ಹಣಕ್ಕಾಗಿ ಬೇಡಿಕೆ; ಸಚಿವ ಅಶೋಕ್‌ ಆಪ್ತ ಸಹಾಯಕನ ವಿರುದ್ಧ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು; ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಒಳಗಾಗಿರುವ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಗಂಗಾಧರ್‌ ಅವರ ವಿರುದ್ಧ ಶೃಂಗೇರಿ ಸಬ್‌ ರಿಜಿಸ್ಟ್ರಾರ್‌ ಚೆಲುವರಾಜು ಅವರು ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ

ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ ಸಚಿವ ಆರ್‌ ಅಶೋಕ್‌ ಅವರು ಭಾಗವಹಿಸಿದ್ದರು. 2021ರ ಜನವರಿ 21ರಂದು ಕಂದಾಯ ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗೆ ಸಂದೇಶ ಕಳಿಸಲಾಗಿತ್ತು. ಆದರೆ ಸಂದೇಶ ಕಳಿಸಿದವ ಇವರಿಗೆ ಪರಿಚಯವಿರಲಿಲ್ಲ. ಇದಾಗಿ 3 ದಿನದ ನಂತರ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌ ಎಂಬ ವ್ಯಕ್ತಿಯು ತಮ್ಮನ್ನು ಮತ್ತು ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು ಶರಂಗೇರಿಯ ಆದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದ ವೇಳೆಯಲ್ಲಿ ಗಂಗಾಧರ ಎಂಬಾತ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು ಎಂದು ದೂರಿದ್ದಾರೆ. ಈ ಬಗ್ಗೆ ನನಗೆ ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ನನಗೆ ಇಲ್ಲ ಎಂದು ಸ್ಥಳದಲ್ಲಿಯೇ ತಿಳಿಸಿ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ವಿವರಿಸಿದ್ದಾರೆ.

ಅದೇ ದಿನ ಗಂಗಾಧರ್‌ (ದೂರವಾಣಿ ಸಂಖ್ಯೆ ; 7760666222) 8-30ರ ಸಮಯದಲ್ಲಿ ತನ್ನ ಮೊಬೈಲ್‌ನಿಂದ ವಾಟ್ಸಾಪ್‌ ಧ್ವನಿ ಕರೆ ಮಾಡಿದ್ದ ಎಂದು ದೂರಿನಲ್ಲಿ ಹೇಳಿರುವ ಚೆಲುವರಾಜು ಅವರು ಗಂಗಾಧರ್‌ ಎಂಬುವರು ಸರ್ಕಾರಿ ಅಧಿಕಾರಿಯನ್ನು ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಚೆಲುವರಾಜು ಅವರು ಆರೋಪಿಸಿದ್ದಾರೆ.

ಅಬಕಾರಿ ಸಚಿವರಾಗಿದ್ದ ಎಚ್‌ ನಾಗೇಶ್‌ ವಿರುದ್ಧವೂ ಒಂದು ಕೋಟಿ ಲಂಚದ ಆರೋಪ ಕೇಳಿ ಬಂದಿತ್ತು. ಈ ಕುರಿತು ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ಪುತ್ರಿ ಪ್ರಧಾನಮಂತ್ರಿ ಕಚೇರಿಗೆ ದೂರು ದಾಖಲಿಸಿದ್ದರು. ಹಾಗೆಯೇ ಕೃಷಿ ಇಲಾಖೆ ಅಧಿಕಾರಿ, ನೌಕರರು ಸಚಿವ ಬಿ ಸಿ ಪಾಟೀಲ್‌ ಅವರ ವಿರುದ್ಧ ಹಣ ವಸೂಲಿ ಆರೋಪ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ದೂರು ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts