ಶೌಚಾಲಯಗಳ ಶುಚಿತ್ವ ಹೊಣೆಗಾರಿಕೆ; ತಿದ್ದುಪಡಿ ತೇಪೆ ಹಾಕಿದ ಸರ್ಕಾರ

ಬೆಂಗಳೂರು; ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿನ ಶೌಚಾಲಯಗಳ ಶುಚಿತ್ವದ  ಮೇಲುಸ್ತುವಾರಿ ವಹಿಸಿ ಹೊರಡಿಸಿದ್ದ ಸುತ್ತೋಲೆ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸುತ್ತೋಲೆಗೆ ಸರ್ಕಾರ ಇದೀಗ ತಿದ್ದುಪಡಿಯ ತೇಪೆ ಹಾಕಿದೆ. ಈ ಮೂಲಕ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳ ಅಸಮಾಧಾನವನ್ನು ತಣಿಸಲು ಮುಂದಾಗಿದೆ. 

ಶೌಚಾಲಯಗಳ ಶುಚಿತ್ವದ ಮೇಲುಸ್ತುವಾರಿ ವಹಿಸಿ ಈ ಸಂಬಂಧ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳಿಗೆ ನಿಗದಿಗೊಳಿಸಿದ್ದ ಹೊಣೆಗಾರಿಕೆಯನ್ನು ಸರ್ಕಾರ ಹಿಂಪಡೆದುಕೊಂಡಿದೆ. ಆದರೆ,  ಮೇಲುಸ್ತುವಾರಿ ವಹಿಸುವ ಕೆಲಸವನ್ನು ಯಥಾಸ್ಥಿತಿ ಮುಂದುವರೆಸಿದೆ.  2020ರ ಏಪ್ರಿಲ್‌ 21ರಂದು ಹೊರಡಿಸಿದ್ದ ಅನಧಿಕೃತ ಟಿಪ್ಪಣಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಏಪ್ರಿಲ್‌ 23ರಂದು ತಿದ್ದುಪಡಿ ಮಾಡಿ ಆದೇಶ ಹೊರಡಿಸಿದೆ.  ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. 

‘ಅನಧಿಕೃತ  ಟಿಪ್ಪಣಿ ಸಂಖ್ಯೆ  ಸಿಆಸುಇ 1223  ಡಿಇವಿ 2020, ದಿನಾಂಕ 21.04.2020ರಲ್ಲಿ ಸ್ವಚ್ಛತಾ  ಪದಾರ್ಥಗಳು ಹಾಗೂ ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ  ಈ ಕೆಳಕಂಡ  ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಲಾಗಿರುವುದರ ಬದಲಾಗಿ ಸ್ವಚ್ಛತಾ  ಪದಾರ್ಥಗಳು ಹಾಗೂ ಶೌಚಾಲಯಗಳಲ್ಲಿ  ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ ಕೂಡಲೇ ಕಾರ್ಯಕಾರಿ ಶಾಖೆಯಿಂದ  ತರಿಸಿ  ಇಡಲು ವ್ಯವಸ್ಥೆ  ಮಾಡಬೇಕು ಎಂದು ತಿದ್ದಿ ಓದಿಕೊಳ್ಳತಕ್ಕದ್ದು,’ ಡಿಪಿಎಆರ್‌ನ ಕಾರ್ಯಕಾರಿ ಶಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಎಚ್‌ ಎಸ್‌ ಚನ್ನಬಸಪ್ಪ ಅವರು ತಿದ್ದುಪಡಿ ಆದೇಶ ಹೊರಡಿಸಿದ್ದಾರೆ. 

ಶೌಚಾಲಯಗಳ ಶುಚಿತ್ವದ ನಿರ್ವಹಣೆ ಮತ್ತು ಹೊಣೆಗಾರಿಕೆ ನಿಗದಿಗೊಳಿಸಿ  ಏಪ್ರಿಲ್‌ 21ರಂದು ಹೊರಡಿಸಿದ್ದ ಅನಧಿಕೃತ ಟಿಪ್ಪಣಿಗೆ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳ ವಲಯದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿತ್ತು. 

ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಕಡತಗಳನ್ನು ಸಿದ್ಧಪಡಿಸಿ ಮೇಲಾಧಿಕಾರಿಗಳಿಗೆ ಕಳಿಸುವ ಹೊಣೆಗಾರಿಕೆ ನಿರ್ವಹಿಸುತ್ತಿದ್ದ  ಅಧೀನ ಕಾರ್ಯದರ್ಶಿಗಳಿಗೆ ಡಿಪಿಎಆರ್‌ ನಿಗದಿಗೊಳಿಸಿದ್ದ ಶೌಚಾಲಯಗಳ ಸ್ವಚ್ಛತೆ ಹೊಣೆಗಾರಿಕೆಯನ್ನು ಹಿಂಪಡೆದು ಅಸಮಾಧಾವನ್ನು ತಣಿಸಲು ಯತ್ನಿಸಿದೆ. 

ಲಾಕ್‌ಡೌನ್‌  ನಡುವೆಯೂ ಸಚಿವಾಲಯ ಸೇರಿದಂತೆ ಸರ್ಕಾರದ ವಿವಿಧ  ಇಲಾಖೆಗಳ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳನ್ನು ಕಚೇರಿ ಕರ್ತವ್ಯಕ್ಕೆ ಕರೆಸಿಕೊಂಡಿರುವ  ಸರ್ಕಾರ, ವಿಧಾನಸೌಧ, ವಿಕಾಸಸೌಧ ಮತ್ತು ಬಹಮಹಡಿ ಕಟ್ಟಡ,  ಸಚಿವರು ಮತ್ತು ಅಧಿಕಾರಿಗಳ ಕೊಠಡಿಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮಾಡುವ ಕೆಲಸವನ್ನು ಕೊಟ್ಟಿತ್ತು. 

ಕಾರಿಡಾರ್‌ನಲ್ಲಿರುವ ಸಾರ್ವಜನಿಕ ಶೌಚಾಲಯಗಳು ಮತ್ತು ಅಧಿಕಾರಿಗಳ  ಕೊಠಡಿಗಳಲ್ಲಿರುವ ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸಾಮಗ್ರಿಗಳನ್ನಿರಿಸುವುದು ಮತ್ತು ಅದನ್ನು ನಿರ್ವಹಣೆ ಮಾಡಲು ಹೊರಗುತ್ತಿಗೆ ಪಡೆದಿರುವ ಏಜೆನ್ಸಿ ಸಿಬ್ಬಂದಿ ಬಾರದ ಕಾರಣ ಈ ಎಲ್ಲಾ ಕೆಲಸಗಳನ್ನೂ ಇದೀಗ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿಗಳೇ ನಿರ್ವಹಿಸಲು ಸೂಚಿಸಿತ್ತು. 

ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸಾಮಾಗ್ರಿಗಳನ್ನು ಇಡಬಹುದೇ  ಹೊರತು, ಅಲ್ಲಿ ಸ್ವಚ್ಛತೆ ಕಾರ್ಯಗಳನ್ನು ನಿಭಾಯಿಸಬೇಕಿತ್ತು. 

ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಅವರು ಈಗಾಗಲೇ   ಸರ್ಕಾರಿ ಅಧಿಕಾರಿ, ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಶೌಚಾಲಯಗಳನ್ನು ಪರಿವೀಕ್ಷಿಸಲು ಸೂಚಿಸಿರುವ ಡಿಪಿಎಆರ್‌ನ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೇಮಲತಾ ಅವರು ಅಧಿಕಾರಿ, ನೌಕರರ ಕೋಪಕ್ಕೆ ತುತ್ತಾಗಿದ್ದರು. 

ಸಾರಿಗೆ ಸಂಪರ್ಕಗಳಿಲ್ಲದಿದ್ದರೂ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಕಚೇರಿ ಕರ್ತವ್ಯಕ್ಕೆ ಹಾಜರಾಗಿರುವ ಅಧೀನ ಕಾರ್ಯದರ್ಶಿ ಮತ್ತು ಶಾಖಾಧಿಕಾರಿ ಸಿಬ್ಬಂದಿ 2020ರ ಮೇ 15ರವರೆಗೆ ಶೌಚಾಲಯಗಳನ್ನು ನಿರ್ವಹಿಸಬೇಕಿದೆ. ಶೌಚಾಲಯಗಳಲ್ಲಿ ಸಾಮಗ್ರಿಗಳು ಇಲ್ಲದಿದ್ದಲ್ಲಿ ಮತ್ತು ಅವ್ಯವಸ್ಥೆಗಳಿದ್ದಲ್ಲಿ ಅಧಿಕಾರಿ, ನೌಕರರೇ ಇದರ ಹೊಣೆ ಹೊರಬೇಕು ಎಂದು ಟಿಪ್ಪಣಿಯಲ್ಲಿ ಎಚ್ಚರಿಸಿತ್ತು. 

‘ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳ ಸಾರ್ವಜನಿಕ ಶೌಚಾಲಯಗಳು ಮತ್ತು ಸಚಿವರುಗಳು, ಅಧಿಕಾರಿಗಳ ಕೊಠಡಿಗಳಲ್ಲಿನ ಶೌಚಾಲಯಗಳು ಹಾಗೂ ಕಾರಿಡಾರ್‌ಗಳಲ್ಲಿ  ಸ್ವಚ್ಛತೆ, ಸಾರ್ವಜನಿಕ ಶೌಚಾಲಯಗಳಲ್ಲಿ ಕಡ್ಡಾಯವಾಗಿ ಸೋಪ್‌ ಆಯಿಲ್‌ ಸೇರಿದಂತೆ ಇನ್ನಿತರೆ ಸ್ವಚ್ಛತಾ ಸಾಮಗ್ರಿಗಳನ್ನು ಇಟ್ಟಿರುವ ಬಗ್ಗೆ ಪ್ರತಿದಿನ 3 ಗಂಟೆಗೆ ಒಂದು  ಸಾರಿ ಪರೀಕ್ಷಿಸಬೇಕು,’ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಸೂಚಿಸಿತ್ತು.  

ಅದೇ ರೀತಿ ಈ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಾರಿಡಾರ್‌ಗಳಲ್ಲಿನ ಸ್ವಚ್ಛತೆ ಮತ್ತು ಶೌಚಾಲಯಗಳ ನಿರ್ವಹಣೆ ಕುರಿತು ಡಿಪಿಎಆರ್‌  ಕಾರ್ಯಕಾರಿ ವಿಭಾಗಕ್ಕೆ  ವರದಿ ಸಲ್ಲಿಸಬೇಕು ಎಂದು ತಿಳಿಸಿತ್ತು. 

‘ಒಂದು ವೇಳೆ ಮೇಲಾಧಿಕಾರಿಗಳು ಈ  ಸ್ಥಳಗಳನ್ನು ಪರಿಶೀಲಿಸಿದಾಗ ಸ್ವಚ್ಛತೆ ಇಲ್ಲದಿದ್ದಲ್ಲಿ ಮತ್ತು ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ ಅದನ್ನು ಭರ್ತಿ ಮಾಡುವ ಬಗ್ಗೆ ಹಿರಿಯ ಆರೋಗ್ಯ ಪರಿವೀಕ್ಷಕರ ಗಮನಕ್ಕೆ  ತರಬೇಕು. ಸ್ವಚ್ಛತಾ ಪದಾರ್ಥಗಳು ಹಾಗೂ ಶೌಚಾಲಯಗಳಲ್ಲಿ ಸೋಪ್‌ ಆಯಿಲ್‌ ಇಲ್ಲದಿದ್ದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡಲಾಗುವುದು,’ ಎಂದು ಡಿಪಿಎಆರ್‌ ಉಪ ಕಾರ್ಯದರ್ಶಿ ಚನ್ನಬಸಪ್ಪ ಅವರು ಟಿಪ್ಪಣಿಯಲ್ಲಿ ಎಚ್ಚರಿಸಿದ್ದರು. 

ವಿಧಾನಸೌಧದ ನೆಲ ಮಹಡಿ ಸೇರಿದಂತೆ  3  ಮಹಡಿಗಳು ಅದೇ ರೀತಿ ವಿಕಾಸಸೌಧದ 4 ಮಹಡಿಗಳು ಮತ್ತು ಬಹುಮಹಡಿ ಕಟ್ಟಡದಲ್ಲಿರುವ 7 ಮಹಡಿಗಳಲ್ಲಿರುವ ಸಚಿವರು, ಅಧಿಕಾರಿಗಳ ಕೊಠಡಿಗಳು ಹಾಗೂ ಕಾರಿಡಾರ್‌ಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಪರಿವೀಕ್ಷಿಸಬೇಕಿದೆ.

2020ರ ಏಪ್ರಿಲ್‌ 22ರಿಂದ ಮೇ 15ರವರೆಗೆ ಯಾವ್ಯಾವ ಅಧಿಕಾರಿಗಳು ಯಾವ ಕೊಠಡಿ, ಶೌಚಾಲಯಗಳನ್ನು ನಿರ್ವಹಿಸಬೇಕು ಎಂದು ದಿನಾಂಕ ಸಮೇತ  ಅಧೀನ  ಕಾರ್ಯದರ್ಶಿ ಮತ್ತು ಶಾಖಾಧಿಕಾರಿಗಳನ್ನು ನಿಯೋಜಿಸಲಾಗಿದೆ.  

‘ಅಧೀನ ಕಾರ್ಯದರ್ಶಿ ಹುದ್ದೆ ಉಪ ವಿಭಾಗಾಧಿಕಾರಿ ಶ್ರೇಣಿ ಮತ್ತು ಶಾಖಾಧಿಕಾರಿ ಹುದ್ದೆ ತಹಶೀಲ್ದಾರ್‌ ಶ್ರೇಣಿ ಹೊಂದಿದೆ. ಕಚೇರಿಯಲ್ಲಿ ಕೆಲಸ ಇಲ್ಲದಿದ್ದರೂ ಕರೆಸಿಕೊಂಡಿರುವ ಮುಖ್ಯ ಕಾರ್ಯದರ್ಶಿಗಳು ಶೌಚಾಲಯ ಪರಿವೀಕ್ಷಿಸುವ ಕೆಲಸಕ್ಕೆ ನಿಯೋಜಿಸಿರುವುದು ಎಷ್ಟರಮಟ್ಟಿಗೆ  ಸರಿ,’ ಎಂದು ಪ್ರಶ್ನಿಸಿದ್ದರು. 

the fil favicon

SUPPORT THE FILE

Latest News

Related Posts