ಕೋವಿಡ್‌ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಕ್ರಮ;ಸಿಎಜಿಯಿಂದಲೇ ಮೌಲ್ಯಮಾಪನ

ಬೆಂಗಳೂರು; ಕರ್ನಾಟಕ ಸೇರಿದಂತೆ ದೇಶದ 8 ರಾಜ್ಯಗಳಲ್ಲಿ ಕೋವಿಡ್‌ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಕುರಿತು ಭಾರತದ ಪ್ರಧಾನ ಮಹಾಲೇಖಪಾಲರು (ಸಿಎಜಿ) ಮೌಲ್ಯಮಾಪನ ಮತ್ತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಮುಂದಾಗಿದ್ದಾರೆ.

ರಾಜ್ಯದಲ್ಲಿನ ಖರೀದಿ ಪ್ರಕ್ರಿಯೆಗಳ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿ ಕರ್ನಾಟಕ ಘಟಕವು ಸಹಮತಿ ವ್ಯಕ್ತಪಡಿಸಿರಲಿಲ್ಲ. ಇದರ ಬೆನ್ನಲ್ಲೇ ಭಾರತದ ಪ್ರಧಾನ ಮಹಾಲೇಖಪಾಲರು ರಾಜ್ಯವನ್ನೂ ಒಳಗೊಂಡಂತೆ 8 ರಾಜ್ಯಗಳಲ್ಲಿ ಮೌಲ್ಯಮಾಪನ ಮತ್ತು ಲೆಕ್ಕ ಪರಿಶೋಧನೆ ನಡೆಸಲು ಮುಂದಾಗಿರುವುದು ಖರೀದಿ ಪ್ರಕ್ರಿಯೆಗಳಲ್ಲಿ ಲೋಪಗಳು ನಡೆದಿವೆ ಎಂಬ ಆರೋಪಗಳನ್ನು ಬಲಪಡಿಸಿದಂತಾಗಿದೆ.

ಕರ್ನಾಟಕವಲ್ಲದೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕೋವಿಡ್‌ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಕುರಿತು ಮೌಲ್ಯಮಾಪನ ನಡೆಸಲು ಮುಂದಾಗಿದ್ದಾರೆ ಎಂದು ಸಿಎಜಿಯ ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಅಲ್ಲದೆ ಈ ರಾಜ್ಯಗಳಲ್ಲಿನ ಲಭ್ಯವಿರುವ ಔಷಧ ದಾಸ್ತಾನು, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿರುವ ಉಪಕರಣಗಳ ಗುಣಮಟ್ಟದ ಕುರಿತೂ ಮೌಲ್ಯಮಾಪನ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಹಿಂದಿನ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಿಎಜಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಶೇಷ ಲೆಕ್ಕ ಪರಿಶೋಧನೆಯ ಅಗತ್ಯವಿಲ್ಲ ಎಂದು ಸಿಎಜಿಗೆ ಪತ್ರ ಬರೆದಿದ್ದರು. ಹಾಗೆಯೇ ಸಿಎಜಿ ಕರ್ನಾಟಕ ಘಟಕದ ನಿವೇದಿತಾ ಅವರು ಕೂಡ ವಿಶೇಷ ಲೆಕ್ಕ ಪರಿಶೋಧನೆಗೆ ಒಲವು ವ್ಯಕ್ತಪಡಿಸಿರಲಿಲ್ಲವಲ್ಲದೆ ವಾರ್ಷಿಕ ಕಾರ್ಯನಿರ್ವಹಣೆ ಲೆಕ್ಕ ಪರಿಶೋಧನೆಯೊಳಗೇ ಇದನ್ನು ತರಲಾಗುವುದು ಸಮಜಾಯಿಷಿ ನೀಡಿದ್ದರು.

ವಿಶೇ‍ಷ ಲೆಕ್ಕ ಪರಿಶೋಧನೆ ನಡೆಸುವ ಸಂಬಂಧ ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲೇ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ಸೂಚಿಸಿ ಪತ್ರ ಬರೆಯಲು ಸಮಿತಿ ಸೂಚಿಸಿತ್ತು. ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರವನ್ನು ಬರೆಯಲಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ನೇರವಾಗಿ ಸಿಎಜಿಗೆ 2020ರ ಆಗಸ್ಟ್‌ 5ರಂದು ಪತ್ರ ಬರೆದಿತ್ತು.

ಆದರೆ ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಹಕರಿಸಿರಲಿಲ್ಲ. ಸಮಿತಿ ಜತೆ ಸಂಘರ್ಷಕ್ಕಿಳಿದಿತ್ತು. ಕೋವಿಡ್‌-19ರ ನಿರ್ವಹಣೆಗಾಗಿ ವಿವಿಧ ಸಂಸ್ಥೆಗಳ ಮೂಲಕ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಹೀಗಾಗಿ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಇಲಾಖೆ ಬಳಿ ಯಾವ ಸಮರ್ಥನೆಗಳೂ ಇಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಇಲಾಖೆ ನೇರವಾಗಿ ಪ್ರಧಾನ ಮಹಾಲೇಖಪಾಲರಿಗೆ ದಾಖಲಾತಿ ಮತ್ತು ಮಾಹಿತಿಗಳನ್ನು ಒದಗಿಸಲಾಗುವುದು. ಹೀಗಾಗಿ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಯಾವ ಸಮರ್ಥನೆ ಮತ್ತು ಕಾರಣಗಳೂ ಇಲ್ಲ,’ ಎಂದು ಜಾವೇದ್‌ ಅಖ್ತರ್‌ ಅವರು ನೇರವಾಗಿ ಸಿಎಜಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ಈ ಪತ್ರಕ್ಕೆ 2020ರ ಆಗಸ್ಟ್‌ 18ರಂದು ಉತ್ತರಿಸಿರುವ ಪ್ರಧಾನ ಲೇಖಪಾಲರಾದ ಇ ಪಿ ನಿವೇದಿತ ಅವರು ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿ ಕುರಿತು 2020-21ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಲಿದೆ. 2019-20ನೇ ಸಾಲಿಗೆ ಸಂಬಂಧಿಸಿದಂತೆ ನಡೆಸುವ ವಾರ್ಷಿಕ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯೊಳಗೆ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಒಂದು ತಿಂಗಳ ಕಾಲಮಿತಿಯೊಳಗೆ ಲೆಕ್ಕ ಪರಿಶೋಧನೆ ನಡೆಸುವುದು ಸಾಧ್ಯವಿಲ್ಲ,’ ಎಂದೂ ಹೇಳಿದ್ದರು.

ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸುವ ಸಂಬಂಧ ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಿದ್ಧಪಡಿಸಿದ್ದ ಮಧ್ಯಂತರ ವರದಿಯನ್ನು ಸದನಕ್ಕೆ ಮಂಡಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮತಿ ನೀಡಿರಲಿಲ್ಲ.

ವೈದ್ಯಕೀಯ ಪರಿಕರಗಳ ಖರೀದಿ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಒಟ್ಟು 30 ಪ್ರಶ್ನಾವಳಿಗಳನ್ನು ನೀಡಿತ್ತು. ಆದರೆ ಈ ಪ್ರಶ್ನಾವಳಿಗಳಿಗೂ ಇಲಾಖೆ ಯಾವುದೇ ಉತ್ತರವನ್ನು ಒದಗಿಸಿರಲಿಲ್ಲ.

ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌, ಮಾಸ್ಕ್‌, ಆರ್‌ಟಿಪಿಸಿಆರ್‌ ಉಪಕರಣ ಸೇರಿದಂತೆ ಇನ್ನಿತರೆ ವೈದ್ಯಕೀಯ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ನೀಡಿ ಖರೀದಿಸಿತ್ತು ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದವು. ಸಮಿತಿಯ ಸದಸ್ಯ ಶಾಸಕರಾಗಿದ್ದ ಮುರುಗೇಶ್‌ ನಿರಾಣಿ ಅವರು ಸಹ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ನಲ್ಲಿ ಕೆಲ ದಾಖಲೆಗಳಿವೆ ಎಂದು ಸಮಿತಿ ಮುಂದೆ ಪ್ರಸ್ತಾಪಿಸಿದ್ದರು. ಆನಂತರ ನಿರಾಣಿ ಅವರು ಅದಕ್ಕೆ ಬದ್ಧರಾಗಿರಲಿಲ್ಲ.

ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಭ್ರಷ್ಟಾಚಾರದ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts