾಗಿ; ಕೆಪಿಎಸ್‌ಸಿ ಅಧ್ಯಕ್ಷರ ನೇಮಕ ಕುರಿತು ‘ದಿ ಫೈಲ್‌’ ವರದಿ ವಿಸ್ತರಿಸಿದ ಪ್ರಜಾವಾಣಿ

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ದ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರ ನೇಮಕ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ‘ದಿ ಫೈಲ್‌’ ಕಳೆದ 5 ತಿಂಗಳ ಹಿಂದೆಯೇ ಪ್ರಕಟಿಸಿದ್ದ ವರದಿಯನ್ನು ಪ್ರಜಾವಾಣಿ ಇದೀಗ ವಿಸ್ತರಿಸಿದೆ.

ಶಿವಶಂಕರಪ್ಪ ಎಸ್ ಸಾಹುಕಾರ್ ಅವರನ್ನು ಸಂವಿಧಾನದ 316ನೇ ವಿಧಿಯನ್ನು ಉಲ್ಲಂಘಿಸಿ ಕೆಪಿಎಸ್‌ಸಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ ಎಂದು ‘ದಿ ಫೈಲ್‌’ 2021ರ ಏಪ್ರಿಲ್‌ 5ರಂದೇ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

ಆಯೋಗದ ಅಧ್ಯಕ್ಷ ಅಥವಾ ಸದಸ್ಯ ಭಾರತ ಸರ್ಕಾರದ ಅಧೀನದಲ್ಲಾಗಲಿ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲಿ ಕನಿಷ್ಠ ಪಕ್ಷ 10 ವರ್ಷಗಳವರೆಗೆ ಪದಧಾರಣೆ ಮಾಡಿರಬೇಕು ಎಂದು ಸಂವಿಧಾನದ 316ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಿದ್ದನ್ನು ಉಲ್ಲಂಘಿಸಿದ್ದ ಬಿಜೆಪಿ ಸರ್ಕಾರವು, ಸಹಕಾರಿ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು  ಆಯೋಗಕ್ಕೆ ಅಧ್ಯಕ್ಷನನ್ನಾಗಿ ನೇಮಿಸಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

‘ದಿ ಫೈಲ್‌’ ವರದಿಯಲ್ಲಿ ವಿವರಿಸಿದ್ದ ಅಂಶಗಳನ್ನೇ ಪ್ರಜಾವಾಣಿಯೂ ಇಂದು ತನ್ನ (ಆಗಸ್ಟ್‌ 12,2021ರ ಸಂಚಿಕೆ) ಮುಖಪುಟದಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಅನರ್ಹ? ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿರುವ ವರದಿಯಲ್ಲಿಯೂ ಪ್ರಸ್ತಾಪಿಸಿದೆ. ಇದು ‘ದಿ ಫೈಲ್‌’ ವರದಿಯನ್ನು ವಿಸ್ತರಿಸಿದಂತಾಗಿದೆಯಲ್ಲದೆ ಸಹಭಾಗಿತ್ವ ಪತ್ರಿಕೋದ್ಯಮವನ್ನು ಮುಂದುವರೆಸಿದಂತಾಗಿದೆ.

ವಿವಾದಕ್ಕೆ ದಾರಿಯಾದ ಕೆಪಿಎಸ್‌ಸಿ ಅಧ್ಯಕ್ಷರ ನೇಮಕ; ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಿತೇ ಸರ್ಕಾರ?

ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕವಾಗಿದ್ದ ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರು 10 ವರ್ಷದ ಹಿಂದೆ ರಾಷ್ಟ್ರೀಯ ಸಹಕಾರ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದರು. ಇವರ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು ಎಂದು ಆದೇಶ ಹೊರಡಿಸಿತ್ತು. ಶಿವಶಂಕರಪ್ಪ ಅವರ ಕಾರ್ಯಕ್ಷಮತೆ ಬಗ್ಗೆ ಸಹಕಾರ ಯೂನಿಯನ್‌ ನಕಾರಾತ್ಮಕ ವರದಿ ನೀಡಿದ್ದನ್ನು ದಾಖಲೆ ಸಮೇತ ‘ದಿ ಫೈಲ್‌’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಸಂವಿಧಾನ ವಿರೋಧಿ ನಡೆಯೇ?

ಪ್ರತಿಯೊಂದು ಲೋಕಸೇವಾ ಆಯೋಗದ ಸದಸ್ಯರಲ್ಲಿ ಸಾಧ್ಯವಾಗಬಹುದಾದ ಮಟ್ಟಿಗೆ ಅರ್ಧದಷ್ಟು ಸದಸ್ಯರು, ಅವರು ಅನುಕ್ರಮವಾಗಿ ನೇಮಕಗೊಂಡ ದಿನಾಂಕಗಳಂದು ಭಾರತ ಸರ್ಕಾರದ ಅಧೀನದಲ್ಲಾಗಲಿ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲಿ ಕನಿಷ್ಠ ಪಕ್ಷ 10 ವರ್ಷಗಳವರೆಗೆ ಪದಧಾರಣೆ ಮಾಡಿರಬೇಕು. ಮತ್ತು ಈ 10 ವರ್ಷಗಳ ಅವಧಿಯನ್ನು ಲೆಕ್ಕ ಹಾಕುವಲ್ಲಿ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಭಾರತ ಸಾಮ್ರಾಟನ ಅಧೀನದಲ್ಲಿ ಅಥವಾ ಒಂದು ಭಾರತೀಯ ಸಂಸ್ಥಾನ ಸರ್ಕಾರದ ಅಧೀನದಲ್ಲಿ ಒಬ್ಬ ವ್ಯಕ್ತಿಯು ಪದಧಾರಣೆ ಮಾಡಿದ್ದ ವ್ಯಕ್ತಿಯನ್ನು ಸೇರಿಸಿಕೊಳ್ಳತಕ್ಕದ್ದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಅಧ್ಯಕ್ಷನನ್ನಾಗಿಸಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದೇ ಅರ್ಥೈಯಿಸಲಾಗುತ್ತಿದೆ ಎಂಬ ಅಭಿಪ್ರಾಯವನ್ನೂ ‘ದಿ ಫೈಲ್‌’ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಎನ್‌ಸಿಯುಐನಲ್ಲಿ(ನ್ಯಾಷನಲ್‌ ಕೋ ಆಪರೇಟೀವ್‌ ಯೂನಿಯನ್‌ ಆಫ್‌ ಇಂಡಿಯಾ)ದ ಗುಲ್ಬರ್ಗಾ ಶಾಖೆಯ ಕಾರ್ಯಕ್ಷೇತ್ರದಲ್ಲಿ ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರು ಎಫ್‌ಜಿಐ ಆಗಿ ಗುತ್ತಿಗೆ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ ಅವರ ಕಾರ್ಯನಿರ್ವಹಣೆ ತೃಪ್ತಿಕರವಾಗಿರಲಿಲ್ಲ ಮತ್ತು ಸಮಯ ಪ್ರಜ್ಞೆ ಹೊಂದಿರಲಿಲ್ಲ. ಹೀಗಾಗಿ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಕ ಅನಿತಾ ಮಂಚಾಡ ಅವರು 2010ರ ಮಾರ್ಚ್‌ 18ರಂದು ಆದೇಶ ಹೊರಡಿಸಿದ್ದರು. ಮತ್ತು ಯಾವುದೇ ಪ್ರಭಾರ ಕಾರ್ಯಭಾರವನ್ನೂ ವಹಿಸಬಾರದು ಎಂದು ಸಲಹೆ ನೀಡಿದ್ದರು ಹೊರಡಿಸಿದ್ದ ಆದೇಶವನ್ನಾಧರಿಸಿ ‘ದಿ ಫೈಲ್‌’ನಲ್ಲಿ ವರದಿ ಪ್ರಕಟಿಸಲಾಗಿತ್ತು.

ಲೋಕಸೇವಾ ಆಯೋಗವು ಕೆಎಎಸ್‌ ಹುದ್ದೆಯೂ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳಿಗೆ ಗ್ರೂಪ್‌ ಎ, ಬಿ ಮತ್ತು ಸಿ ಗುಂಪಿಗೆ ಅಧಿಕಾರಿ, ನೌಕರರನ್ನು ಆಯ್ಕೆ ಮಾಡುವ ಪ್ರಾಧಿಕಾರ. ಇಂತಹ ಹುದ್ದೆಗಳಿಗೆ ಆಯ್ಕೆ ಮಾಡುವ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಉನ್ನತ ಅರ್ಹತೆಯುಳ್ಳ ಮತ್ತು ಸರ್ಕಾರದ ಉನ್ನತ ಹುದ್ದೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವವರನ್ನು ನೇಮಿಸಬೇಕಿತ್ತು.

ಆದರೆ ಬಿಜೆಪಿ ಸರ್ಕಾರವು ಸಹಕಾರಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದವರನ್ನು ಆಯೋಗದ ಅಧ್ಯಕ್ಷನ್ನಾಗಿಸಿ ನೇಮಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಹಿಂದಿನ ಸಂಸ್ಥೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡದ ಮತ್ತು ಸಮಯ ಪ್ರಜ್ಞೆ ಹೊಂದಿಲ್ಲ ಎಂದು ನಕಾರಾತ್ಮಕ ವರದಿ ನೀಡಿದ್ದ ಸಂಸ್ಥೆಯು ಹೊರಡಿಸಿದ್ದ ಆದೇಶ ಮತ್ತು ಅವರ ಸೇವಾ ಹಿನ್ನೆಲೆ ಪರಿಶೀಲಿಸದೆಯೇ ಆಯೋಗಕ್ಕೆ ಅಧ್ಯಕ್ಷನನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ ಎಂಬ ಅಂಶವನ್ನು ಕಳೆದ 5 ತಿಂಗಳ ಮೊದಲೇ ‘ದಿ ಫೈಲ್‌’ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts