ಕೆಎಎಸ್‌ ಅಕ್ರಮ ಫಲಾನುಭವಿಗಳ ರಕ್ಷಣೆಯ ಸುಗ್ರೀವಾಜ್ಞೆಗೆ ಕುತ್ತು?; ಹೈಕೋರ್ಟ್‌ ನೋಟೀಸ್‌

ಬೆಂಗಳೂರು; ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿದ್ದ ಮೈತ್ರಿ ಸರ್ಕಾರವು ಹೊರಡಿಸಿದ್ದ ಕರ್ನಾಟಕ ಸಿವಿಲ್‌ ಸೇವೆಗಳ (ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ ರಕ್ಷಣೆ) ಅಧ್ಯಾದೇಶ 2019ರ ವಿಧೇಯಕವು ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ.

ಸುಗ್ರೀವಾಜ್ಞೆ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕರ್ನಾಟಕ ಹೈಕೋರ್ಟ್‌, ಈ ಸಂಬಂಧ ರಾಜ್ಯ ಸರ್ಕಾರ, ಕೆಪಿಎಸ್ಸಿಗೆ ನೋಟೀಸ್‌ ಜಾರಿ ಮಾಡಿದೆ. ಅಕ್ರಮ ಫಲಾನುಭವಿಗಳ ರಕ್ಷಣೆಯ ಮೂಲ ಉದ್ದೇಶದಿಂದ ಮೈತ್ರಿ ಸರ್ಕಾರ ಕೈಗೊಂಡಿದ್ದ ತಪ್ಪು ನಿರ್ಧಾರದಿಂದಾಗಿ ಈಗಿನ ಬಿಜೆಪಿ ಸರ್ಕಾರವೂ ಹೈಕೋರ್ಟ್‌ನ ಕಟಕಟೆಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದೊದಗಿದೆ.

ಅಕ್ರಮಗಳ ಮೂಲಕ ನೇಮಕವಾಗಿದ್ದಾರೆ ಎನ್ನಲಾಗಿರುವ (1998,1999,2004) ಆರೋಪಿತ ಕೆಎಎಸ್‌ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಗಿದ್ದ ಹಿಂದಿನ ಮೈತ್ರಿ ಸರ್ಕಾರವು ವಿಧಾನಮಂಡಲದಲ್ಲಿ ಮಂಡಿಸದೆಯೇ ನೇರವಾಗಿ ಸುಗ್ರೀವಾಜ್ಞೆ ಹೊರಡಿಸಿತ್ತು. ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಸೇರಿದಂತೆ ಹಲವು ಶಾಸಕರ ವಿರೋಧದ ನಡುವೆಯೂ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಖಲೀಲ್‌ ಅಹ್ಮದ್‌ ಮತ್ತಿತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಓಕಾ ನೇತೃತ್ವದ ಮುಖ್ಯ ಪೀಠವು ಜಾರಿ ಮಾಡಿರುವ ನೋಟೀಸ್‌, ಈಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರಕರಣದ ವಿಚಾರಣೆಯನ್ನು 2021ರ ಮಾರ್ಚ್‌ 21ರಂದು ನಡೆಸಲಿದೆ.

2016ರಲ್ಲಿ ಹೈಕೋರ್ಟ್ ಮತ್ತು 2018ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಗಳನ್ನು ರಾಜ್ಯ ಸರ್ಕಾರವು ಈವರೆವಿಗೂ ಪಾಲಿಸಿಲ್ಲ. ಆದೇಶವನ್ನು ಪಾಲಿಸದೆಯೇ ಜಾರಿಗೊಳಿಸಿರುವ ಸುಗ್ರೀವಾಜ್ಞೆಯು ಗೆಜೆಟೆಡ್‌ ಪ್ರೊಬೇಷನರಿ ಸೇರಿದಂತೆ ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ನೇರ ನೇಮಕಾತಿ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

1997ರ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ನಿಯಮಗಳಿಗೆ ಒಳಪಟ್ಟು ಮರು ಆಯ್ಕೆ (ರೀ ಡೂ)ಯನ್ನು ನ್ಯಾಯಾಲಯಗಳು ನೀಡಿರುವ ತೀರ್ಪಿನಂತೆ 1998, 99 ಮತ್ತು 2004ರಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ಎ ಮತ್ತು ಬಿ ವೃಂದದ ಹುದ್ದೆಗಳ ನೇಮಕಾತಿಗೆ 1:20 ಮತ್ತು 1:5 ಅನುಪಾತದಲ್ಲಿ (ರಿಟ್‌ ಅರ್ಜಿ ಸಂಖ್ಯೆ 27674/2012) ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಗಳನ್ನು ನಡೆಸಿ ಮರು ಆಯ್ಕೆ ಮಾಡಬೇಕು ಎಂದು ಅರ್ಜಿದಾರ ಖಲೀಲ್‌ ಅಹ್ಮದ್‌ ಮತ್ತಿತರರು ಕೋರಿದ್ದಾರೆ.

ಸುಗ್ರೀವಾಜ್ಞೆ ಜಾರಿಯನ್ನು 1994ರ ಮೇ 3ರಿಂದಲೇ ಪೂರ್ವಾನ್ವಯಗೊಳಿಸಿ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಇದನ್ನೂ ಪ್ರಶ್ನಿಸಿರುವ ಅರ್ಜಿದಾರರು, 1994ರಿಂದ ಈವರೆವಿಗೆ ನಡೆದಿರುವ ಕೆಎಎಸ್‌ ನೇಮಕಾತಿಗಳನ್ನೂ 1:20 ಮತ್ತು 1:5 ಅನುಪಾತದಲ್ಲಿಯೇ ಮರು ಆಯ್ಕೆ ಮಾಡಬೇಕು ಎಂದು ಕೋರಿದ್ದಾರೆ.

2019ರ ಮೇ 27ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸಿವಿಲ್‌ ಸೇವೆಗಳ(ಆಯ್ಕೆ ಪ್ರಾಧಿಕಾರ ಮೂಲಕ ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯ ಅನುಸರಣೆಯಲ್ಲಿ ನೇಮಕವಾದ ವ್ಯಕ್ತಿಗಳ ಸೇವಾ ರಕ್ಷಣೆ) ಅಧ್ಯಾದೇಶ 2019ರ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಕೈಗೊಂಡಿರುವ ನಿರ್ಣಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಸೇರಿದಂತೆ ಹಲವು ಶಾಸಕರುಗಳು ವಿರೋಧ ವ್ಯಕ್ತಪಡಿಸಿದ್ದರು.

‘ಎಲ್ಲಾ ಶಾಸಕರುಗಳ ಭಾವನೆಗಳು ಏಕ ರೀತಿಯದ್ದಾಗಿರುತ್ತದೆ. ಯಾವುದೇ ಸರ್ಕಾರಿ ನೌಕರರ ಸೇವಾ ಭದ್ರತೆಯನ್ನು ಒದಗಿಸುವ ಸರ್ಕಾರಿ ನಿರ್ಣಯಕ್ಕೆ ನಮ್ಮ ಯಾರ ಆಕ್ಷೇಪವೂ ಇರಕೂಡದು. ಆದರೆ ಸೇವಾ ಜೇಷ್ಠತೆಯನ್ನ ಪರಿಗಣಿಸುವಾಗ ಅತ್ಯಂತ ಜಾಗರೂಕತೆಯಿಂದ ನಾವು ಹೆಜ್ಜೆ ಇಡಬೇಕಾಗುತ್ತದೆ. ಯಾವುದೇ ಒಂದು ಸದುದ್ದೇಶದಿಂದ ಮಾಡುವ ಕೆಲಸ ನಮ್ಮ ಅರಿವಿಲ್ಲದೆ ನಿರಪರಾಧಿಗಳಾದ ಇತರರಿಗೆ ವಿನಾ ಕಾರಣ ಅನ್ಯಾಯ ಆಗದಂತೆ ನಾವು ಜಾಗ್ರತೆ ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರುಗಳ ಪತ್ರವನ್ನು ಅವಲೋಕಿಸಿ ಅಗತ್ಯ  ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇನೆ,” ಎಂದು ಹಿಂದಿನ ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಮುಖ್ಯಮಂತ್ರಿಗೆ ಬರೆದಿದ್ದ ಪತ್ರದಲ್ಲಿ ಎಚ್ಚರಿಸಿದ್ದನ್ನು ಸ್ಮರಿಸಬಹುದು.

ಸುಗ್ರೀವಾಜ್ಞೆಯಿಂದ ಹಲವು ಕೆಎಎಸ್‌ ವೃಂದದ ಅಧಿಕಾರಿಗಳ ಸೇವಾ ಹಿರಿತನಕ್ಕೆ ಧಕ್ಕೆ ಆಗುವುದಷ್ಟೇ ಅಲ್ಲದೆ ಅವರಿಗೆ ನ್ಯಾಯಯುತವಾಗಿ ಲಭಿಸಬೇಕಾದ ಬಡ್ತಿಗಳು ವರ್ಷಾನುಗಟ್ಟಲೇ ಮುಂದೂಡಲ್ಪಡುತ್ತದೆ. ಕೆಲವೇ ಅಧಿಕಾರಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೇವಾ ಭದ್ರತೆ ಮತ್ತು ಸೇವಾ ಹಿರಿತನ ನೀಡಿ ಯಾವ ತಪ್ಪೂ ಮಾಡದ ಇತರೆ ಅಧಿಕಾರಿಗಳನ್ನು ಶಿಕ್ಷಿಸುವುದು ಸರಿಯಾದ ಕ್ರಮವಲ್ಲ.  ಹೀಗಾಗಿ ಈ ವಿಷಯದ ಸಾಧಕ ಬಾಧಕಗಳನ್ನು ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಾಧಿತ ಅಧಿಕಾರಿಗಳಿಗೆ ನ್ಯಾಯ ದೊರಕಿಸಬೇಕು ” ಎಂದು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಎಸ್‌ ಎನ್ ಸುಬ್ಬಾರೆಡ್ಡಿ ಅವರು ಸಹ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಅಕ್ರಮ ಫಲಾನುಭವಿಗಳು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ  ಸತ್ಯಶೋಧನಾ ಸಮಿತಿ ವರದಿಯಲ್ಲಿ ಗುರುತಿಸಲಾಗಿರುವ  ಅಧಿಕಾರಿಗಳ ರಕ್ಷಣೆಗೆ ವಿಶೇಷ ಅಧಿನಿಯಮ ರಚಿಸುವುದು ಅಗತ್ಯ ಎಂದು ಮೈತ್ರಿ ಸರ್ಕಾರ ಪ್ರತಿಪಾದಿಸಿತ್ತಲ್ಲದೆ ಆಗಿರುವ ತಪ್ಪುಗಳಿಗೆ  ಅಧಿಕಾರಿಗಳು ಹೊಣೆಯಲ್ಲ; ಅವರದಲ್ಲದ ತಪ್ಪಿಗಾಗಿ ಈ ಅಂತರದ ಅವಧಿಯಲ್ಲಿ ಅವರುಗಳನ್ನು ಸ್ಥಳಾಂತರಿಸುವುದು,  ಸೇವೆಯಿಂದ ತೆಗೆದು ಹಾಕುವುದು ಅಥವಾ ಬೇರೊಂದು ಸೇವೆಗೆ ವರ್ಗಾಯಿಸುವುದು ಸಮರ್ಥನೀಯವಲ್ಲ ಎಂಬ ವಿತಂಡವಾದವನ್ನು ಹಿಂದಿನ ಮೈತ್ರಿ ಸರ್ಕಾರ ಮುಂದೊಡ್ಡಿತ್ತು.

ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಅಥವಾ ಪರಿಷ್ಕರಿಸಲು ಮತ್ತು ಪ್ರಕಟಗೊಂಡ ಅಂತಿಮ ಆಯ್ಕೆಪಟ್ಟಿ ಪರಿಷ್ಕರಣೆಯನ್ನು ಸುಗ್ರೀವಾಜ್ಞೆ ಮೂಲಕ ಪ್ರತಿಬಂಧಿಸಿದ್ದ ಮೈತ್ರಿ ಸರ್ಕಾರವು ಸುಗ್ರೀವಾಜ್ಞೆ  ಜಾರಿಯನ್ನು 1994ರ ಮೇ 3ರಿಂದಲೇ ಪೂರ್ವಾನ್ವಯಗೊಳಿಸಿದ್ದು ಹಲವು ಅನುಮಾನಗಳನ್ನು ಹುಟ್ಟಿಸಿತ್ತು.

ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಯಾವುದೇ ನ್ಯಾಯಾಲಯ, ನ್ಯಾಯಾಧೀಕರಣ ಅಥವಾ ಪ್ರಾಧಿಕಾರದ ಯಾವುದೇ ತೀರ್ಪು, ಡಿಕ್ರಿ ಅಥವಾ ಆದೇಶದಲ್ಲಿ ಏನೇ ಒಳಗೊಂಡಿದ್ದರೂ ಆಯ್ಕೆಯಾದ ಅಭ್ಯರ್ಥಿಗಳ ದಿನಾಂಕದಿಂದ 10 ವರ್ಷಗಳ ಅವಧಿಯ ತರುವಾಯ ಯಾವುದೇ ಸನ್ನಿವೇಶಗಳ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನ ಆಥವಾ ಉದಾರ ಪರಿಷ್ಕರಣೆ ಮೂಲಕ ಪ್ರಕಟಗೊಂಡ ಅಂತಿಮ ಆಯ್ಕೆ ಪಟ್ಟಿಯನ್ನು ನೇಮಕಾತಿ ಪ್ರಾಧಿಕಾರವು ಪರಿಷ್ಕರಿಸತಕ್ಕದ್ದಲ್ಲ,” ಎಂದು ಸುಗ್ರೀವಾಜ್ಞೆಯ ಮೂರನೇ ಕಲಂನಲ್ಲಿ ವಿವರಿಸಿರುವುದು ಹಲವು ಅಭ್ಯರ್ಥಿಗಳ ವಿಶ್ವಾಸವನ್ನು ಕುಗ್ಗಿಸಿತ್ತು.

ಅದೇ ರೀತಿ ನೇಮಕಾತಿ ಪ್ರಾಧಿಕಾರವು (1)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ  ಮಿತಿ ಅವಧಿಯು ಮುಕ್ತಾಯವಾದ  ನಂತರ  ಅಂತಹ ಅಂತಿಮ ಆಯ್ಕೆಪಟ್ಟಿಯನ್ನು ಪರಿಷ್ಕರಿಸುವುದರಿಂದ  ಉಂಟಾದ ಅನರ್ಹತೆಯ ಆಧಾರದ ಮೇಲೆ ಅಂತಿಮ ಪಟ್ಟಿ ಅಥವಾ ಪರಿಷ್ಕರಿಸಿದ  ಪಟ್ಟಿಯ ಅನುಸರಣೆಯಲ್ಲಿ ಹಾಗೆ ನೇಮಕಗೊಂಡ ಅಥವಾ ಆಯ್ಕೆಯಾದ ಅಭ್ಯರ್ಥಿಗಳನ್ನು  ಸೇವೆಯಿಂದ ತೆಗೆದು ಹಾಕತಕ್ಕದ್ದಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.

ಇನ್ನು, ಸುಗ್ರೀವಾಜ್ಞೆ ಪ್ರಕಾರ ಯಾವೊಬ್ಬ ಸರ್ಕಾರಿ ನೌಕರನನ್ನು ಒಂದು ಸೇವೆಯಿಂದ ಮತ್ತೊಂದು ಸೇವೆಗೆ ಆತನ ಅಭಿಮತಕ್ಕೆ  ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ, ಅಥವಾ  ಪೂರ್ವಸ್ಥಿತಿಗೆ(REVERT)ದೂಡುವಂತಿಲ್ಲ. ಹಾಗೆಯೇ ಈ ಸುಗ್ರೀವಾಜ್ಞೆ ಪ್ರಕಟಣೆಗೆ ಮೊದಲು ಹೊರಡಿಸಿದ ಯಾವುದಾದರೂ ಪುನರಾವಲೋಕಿತ ಆಯ್ಕೆ ಪಟ್ಟಿ ಇದ್ದಲ್ಲಿ ಅದರ ಅನುಸಾರವಾಗಿ ನೇಮಕಗೊಳ್ಳಲು ಅಥವಾ ಉನ್ನತೀಕರಣಗೊಳ್ಳಲು, ವರ್ಗಾವಣೆಗೊಳ್ಳಲು ಇಚ್ಛಿಸಿದ  ಅಭ್ಯರ್ಥಿಯ ನೇಮಕಾತಿ , ಉನ್ನತೀಕರಣ ಅಥವಾ ವರ್ಗಾವಣೆಯನ್ನು ನಿರಾಕರಿಸುವಂತಿಲ್ಲ ಎಂದೂ ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

ಆಯ್ಕೆಗೊಂಡ ಅಭ್ಯರ್ಥಿಗಳ ನೇಮಕಾತಿ ಅಥವಾ ಉನ್ನತೀಕರಣ ಅಥವಾ ವರ್ಗಾವಣೆಗೆ ಅಗತ್ಯವಿರುವ, ಅಷ್ಟು ಸಂಖ್ಯೆಯ ಸಂಖ್ಯಾತಿರಿಕ್ತ  ಹುದ್ದೆಗಳನ್ನು ಆರ್ಥಿಕ ಇಲಾಖೆಯ ಸಹಮತಿಯನ್ನು ಪೂರ್ವಭಾವಿಸಿಕೊಂಡು ರಾಜ್ಯ ಸರ್ಕಾರವೇ ಸೃಜಿಸಲು ಸುಗ್ರೀವಾಜ್ಞೆ ಅವಕಾಶ ಮಾಡಿಕೊಡಲಿದೆ.

ಈ ಸುಗ್ರೀವಾಜ್ಞೆಯ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಆಯ್ಕೆಪಟ್ಟಿ, ನೇಮಕಾತಿ, ನಿಮ್ನೀಕರಣ, ಪೂರ್ವಸ್ಥಿತಿಗೆ ತರುವುದು , ತೆಗೆದುಹಾಕುವುದು ಅಥವಾ ವರ್ಗಾವಣೆಯ ಪುನರಾವಲೋಕನಕ್ಕಾಗಿ ಯಾವುದೇ ನ್ಯಾಯಾಲಯ, ಯಾವುದೇ ನ್ಯಾಯಾಧೀಕರಣ ಅಥವಾ  ಯಾವುದೇ ಪ್ರಾಧಿಕಾರದ ಮುಂದೆ ಯಾವುದೇ ದಾವೆ ಅಥವಾ ನಡವಳಿಗಳನ್ನು ನಿರ್ವಹಿಸಲು ಇರುವ ಅವಕಾಶಗಳನ್ನು ಸುಗ್ರೀವಾಜ್ಞೆ ಕಸಿದುಕೊಳ್ಳಲಿದೆ.

ಇದಲ್ಲದೆ, ಈ ಉಪಬಂಧಗಳಿಗೆ ವಿರುದ್ಧವಾಗಿ ಯಾವುದೇ ಅಂತಹ ಪ್ರಕರಣಗಳನ್ನು ಪರಿಷ್ಕರಿಸುವಂತೆ ನಿರ್ದೇಶನ ನೀಡಲು  ಯಾವುದೇ ನ್ಯಾಯಾಲಯವು ಯಾವುದೇ ಡಿಕ್ರಿ, ಆದೇಶವನ್ನು ಹೊರಡಿಸಲಾಗದು ಎಂಬ ಅಂಶವೂ ಸುಗ್ರೀವಾಜ್ಞೆಯಲ್ಲಿ ಸೇರ್ಪಡೆಗೊಂಡಿರುವುದು ನ್ಯಾಯಾಲಯಗಳ ಉಪಸ್ಥಿತಿಯನ್ನೂ ಕಡೆಗಣಿಸಿದಂತಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಸುಗ್ರೀವಾಜ್ಞೆಯಿಂದಾಗಿ ಸೇವಾ ಹಿರಿತನ ಮತ್ತು ಪದೋನ್ನತಿ ನೀತಿಯೇ ಬುಡಮೇಲಾಗುವ ಸಂಭವವಿದೆ ಎಂದು ಕೆಎಎಸ್‌ ಅಧಿಕಾರಿಗಳ ಗುಂಪೊಂದು ಆತಂಕ ವ್ಯಕ್ತಪಡಿಸಿತ್ತು. ತಹಸೀಲ್ದಾರ್‌ ಹುದ್ದೆಯಿಂದ ಕೆಎಎಸ್‌ ಸೂಪರ್‌ ಟೈಂ ಹುದ್ದೆಯವರೆಗೆ ಎಲ್ಲಾ ಹಂತಗಳಲ್ಲಿ 820 ಅಧಿಕಾರಿಗಳು ಸೇವಾ ಹಿರಿತನ ಮತ್ತು ಸಕಾಲದಲ್ಲಿ ಪದೋನ್ನತಿಯಿಂದ ವಂಚಿತರಾಗುತ್ತಾರೆ ಎನ್ನಲಾಗಿದೆ.

the fil favicon

SUPPORT THE FILE

Latest News

Related Posts