ಗುರು ಸಾರ್ವಭೌಮ ಸೊಸೈಟಿ ಹಗರಣ; ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ನಕಾರ

ಬೆಂಗಳೂರು; 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ನೀಡಿರುವುದು ಸೇರಿದಂತೆ ಹಲವು ಗುರುತರ ಆರೋಪಗಳಿಗೆ ಗುರಿಯಾಗಿರುವ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಸೊಸೈಟಿಯ ಹಣಕಾಸಿನ ಲೆಕ್ಕಪತ್ರಗಳನ್ನು ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಪೊಲೀಸ್‌ ಮಹಾನಿರ್ದೇಶಕರು ನಿರಾಕರಿಸಿದ್ದಾರೆ.

ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಿಗೆ ಸೂಚಿಸಿ ಸಹಕಾರ ಇಲಾಖೆ ಪತ್ರ ಬರೆದಿತ್ತು. ಆದರೆ ಪೊಲೀಸ್‌ ಇಲಾಖೆಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಫಾರೆನ್ಸಿಕ್‌ ಆಡಿಟ್‌ ಕೈಗೊಳ್ಳಲು ಅವಕಾಶವಿಲ್ಲ ಎಂದು ಪೊಲೀಸ್‌ ಮಹಾನಿರ್ದೇಶಕರು ಪತ್ರ ಇಲಾಖೆಗೆ ತಿಳಿಸಿದ್ದರು. ಹೀಗಾಗಿ ಸಹಕಾರ ಇಲಾಖೆಯು ಬರೆದಿದ್ದ ಪತ್ರವನ್ನು ಹಿಂಪಡೆದುಕೊಂಡಿದೆ.

ಫಾರೆನ್ಸಿಕ್‌ ಆಡಿಟ್‌ ನಡೆಸಲು ಅವಕಾಶವಿಲ್ಲ ಎಂದು ಪೊಲೀಸ್‌ ಇಲಾಖೆ ಹಿಂದೆ ಸರಿದಿರುವ ಕಾರಣ ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆಯಲ್ಲಿ ತಜ್ಞತೆ ಹೊಂದಿರುವ ಸನ್ನದು ಲೆಕ್ಕಪರಿಶೋಧಕರನ್ನು ನೇಮಿಸಲು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿರ್ದೇಶಕರಿಗೆ 2020ರ ಸೆ.24ರಂದು ಆದೇಶಿಸಿದೆ. ಈ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಶ್ರೀ ಗುರುಸಾರ್ವಭೌಮ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಸ್ಥೆಯ ಪ್ರಾರಂಭದಿಂದ 2019-20ರ ಅವಧಿಯವರೆಗೆ ವಿಧಿ ವಿಜ್ಞಾನ ಲೆಕ್ಕಪರಿಶೋಧನೆಯನ್ನು ತಜ್ಞ ಸನ್ನದು ಲೆಕ್ಕಪರಿಶೋಧಕರಿಂದ ನಡೆಸಲು ಸೂಕ್ತ ಆದೇಶ ಹೊರಡಿಸಬೇಕು,’ ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಸೊಸೈಟಿಯ ಹಿಂದಿನ ಆಡಳಿತ ಮಂಡಳಿ ಹಣ ನೀಡದ ಕಾರಣ ಸರ್ಕಾರ ಇದೀಗ ಇದರ ವೆಚ್ಚವನ್ನು ಭರಿಸಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗೆ ಸೂಚಿಸಿ ಆದೇಶಿಸಿದೆ.

ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಅಪರೇಟಿವ್‌ ಲಿಮಿಟೆಡ್‌ ಮತ್ತು ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದಲ್ಲಿ ಠೇವಣಿದಾರರ ಹಣ ದುರ್ಬಳಕೆ ಸೇರಿದಂತೆ ಇನ್ನಿತರೆ ಅಕ್ರಮಗಳು ನಡೆದಿದ್ದವು. ಈ ಸಂಬಂಧ ಸೊಸೈಟಿಯ ವಿಶೇಷಾಧಿಕಾರಿಗಳು ಸೆ.11ರಂದು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು.

ಪ್ರಕರಣದ  ಹಿನ್ನೆಲೆ

ಬೆಂಗಳೂರಿನ ಶಂಕರಪುಂನಲ್ಲಿರುವ ಶ್ರೀ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ 2015-16ರಿಂದ 2018-19ನೇ ಸಾಲಿನವರೆಗೆ ಪರಿಶೋಧಿತ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸುವ ಸಂಬಂಧ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರು 2020ರ ಸೆಪ್ಟಂಬರ್‌ 11ರಂದು ಬರೆದಿದ್ದ 4 ಪುಟಗಳ ಪತ್ರವು ಸೊಸೈಟಿಯ ಹಲವು ಹಲವು ಅಕ್ರಮಗಳನ್ನು ಬಹಿರಂಗಗೊಳಸಿತ್ತು.

ಈ ಸಹಕಾರಿಯಲ್ಲಿ ಸದಸ್ಯರನ್ನು ಮಾಡಿಕೊಳ್ಳದೇ ಬೇನಾಮಿ ಹೆಸರುಗಳಲ್ಲಿ 163 ಕೋಟಿಗೂ ಹೆಚ್ಚು ಬೇನಾಮಿ ಸಾಲ ಸೃಷ್ಟಿಸಲಾಗಿದೆ. ಈ ಬೇನಾಮಿ ಸಾಲಗಳ ಬಗ್ಗೆ ಲೆಕ್ಕಪರಿಶೋಧನಾ ವರದಿಯಲ್ಲಿಯೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ವ್ಯವಹಾರಗಳನ್ನು ಮರು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಬೇಕು ಎಂದು ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದರು.

ಸಹಕಾರಿಗೆ ನಗದು ಜಮಾ ಆಗದೇ ನಕಲಿ ಠೇವಣಿಗಳನ್ನು ಸೃಷ್ಟಿಸಲಾಗಿದೆ ಎಂದು ನಿರ್ದೇಶಕರು ಮತ್ತು ವಿಶೇಷಾಧಿಕಾರಿ ಬರೆದಿರುವ ಪತ್ರ ಹೊರಗೆಡವಿದೆ. ಈ ಸಂಘದಲ್ಲಿ ಒಟ್ಟು 35 ಪ್ರಕರಣಗಳು ಕಂಡು ಬಂದಿವೆ. ಒಟ್ಟು 5.87 ಕೋಟಿ ಮೊತ್ತವನ್ನು ಹೊಂದಿರುವ ನಕಲಿ ಠೇವಣಿಗಳಿದ್ದವು.
2017ರಿಂದ 2020ರ ಮಾರ್ಚ್‌ 31ರವರೆಗೆ ಈ ಸೊಸೈಟಿಯಲ್ಲಿ ಒಟ್ಟು 94.57 ಲಕ್ಷ ರು.ಮೊತ್ತದ ನಕಲಿ ಸಾಲ ಸೃಷ್ಟಿಯಾಗಿದೆ. ಸೊಸೈಟಿ ಸಿಬ್ಬಂದಿ ಸಿ ವಿ ರಾಕೇಶ್‌ ಎಂಬುವರು ನಕಲಿ ಸಾಲ ಮತ್ತು ಠೇವಣಿಗಳನ್ನು ಸೃಷ್ಟಿಸಿ ಅವ್ಯವಹಾರ ಮಾಡಿದ್ದಾರೆ ಎಂದು ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದರು.

ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರಿ ಸಂಸ್ಥೆಯು ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 90 ಕೋಟಿ ಮೊತ್ತದ ಠೇವಣಿ ಹೊಂದಿದೆ. ಈ ಠೇವಣಿಯನ್ನು ನಗದೀಕರಣಗೊಳಿಸಿ ಆ ಮೊತ್ತವನ್ನು ಬ್ಯಾಂಕ್‌ನಲ್ಲಿರುವ ಇತರೆ ವ್ಯಕ್ತಿ, ಸಂಸ್ಥೆಗಳ ಸಾಲ ಖಾತೆಗಳಿಗೆ ವರ್ಗಾಯಿಸಲು ಹಾಗೂ ಮೊತ್ತವನ್ನು ಮುಂದಿನ ದಿನಗಳಲ್ಲಿಯೂ ಕ್ಲೇಮ್‌ ಮಾಡದಿರಲು ಆಡಳಿತ ಮಂಡಳಿಯು 2019ರ ನವೆಂಬರ್‌ 7ರಂದು ನಡೆದಿದ್ದ ಸಭೆಯಲ್ಲಿ ನಿರ್ಣಯಿಸಿತ್ತು.

ಸೊಸೈಟಿಯ ಹಿಂದಿನ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಎಂ ಎನ್‌ ಶ್ರೀಕಾಂತ್‌ ಅವರು ಸೊಸೈಟಿ ಹೆಸರಿನಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪೆನ್ನಗರಮ ತಾಲೂಕಿನ ಶಿಗರಾಲಹಳ್ಳಿಯಲ್ಲಿ 2016ರ ಡಿಸೆಂಬರ್‌ 30ರಂದು ಒಟ್ಟು 22 ಎಕರೆ 23 ಗುಂಟೆ ಜಮೀನು ಖರೀದಿಸಿದ್ದರು. ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ 5 ಚೆಕ್‌ಗಳ ಮೂಲಕ ಹಣವನ್ನು ಪಾವತಿಸಲಾಗಿತ್ತು. ಈ ವ್ಯವಹಾರವು ಸಂಶಯಾಸ್ಪದವಾಗಿತ್ತಲ್ಲದೆ ಮರು ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ನಿರ್ದೇಶಕರು ಅಭಿಪ್ರಾಯಿಸಿದ್ದರು.

ಅದೇ ರೀತಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ರಾಮಕೃಷ್ಣ ಎಂಬುವರು ಬಸವನಗುಡಿಯ ಸುಬ್ಬರಾಮಚೆಟ್ಟಿ ರಸ್ತೆಯಲ್ಲಿನ 884.25 ಚದರ ಅಡಿಯ ನಿವೇಶನ (ಸಂಖ್ಯೆ 57)ವನ್ನು 600 ಚಾಡಿ ಕಟ್ಟಡದ ಸಮೇತ 56,12,000 ರು.ಗೆ ಖರೀದಿಸಿದ್ದರು. ಈ ವ್ಯವಹಾರವೂ ಸಂಶಯಾಸ್ಪದವಾಗಿದೆಯಲ್ಲದೆ ಮರು ಲೆಕ್ಕಪರಿಶೋಧನೆಯ ಅಗತ್ಯವಿದೆ ಎಂದು ವಿಶೇಷಾಧಿಕಾರಿಗಳು ಪ್ರಸ್ತಾಪಿಸಿದ್ದರು.

ಬೇರೆ ಬೇರೆ ವ್ಯಕ್ತಿಗಳ ಖಾತೆಗೆ 1,81,75,73,258 ರು ವರ್ಗಾವಣೆ

ಶ್ರೀ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆ ಸ್ಥಾಪನೆ ಆದಾಗಿನಿಂದಲೂ ಎರಡು ಚಾಲ್ತಿ ಖಾತೆಗಳನ್ನು ಹೊಂದಿತ್ತು. (ಸಂಖ್ಯೆ 100300001366 ಮತ್ತು 10200001217) ‘ಬ್ಯಾಂಕ್‌ ವ್ಯವಹಾರದ ದಾಖಲೆಗಳನ್ನು ಪರಿಶೀಲಿಸಿದಾಗ ಸಹಕಾರಿಯಿಂದ ಯಾವುದೇ ಚೆಕ್‌/ಡಿಡಿ/ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ ದಾಖಲೆಗಳನ್ನು ಪಡೆಯದೇ ಬೇರೆ ಬೇರೆ ವ್ಯಕ್ತಿಗಳ ಖಾತೆಗೆ ಹಣದ ವರ್ಗಾವಣೆಗಳು ನಡೆದಿರುವುದು ಕಂಡು ಬಂದಿದೆ,’ ಎಂದು ಪತ್ರದಲ್ಲಿ ಹೊರಗೆಡವಿದ್ದಾರೆ. ಒಟ್ಟು 1,81,75,73,258 ರು.ಗಳನ್ನು 44 ಬಾರಿ ವರ್ಗಾವಣೆ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ನಿರ್ದೇಶಕರು ಈ ವ್ಯವಹಾರವನ್ನು ಮರು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts