ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡ ಸದಾನಂದಗೌಡ! ಮಾರ್ಗಸೂಚಿ ಉಲ್ಲಂಘಿಸಿದ್ದೇಕೆ?

ಬೆಂಗಳೂರು; ದೆಹಲಿ ಸೇರಿದಂತೆ ಇನ್ನಿತರೆ ರಾಜ್ಯ ಮತ್ತು ದೇಶಗಳಿಂದ ರಾಜ್ಯಕ್ಕೆ ಬಂದಿರುವ ಎಲ್ಲಾ ನಾಗರಿಕರು ಕ್ವಾರಂಟೈನ್‌ನಲ್ಲಿರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಗುರಿಯಾಗಿದ್ದಾರೆ.


ಇಂದು ಬೆಳಗ್ಗೆ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿಯುತ್ತಿದ್ದಂತೆ ಖಾಸಗಿ ವಾಹನದಲ್ಲಿ ತೆರಳಿರುವ ಸದಾನಂದಗೌಡ, ಕ್ವಾರಂಟೈನ್‌ಗೆ ಒಳಗಾಗುವುದನ್ನು ನೇರಾನೇರ ನಿರಾಕರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.


ಮಾರ್ಗಸೂಚಿಗಳನ್ನು ಕೇಂದ್ರ ಸಚಿವರೇ ಪಾಲಿಸದೇ ಇದ್ದರೆ ಉಳಿದವರು ಅದೇ ಹಾದಿ ಹಿಡಿಯುತ್ತಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಕ್ವಾರಂಟೈನ್‌ಗೆ ಒಳಗಾಗದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.


‘ನನ್ನನ್ನು ಇತರರೊಂದಿಗೆ ಹೋಲಿಸಬೇಡಿ. ಕ್ವಾರಂಟೈನ್‌ ಮಾರ್ಗಸೂಚಿಗಳು ಇತರೆ ನಾಗರಿಕರಿಗಷ್ಟೇ ಅನ್ವಯವಾಗಲಿದೆ. ನನಗೆ ಅನ್ವಯಿಸಬೇಡಿ,’ ಎಂದು ಸಮಜಾಯಿಷಿ ನೀಡುವ ಮೂಲಕ ಕ್ವಾರಂಟೈನ್‌ನಿಂದ ನುಣುಚಿಕೊಂಡಿದ್ದಾರೆ.


ರಾಜ್ಯ ಸರ್ಕಾರ 2020ರ ಮೇ 23ರಂದು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ದೆಹಲಿ, ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಹೊರ ರಾಜ್ಯ ಮತ್ತು ವಿದೇಶಗಳಿಂದ ವಿಮಾನಗಳ ಮೂಲಕ ರಾಜ್ಯಕ್ಕೆ ಬಂದಿರುವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಬೇಕಿತ್ತು.


ಅಲ್ಲದೆ, ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳಿಗೆ ಒಳಪಡಬೇಕಿತ್ತು. ಕೋವಿಡ್‌ ದೃಢಪಟ್ಟಿಲ್ಲ ಎಂದು ಪ್ರಯೋಗಾಲದ ವರದಿ ನೀಡಿದ ಬಳಿಕವಷ್ಟೇ ಮನೆಗೆ ತೆರಳಬೇಕು. ಮನೆಗೆ ತೆರಳಿದ ನಂತರವೂ 7 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿರಬೇಕು.


ಈ ಮಾರ್ಗಸೂಚಿಗಳಿಂದ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಯಾರಿಗೂ ವಿನಾಯಿತಿ ಇರಲಿಲ್ಲ. ಹೊರಗಿನಿಂದ ಬಂದ ಎಲ್ಲರೂ ಇದನ್ನು ಪಾಲಿಸಬೇಕು. ಈ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಿದ್ದ ಕೇಂದ್ರ ಸಚಿವರೇ ಪಾಲಿಸದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


10 ವರ್ಷದ ಮಕ್ಕಳಿಗೆ, ಗರ್ಭಿಣಿಯರಿಗೆ, 80 ವರ್ಷ ದಾಟಿರುವ ಹಿರಿಯ ನಾಗರಿಕರನ್ನು ಮಾತ್ರ ಕ್ವಾರಂಟೈನ್‌ಗೆ ಒಳಪಡುವುದರಿಂದ ವಿನಾಯಿತಿ ನೀಡಲಾಗಿದೆ. ಇದನ್ನು ಹೊರತುಪಡಿಸಿದರೆ ಹೊರರಾಜ್ಯ ಮತ್ತು ವಿದೇಶಗಳಿಂದ ಬಂದ ಯಾರೊಬ್ಬರಿಗೂ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿರಲಿಲ್ಲ.


‘ನಾನೊಬ್ಬ ಸಚಿವ. ನಾನು ಔಷಧ ಸಚಿವಾಲಯವನ್ನೂ ಮುನ್ನಡೆಸುತ್ತಿದ್ದೇನೆ. ಔಷಧ ಸಾಮಗ್ರಿಗಳು ದೇಶದ ಎಲ್ಲೆಡೆ ಸರಬರಾಜು ಅಗುತ್ತಿವೆಯೇ ಇಲ್ಲವೇ, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆಯೇ ಇಲ್ಲವೇ ಎಂಬ ಬಗ್ಗೆ ಮೇಲುಸ್ತುವಾರಿಯನ್ನು ನಾನೇ ಮಾಡಬೇಕು. ಔಷಧ ಸಾಮಗ್ರಿಗಳು ನಿಯಮಿತವಾಗಿ ಸರಬರಾಜು ಆಗದೇ ಇದ್ದಲ್ಲಿ ವೈದ್ಯರು ತಾನೇ ಏನು ಮಾಡಿಯಾರು? ಒಂದು ವೇಳೆ ಔಷಧ ಸಾಮಗ್ರಿಗಳು ಸರಿಯಾದ ಸಮಯಕ್ಕೆ ಪೂರೈಕೆ ಆಗದೇ ಇದ್ದಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಅರ್ಥವಲ್ಲವೇ,’ ಎಂದು ಸಚಿವ ಡಿ ವಿ ಸದಾನಂದಗೌಡ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.


ಕ್ವಾರಂಟೈನ್‌ಗೆ ಒಳಪಡದೇ ಇರುವುದಕ್ಕೆ ಮತ್ತಷ್ಟು ಕಾರಣಗಳನ್ನು ಮುಂದೊಡ್ಡಿದ ಸಚಿವರು, ತಮ್ಮ ಬಳಿ ಇರುವ ಆರೋಗ್ಯ ಸೇತು ಆಪ್‌ನ್ನು ತೋರಿಸಿದರು. ಇದರಲ್ಲಿ ಯಾವುದೇ ಮುನ್ನೆಚ್ಚರಿಕೆಯೂ ಬಂದಿಲ್ಲ ಎಂದು ಹೇಳುವ ಮೂಲಕ ಕ್ವಾರಂಟೈನ್‌ಗೆ ನಿರಾಕರಿಸುವುದಕ್ಕೆ ನಿದರ್ಶನಗಳನ್ನು ಒದಗಿಸಿದರು.


‘ನೋಡಿ ನನ್ನ ಬಳಿ ಆರೋಗ್ಯ ಸೇತು ಆಪ್‌ ಇದೆ. ಇದು ಈಗಲೂ ನಾನು ಸೇಫ್‌ ಎಂದು ಹಸಿರು ಬಣ್ಣವನ್ನೇ ತೋರಿಸುತ್ತಿದೆ. ಇದಲ್ಲದೆ ದೆಹಲಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದೇನೆ. 3-4 ದಿನಗಳಿಗೊಮ್ಮೆ ಏಮ್ಸ್‌ ವೈದ್ಯರು ನನ್ನನ್ನು ಪರೀಕ್ಷಿಸಿದ್ದಾರೆ. ಔಷಧ ಪೂರೈಕೆ ಆಗದೇ ಇದ್ದಲ್ಲಿ ಏನಾಗುತ್ತದೆ? ಕರೊನಾ ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟುಗೊಳ್ಳಲಿದೆ. ಇತರೆ ಸಚಿವರೊಂದಿಗೆ ನಾನು ಹಲವು ಬಾರಿ ಸಭೆ ನಡೆಸಿದ್ದೇನೆ. ನಾನೇನಾದರೂ ಕ್ವಾರಂಟೈನ್‌ ಗೆ ಒಳಪಟ್ಟರೆ ಯಾರು ಇದನ್ನೆಲ್ಲ ನೋಡುತ್ತಾರೆ? ಇತರರನ್ನು ನನ್ನೊಂದಿಗೆ ಹೋಲಿಸಬಾರದು,’ ಎಂದು ಇನ್ನಷ್ಟು ಸಮಜಾಯಿಷಿ ನೀಡಿದರು.


‘ಸರ್ಕಾರಿ ಕೆಲಸದ ಮೇಲೆ ರಾಜ್ಯಕ್ಕೆ ಬಂದಿದ್ದರೆ ವಿನಾಯಿತಿ ನೀಡಬೇಕು. ಖಾಸಗಿ ಉದ್ದೇಶಗಳಿಗಾಗಿ ಅವರು ಪ್ರಯಾಣ ಮಾಡಿದ್ದರೆ ಮಾರ್ಗಸೂಚಿಗಳ ಪ್ರಕಾರ ನಡೆದುಕೊಳ್ಳಬೇಕು,’ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts